Tel: 7676775624 | Mail: info@yellowandred.in

Language: EN KAN

    Follow us :


ಜಾನಪದ ಲೋಕದ ತಿಂಗಳ ಅತಿಥಿ ಸೋಬಾನೆ ಪದ ಗಾಯಕ ಕೃಷ್ಣೇಗೌಡ.

Posted date: 21 May, 2018

Powered by:     Yellow and Red

ಜಾನಪದ ಲೋಕದ ತಿಂಗಳ ಅತಿಥಿ ಸೋಬಾನೆ ಪದ ಗಾಯಕ ಕೃಷ್ಣೇಗೌಡ.

ರಾಮನಗರ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅರ್ಹ ಸಂಸ್ಥೆ, ಕಲಾವಿದರಿಗೆ ಅನುದಾನ ದೊರೆಯುವುದಿಲ್ಲ ಎಂದು ಸೋಬಾನೆ ಪದ ಗಾಯಕ ಕೃಷ್ಣೇಗೌಡ ಬೇಸರ ವ್ಯಕ್ತಪಡಿಸಿದರು. 
    ಇಲ್ಲಿನ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಶನಿವಾರ ಸಂಜೆ ನಡೆದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾನು ಕಳೆದ 45 ವರ್ಷಗಳಿಂದ ಸೋಬಾನೆ ಪದಗಳನ್ನು ಹಾಡುವ ಜತೆಗೆ, ಜನಪದ ಕಲೆಗಳ ಪ್ರದರ್ಶನವನ್ನು ಪಟ್ಟಲದಮ್ಮ ಜಾನಪದ ಕಲಾ ಬಳಗದ ಮೂಲಕ ನೀಡುತ್ತಿದ್ದೇನೆ. ಆದರೆ ಇಲಾಖೆ ವತಿಯಿಂದ ಪ್ರೋತ್ಸಾಹ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 
    ನಾನು ಓದು ಬರಹ ಕಲಿತವನಲ್ಲ, 15 ವರ್ಷದವನಿದ್ದಾಗ ಸೋಬಾನೆ ಪದಗಳನ್ನು ಹಾಡುವುದನ್ನು ಕಲಿತೆ, ಮೊದಲು ಮಕ್ಕಳಿಗೆ ಕೋಲಾಟ ಕಲಿಸಿ ಕೊಡುತ್ತಿದ್ದೆ. ಸೋಬಾನೆ ಪದಗಳನ್ನು ಹಾಡುವ ಜತೆಗೆ ಗಾರುಡಿಗೊಂಬೆ, ಪಟಕುಣಿತ, ಸೋಮನ ಕುಣಿತ, ಹುಲಿ ವೇಷ, ಕೊಂಬು ಕಹಳೆ ಸೇರಿದಂತೆ ಹಲವು ಕಲೆಗಳ ಪ್ರದರ್ಶನವನ್ನು ನೀಡುತ್ತೇನೆ ಎಂದರು. 
    ಮದುವೆಗೆ ಸಂಬಂಧಿಸಿದ ಹಾಡು, ದೇವರ ಹಾಡು, ಮಳೆರಾಯ, ಗದ್ದೆನಾಟಿ ಹಾಡು, ಕಣದ ಪದಗಳು, ಬೀಗರ ಜರಿಯುವ ಪದಗಳನ್ನು ಗಂಟೆಗಟ್ಟಲೆ ನಿರರ್ಗಳವಾಗಿ ಹಾಡುತ್ತೇನೆ. ಮಧ್ಯಪ್ರದೇಶ, ಭೂಪಾಲ್, ತಂಜಾವೂರು, ಚನ್ನೈ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರದರ್ಶನವನ್ನು ನೀಡಿದ್ದೇನೆ. ನನ್ನ ಮೊದಲ ಪ್ರದರ್ಶನಕ್ಕೆ ?5 ನೀಡಿದ್ದರು ಎಂದು ನೆನಪಿಸಿಕೊಂಡರು. 
    ಪ್ರಾರಂಭದಲ್ಲಿ ನಮ್ಮ ಊರಿನ ಸುತ್ತಮುತ್ತಲ ಗ್ರಾಮಗಳಲ್ಲಿ ಹಾಡುತ್ತಿದ್ದೆ. 1986ರಲ್ಲಿ ಎಚ್.ಎಲ್. ನಾಗೇಗೌಡರು ಪರಿಚಯವಾದರು. ನಂತರ ಅವರು ನನ್ನಲ್ಲಿನ ಪ್ರತಿಭೆಯನ್ನು ಗುರುತಿಸಿ ನಾಡಿನಾದ್ಯಂತ ಪರಿಚಯಿಸಿದರು. ಈಗ ನಾನು 20 ಜನ ಕಲಾವಿದರುಗಳು ಇರುವ ತಂಡವನ್ನು ಕಟ್ಟಿಕೊಂಡು ಪ್ರದರ್ಶನ ನೀಡುತ್ತಿದ್ದೇನೆ ಎಂದು ತಿಳಿಸಿದರು. 
