Tel: 7676775624 | Mail: info@yellowandred.in

Language: EN KAN

    Follow us :


ಜಿ. ಮಾದೇಗೌಡ ಕಾವೇರಿ ತಾಯಿಯ ಪುತ್ರ ಇನ್ನಿಲ್ಲ

Posted date: 18 Jul, 2021

Powered by:     Yellow and Red

ಜಿ. ಮಾದೇಗೌಡ ಕಾವೇರಿ ತಾಯಿಯ ಪುತ್ರ ಇನ್ನಿಲ್ಲ

ಜಿ. ಮಾದೇಗೌಡ, ಹೋರಾಟದ ಚಿಲುಮೆ, ಇಂದಿನ ಯುವಕರಿಗೆ ಸ್ಪೂರ್ತಿಯ ಹೋರಾಟದ ಚಿಲುಮೆ.‌ ಇಳಿವಯಸ್ಸಿನಲ್ಲೂ ಹೋರಾಟದ ಕಾವು ಬಿಡದ ಛಲಂದಕ ಮಲ್ಲ. ಇಂತಹ

ಜಿ. ಮಾದೇಗೌಡರು ಸಲ್ಲಿಸಿರುವ ಸಾಮಾಜಿಕ ಸೇವೆ ಅಪಾರವಾದುದು. ರೈತ

ಕುಟುಂಬದಲ್ಲಿ ಹುಟ್ಟಿದವರಾದ ಇವರು, ರೈತರ ಕಷ್ಟ-ಸುಖಗಳನ್ನು ಅರಿತು

ಅವರ ಆರೋಗ್ಯ, ಶಿಕ್ಷಣ, ಬಡತನವನ್ನು ಅರ್ಥಮಾಡಿಕೊಂಡು ಸಲ್ಲಿಸಿರುವ

ಸೇವೆ, ಕೈಗೊಂಡಿರುವ ಕಾರ್ಯಕ್ರಮಗಳು ಶ್ಲಾಘನೀಯ. ರೈತರ

ಜೀವನದಿಯಾಗಿರುವ ಕಾವೇರಿ ನದಿ ನೀರಿನ ಹಕ್ಕಿಗಾಗಿ ಹೋರಾಟ ನಡೆಸಿ ಕಾವೇರಿ

ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾಗಿದ್ದುಕೊಂಡು ಕಾವೇರಿ ನೀರನ್ನು ಬೇರೆ

ಕಡೆಗೆ ಕೊಡದಂತೆ ತಮ್ಮ ದಿಟ್ಟ ಹಾಗೂ ದಕ್ಷ ನಾಯಕತ್ವದಲ್ಲಿ ರೈತರ

ಸಹಕಾರದೊಡನೆ ಉಳಿಸಿಕೊಂಡು ಅಭಿವೃದ್ಧಿಪಡಿಸಿಕೊಂಡು ಹೋಗುತ್ತಿದ್ದರು.

ರೈತರ ಪ್ರಮುಖ ಬೆಳೆಯಾದ ಕಬ್ಬಿಗೆ ಸೂಕ್ತ ಬೆಲೆ ಕೊಡಿಸಲು ಹಾಗೂ ಆರ್ಥಿಕ

ಅಭಿವೃದ್ಧಿಗಾಗಿ ಭಾರತೀ ನಗರದಲ್ಲಿ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿ ಆ

ಭಾಗದ ರೈತರಿಗೆ ಕಣ್ಮಣಿಯಾಗಿದ್ದರು.


ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಹೋಬಳಿಯ ಗುರುದೇವರಹಳ್ಳಿ ಎಂಬ ಸಣ್ಣ

ಗ್ರಾಮದ ಪುಟ್ಟೇಗೌಡ - ಕಾಳಮ್ಮ ಅವರ ಆರು ಮಕ್ಕಳಲ್ಲಿ ಕೊನೆಯವರಾಗಿ

1928 ರ ಜು.14 ರಂದು ಮಾದೇಗೌಡರು ಜನಿಸಿದರು.

