Recent news »
-
ದಲಿತ ಸಂವೇದನೆಗಳಿಗೆ ದನಿ ಕೊಟ್ಟ ಮಹತ್ವದ ಕವಿ ಡಾ. ಸಿದ್ದಲಿಂಗಯ್ಯ
ನಾಡೋಜ ಡಾ. ಸಿದ್ಧಲಿಂಗಯ್ಯ ಅವರು ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದ ಒಬ್ಬ ಚಿಂತನಶೀಲ ಕವಿ. ಇವರ ಕವಿತೆಗಳು ಅಕ್ಷರ ವಂಚಿತ ಶೋಷಿತ ಸಮುದಾಯದ ಸಂವೇದನೆಗಳಿಗೆ ಮಾತು ತಂದುಕೊಟ್ಟಿವೆ; ಸಿಟ್ಟು-ಸಂಕಟಗಳ ಮೌನರೂಪಕ್ಕೆ ಸ್ಫೋಟಕ ಶಕ್ತಿ ನೀಡಿ ಜಾಗೃತಗೊಳಿಸಿವೆ;
ಸಮಾನತೆಯ ಪರಿಕಲ್ಪನೆಯ ನೆಲೆಯಲ್ಲಿ ಬದುಕು ಕಟ್ಟಿಕೊಳ್ಳಲು ಪ್ರಚೋದಿಸಿವೆ. ಮಾತ್ರವಲ್ಲದೆ, ಸಹಜವಾಗಿ ಹೊರಹೊಮ್ಮಿರುವ ಇವರ ಅಭಿವ್ಯಕ್ತಿ ವಿಧಾನವು ಶ್ರೀಸಾಮಾನ್ಯನ ಮೆದುಳು ಮುಟ್ಟುವಷ್ಟು ಸರಳವಾಗಿದೆ; ಅವರೊಳಗೆ ವೈಚಾರಿಕ ಪ್ರಜ್ಞೆ ಅರಳಿಸುವಷ್ಟು ಸೂಕ್ಷ್ಮ ಸಂವೇದನಾ ಶಕ್ತಿ ಪಡೆದುಕೊಂಡಿದೆ. ಈ ಎಲ್ಲ ಸಮರ್ಥ ಗುಣಗಳನ್ನು ಸಿದ್ಧಿಸಿಕೊಂಡಿರುವ ಕಾರಣದಿಂದಾಗಿಯೇ ಇವರು ಪ್ರಮುಖ ಸಾಹಿತ್ಯ ಚಳವಳಿಯೊಂದರ ಬಹು ಮುಖ್ಯ ಕವಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ.
ನಿರ್ಲಕ್ಷಿತ ಜನಾಂಗದಲ್ಲಿ ಜನಿಸಿ, ಬಡತನದ ಬೇಗೆಯಲ್ಲಿ ಪರಿತಪಿಸುತ್ತಾ ನೋವು-ಅವಮಾನ-ಹತಾಶೆಗಳಲ್ಲೇ ಮುದುಡಿಹೋಗಬಹುದಾಗಿದ್ದ ವ್ಯಕ್ತಿತ್ವವೊಂದು ಸಮಕಾಲೀನ ಸಾಹಿತ್ಯ ಚಳವಳಿಯೊಂದರ ರೂವಾರಿಯಾಗಿ ರೂಪುಗೊಂಡಿದ್ದು ಸಾಮಾನ್ಯ ಸಾಧನೆಯೇನಲ್ಲ. ಇದು ಡಾ. ಸಿದ್ಧಲಿಂಗಯ್ಯ ಅವರು ಸ್ವಯಂ ಸಾಮಥ್ರ್ಯದಿಂದ ಗಳಿಸಿರುವ ಸಾಂಸ್ಕøತಿಕ ಶಕ್ತಿಗೆ ಒಂದು ಸ್ಪಷ್ಟ ಸಾಕ್ಷಿಯಾಗಿದೆ. ಕಾವ್ಯ, ನಾಟಕ, ವಿಮರ್ಶೆ, ಸಂಶೋಧನೆ ಮೊದಲಾದ ಪ್ರಕಾರಗಳಲ್ಲಿ ತಮ್ಮದೇ ಆದ ವಿಶಿಷ್ಟ ಅಭಿವ್ಯಕ್ತಿಯ ಮೂಲಕ ಸಾಹಿತ್ಯಕ ದುಡಿಮೆಯನ್ನು ಡಾ. ಸಿದ್ದಲಿಂಗಯ್ಯನವರು ಮಾಡಿದ್ದಾರೆ.
