ಐವತ್ತು ಸಾವಿರ ಖರ್ಚು, ಐದು ಲಕ್ಷ ಬಿಲ್ ! ಹೊಂಗನೂರು ಜಿಲ್ಲಾ ಪಂಚಾಯತಿಯಲ್ಲಿ ಮತ್ತೊಂದು ದೋಖಾ!
ಹೊಂಗನೂರು ಜಿಲ್ಲಾ ಪಂಚಾಯತಿಯ ಅನುದಾನದಲ್ಲಿ *ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರ ನೆರಳಲ್ಲೇ* ಆರಂಕಿಯ ದೋಖಾ ನಡೆದಿದ್ದರೂ ಸಹ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಲಿ, ಮಾಹಿತಿ ಹಕ್ಕುದಾರರಾದ ವಿ ಜಿ ಕೃಷ್ಣೇಗೌಡ ಎಂಬುವವರು ನೀಡಿದ ದೂರಿನನ್ವಯ ಜಿಲ್ಲಾಧಿಕಾರಿಗಳಾಗಲಿ, ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದ ಕಾರ್ಯಪಾಲಕ ಅಭಿಯಂತರರಾಗಲಿ ಸಂಬಂಧಿಸಿದ ಇಂಜಿನಿಯರ್ ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕ ವಲಯದಲ್ಲಿ ಅನುಮಾನ ಮೂಡಿಸುತ್ತಿದೆ.
ಕಾಮಗಾರಿ ವಿವರ
ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಂದಾರಗುಪ್ಪೆ ಗ್ರಾಮಪಂಚಾಯತಿಯ ಲಾಳಾಘಟ್ಟ ಗ್ರಾಮದ ಸರ್ಕಾರಿ ಶಾಲೆಗೆ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಸೈಕಲ್ ಸ್ಟ್ಯಾಂಡ್ ನಿರ್ಮಿಸಲು *೫,೦೦,೦೦೦/* ರೂಪಾಯಿಗಳ ತುಂಡು ಗುತ್ತಿಗೆ ಕರೆದಿದ್ದು ಇಂಜಿನಿಯರ್ *ಶಂಕರ್* ಮಾರ್ಗದರ್ಶನದಲ್ಲಿ *ಜಯಕುಮಾರ್* ಎಂಬ ಗುತ್ತಿಗೆದಾರ ಕೆಲಸ ನಿರ್ವಹಿಸಿರುವುದಾಗಿ ದಾಖಲೆಯನ್ನು ಪರಿಶೀಲಿಸಿದಾಗ ತಿಳಿದು ಬರುತ್ತದೆ.
ಬಿಲ್ ಮತ್ತು ವಾಸ್ತವದ ಅಳತೆ
ಬಿಲ್ ನಲ್ಲಿ ನಮೂದಿಸಿದ ಅಳತೆ ೩೫.೧ ಮೀಟರ್ * ೪.೫ ಮೀಟರ್, ಅಂದರೆ ೧೫೭.೯೫ ಚದರ ಮೀಟರ್, ಸೈಕಲ್ ಸ್ಟ್ಯಾಂಡ್ ಇರುವ ವಾಸ್ತವದ ಅಳತೆ ೧೦.೫ ಮೀಟರ್ * ೦೬ ಮೀಟರ್. ಅಂದರೆ ಕಾಮಗಾರಿ ನಡೆದಿರವುದು ೬೩ ಚದರ ಮೀಟರ್, ಒಟ್ಟಾರೆ ವ್ಯತ್ಯಾಸ ೯೪.೯೫ ಚದರ ಮೀಟರ್.
ದೋಖಾ ಮಾಡಿರುವ ಕಾಮಗಾರಿ ವಿವರ
ಬಿಲ್ ನಲ್ಲಿ *೧೪ ಆರ್ ಸಿ ಸಿ ಕಂಬಗಳನ್ನು* ನಮೂದಿಸಿದರೇ ವಾಸ್ತವವಾಗಿ *ಎರಡು ಇಂಚಿನ ಎಂಟು ಎಂ ಎಸ್ ಪೈಪುಗಳನ್ನು* ಅಳವಡಿಸಿದ್ದಾರೆ.