    ಮದುವೆ ಸಮಾರಂಭಗಳಿಗೆ ಸೋಬಾನೆ ಪದಗಳನ್ನು ಹಾಡಲು ಬೆಂಗಳೂರಿನಿಂದ ಹೆಚ್ಚಾಗಿ ಕರೆಯುತ್ತಾರೆ. 6 ಜನರು ಇರುವ ತಂಡ ಹೋಗಿ ಸೋಬಾನೆ ಪದಗಳನ್ನು ಹಾಡುತ್ತೇವೆ. ?10 ಸಾವಿರ ನೀಡುತ್ತಾರೆ. ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಸೋಬಾನೆ ಪದಗಳನ್ನು ಜನರು ಹೆಚ್ಚಾಗಿ ಇಷ್ಟಪಡುತ್ತಾರೆ. 1990ರಿಂದಲೂ ಮೈಸೂರು ಆಕಾಶವಾಣಿಯಲ್ಲಿ ನಿರಂತರವಾಗಿ ಹಾಡುತ್ತಿದ್ದೇನೆ ಎಂದರು. 
    ಸಾವಿರಾರು ಮಕ್ಕಳಿಗೆ ಸೋಬಾನೆ ಪದಗಳನ್ನು ಕಲಿಸಿದ್ದೇನೆ, ಜತೆಗೆ ಜನಪದ ಕಲೆಗಳನ್ನು ಕಲಿಸಿದ್ದೇನೆ, ಆದರೆ ಕಲಿತರವರು ಪ್ರದರ್ಶನ ನೀಡುವ ಮೂಲಕ ಮುಂದುವರಿಸಿಕೊಂಡು ಹೋಗುತ್ತಿಲ್ಲ. ಕಳೆದ 9 ವರ್ಷಗಳಿಂದ ಮಂಡ್ಯ ಜಿಲ್ಲಾ ಸೋಬಾನೆ ಉತ್ಸವವನ್ನು ನಡೆಸಿಕೊಂಡು ಬರುತ್ತಿದ್ದೇನೆ ಎಂದು ತಿಳಿಸಿದರು. 
    ಆದರೆ ಕಳೆದ ಎರಡು ವರ್ಷಗಳಿಂದೀಚೆಗೆ ಕಾರ್ಯಕ್ರಮಗಳು ಸಿಗುತ್ತಿಲ್ಲ. ಕಲೆಯನ್ನು ಪ್ರದರ್ಶಿಸುವುದನ್ನು ಬಿಟ್ಟರೆ ನನಗೆ ಬೇರೆನೂ ಗೊತ್ತಿಲ್ಲ. ರಾಮನಗರದಲ್ಲಿ ಮರಿದೇವರು ಅವರು ಆಯೋಜಿಸುತ್ತಿದ್ದ ಸೋಬಾನೆ ಪದ ಗಾಯನ ಸ್ಪರ್ಧೆಯಲ್ಲಿ ಮೂರು ಬಾರಿ ಪ್ರಥಮ ಬಹುಮಾನವನ್ನು ಗೆದ್ದುಕೊಂಡಿದ್ದೆ. ಇನ್ನು ಮುಂದಾದರೂ ಸರ್ಕಾರ ಜನಪದ ಕಲೆಗಳನ್ನು ಪ್ರದರ್ಶಿಸುವವರಿಗೆ ಪ್ರೋತ್ಸಾಹ ನೀಡಬೇಕು ಎಂದರು.
    ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ಮಾತನಾಡಿ ಸೋಬಾನೆ ಪದಗಳಲ್ಲಿ ನಮ್ಮ ರೈತ ಸಂಸ್ಕೃತಿಯನ್ನು ಕಾಣಬಹುದು. ನಮ್ಮ ಪೂರ್ವಜರ ಸಂಸ್ಕೃತಿಯಾದ ಜಾನಪದ ಕಲೆ ಯನ್ನು ಮುಂದಿ ಪೀಳಿಗೆಗೆ ಉಳಿಸಿ ಬೇಳೆಸಬೆಕು. ಹಳ್ಳಿಗರ ಬದುಕಿನಲ್ಲಿ ಹಾಸು ಹೊಕ್ಕಾಗಿದ್ದ ಜಾನಪದ ಸಂಸ್ಕೃತಿ ಇಂದು ದೃಶ್ಯ ಮಾಧ್ಯಮ ಗಳ ಹಾವಳಿಯಿಂದ ನಶಿಸುತ್ತಿದೆ ಎಂದರು. 
    ಎಂ.ಎಚ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್. ಚಂದ್ರಶೇಖರ್, ಕರ್ನಾಟಕ ಜಾನಪದ ಪರಿಷತ್ತಿನ ಮೇನೆಜಿಂಗ್ ಟ್ರಸ್ಟಿ ಆದಿತ್ಯಾನಂಜರಾಜ್, ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಶಿವಣ್ಣ, ಜಾನಪದ ಲೋಕದ ಆಡಳಿತಾಧಿಕಾರಿ ಕುರುವ ಬಸವರಾಜ್, ರಂಗ ನಿರ್ದೇಶಕ ಬೈರ್ನಳ್ಳಿ ಶಿವರಾಂ ಇದ್ದರು. 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