ಡಾ.ಸಿದ್ಧಲಿಂಗಯ್ಯನವರು ದೇವಯ್ಯ ಮತ್ತು ವೆಂಕಟಮ್ಮ ಅವರ ಹಿರಿಯ ಮಗನಾಗಿ ದಿನಾಂಕ: 03-02-1954ರಂದು ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಮಂಚನಬೆಲೆಯಲ್ಲಿ ಜನಿಸಿದರು. ಕನ್ನಡ ಎಂ.ಎ. ಪದವಿಯನ್ನು ಡಿ.ಎಲ್.ನರಸಿಂಹಾಚಾರ್ ಚಿನ್ನದ ಪದಕದೊಂದಿಗೆ ಪೂರೈಸಿರುವ ಇವರು ‘ಗ್ರಾಮದೇವತೆಗಳು’ ಎಂಬ ವಿಷಯದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ 30 ವರ್ಷಗಳಿಗಿಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿಯೂ ಇವರು ಕಾರ್ಯ ನಿರ್ವಹಿಸಿದ್ದಾರೆ.
ಅಧ್ಯಾಪಕರಾಗಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಮೇಷ್ಟ್ರೂ ಆಗಿರುವ ಸಿದ್ಧಲಿಂಗಯ್ಯನವರು ತಮ್ಮ ವಿಶಿಷ್ಟ ಕಾವ್ಯಾಭಿವ್ಯಕ್ತಿಯ ಮೂಲಕ ಕವಿಗಳಾಗಿ ನಾಡಿನಾದ್ಯಂತ ಜನಪ್ರಿಯರಾಗಿದ್ದಾರೆ. ಹಲವಾರು ಪ್ರತಿಷ್ಠಿತ ಸಂಘ-ಸಂಸ್ಥೆಗಳ ಸದಸ್ಯರಾಗಿರುವ ಇವರು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಹಲವು ವರ್ಷಗಳ ಕಾಲ ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ತಾವು ರೂಪಿಸಿದ ವಿಶಿಷ್ಟ ಕಾರ್ಯಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕನ್ನಡದ ಅಪೂರ್ವ ಸಾಹಿತಿ, ಸಾಹಿತ್ಯ ಪರಿಚಾರಕ ಡಾ.ಜಿ.ಪಿ.ರಾಜರತ್ನಂ ಅವರ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ಸ್ಥಾಪಿಸಿದ್ದು ಇವರ ಸಾಹಿತ್ಯ ಪ್ರೀತಿಗೊಂದು ಸ್ಪಷ್ಟ ನಿದರ್ಶನ. ಇದೀಗ ಇವರು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಂಶೋಧನಾ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಬಂಡಾಯ ಸಾಹಿತ್ಯ ಸಂಘಟನೆಯ ಸಂಸ್ಥಾಪಕ ಸದಸ್ಯರಾಗಿ ಡಾ.ಸಿದ್ಧಲಿಂಗಯ್ಯ ಅವರು ಸಕ್ರಿಯವಾಗಿ ದುಡಿದಿದ್ದಾರೆ. ತಮ್ಮ ಅನನ್ಯ ಸೇವೆಗಾಗಿ ಹಲವಾರು ಪ್ರಶಸ್ತಿ-ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಡಾ.ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಉತ್ತಮ ಚಲನಚಿತ್ರ ಗೀತರಚನೆಕಾರರೆಂದು ರಾಜ್ಯ ಸರ್ಕಾರದ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಸಂದೇಶ್ ಪ್ರಶಸ್ತಿ, ಡಾ.ಅಂಬೇಡ್ಕರ್ ಪ್ರಶಸ್ತಿ, ನವದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ, ಬಾಬು ಜಗಜೀವನ್ರಾಮ್ ಪ್ರಶಸ್ತಿ, ನಾಡೋಜ ಪ್ರಶಸ್ತಿ-ಹೀಗೆ ಡಾ.ಸಿದ್ಧಲಿಂಗಯ್ಯನವರು ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ಇವರು ಹಲವಾರು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಹೊಲೆಮಾದಿಗರ ಹಾಡು, ಸಾವಿರಾರು ನದಿಗಳು, ಪಂಚಮ, ನೆಲಸಮ, ಅವತಾರಗಳು, ಏಕಲವ್ಯ, ಹಕ್ಕಿನೋಟ, ಕಪ್ಪು ಕಾಡಿನ ಹಾಡು, ಗ್ರಾಮದೇವತೆಗಳು, ಊರುಕೇರಿ ಭಾಗ 1 ಮತ್ತು 2, ಮೆರವಣ ಗೆ, ನನ್ನ ಜನಗಳು ಮತ್ತು ಇತರ ಕವಿತೆಗಳು, ಜನಸಂಸ್ಕøತಿ, ಉರಿಕಂಡಾಯ - ಇವು ಡಾ.ಸಿದ್ಧಲಿಂಗಯ್ಯ ಅವರ ಪ್ರಮುಖ ಕೃತಿಗಳು.
ಸದನದಲ್ಲಿ ಸಿದ್ಧಲಿಂಗಯ್ಯ, ಬತ್ತದ ಬೆಳದಿಂಗಳು ಡಾ.ಸಿದ್ಧಲಿಂಗಯ್ಯ, ದನಿಯಿಲ್ಲದವರ ದನಿ ನಾಡೋಜ ಡಾ.ಸಿದ್ಧಲಿಂಗಯ್ಯ ಮೊದಲಾದ ಪುಸ್ತಕಗಳು ಸಿದ್ಧಲಿಂಗಯ್ಯ ಅವರ ಬದುಕು, ಹೋರಾಟ, ಸೇವೆ ಮತ್ತು ಸಾಹಿತ್ಯವನ್ನು ಕುರಿತ ಕೃತಿಗಳಾಗಿವೆ.
ಇವರ ಕವಿತೆಗಳು ಇಂಗ್ಲಿಷ್, ಹಿಂದಿ, ತಮಿಳು, ಬೆಂಗಾಲಿ, ಮಲಯಾಳಂ ಮತ್ತು ತೆಲುಗು ಭಾಷೆಗಳಿಗೆ ಅನುವಾದಗೊಂಡಿವೆ. ಇವರ ಊರುಕೇರಿ ಆತ್ಮಕಥೆಯು ತಮಿಳು, ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಗಳಿಗೆ ಭಾಷಾಂತರಗೊಂಡಿವೆ. ಆಳ್ವಾಸ್ ನುಡಿಸಿರಿಯ ಅಧ್ಯಕ್ಷತೆಯ ಗೌರವಕ್ಕೂ ಪಾತ್ರರಾಗಿದ್ದ ನಾಡಿನ ಇಂಥ ಹಿರಿಯ ಸಾಹಿತಿಗೆ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಸಂದಿರುವುದು ಹೆಮ್ಮೆಯ ಸಂಗತಿಯಾಗಿದೆ.
-ಎಸ್. ರುದ್ರೇಶ್ವರ
ಸಾಹಿತ್ಯ ಸಂಶೋಧನಾ ವಿದ್ಯಾರ್ಥಿ
ರಾಮನಗರ.
ಮೊ :9880439669
-
ಲಯನ್ಸ್ ಕಣ್ಣಾಸ್ಪತ್ರೆಗೆ ಎರಡು ಲಕ್ಷ ನೀಡಿದ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ
ರಾಮನಗರ : ಉತ್ತಮ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಶ್ರಮಿಸಬೇಕು ಎಂದು ಬೆಂಗಳೂರಿನ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸಂಜೆ ಲಯನ್ಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪರಸ್ಪರ ಸುಖ ಶಾಂತಿಯನ್ನು ಬಯಸುವುದರ ಮೂಲಕ ತನ್ನ ಮತ್ತು ಸಮಾಜದ ಏಳಿಗೆಯನ್ನು ಸಾಧಿಸಿಕೊಳ್ಳುವುದು ಮನುಷ್ಯತ್ವದ ಲಕ್ಷಣ ಎಂದು ತಿಳಿಸಿದರು.
ರಾಮನಗರದಲ್ಲಿ ಲಯನ್ಸ್ ಸಂಸ್ಥೆ ವತಿಯಿಂದ ಕಣ್ಣಿನ ಆಸ್ಪತ್ರೆಯನ್ನು ನಿರ್ಮಾಣ ಮಾಡುತ್ತಿರುವುದು ಉತ್ತಮ ಕೆಲಸವಾಗಿದೆ. ಮಾಜಿಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಶಾಸಕಿ ಅನಿತಾಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡಿ ಶಾಸಕರ ಅನುದಾನದಿಂದ ಆಸ್ಪತ್ರೆ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸುತ್ತೇನೆ ಎಂದು ತಿಳಿಸಿದರು.
ಲಯನ್ಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಚ್.ವಿ. ಶೇಷಾದ್ರಿ ಅಯ್ಯರ್ ಮಾತನಾಡಿ ರಾಮನಗರದಲ್ಲಿ ಲಯನ್ಸ್ ಸಂಸ್ಥೆ ಸ್ಥಾಪನೆಗೊಂಡು 39 ವರ್ಷಗಳಾಗಿದೆ. ಅಂದಿನಿಂದ ಇಂದಿನವರೆಗೂ ಸಾಮಾಜಿಕ ಕೆಲಸಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಈವರೆಗೆ 65 ಸಾವಿರಕ್ಕೂ ಹೆಚ್ಚು ಜನರಿಗೆ ಕಣ್ಣಿನ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.
ಲಯನ್ಸ್ ಸಂಸ್ಥೆ ಅಧ್ಯಕ್ಷ ಅಬ್ದುಲ್ ಸತ್ತಾರ್ (ಸಾಹುಕಾರ್ ಅಮ್ಜದ್) ಮಾತನಾಡಿ ರಾಮನಗರದ ಜನತೆಗೆ ಅನುಕೂಲವಾಗುವ ದೃಷ್ಟಿಯಿಂದ ಲಯನ್ಸ್ ಕಣ್ಣಿನ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ಆಸ್ಪತ್ರೆಯನ್ನು ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
ಲಯನ್ಸ್ ಸಂಸ್ಥೆಯ ಹಿರಿಯ ಜಿಲ್ಲಾ ಚೇರ್ಮನ್ ಸುರೇಶ್ ರಾಮು ಮಾತನಾಡಿ ಲಯನ್ಸ್ ಸಂಸ್ಥೆ ಅಂತರಾಷ್ಟ್ರೀಯ ಮಾನ್ಯತೆಯ ಸೇವಾ ಸಂಘಟನೆಯಾಗಿದೆ. ಅನೇಕ ಜನಪರ ಸೇವಾ ಚಟುವಟಿಕೆಗಳನ್ನು ಮಾಡುತ್ತಿದೆ. ಹೆಚ್ಚು ಜನರು ಇಂತಹ ಸಂಸ್ಥೆಯೊಂದಿಗೆ ಸಕ್ರಿಯವಾಗಿ ಭಾಗವಹಿಸಲು ಮುಂದೆ ಬರಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಲಯನ್ಸ್ ಕಣ್ಣಿನ ಆಸ್ಪತ್ರೆ ನಿರ್ಮಾಣಕ್ಕೆ ಬೆಂಗಳೂರಿನ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಅವರು ಎರಡು ಲಕ್ಷ ದೇಣಿಗೆ ನೀಡಿದರು. ಲಯನ್ಸ್ ಸಂಸ್ಥೆಯ ಪ್ರಾದೇಶಿಕ ಅಧ್ಯಕ್ಷೆ ಸತ್ಯವತಿಬಸವರಾಜು, ಮಾಜಿ ಕಾರ್ಪೊರೇಟರ್ ಆರೀಫ್ ಪಾಷಾ, ಲಯನ್ಸ್ ಸಂಸ್ಥೆಯ ಖಜಾಂಚಿ ಷಫಿ ಅಹಮದ್, ಮಹಮದ್ ಫೈರೋಜ್, ಲಯನೆಸ್ ಸಿಲ್ಕ್ ಸಿಟಿ ಸಂಸ್ಥೆ ಅಧ್ಯಕ್ಷೆ ಸುಧಾರಾಣಿ, ಖಜಾಂಚಿ ಸಂಧ್ಯಾ ಅಯ್ಯರ್, ವಿಜಯಮ್ಮ, ಶೋಭಾಗೌಡ ಇತರರು ಇದ್ದರು.
