ಕಾಯಕ, ಕನಸು ಮತ್ತು ನಡವಳಿಕೆಯೇ ವ್ಯಕ್ತಿತ್ವ ವಿಕಸನ ಪ್ರೊ ಪ್ರಸನ್ನಕುಮಾರ್
ಕಾಯಕ ಮಾಡುವುದು, ಮನಸ್ಸನ್ನು ಸದೃಢಗೊಳಿಸುವುದು, ಕನಸು ಕಾಣುವುದು, ಆ ಕನಸುಗಳನ್ನು ಸ್ಪಷ್ಟತೆಯ ಗುರಿಯೊಟ್ಟಿಗೆ ನಡವಳಿಕೆಗಳ ಮೂಲಕ ಯಶಸ್ವಿಗೊಳಿಸುವುದೇ ವ್ಯಕ್ತಿತ್ವ ವಿಕಸನ ಎಂದು ಮೈಸೂರು ಸಿದ್ಧಾರ್ಥ
ಕಾಲೇಜಿನ ಸಹಾಯಕ ಇಂಗ್ಲಿಷ್ ಪ್ರಾಧ್ಯಾಪಕ ಪ್ರಸನ್ನ ಕುಮಾರ್ ತಿಳಿಸಿದರು.
ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ-ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಾನು ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎರಡು ಬಾರಿ ಅನುತ್ತೀರ್ಣನಾಗಿದ್ದೆ, ಅದು ಇಂಗ್ಲಿಷ್ ವಿಷಯದಲ್ಲಿ, ಆದರೆ ನಾನು ತೆಗೆದುಕೊಂಡ ದೃಢ ನಿರ್ಣಯದಿಂದ ಇಂಗ್ಲಿಷ್ ಪ್ರಾಧ್ಯಾಪಕನಾಗಿದ್ದೇನೆ ಎಂದರು.
ಕ್ರೀಡೆ ಕೇವಲ ಸ್ಪರ್ಧೆಗೆ ಅಲ್ಲದೆ ದೇಹದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು, ನೀವು ಕಾಲೇಜಿನಲ್ಲಿ ಸ್ಪರ್ಧೆಯನ್ನು ಒಡ್ಡಿದರೆ ಉತ್ತಮ ಕ್ರೀಡಾ ಪಟುವಾಗುತ್ತೀರಿ, ಜೊತೆಗೆ ಆರೋಗ್ಯವಂತರಾಗುತ್ತೀರಿ ಎಂದು ಮಕ್ಕಳಿಗೆ ಸಲಹೆ ನೀಡಿದರು.
ಹೇಗೆ ಸಾಯಬೇಕೆಂದು ಯೋಚಿಸುತ್ತಿದ್ದ ಹುಡುಗನಿಗೆ ಆಗಂತುಕನೊಬ್ಬ ಬಂದು ಏನು ಮಾಡುತ್ತಿದ್ದಿ ಎಂದು ಕೇಳಿದಾಗ ವಾಸ್ತವ ಬಿಟ್ಟು ನಾನು ಪ್ರಪಂಚದ ದೊಡ್ಡ ರೆಸ್ಟೋರೆಂಟ್ ನ ಮಾಲೀಕನಾಗಬೇಕಿಂದಿದ್ದೇನೆ ಎಂದು ಉಡಾಫೆ ಉತ್ತರ ಕೊಟ್ಟ, ತದನಂತರ ಆ ಬಾಲಕ ಅದನ್ನೇ ದೃಢ ನಿಶ್ಚಯ ಹಾಗೂ ಗುರಿಯನ್ನಾಗಿ ಮಾಡಿಕೊಂಡಿದ್ದರ ಫಲವಾಗಿ ಇಂದು ಪ್ರಪಂಚದಾದ್ಯಂತ ಇರುವ ಮೆಕ್ ಡೊನಾಲ್ಡ್ ಹೋಟೆಲ್ ಗಳ ಮಾಲೀಕನಾಗಿದ್ದಾನೆ, ಅಂತಹ ಕನಸುಗಳನ್ನು ಕಂಡು ಅದನ್ನು ನನಸಾಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಒಬ್ಬ ಸಾಮಾನ್ಯ ಗುಮಾಸ್ತನಿಂದ ಹಿಡಿದು ಡಾಕ್ಟರ್, ಇಂಜಿನಿಯರ್, ಐಎಎಸ್, ಐಪಿಎಸ್ ಏನಾದರೂ ಆಯ್ಕೆ ಮಾಡಿಕೊಳ್ಳಿ, ಗುರಿ ಸ್ಪಷ್ಟತೆ ಇದ್ದರೆ ಎಲ್ಲವೂ ಸಾಧ್ಯ ಎಂದು ಹಲವಾರು ಉದಾಹರಣೆಗಳ ಮೂಲಕ ಪ್ರತಿಪಾದಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ ವಿ ವೆಂಕಟೇಶ್ ರವರು ನಮ್ಮ ಕಾಲೇಜಿನಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಇಂದು ವಿಶ್ವದ ಅನೇಕ ಕಡೆ ಉತ್ತಮ ಹೆಸರುಗಳಿಸಿದ್ದಾರೆ, ನೀವುಗಳು ಸಹ ಪೋಷಕರು, ಕಾಲೇಜು, ರಾಜ್ಯ ಮತ್ತು ದೇಶಕ್ಕೆ ಉತ್ತಮ ಹೆಸರು ತರುವಂತಹ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕೆಂದು ಕರೆ ನೀಡಿದರು.
ಗಣ್ಯರ ಜೊತೆ ಕಾಲೇಜಿನ ವಾರ್ಷಿಕ ಸಂಚಿಕೆಯನ್ನು ಸಂಪಾದಕರಾದ ಪ್ರೊ ಪದ್ಮನಾಭ ಆರ್ ಬಿಡುಗಡೆ ಮಾಡಿದರು. ವೇದಿಕೆಯಲ್ಲಿ ಪ್ರಾಧ್ಯಾಪಕರುಗಳಾದ ಡಾ ಶ್ರೀನಿವಾಸ, ನಂಜುಂಡ, ಶ್ರೀಕಾಂತ್ ರವರು ಹಾಜರಿದ್ದರು.
ಪ್ರಾಧ್ಯಾಪಕ ಡಾ ಮಧುಸೂದನಜೋಷಿ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಮಕ್ಕಳು ಪ್ರದರ್ಶಿಸಿದ ಭರತನಾಟ್ಯ, ದೇಹದಾರ್ಢ್ಯ ಪ್ರದರ್ಶನ ಮತ್ತು ನೃತ್ಯ ಗೀತೆಗಳು ಜನಪದದ ಸೊಗಡಿನ ಕೋಲಾಟಗಳು ನೆರೆದಿದ್ದವರ ಮನಸೆಳೆಯುವಂತಿದ್ದವು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು