Tel: 7676775624 | Mail: info@yellowandred.in

Language: EN KAN

    Follow us :


ಕೇಸರಿಮಯವಾದ ಲೋಕಸಭೆ, ಗಟಾರ ಸೇರಿದ ಮಹಾಘಟಬಂಧನ್, ರಾಜ್ಯಕ್ಕೆ ಮೂರೇ ಗೆಲುವು !

Posted date: 23 May, 2019

Powered by:     Yellow and Red

ಕೇಸರಿಮಯವಾದ ಲೋಕಸಭೆ, ಗಟಾರ ಸೇರಿದ ಮಹಾಘಟಬಂಧನ್, ರಾಜ್ಯಕ್ಕೆ ಮೂರೇ ಗೆಲುವು !

ವಿರೋಧ ಪಕ್ಷದಲ್ಲಿ ಕೂರಲು ಅನರ್ಹ


ಇಡೀ ದೇಶದಲ್ಲಿ ಕುತೂಹಲ ಮೂಡಿಸಿದ್ದ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಭರ್ಜರಿ ಗೆಲುವು ಸಾಧಿಸಿದ್ದು ಮತ್ತೆ ನರೇಂದ್ರ ಮೋದಿಯವರು ಪ್ರಧಾನಿ ಪಟ್ಟ ಅಲಂಕರಿಸಲು ಸಜ್ಹಾಗಿದ್ದಾರೆ.

ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಕೂರಲೂ ಸಹ ಅನರ್ಹವಾಗಿದ್ದು ಸಂಗಡ ಪಕ್ಷಗಳನ್ನೆಲ್ಲಾ ಸೇರಿಸಿಕೊಂಡು ವಿರೋಧ ಪಕ್ಷದ ಸ್ಥಾನ ಉಳಿಸಿಕೊಳ್ಳಬೇಕಾಗಿರುವುದು ರಾಷ್ಟ್ರೀಯ ಪಕ್ಷಕ್ಕೆ ಒದಗಿ ಬಂದಿರುವ ದುಸ್ಥಿತಿ ಎಂದರೆ ನಂಬಲಾಗದು.


ಕಾಂಗ್ರೆಸ್ ಇರಲಿ ಯುಪಿಎ ಗೂ ಸಾಧ್ಯವಾಗಲಿಲ್ಲ


ಕಾಂಗ್ರೆಸ್ ಬಹುಮತ ಸಾಬೀತು ಮಾಡುವಷ್ಟು ಗೆಲ್ಲಲಾಗದು ಎಂಬ ಸತ್ಯವನ್ನರಿತ ಕಾಂಗ್ರೆಸ್ ಮತ್ತು ಇತರ ಎಡರಂಗ ಹಾಗೂ ಪ್ರಾದೇಶಿಕ ಪಕ್ಷಗಳ ನಾಯಕರು *ಮಹಾಘಟಬಂಧನ್* ಕೂಟ ರಚಿಸಿಕೊಂಡು ಚುನಾವಣೆಗೆ ಧುಮುಕಿದರೂ ಸಹ ನೂರರ ಗಡಿ ದಾಟದಿರುವುದು ಅವರ ಪ್ರಜಾಪ್ರಭುತ್ವದಲ್ಲಿನ ಪಾತ್ರ ಏನು ? ಎಂಬುದನ್ನು ತೋರಿಸುತ್ತದೆ.


ಬಿಜೆಪಿ ಮಯವಾದ ಕರ್ನಾಟಕ


ಕರ್ನಾಟಕದಲ್ಲಿ ಸ್ವತಃ ಬಿಜೆಪಿ ಪಕ್ಷದ ನಾಯಕರು ಸಹ ೨೫ ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ಕನಸು ಕಟ್ಟಿಕೊಂಡವರಲ್ಲ, ೧೮ ರಿಂದ ೨೦ ಅಭ್ಯರ್ಥಿಗಳು ಗೆಲ್ಲಬಹುದು ಎಂಬುದಷ್ಟೇ ಅವರ ಲೆಕ್ಕಚಾರ ಆಗಿತ್ತು, ಅದನ್ನು ಮೀರಿ ೨೫ ಕ್ಷೇತ್ರದಲ್ಲಿ ಗೆದ್ದಿದ್ದಾರೆ ಎಂದರೆ ಅದು ಕೇವಲ ಅಭ್ಯರ್ಥಿಗಳ ಗೆಲುವಲ್ಲ, ಮೋದಿ, ಬಿಜೆಪಿ ಮತ್ತು ದೇಶದ ಪರ ಮಾತ್ರ ಮತದಾರ ಮತ ನೀಡಿರುವುದು ಸ್ಪಷ್ಟ.


ಮೈತ್ರಿ ಯೇ ಅಥವಾ ದುರಾಡಳಿತವೇ


ಕಾಂಗ್ರೆಸ್ ಮತ್ತು ಜೆಡಿಎಸ್ ರಾಜ್ಯ ಸರ್ಕಾರದ ಮೈತ್ರಿಯಂತೆ ಲೋಕಸಭಾ ಚುನಾವಣೆಯಲ್ಲಿಯೂ ಸಹ ಮೈತ್ರಿ ಮಾಡಿಕೊಂಡಿದ್ದು ಈ ಎರಡು ಪಕ್ಷಗಳು ಕೇವಲ ಒಂದೊಂದೆ ಸ್ಥಾನ ಗೆದ್ದಿರುವುದು ಪ್ರಜಾಪ್ರಭುತ್ವ ವಿರೋಧಿಗಳಿಗೆ ಮತ ನೀಡುವುದಿಲ್ಲ ಎಂಬ ಮತದಾರ ಪ್ರಭುವಿನ ಸಂದೇಶವೇ ? ಅಥವಾ ದುರಾಡಳಿತವೇ ? ಎಂದು ಚಿಂತಿಸಬೇಕಾದ ಸಮಯವಿದು.


ಕುಟುಂಬ ರಾಜಕಾರಣ ಕಾರಣವಾಯಿತೇ ?


ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ನ್ನು ಸ್ಪಷ್ಟವಾಗಿ ದೇಶದ ಮತದಾರರು ತಿರಸ್ಕರಿಸಲು ೬೦ ವರ್ಷಗಳ ಇತಿಹಾಸ ಎಲ್ಲರ ಕಣ್ಮುಂದಿದೆ, ಆದರೆ ಜೆಡಿಎಸ್ ಪಕ್ಷ ತಿರಸ್ಕರಿಸಲು ಮೊದಲ ಕಾರಣವೆಂದರೆ ಅದು *ಕುಟುಂಬ ರಾಜಕಾರಣ* ದೇಶದ ಎಲ್ಲಾ ರಾಜ್ಯದ, ಎಲ್ಲಾ ಪಕ್ಷಗಳಲ್ಲಿಯೂ ಕಾಲಕ್ಕೆ ತಕ್ಕ ಹಾಗೆ ಕುಟುಂಬ ರಾಜಕೀಯ ಇದೆ, ಆದರೆ ಒಂದು ಪ್ರಾದೇಶಿಕ ಪಕ್ಷ ಏಕ ಬಾರಿಗೆ ಏಳು ಮಂದಿ ರಾಜಕೀಯಕ್ಕೆ ಬರುವುದನ್ನು ಸಹಿಸಲಿಲ್ಲ ಎಂಬುದಾಗಿ ವ್ಯಾಖ್ಯಾನಿಸಬಹುದು.


ಮುಖ್ಯಮಂತ್ರಿಯ ತಂದೆ ಮತ್ತು ಮಗ ಸೋಲು


ರಾಜ್ಯದ ಮುಖ್ಯಮಂತ್ರಿಯೊಬ್ಬರು ತನ್ನ ತಂದೆ ಮತ್ತು ಮಗ ಇಬ್ಬರನ್ನೂ ಗೆಲ್ಲಿಸಿಕೊಳ್ಳಲಾಗದ್ದೊಂದು ಅರಗಿಸಿಕೊಳ್ಳಲಾಗದ ತುತ್ತು, ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ದೇಶದ ಮಾಜಿ‌ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡ ರು ತುಮಕೂರು ಕ್ಷೇತ್ರದಲ್ಲಿ, ಅವರ ಮೊಮ್ಮಗ ಕುಮಾರಸ್ವಾಮಿ ಯವರ ಮಗ ನಿಖಿಲ್ ಕುಮಾರಸ್ವಾಮಿ ಇಬ್ಬರೂ ಸೋತಿದ್ದು ಅವರ ಹೇಳಿಕೆಗಳು, ಅವರ ಆಡಳಿತ ಮತ್ತು ಮೈತ್ರಿ ಯನ್ನು ಪ್ರಜ್ಞಾವಂತ ಮತದಾರ ಒಪ್ಪಿಕೊಳ್ಳುವುದಿಲ್ಲ ಎಂಬುದು ಸತ್ಯವಾಗಿದೆ.


ಸುಮಲತಾ ಗೆಲುವಿಗೆ ಜೆಡಿಎಸ್ ನಾಯಕರೇ ಕಾರಣ


ಮಂಡ್ಯದಲ್ಲಿ  ಸುಮಲತಾ ರವರು ನಿರಾಯಾಸವಾಗಿ ಗೆಲ್ಲಲು ಮೈತ್ರಿ ಮಾಡಿಕೊಂಡಿದ್ದು ಒಂದೆಡೆಯಾದರೆ, ಜೆಡಿಎಸ್ ನಾಯಕರ ಮಾತುಗಳೇ ನಿಖಿಲ್ ಸೋಲಲು ಕಾರಣವಾಯಿತು, ಅವರ ಮಾತುಗಳು ಹೇಗಿದ್ದವೆಂದರೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ರೈತ ಸಂಘ ಮತ್ತು ಅಂಬಿ ಮತ್ತಿತರ ನಟರ ಅಭಿಮಾನಿಗಳು ಒಟ್ಟಾಗಿ ಎಲ್ಲಾ ಪಕ್ಷದ ಬಾವುಟಗಳೊಂದಿಗೆ ಪ್ರಚಾರ ನಡೆಸಿದ್ದು ಸುಮಲತಾ ರವರ ಗೆಲುವಿನ ಅಂತರವನ್ನು ಹೆಚ್ಚಿಸಲು ಕಾರಣವಾಯಿತು.


ಡಿ ಕೆ ಸುರೇಶ್ ಮತ್ತು ಪ್ರಜ್ವಲ್ ಇಬ್ಬರೇ ನಾಯಕರು


ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷ ಜೆಡಿಎಸ್ ಮೈತ್ರಿಯಲ್ಲಿ ಸ್ಪರ್ಧಿಸಿದ್ದ ೨೮ ಕ್ಷೇತ್ರದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಡಿ ಕೆ ಸುರೇಶ್ ಮತ್ತು ಹಾಸನ ಕ್ಷೇತ್ರದ ಪ್ರಜ್ವಲ್ ರೇವಣ್ಣ ಹೊರತುಪಡಿಸಿ ೨೬ ಕ್ಷೇತ್ರದಲ್ಲಿ ಹೀನಾಯವಾಗಿ ಸೋತಿದ್ದಕ್ಕೆ ಏನು ಕಾರಣ ಎಂಬುದನ್ನು ಹುಡುಕಿಕೊಳ್ಳಲು ಸುಸಮಯವಾಗಿದೆ.


ಸ್ಥಳೀಯ ನಾಯಕರು ದುಡಿದಿದ್ದರೆ ಗೆಲುವು ನಮ್ಮದೇ ಅಶ್ವಥ್ ನಾರಾಯಣ


ಮಂಡ್ಯ ಹೊರತುಪಡಿಸಿ ಬೆಂಗಳೂರು ಮತ್ತು ಹಾಸನ ಕ್ಷೇತ್ರದಲ್ಲಿ ಸ್ಥಳೀಯ ಬಿಜೆಪಿ ನಾಯಕರು ನಿಷ್ಠೆಯಿಂದ ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ದುಡಿದಿದ್ದರೆ ಯಾವುದೇ ಕಾರಣಕ್ಕೂ ಸೋಲುತ್ತಿರಲಿಲ್ಲ ಎಂಬುದು ಅಲ್ಲಿನ ಅಭ್ಯರ್ಥಿಗಳ ಅಳಲಾಗಿದೆ, 

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಥಳೀಯ ಬಿಜೆಪಿ ನಾಯಕರು ಕೆಲಸ ಮಾಡಿದರೆ ಒಂದು ಲಕ್ಷ ಮತಗಳನ್ನು ನಿರಾಯಾಸವಾಗಿ ಗೆಲ್ಲಬಹುದಿತ್ತು ಎಂದು ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣ ಹೇಳಿದರು.


ಎಲ್ಲರಿಗೂ ಅಭಾರಿ ಡಿ ಕೆ ಸುರೇಶ್


ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆದ್ದು ಬೀಗಿದ ಏಕೈಕ ಕಾಂಗ್ರೆಸ್ (ಮೈತ್ರಿಯಲ್ಲಿ ಎರಡನೆಯವರು) ಅಭ್ಯರ್ಥಿ ಡಿ ಕೆ ಸುರೇಶ್ ಮಾಧ್ಯಮ ಮಿತ್ರರ ಜೊತೆಯಲ್ಲಿ ಮಾತನಾಡಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸೋತಿದ್ದಕ್ಕೆ ಬೇಸರವಿದೆ, ಆ ವಿಷಯ ಮಾತನಾಡಲು ಇದು ಸೂಕ್ತ ಸಮಯವಲ್ಲ, ಒಟ್ಟಾರೆ ನನ್ನ ಗೆಲುವಿಗೆ ಶ್ರಮಿಸಿದ ಮೈತ್ರಿ ಪಕ್ಷದ ಎಲ್ಲಾ ನಾಯಕರು ಮತ್ತು ಕಾರ್ಯಕರ್ತರಿಗೆ ನಮಿಸುತ್ತೇನೆ ಎಂದರು.


ಸೋತ ಘಟಾನುಘಟಿ ನಾಯಕರು


ಏಳು ಬಾರಿ ಗೆದ್ದಿದ್ದ ಮಲ್ಲಿಕಾರ್ಜುನ ಖರ್ಗೆ, ಕೆ ಹೆಚ್ ಮುನಿಯಪ್ಪ, ಹೆಚ್ ಡಿ ದೇವೇಗೌಡ, ಬಿ ಕೆ ಹರಿಪ್ರಸಾದ್, ಕೃಷ್ಣಬೈರೇಗೌಡ ರಂತಹ ನಾಯಕರು ಸೋತಿದ್ದು ವಿಪರ್ಯಾಸ, ಅಧಿಕಾರ ನಡೆಸುವವರಿಗೆ ವಿರೋಧಿಸುವವರು ಇರಬೇಕು, ಅದರಲ್ಲೂ ಇಂತಹ ಮುತ್ಸದ್ದಿ ನಾಯಕರು ಇದ್ದರೆ ಅಧಿಕಾರಸ್ತರು ತಪ್ಪು ಮಾಡಿದಗ ತಿದ್ದಿ ಬುದ್ದಿ ಹೇಳಲು ಬಲಿಷ್ಠ ವಿರೋಧಿಗಳು ಇಲ್ಲದಾಗ ಅಧಿಕಾರಸ್ತರು ತಪ್ಪು ಮಾಡುವುದು ಸಹಜವಾಗಿ ಬಿಡುತ್ತದೆ.


*ಏನೇ ಆಗಲಿ ಸೋತ ಎಲ್ಲಾ ಪಕ್ಷದ ನಾಯಕರು ಆತ್ಮ ವಿಮರ್ಶೆ ಮಾಡಿಕೊಳ್ಳಲು ಒಳ್ಳೆಯ ಸುಸಮಯ*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