-
ರಾಮನಗರದಲ್ಲಿ ಮಂಗಳವಾರ ನಡೆಯಲಿವೆ ಏಳು ಕರಗಗಳು
ರಾಮನಗರ : ನಗರದಲ್ಲಿ ಈ ಬಾರಿ ಏಳು ಕರಗಗಳು ಇದೇ 7 ರಂದು ಮಂಗಳವಾರ ನಡೆಯಲಿವೆ. ಕೊರೊನಾ ಹಿನ್ನಲೆಯಲ್ಲಿ ಎಲ್ಲಾ ಕರಗಗಳು ದೇವಸ್ಥಾನದ ಆವರಣದಲ್ಲೇ ಸರಳವಾಗಿ ನಡೆಯಲಿವೆ. ಈ ಬಾರಿ ಕೊಂಡೋತ್ಸವ ನಡೆಯುತ್ತಿಲ್ಲ.
ಕಳೆದ ವರ್ಷ 9 ಕರಗಗಳು ನಡೆದಿದ್ದವು. ಈ ಬಾರಿ ಚಾಮುಂಡೇಶ್ವರಿ, ಆದಿಶಕ್ತಿ ಐಜೂರು, ಆದಿಶಕ್ತಿ ಶೆಟ್ಟಿಹಳ್ಳಿಬೀದಿ, ಬಾಲಗೇರಿಯ ಬಿಸಿಲು ಮಾರಮ್ಮ, ಮಗ್ಗದ ಕೇರಿ ಮಾರಮ್ಮ, ಭಂಡಾರಮ್ಮ, ತೋಪ್ ಖಾನ್ ಮೊಹಲ್ಲಾದ ಮುತ್ತುಮಾರಮ್ಮ ಕರಗಗಳು ನಡೆಯಲಿವೆ. ಆದಿಶಕ್ತಿ ಕೊಂಕಾಣಿದೊಡ್ಡಿ, ಟ್ರೂಪ್ ಲೇನ್ ಚೌಡೇಶ್ವರಿ ಕರಗ ಬಾರಿ ನಡೆಯುತ್ತಿಲ್ಲ. ಎಲ್ಲಾ ದೇವಾಲಯಗಳಲ್ಲೂ ಭರದ ಸಿದ್ದತೆ ನಡೆದಿದ್ದು, ತಳಿರು ತೋರಣಗಳಿಂದ ಕಂಗೊಳಿಸಲಾರಂಭಿಸಿವೆ.
ಚಾಮುಂಡೇಶ್ವರಿ ಕರಗ : ಇಲ್ಲಿನ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಮೇಲು ಕೋಟೆಯ ಪ್ರತಾಪ್ ಸಿಂಗ್ ಎಂಬುವರ ಸ್ಥಾಪಿಸಿದರು ಎನ್ನುವ ಇತಿಹಾಸವಿದೆ. ಪ್ರತಾಪ್ ಸಿಂಗ್ ಅವರು ಮೈಸೂರು ಮಹಾರಾಜರ ಕಾಲದಲ್ಲಿ ಪೆÇಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಇವರಿಗೆ ಮಕ್ಕಳಿರಲಿಲ್ಲ. ಒಮ್ಮೆ ಇವರ ಕನಸಿನಲ್ಲಿ ಚಾಮುಂಡೇಶ್ವರಿಯು ಬಂದು ನಗರದ ಸಮೀಪದಲ್ಲಿರುವ ಗುಹೆಯೊಂದರಲ್ಲಿ ನನ್ನನ್ನು ಕಳ್ಳಕಾಕರು ಬಂದಿಸಿ ಪೂಜಿಸುತ್ತಿದ್ದಾರೆ. ಇದನ್ನು ತಂದು ದೇವರ ಗುಡಿ ಕಟ್ಟಿಸಿ ಪ್ರತಿಷ್ಠಾಪಿಸಿದರೆ ನಿನ್ನ ಇಷ್ಟಾರ್ಥ ಪೂರೈಸುತ್ತದೆ ಎಂದು ಹೇಳಿದರಂತೆ.