ಪಿಸಿಸಿ ಕಾಂಕ್ರೀಟ್ ನೆಲಹಾಸು ಮತ್ತು ಕಲ್ಲು ಕಟ್ಟಡವನ್ನು ಬಿಲ್ ನಲ್ಲಿ ನಮೂದಿಸಿರುತ್ತಾರೆ, ಆದರೆ ತರಿಯ ಎರಡಿಂಚಿನ ಗಾರೆ ಬಿಟ್ಟು ಯಾವ ನೆಲಹಾಸು ಇಲ್ಲ, ಕಲ್ಲು ಕಟ್ಟಡವೂ ಇಲ್ಲ.
ಬಿಲ್ ನಲ್ಲಿ ಟ್ರೇಸ್ ನಮೂದಿಸಿದ್ದರೂ ಸಹ ಅಳತೆ ಮತ್ತು ತೂಕದಲ್ಲಿ ಯಾವುದೇ ಟ್ರೇಸ್ ಮಾಡಿರುವುದಿಲ್ಲ, ಮೇಲಿನ ಹೊದಿಕೆ (ಶೀಟ್) ಹಾಕಿರುವುದು ಕೇವಲ ೧೦.೫ ಮೀಟರ್ ಮಾತ್ರ ಬಿಲ್ ನಲ್ಲಿ ನಮೂದಿಸಿರುವುದು ೩೫.೧ ಮೀಟರ್ * ೪.೫ ಮೀಟರ್.
ಒಟ್ಟಾರೆ ಅಂಕಿ ಅಂಶ
ಬಿಲ್ ನಲ್ಲಿ ತೆಗೆದುಕೊಂಡಿರುವ ಒಟ್ಟು ಮೊತ್ತ *೪,೯೯,೧೨೦* ರೂಪಾಯಿಗಳು, ಮಾಹಿತಿ ಹಕ್ಕುದಾರರ ಪ್ರಕಾರ *೧,೬೫,೦೦೦* ರೂ ಖರ್ಚು, ಸರ್ಕಾರಕ್ಕೆ ಆಗಿರುವ ನಷ್ಟ *೩,೩೪,೦೦೦* ರೂಪಾಯಿಗಳು.
ಆದರೆ ಸ್ಥಳೀಯ ವೆಲ್ಡಿಂಗ್ ಮತ್ತು ಗಾರೆ ಕೆಲಸದವರ ಲೆಕ್ಕಾಚಾರ ದ ಪ್ರಕಾರ *ನಲವತ್ತು ಸಾವಿರದಿಂದ ಐವತ್ತು ಸಾವಿರ* ರೂಪಾಯಿಗಳು ಮಾತ್ರ ಎಂದು ಲೆಕ್ಕ ಬರೆದು ಕೊಡುತ್ತಾರೆ.
ಎಂಟರಿಂದ ಹತ್ತು ದಿನದಲ್ಲೇ ಬಿಲ್ ಪಾವತಿ
ಮಾಹಿತಿ ಯ ದಾಖಲೆಗಳನ್ನು ಪರಿಶೀಲಿಸಿದಾಗ ಬಿಲ್ ಮಾಡಿರುವುದಕ್ಕೆ ದಿನಾಂಕವನ್ನೇ ನಮೂದಿಸಿಲ್ಲ ಮತ್ತು ದಾಖಲೆಯಲ್ಲಿ ನೀಡಿರುವ ಪೋಟೋ ಗೂ ವಾಸ್ತವವಾಗಿ ಕಟ್ಟಿರುವ ಸೈಕಲ್ ಸ್ಟ್ಯಾಂಡ್ ಗೂ ಬಹಳ ವ್ಯತ್ಯಾಸವಿದೆ, ಕೇವಲ ಎಂಟರಿಂದ ಹತ್ತು ದಿನಗೊಳಗಾಗಿ ಬಿಲ್ ಪಾವತಿಯಾಗಿರುವುದು ಮೇಲ್ನೋಟಕ್ಕೆ ತಿಳಿದು ಬರುತ್ತದೆ.
*ಉಪಾಧ್ಯಕ್ಷರ ನೆರಳಲ್ಲೇ ನಡೆದಿದ್ದರೂ ಗೊತ್ತಾಗಲಿಲ್ಲವೇ ?*
ಕಾಮಗಾರಿ ನಡೆದ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾಗಿದ್ದ (ಈಗ ಜಿಲ್ಲಾ ಪಂಚಾಯತ ಉಪಾಧ್ಯಕ್ಷರು) *ವೀಣಾಕುಮಾರಿ* ಯವರ ತೋಟದ ಮನೆಯ ಕೂಗಳತೆಯಲ್ಲೇ ಈ ಕಾಮಗಾರಿ ನಡೆದಿದ್ದು ಅವರಿಗೆ ಕಾಣಿಸಲಿಲ್ಲವೇ ? ಭವಿಷ್ಯದ ರಾಜಕೀಯ ಕುಟುಂಬವಾಗಿ ಬೆಳೆಯಲೋಸುಗ ರಾಜಕೀಯಕ್ಕೆ ಬಂದಿರುವ ಚಾಕಿ ಸೆಂಟರ್ ಚಂದ್ರು ರವರ ಕುಟುಂಬ ಇಂತಹ ಕಳಪೆ ಕಾಮಗಾರಿಗಳನ್ನು ಗಮನಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡರೇ ಅವರ ರಾಜಕೀಯ ಭವಿಷ್ಯ ಉಜ್ವಲವಾಗಬಹುದು ಎಂಬುದು ಸಾರ್ವಜನಿಕರ ಅಪೇಕ್ಷೆಯಾಗಿದೆ.
ಪ್ರಭಾರ ಎಇಇ ಕುಮಾರಸ್ವಾಮಿ ಕರಾಮತ್ತು
ಈ ಕಾಮಗಾರಿ ನಡೆದ ಸಂದರ್ಭದಲ್ಲಿ ಪ್ರಭಾರ ಎಇಇ ಆಗಿದ್ದ ಕುಮಾರಸ್ವಾಮಿಯೇ ನೇರ ಹೊಣೆಗಾರರು, ಕಾಮಗಾರಿಯನ್ನು ಪರೀಕ್ಷಿಸದೇ ಕೇವಲ ಪೋಟೋ ನೋಡಿ ಹೇಗೆ ಬಿಲ್ ಮಾಡಿಕೊಟ್ಟರು. ಇಲ್ಲಿ ಅವರ ಪಾಲು ಎಷ್ಟು ? ಎಂಬುದನ್ನು ತಿಳಿಸಬೇಕಿದೆ.
ಮಾಹಿತಿ ಹಕ್ಕುದಾರರಿಗೆ ಧಮಕಿ
ಈ ಕಾಮಗಾರಿಗೆ ಸಂಬಂಧಿಸಿದ ದಾಖಲೆಗಳನ್ನು ಕಲೆಹಾಕಿದ ಮಾಹಿತಿ ಹಕ್ಕುದಾರ ವಿ ಜಿ ಕೃಷ್ಣೇಗೌಡ ರಿಗೆ ಗುತ್ತಿಗೆದಾರ ಧಮಕಿ ಹಾಕಿದ್ದಾಗಿ ತಿಳಿಸಿದ ಅವರು ಇನ್ನೊಂದು ಬಾರಿ ಬೆದರಿಕೆ ಒಡ್ಡಿದರೇ ಪೋಲಿಸರಿಗೆ ದೂರು ನೀಡುವುದಾಗಿ ತಿಳಿಸಿದರು.
ಕ್ರಮ ಕೈಗೊಳ್ಳಲಿ
ಇನ್ನಾದರೂ ದೂರು ಸ್ವೀಕರಿಸಿರುವ ಅಧಿಕಾರಿಗಳು, ಸಂಬಂಧಿಸಿದ ಇಂಜಿನಿಯರ್ ಮತ್ತು ಜನಪ್ರತಿನಿಧಿಗಳು ಕಳಪೆ ಕಾಮಗಾರಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವ ಇಂಜಿನಿಯರ್ ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಿ.
ಗೋ ರಾ ಶ್ರೀನಿವಾಸ...
ಮೊ: 9845856139.
ಪ್ರತಿಕ್ರಿಯೆಗಳು