ಅಂಬೇಡ್ಕರರ ಆಕ್ರಂಧನ
ಬೇಡಿ ತೊಡಿಸಿ ಕೂಡಿಹಾಕುತಿರುವ ನನ್ನವರೇ
ಬಿಟ್ಟುಬಿಡಿ ಭೀಮರಾವ ಜಗದ ಜನರ ಆಸ್ತಿಯು
ದಲಿತನೆಂಬ ಹಣೆಯಪಟ್ಟಿ ಜಾತಿಗಲ್ಲ ಸೀಮಿತ
ನೊಂದವರು ದಮನಿತರು ಎಲ್ಲರಿಗೂ ಅನ್ವಯ
ಬಾಬಣ್ಣನ ಮನದೊಳು ಜಾತಿಭೂತವಿರಲಿಲ್ಲ
ಏಕೆ ಬಂಧಿಸಿರುವಿರೋ ಅವ ನಮ್ಮವ ನಮ್ಮವ
ಅದೋ ಆಕ್ರಂದನಗೈಯುತಿದೆ ಅಲ್ಲಿ ಸ್ವರ್ಗದಲ್ಲಿ ಆತ್ಮ
ಬಂಧಮುಕ್ತಗೊಳಿಸಿರೆನ್ನ ಒಂದು ಕುಲದ ಜನರಿಂದ
ಕಲಿತವರೇ ಕಳವಳದಿ ಕೊಂದುಹಾಕುತಿರುವರು
ಉಳಿಸಿರೆನ್ನ ಸಾರ್ವತ್ರಿಕರ ಸಂಘಜೀವಿಯಾಗಿಸಿ
ಲಾಭಕೋರತನದಿ ಎನಗೆ ದ್ರೋಹಬಗೆವ ಕೇಡಿಗಳೆ
ಅವಸಾನಕೆ ಆಸ್ಪದವೀಯದೆ ಉಳಿಸಿರೆನ್ನ ಧ್ಯೇಯವ
ರೋಷ ಎದೆಯ ಬೆಂಕಿಯಿಂದು ದಹಿಸುತಿದೆ ನನ್ನನು
ಪಾರುಗೊಳಿಸಿ ಪಾಪಿಗಳ ಸಂಕೋಲೆಯ ಕತ್ತರಿಸಿ
ಒಂದೆ ಮಂತ್ರ ನನ್ನದು ಸಮಬಾಳು ಸರ್ವರಿಗೆ
ಬೀಜಮಂತ್ರ ಕೇಳಿರೋ ಸರ್ವರಿಗೆ ಸಮಪಾಲು
ಮೂಲಭೂತವಾದಿಗಳ ಮೂಲೋತ್ಪಾಟನೆ
ಮನುಜ ಮತವು ವಿಶ್ವಪಥದ ಜೀವಂತ ಸ್ಥಾಪನೆ
ಸುಟ್ಟುಹೋದ ದೇಹಗಳಿಗೆ ಮರುಜೀವದ ಮಜ್ಜನ
ಮಲಿನ ಮನದ ಹೊಲಸುಗಳಿಗೆ ಶಸ್ತ್ರವೈ ಈ ಜೀವನ
ದಲಿತಸೂರ್ಯನಾಗಲಾರೆ ಬಲಿತರೆದೆಗೆ ಶೂಲನಾನು
ಒಲಿದ ಹೃದಯವಂತರೆದೆಗೆ ಹರಿವ ನೀರತಾಣವೂ
ಬರಿದೆ ಮಾತು ಸಾಕುಮಾಡಿ ಪಾಷಂಡಿ ಮನಗಳೇ
ಮಲಿನ ಮನವ ತಿಳಿಗೊಳಿಪ ಹಿರಿಮೆ ನಿಮ್ಮದಾಗಲಿ
ಪ್ರತಿಕ್ರಿಯೆಗಳು