ಇದರಂತೆ ಪ್ರತಾಪ್ ಸಿಂಗ್ ಬುಡಬುಡಕೆ ದಾಸಯ್ಯನ ವೇಷದಲ್ಲಿ ಕಾಡಿಗೆ ಹೋಗಿ ಗುಹೆಯಲ್ಲಿದ್ದ ಕಳ್ಳರನ್ನು ಹಿಡಿದು ಅಲ್ಲಿದ್ದ ಚಾಮುಂಡಿ ದೇವಿಯ ವಿಗ್ರಹವನ್ನು ತಂದು ನಗರದಲ್ಲಿ ಗುಡಿ ಕಟ್ಟಿಸಿ ಪ್ರತಿಷ್ಠಾಪನೆ ಮಾಡಿದರು. ನಂತರ ಇವರಿಗೆ ಗುಂಡು ಮಕ್ಕಳು ಜನಿಸಿದವು. ಕಳ್ಳರನ್ನು ಹಿಡಿದ ಕಾರಣಕ್ಕೆ ಪ್ರತಾಪ್ ಸಿಂಗ್ ಅವರಿಗೆ ಮೈಸೂರು ಮಹಾರಾಜರು ಬಹುಮಾನವನ್ನು ನೀಡಿ ಗೌರವಿಸಿದರು. ಅಂದಿನಿಂದ ಇವರ ಕುಟುಂಬ ಚಾಮುಂಡೇಶ್ವರಿ ಅಮ್ಮನವರನ್ನು ಪೂಜಿಸುತ್ತಾ ಬಂದಿದ್ದಾರೆ.
ಪ್ರತಾಪ್ ಸಿಂಗ್ ಅವರ ನಂತರ ಇವರ ಮಗ ಗಿರಿಧರ್ ಸಿಂಗ್, ಇವರ ನಂತರ ಪದ್ಮನಾಭ ಸಿಂಗ್, ಇವರ ನಂತರ ಪಿ. ದೇವಿ ಪ್ರಸಾದ್ ಸಿಂಗ್ (ಬಾಬು) 20 ನೇ ಬಾರಿಗೆ ಕರಗಧಾರಣೆ ಮಾಡಿಕೊಂಡು ಬರುತ್ತಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಚಾಮುಂಡೇಶ್ವರಿ ದೇವಸ್ಥಾನ ಪುರಾತನವಾದುದಾಗಿದೆ. ಇಲ್ಲಿ ಸಪ್ತ ಮಾತೃಕೆಯರಾದ ಚಾಮುಂಡಿ, ಚಂಡಿ, ವಾರಾಯಿಣಿ, ಇಂದ್ರಾಯಿಣಿ, ಕೌಮಾರಿ, ವೈಷ್ಣವಿ, ನಾರಾಯಣಿ ಅವರುಗಳು ನೆಲಸಿದ್ದಾರೆ. ನಮ್ಮ ಕುಟುಂಬ ಐದನೆ ತಲೆಮಾರಿನಿಂದ ಚಾಮುಂಡೇಶ್ವರಿ ದೇವಿಯನ್ನು ಆರಾಧಿಸಿಕೊಂಡು ಬರುತ್ತಿದೆ ಎಂದು ಕರಗಧಾರಕ ಪಿ. ದೇವಿಪ್ರಸಾದ್ ಸಿಂಗ್ ಮಾಹಿತಿ ನೀಡಿದರು.
ಐಜೂರು ಆದಿಶಕ್ತಿ ಕರಗ : ಇಲ್ಲಿನ ಐಜೂರಿನ ಮಾಗಡಿ ರಸ್ತೆಯಲ್ಲಿರುವ ಆದಿಶಕ್ತಿ ಅಮ್ಮನವರ ಕರಗ ಸರಳವಾಗಿ ದೇವಾಲಯದ ಆವರಣದಲ್ಲಿ ನಡೆಯಲಿದೆ. ಆದಿಶಕ್ತಿ ದೇವಾಲಯವು ಪುರಾತನ ದೇವಾಲಯವಾಗಿದ್ದು, ಸುಮಾರು 76 ವರ್ಷಗಳಿಂದ ಇಲ್ಲಿ ಕರಗ ನಡೆಯುತ್ತಿದೆ. ವಿ. ವಿಜಯ್ ಅವರು 12 ನೇ ಬಾರಿಗೆ ಕರಗಧಾರಣೆ ಮಾಡುತ್ತಿದ್ದಾರೆ.
ಬಿಸಿಲು ಮಾರಮ್ಮ ಕರಗ : ಇಲ್ಲಿನ ಬಾಲಗೇರಿಯಲ್ಲಿ ಬಿಸಿಲು ಮಾರಮ್ಮ ಅಮ್ಮನವರ ಕರಗ ಸರಳವಾಗಿ ದೇವಾಸ್ಥಾನದ ಆವರಣದಲ್ಲಿ ನಡೆಯಲಿದೆ. ಇದು ಪುರಾತನ ದೇವಾಲಯವಾಗಿದ್ದು, ಪಿ. ಮಹೇಂದ್ರ ಅವರು 14 ನೇ ಬಾರಿಗೆ ಕರಗಧಾರಣೆ ಮಾಡುತ್ತಿದ್ದಾರೆ.
ಮಗ್ಗದ ಕೇರಿ ಮಾರಮ್ಮ ಕರಗ : ಇಲ್ಲಿನ ಬಾಲಗೇರಿಯಲ್ಲಿ ಮಗ್ಗದ ಕೇರಿ ಮಾರಮ್ಮನವರ ಕರಗ ಮಹೋತ್ಸವ ಸರಳವಾಗಿ ದೇವಾಲಯದ ಆವರಣದಲ್ಲಿ ನಡೆಯಲಿದೆ. ಪಿ. ಚೇತನ್ಕುಮಾರ್ ಅವರು 22ನೇ ಬಾರಿಗೆ ಕರಗಧಾರಣೆ ಮಾಡಲಿದ್ದಾರೆ.
ಭಂಡಾರಮ್ಮ ದೇವಿ ಕರಗ : ನಗರದ ಬಾಲಗೇರಿಯಲ್ಲಿ ಭಂಡಾರಮ್ಮ ದೇವಿಯವರ ಕರಗ ಮಹೋತ್ಸವ ಸರಳವಾಗಿ ದೇವಾಲಯದ ಆವರಣದಲ್ಲಿ ನಡೆಯಲಿದೆ. ಎನ್. ಸಾಗರ್ ಅವರು ಎರಡನೇ ಬಾರಿಗೆ ಕರಗಧಾರಣೆ ಮಾಡಲಿದ್ದಾರೆ.
ಮುತ್ತುಮಾರಮ್ಮ ಕರಗ : ನಗರದ ತೋಪ್ ಖಾನ್ ಮೊಹಲ್ಲಾದಲ್ಲಿರುವ ಮುತ್ತುಮಾರಮ್ಮ ಅಮ್ಮನವರ ಕರಗ ಮಹೋತ್ಸವ ಸರಳವಾಗಿ ದೇವಾಲಯದ ಆವರಣದಲ್ಲಿ ನಡೆಯಲಿದೆ. ಇದು ಪುರಾತನ ದೇವಾಲಯವಾಗಿದೆ. ಎನ್. ಪ್ರಶಾಂತ್ ಅವರು ಎರಡನೇ ಬಾರಿಗೆ ಕರಗಧಾರಣೆ ಮಾಡಲಿದ್ದಾರೆ.
ಶೆಟ್ಟಿಹಳ್ಳಿ ಆದಿಶಕ್ತಿ ಕರಗ : ನಗರದ ಶೆಟ್ಟಿಹಳ್ಳಿ ಬೀದಿಯ ಆದಿಶಕ್ತಿ ಕರಗ ಹಾಗೂ ಪ್ಲೇಗ್ ಮಾರಮ್ಮನವರ ಗಿಂಡಿ ಉತ್ಸವ ಸರಳವಾಗಿ ನಡೆಯಲಿದೆ. ಕೆ. ಅನಿಲ್ಕುಮಾರ್ ಅವರು 11ನೇ ಬಾರಿಗೆ ಕರಗಧಾರಣೆ ಮಾಡುತ್ತಿದ್ದಾರೆ. ಆರ್. ಮಹೇಶ್ ಅವರು 18ನೇ ಬಾರಿಗೆ ಗಿಂಡಿ ಉತ್ಸವವನ್ನು ನಡೆಸಿಕೊಡಲಿದ್ದಾರೆ.
