ಭಾಗ-೨: ಭೂ ಹರಣದ ವಿರುದ್ಧ ಅನ್ನ ತಿನ್ನುವವರೆಲ್ಲರೂ ಸಿಡಿದೇಳಬೇಕು
(ರೈತರ ಹಿತದೃಷ್ಟಿ ಮತ್ತು ಮುಂದಿನ ಪೀಳಿಗೆಯನ್ನು ಕಡೆಗಣಿಸಿ, ರಾಜಕಾರಣಿಗಳು ಮತ್ತು ಕಾರ್ಪೋರೆಟ್ ಸಂಸ್ಥೆಗಳ ಅನುಕೂಲಕ್ಕೆ ತಕ್ಕಂತೆ, ಆಗಿಂದಾಗ್ಗೆ ಕೃಷಿ ಭೂಮಿಗೆ ತಿದ್ದುಪಡಿ ತರುತ್ತಿರುವ ಜನಪ್ರತಿನಿಧಿಗಳ ವಿರುದ್ಧ "ಬೆಂಗಳೂರಿನ ಸಹಜ ಸಾಗುವಳಿ" ಎಂಬ ದ್ವೈಮಾಸಿಕ ಪತ್ರಿಕೆಯ ಸಂಪಾದಕಿ ಹಾಗೂ ರೈತ ಹೋರಾಟಗಾರ್ತಿ "ವಿ. ಗಾಯತ್ರಿ" ರವರು ನಮ್ಮ ಪತ್ರಿಕೆಗೆ ಭೂಸುಧಾರಣಾ ಕಾಯ್ದೆಯ ತಿದ್ದುಪಡಿಗೆ ಮುನ್ನುಡಿ ಬರೆದಿರುವ ರಾಜ್ಯ ಸರ್ಕಾರದ ನಿಲುವು ಖಂಡಿಸಿ ಹಾಗೂ ಕೃಷಿ ಭೂಮಿಯ ವರದಾನದ ಬಗ್ಗೆ ತಮ್ಮ ತೀಕ್ಷ್ಣವಾದ ವಿಮರ್ಶೆಯನ್ನು ಕಟ್ಟಿಕೊಟ್ಟಿದ್ದಾರೆ.)
ಇದೀಗ ಕೋವಿಡ್ ಲಾಕ್ಡೌನ್ನಿಂದ ತತ್ತರಿಸಿಹೋಗಿ ಇನ್ನೂ ಬಿತ್ತನೆ ಮಳೆಗಳಿಗೆ ಕಾಯುತ್ತಾ ಸೋತ ಸ್ಥಿತಿಯಲ್ಲಿ ರೈತರಿರುವಾಗ ಅವರಿಗೆ ಸ್ವಾಂತನ ತರುವ ಯಾವುದೇ ಕಾರ್ಯಗಳಿಗೆ ಮುಂದಾಗದೆ ಭೂಮಿ ಮಾರಾಟ ಮಾಡುವ ಈ ಆಮಿಷ! ‘ಕೃಷಿ ಮಾಡಲಾರದ ಅತಂತ್ರ ಸ್ಥಿತಿಯಲ್ಲಿರುವ ರೈತರು, ಕೃಷಿಯನ್ನು ಲಾಭದಾಯಕವಾಗಿ ಮಾಡುವ ಆಕಾಂಕ್ಷೆ ಹೊಂದಿರುವ ಆಸಕ್ತರಿಗೆ ಮಾರಾಟ ಮಾಡುವುದಕ್ಕೆ ಇದು ಅವಕಾಶ. ಕೃಷಿ ಭೂಮಿ ಹಸಿರು ವಲಯದಲ್ಲಿ ಬರುವುದರಿಂದ ಬೇರೆ ಉದ್ಯಮಗಳಿಗೆ ಅದನ್ನು ಬಳಸುವ ಪ್ರಶ್ನೆಯೇ ಇಲ್ಲ, ಕೃಷಿ ಚಟುವಟಿಕೆ ಬಿಟ್ಟರೆ ಬೇರೆ ಏನೂ ಮಾಡಲು ಸಾಧ್ಯವಿಲ್ಲ’ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಸಾರ್ವಜನಿಕವಾಗಿ ಹೇಳಿಕೆ ಕೊಟ್ಟಿದ್ದಾರೆ. ತಮಾಷೆಯೆಂದರೆ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ(ಕಾಸಿಯಾ)ದ ಅಧ್ಯಕ್ಷರು, ‘ನಾವು ಭೂಮಿ ಖರೀದಿಸಲು ಕೆಎಸ್ಐಡಿಸಿ, ಕೆಐಎಡಿಬಿಎಗಳಿಗೆ ಅಲದಾಡಬೇಕಾಗುತ್ತಿತ್ತು. ನಾವೇ ಖರೀದಿಸಿ ನಮ್ಮ ಸದಸ್ಯರಿಗೆ ಹಂಚುವುದರಿಂದ ಸಮಯ, ಶ್ರಮ ಉಳಿಯುತ್ತದೆ. ಈ ಬಗ್ಗೆ ನಾವು ಪ್ರಸ್ತಾಪ ಸಲ್ಲಿಸಿದ್ದೆವು. ಸರ್ಕಾರ ಅದಕ್ಕೆ ಸ್ಪಂದಿಸಿದೆ. ಇದರಿಂದ ಕೈಗಾರಿಕೆಗಳ ಬೆಳವಣಿಗೆಗೆ ಅನುಕೂಲವಾಗುತ್ತದೆ’. ಎಂದು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ಈ ಮಟ್ಟಕ್ಕೆ ಸರ್ಕಾರ ತನ್ನ ಜನತೆಯ ಕಣ್ಣಿಗೆ ಮಣ್ಣೆರೆಚುವುದೆಂದರೆ!.
‘ನಿರುದ್ಯೋಗಿ ಕೃಷಿ ಪದವೀಧರರು ಹಳ್ಳಿಗಳಿಗೆ ಹಿಂದಿರುಗಿ ಕೃಷಿ ಆಧಾರಿತ ಉದ್ದಿಮೆ ಸ್ಥಾಪಿಸಲು ಇದು ಅವಕಾಶ ಒದಗಿಸುತ್ತದೆ’ ಎನ್ನುವುದು ಕಂದಾಯ ಸಚಿವರ ಇನ್ನೊಂದು ಕಣ್ಕಟ್ಟಿನ ಹೇಳಿಕೆ. ಉದ್ದಿಮೆಗಳನ್ನು ಸ್ಥಾಪಿಸಲು ಬೇಕಾದ ಭೂಮಿಗಾಗಿಯೇ ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ) ಇದೆಯಲ್ಲ. ಇದುವರೆಗೆ ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿರುವ ಜಮೀನಿನ ಬಹುಭಾಗ ಬಳಕೆಯಾಗದೆ ಉಳಿದಿರುವ ಬಗ್ಗೆ ಎಲ್ಲಾ ಸರ್ಕಾರಗಳೂ ಆಗಾಗ್ಗೆ ಹೇಳಿಕೊಂಡೇ ಬಂದಿವೆ. ಆದರೆ ಈ ಭೂಮಿಯನ್ನು ಬಳಸಬೇಕೆಂದರೆ ಅದಕ್ಕೆ ‘ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ನೆಲೆ ಕಾಯಿದೆ-೨೦೧೩ ರ’ ಕಟ್ಟುನಿಟ್ಟಿನ ಕಟ್ಟಳೆಗಳಿಗೆ ಒಳಗಾಗಬೇಕು. ಕೈಗಾರಿಕೆಯ ಸಾಮಾಜಿಕ ಮತ್ತು ಪಾರಿಸಾರಿಕ ದುಷ್ಪರಿಣಾಮದ ಅಂದಾಜು ಮಾಡಬೇಕು. ಇದರ ಬದಲು ನೇರವಾಗಿ ಭೂಮಿ ಕೊಂಡುಬಿಟ್ಟರೆ ಯಾರ ಮರ್ಜಿಯೂ ಇರುವುದಿಲ್ಲ ಎನ್ನುವುದು ಇಲ್ಲಿನ ಹುನ್ನಾರ.
ಅಷ್ಟಕ್ಕೂ ಕೃಷಿಯಲ್ಲಿ ಅತೀವ ಆಸಕ್ತಿ ಇರುವವರಿಗೆ, ಈಗಾಗಲೇ ರೈತರು ಪಾಳು ಬಿಟ್ಟಿದ್ದಾರೆ ಎನ್ನಲಾದ ೨೨ ಲಕ್ಷ ಹೆಕ್ಟೇರ್ ಬೇಸಾಯ ಭೂಮಿಯನ್ನು ದೀರ್ಘ ಕಾಲಿಕ ಗುತ್ತಿಗೆಗೆ ಕೊಡುವ ಬಗ್ಗೆ ಯೋಚಿಸಬಹುದಲ್ಲ.
ಇಲ್ಲಿ ಇನ್ನೂ ಒಂದು ಮುಖ್ಯ ವಿಚಾರವಿದೆ. ಭೂಸುಧಾರಣಾ ಕಾಯಿದೆಯಡಿ ರೈತರಲ್ಲದವರು ಭೂಮಿ ಖರೀದಿಸಲು ಅವಕಾಶವಿಲ್ಲದೆ ಹೋಗಿದ್ದರೂ, ಐವತ್ತು ಲಕ್ಷ ಎಕರೆ ಭೂಮಿ ರೈತರ ಕೈತಪ್ಪಿ ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆಯಾಗಿದೆ. ಜಮೀನು ಖರೀದಿಯಲ್ಲಿ ಭೂ ಸುಧಾರಣಾ ಕಾಯ್ದೆ ೭೯ಎ ಮತ್ತು ೭೯ಬಿ ಕಲಂನ ನಿಯಮಾವಳಿ ಉಲ್ಲಂಘನೆಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಸುಮಾರು ೮೩,೧೭೧ ಪ್ರಕರಣಗಳನ್ನು ದಾಖಲಿಸಿತ್ತು. ಅದರಲ್ಲಿ ಇತ್ಯರ್ಥ ಆಗದಿರುವ ೧೨,೨೩೧ ಪ್ರಕರಣಗಳಿವೆ. ಬೆಂಗಳೂರಿನ ಸುತ್ತಮುತ್ತಲೇ ‘ಕರ್ನಾಟಕ ರಾಜ್ಯ ವಸತಿ ಮಹಾಮಂಡಲಿ’ ಸೇರಿದಂತೆ ವಿವಿಧ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಗಳು ಭೂ ಸುಧಾರಣಾ ಕಾಯ್ದೆಯ ೭೯ಎ ಮತ್ತು ೭೯ ಬಿ ಕಲಂ ಉಲ್ಲಂಘಿಸಿ ಸುಮಾರು ಹತ್ತು ಸಾವಿರ ಕೋಟಿ ರೂ ಬೆಲೆಯ ೫,೦೨೭ ಎಕರೆ ಕೃಷಿ ಭೂಮಿಯನ್ನು ಮಧ್ಯವರ್ತಿಗಳ ಮೂಲಕ ಎಕರೆಗೆ ಒಂದೂವರೆ-ಎರಡು ಕೋಟಿ ಕೊಟ್ಟು ಖರೀದಿಸಿರುವುದು ಬಹಿರಂಗವಾಗಿದೆ. ಪ್ರತಿ ಹಂತದಲ್ಲೂ ಇವು ಸರ್ಕಾರವನ್ನು ವಂಚಿಸಿವೆ. ಇದಕ್ಕೆ ಹಿಂದಿನ ಯಾವ ಸರ್ಕಾರಗಳು ಕ್ರಮ ಕೈಗೊಂಡಿಲ್ಲ.
ಇಂತಹ ೧೭,೫೭೪ ಪ್ರಕರಣಗಳು ದಾಖಲಾಗಿದ್ದರೆ, ೫,೪೯೦ ಪ್ರಕರಣಗಳಲ್ಲಿ ಕಾಯಿದೆ ಉಲ್ಲಂಘನೆ ಆಗಿರುವುದು ದೃಢಪಟ್ಟಿದೆ. ಈ ಎಲ್ಲಾ ಇತ್ಯರ್ಥವಾಗದ ಪ್ರಕರಣಗಳನ್ನೆಲ್ಲಾ ನ್ಯಾಯ ಸಮ್ಮತಗೊಳಿಸಿಬಿಡುವ ದುರುದ್ದೇಶ ಈ ತಿದ್ದುಪಡಿಗಳ ಹಿಂದೆ ಬಲವಾಗಿ ಕೆಲಸ ಮಾಡಿದೆ.
ರೈತರಿಗೆ ಭೂಮಿ ಎನ್ನುವುದು ಆಸ್ತಿಗಿಂತ ಹೆಚ್ಚಾಗಿ ಸುರಕ್ಷತಾ ಭಾವ ತಂದುಕೊಡುತ್ತದೆ. ಜೀವಮಾನವಿಡೀ ದುಡಿದು ನಾಲ್ಕಾರು ಎಕರೆ ಜಮೀನು ಕೊಂಡುಬಿಟ್ಟಾಗ ರೈತರಿಗಾಗುವ ಸಂತೋಷ, ಸಂಭ್ರಮ, ಸುರಕ್ಷತಾ ಭಾವ ವರ್ಣಿಸಲಸಾಧ್ಯ. ಅಂಥದ್ದರಲ್ಲಿ ಏಕಾಏಕಿ ಬಂಡವಾಳಿಗನೊಬ್ಬ ಕಣ್ಣೆದುರೇ ನೂರಾರು ಎಕರೆ ಜಮೀನನ್ನು ಆಕ್ರಮಿಸುತ್ತಾರೆಂದರೆ ಹೇಗಾಗಬೇಡ!
ಹಾಗಾಗಕೂಡದು ಎಂದರೆ, ಪ್ರತಿಯೊಂದು ಗ್ರಾಮದ ರೈತರೂ, ಈ ಊರಿನ ಜಮೀನು ನಮ್ಮ ರೈತರಿಗೆ ಸೇರಿದ್ದು, ಅದನ್ನು ಬಂಡವಾಳಿಗರಿಗೆ ಕೊಳ್ಳಲು ಅವಕಾಶ ಕೊಡುವುದಿಲ್ಲ ಎಂದು ಘೋಷಿಸಬೇಕು. ಪ್ರತಿ ಗ್ರಾಮದ ಪ್ರವೇಶದಲ್ಲೇ, ‘ರೈತರ ಭೂಮಿ ಕಬಳಿಸುವವರಿಗೆ ಪ್ರವೇಶವಿಲ್ಲ’ ಎಂದು ಫಲಕ ಹಾಕಿ, ಕಣ್ಗಾವಲಾಗಿದ್ದು, ಅತಿಕ್ರಮಣಕಾರರಿಗೆ ಬಹಿಷ್ಕಾರ ಹಾಕಬೇಕು. ಭೂ ಕಬಳಿಕೆಯ ವಿರುದ್ಧ ಗ್ರಾಮಸ್ಥರ ಕಾರ್ಯಪಡೆ ಸಿದ್ಧವಾಗಬೇಕು. ಅದಕ್ಕಾಗಿ ನಾವು ನೀವೆಲ್ಲಾ ಸನ್ನದ್ಧರಾಗೋಣ.
ವಿ. ಗಾಯತ್ರಿ,
ಸಂಪಾದಕಿ,
‘ಸಹಜ ಸಾಗುವಳಿ’ ದ್ವೈಮಾಸಿಕ ಪತ್ರಿಕೆ
ಗೋ ರಾ ಶ್ರೀನಿವಾಸ...
ಮೊ:9845856139.
Recent news in agriculture »
ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ
ರಾಮನಗರ/ಚನ್ನಪಟ್ಟಣ: ವರ್ಷದ ಕೊನೆಯ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ, ರಾಶಿಗೆ ಪೂಜೆ ಸಲ್ಲಿಸಿ ಸಂಭ್ರಮ ಪಡುವ ದಿನದಂದೇ ಕಾಡಾನೆಗಳು ನುಗ್ಗಿ ಬೆಳೆ ನಾಶ
ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ
ಚನ್ನಪಟ್ಟಣ: ಮನೆಯ ಹಿಂಭಾಗ ಮೆದೆ ಹಾಕಿದ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸರಿಸುಮಾರು ನಾಲ್ಕು ಟ್ರ್ಯಾಕ್ಟರ್ ನಷ್ಟು ಹುಲ್ಲು ಸುಟ್ಟು ಭಸ್ಮ
ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ
ಚನ್ನಪಟ್ಟಣ: ಬೆಂಗಳೂರು ಹಾಲು ಒಕ್ಕೂಟವು ಹಾಲು ಉತ್ಪಾದಕರು ಪೂರೈಕೆ ಮಾಡುವ ಪ್ರತಿ ಲೀಟರ್ ಹಾಲಿಗೆ 2₹. ಕಡಿತ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ
ಕುತಂತ್ರಕ್ಕೆ ಬಲಿಯಾಗುತ್ತಿರುವ ರೈತ; ಬಿ ಟಿ ಲಲಿತಾ ನಾಯಕ್
ಚನ್ನಪಟ್ಟಣ, ನ.೦೬: ದೇಶದ ಜನರಿಗೆ ಅನ್ನದಾತನಾಗಿರುವ
ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು
ಚನ್ನಪಟ್ಟಣ: ರೈತರು ಯಾರಿಗೂ ಮೋಸ ಮಾಡುವುದಿಲ್ಲ, ಅವರ ಬದುಕನ್ನು ಅನ್ನದಾನಕ್ಕಾಗಿಯೇ ಮೀಸಲಿಟ್ಟಿದ್ದಾರೆ, ಇಂತಹ ಪ್ರಾಮಾಣಿಕತೆ ಇರುವ ರೈತರನ್ನು ವಿಶ್ವಾಸಕ್
ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ
ಚನ್ನಪಟ್ಟಣ: ಸಂಘಕ್ಕೆ ನಾನೇ ಹೆಚ್ಚು ಹಾಲು ಹಾಕಬೇಕು, ಹೆಚ್ಚು ಲಾಭ ಮಾಡಬೇಕು ಎನ್ನುವ ಸ್ಪರ್ಧಾತ್ಮಕ ಯುಗದಲ್ಲಿ ಹತ್ತಾರು ರೈತರಿಗೆ ಪ್ರೋತ್ಸಾಹ ನೀಡಲು ಸ್ವಂತ ಹಣದಲ್ಲಿ ಬಹುಮಾನಗಳನ್ನು ಕೊಟ್ಟು ಸಂಘಕ್ಕೆ
ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ
ಚನ್ನಪಟ್ಟಣ : ತಾಲೂಕಿನ ಅಕ್ಕೂರು, ಸಾದರಹಳ್ಳಿ, ಸೋಮನಾಥಪುರ, ಹೊಸಹಳ್ಳಿ, ಎಸ್.ಎಂ.ಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂ
ಕಾಡಾನೆ ದಾಳಿ, ಕೂದಲೆಳೆ ಅಂತರದಲ್ಲಿ ಬಚಾವಾದ ವ್ಯಕ್ತಿ
ಇತ್ತೀಚೆಗೆ ತಾಲ್ಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮಂಗಳವಾರ ಸಹ ಅದೇ ಗ್ರಾಮದಲ್ಲಿ ಮತ್ತೇ ಕಾಡಾನೆ ದಾಳಿ ನಡೆಸಿದ್ದು ಅದೃಷ್ಟವಶಾತ್ ವ್ಯಕ್ತಿಯೊರ್ವ ಸಾವಿನಿಂದ ಬಚಾವಾಗಿದ್ದಾನೆ.
ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ
ಚನ್ನಪಟ್ಟಣ: ತಾಲೂಕಿನಾದ್ಯಂತ ಆನೆಗಳ ಹಾವಳಿ ಮಿತಿಮೀರುತ್ತಿದೆ. ದಿನದಿಂದ ದಿನಕ್ಕೆ ರೈತರ ಜಮೀನುಗಳ ಮೇಲೆ ಆನೆಗಳು ಲಗ್ಗೆ ಇಟ್ಟು ದಾಳಿಯನ್ನು ಮಾಡ
ವ್ಯಕ್ತಿ ಬಲಿ ಪಡೆದ ಪುಂಡಾನೆ ಸೆರೆ
ಚನ್ನಪಟ್ಟಣ: ತಾಲೂಕಿನಲ್ಲಿ ಆನೆ ಉಪಟಳ ಹೆಚ್ಚಾದ ಹಿ
ಪ್ರತಿಕ್ರಿಯೆಗಳು