ಕೊಂಕಾಣಿದೊಡ್ಡಿ ಆದಿಶಕ್ತಿ ಕರಗ : ನಗರದ ಕೊಂಕಾಣಿದೊಡ್ಡಿಯಲ್ಲಿರುವ ಆದಿಶಕ್ತಿ ಅಮ್ಮನವರ ಕರಗ ಮಹೋತ್ಸವ ಈ ಬಾರಿ ನಡೆಯುತ್ತಿಲ್ಲ. ರಾಮನಗರದಲ್ಲಿ ಮೊದಲು ಇಲ್ಲಿ ಆದಿಶಕ್ತಿ ಪ್ರತಿಷ್ಠಾಪನೆಯಾಗಿದ್ದು, ನಂತರ ನಗರದ ಇತರೆ ಭಾಗಗಳಲ್ಲಿ ಆದಿಶಕ್ತಿ ದೇವಸ್ಥಾನಗಳನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದರು. ಎಚ್. ಮುನೀಂದ್ರ ಅವರು ಕರಗಧಾರಣೆ ಮಾಡುತ್ತಿದ್ದರು.
ಚೌಡೇಶ್ವರಿ ಅಮ್ಮನವರ ಕರಗ : ಇಲ್ಲಿನ ಅರ್ಕೇಶ್ವರ ಕಾಲೋನಿಯಲ್ಲಿರುವ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಈ ಬಾರಿ ನಡೆಯುತ್ತಿಲ್ಲ. ವಿ. ಸುರೇಶ್ ಅವರು ಕರಗಧಾರಣೆ ಮಾಡುತ್ತಿದ್ದರು.
ಏಳುಮಂದಮ್ಮ ದೇವಸ್ಥಾನ : ಚಾಮುಂಡೇಶ್ವರಿ ದೇವಸ್ಥಾನವನ್ನು ಮೊದಲು ಏಳುಮಂದಮ್ಮನ ದೇವಸ್ಥಾನವೆಂದು ಕರೆಯಲಾಗುತ್ತಿತ್ತು. ಇಲ್ಲಿ ಸಪ್ತ ಮಾತೃಕೆಯರಾದ ಚಾಮುಂಡಿ, ಚಂಡಿ, ವಾರಾಯಿಣಿ, ಇಂದ್ರಾಯಿಣಿ, ಕೌಮಾರಿ, ವೈಷ್ಣವಿ, ನಾರಾಯಣಿ ಅವರುಗಳು ನೆಲಸಿದ್ದಾರೆ. ಆದರೆ ಈಚಿನ ವರ್ಷಗಳಲ್ಲಿ ಚಾಮುಂಡೇಶ್ವರಿ ದೇವಸ್ಥಾನ ಎಂದು ಕರೆಯಲಾಗುತ್ತಿದೆ ಎಂದು ಗೃಹಿಣಿ ಜಿ. ಉಮಾಮಹೇಶ್ವರಿ ತಿಳಿಸಿದರು.
ಬಾಲಗೇರಿಯಲ್ಲಿ ಕೊಲ್ಲಾಪುರದಮ್ಮ ಕರಗವು ನಡೆಯುತ್ತಿತ್ತು. ಕೆಲವು ವರ್ಷಗಳಿಂದ ನಡೆಯುತ್ತಿಲ್ಲ. ಕಳೆದ ವಾರ ಬನ್ನಿಮಹಾಂಕಾಳಿ ಕರಗ, ಇದೇ 7 ರಂದು 7 ಕರಗಗಳು ನಡೆಯಲಿವೆ.
ಚಿತ್ರ-ಲೇಖನ :
ಎಸ್. ರುದ್ರೇಶ್ವರ
ಸಾಹಿತ್ಯ ಮತ್ತು ಸಂಶೋಧನಾ ವಿದ್ಯಾರ್ಥಿ