ಎತ್ತರದ ನಿಲುವು, ಎತ್ತರಕ್ಕೆ ತಕ್ಕ ಮೈಕಟ್ಟು, ಗೋಧಿ ಬಣ್ಣ, ಶ್ವೇತವಸ್ತ್ರ ಅವರದು,

ಮೊದಲ ನೋಟದಲ್ಲೇ ಗೌರವ ಮೂಡುವಂತಹ ಸುಲಕ್ಷಣ ರೂಪು. ಮಾತು

ಕಡಿಮೆ, ಹಿಡಿದ ಕೆಲಸ ಮುಗಿಯುವವರೆಗೂ ಬಿಡದ ಛಲ, ಕಪಟವಿಲ್ಲದ ನೇರ

ನಡವಳಿಕೆ, ತಮಗೆ ಅನ್ನಿಸಿದ್ದನ್ನು ಯಾವ ಮುಲಾಜಿಗೂ ಒಳಗಾಗದೆ ಹೇಳುವ

ಎದೆಗಾರಿಕೆ. ಸಾಕಷ್ಟು ಸಾಧನೆ ಮಾಡಿದ್ದರೂ ಹಮ್ಮಿಲ್ಲದ ಸ್ವಭಾವ. ರೈತರು,

ಕಾರ್ಮಿಕರು, ಜ್ಞಾನಿಗಳ ಬಗ್ಗೆ ಅಪಾರ ಪ್ರೀತಿ, ಕೆಲಸ ಕದಿಯುವವರನ್ನು ಕಂಡರೆ

ಅಷ್ಟೇ ಸಿಡುಕು, ಮೂಗಿನ ತುದಿಯಲ್ಲೇ ಕೋಪ ಈ ಎಲ್ಲ ಗುಣಗಳನ್ನು

ಒಂದುಗೂಡಿಸಿದರೆ ಬರುವ ವ್ಯಕ್ತಿತ್ವವೇ ಜಿ. ಮಾದೇಗೌಡರದು.


ಹುಟ್ಟೂರು ಗುರುದೇವರಹಳ್ಳಿಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಅನುಕೂಲವಿರಲಿಲ್ಲ.

ಆದ್ದರಿಂದ ಅವರ ತಾಯಿಯ ತವರೂರು ಮಂಡ್ಯದಲ್ಲಿ ಪ್ರಾಥಮಿಕ ಮತ್ತು

ಪ್ರೌಢಶಿಕ್ಷಣ ಪಡೆದು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ

ಪಡೆದರು. ನಂತರ ಬೆಂಗಳೂರಿಗೆ ತೆರಳಿ ವಕೀಲ ಪದವಿ ಪಡೆದರು. ವಕೀಲ

ಪದವಿ ಪಡೆದರೂ ವಕೀಲರಾದರೂ ಅಲ್ಲಿ  ಸ್ಥಿರವಾಗಿ ನಿಲ್ಲಲಿಲ್ಲ. ಹಣ ಮಾಡುವ ವಕೀಲಿ

ಹುದ್ದೆಗಿಂತ ಜನಸೇವೆ ಮಾಡುವ ಜನನಾಯಕ ಹುದ್ದೆ ಅವರನ್ನು ಕೈಬೀಸಿ

ಕರೆಯಿತು.


*ರಾಜಕೀಯ ಪ್ರವೇಶ:*

1959 ರಲ್ಲಿ ತಾಲೂಕು ಬೋರ್ಡ್ ಚುನಾವಣೆ ಬಂದಾಗ, ಅಂದು ಮಂಡ್ಯ ಮತ್ತು

ಮದ್ದೂರಿನ ಕಾಂಗ್ರೆಸ್ ಪಕ್ಷದ ಜನಪ್ರಿಯ ನಾಯಕರಾಗಿದ್ದ ಕೆ.ವಿ. ಶಂಕರೇಗೌಡ

ಮತ್ತು ಎಚ್.ಕೆ. ವೀರಣ್ಣಗೌಡರು ಕಾಂಗ್ರೆಸ್ ಪಕ್ಷದಲ್ಲಿ ಚಟುವಟಿಕೆಯಿಂದ

ಓಡಾಡುತ್ತಿದ್ದ ಮಾದೇಗೌಡರನ್ನು ಕರೆದು, ತಾಲೂಕು ಬೋರ್ಡ್ ಚುನಾವಣೆಗೆ

ನಿಲ್ಲಿಸಿದರು. ಇದರಲ್ಲಿ  ಗೆದ್ದು ಬಂದರು. ಇದು ಗೌಡರ ರಾಜಕೀಯದಲ್ಲಿ

ಸಾಮಾನ್ಯವಾದ ಗೆಲುವಲ್ಲ. ಅವರ ಮುಂದಿನ ಗೆಲುವಿನ ಮಾಲೆಗೆ

ನಾಂದಿಯಾಯಿತು. ನಂತರ ಮಾದೇಗೌಡರ ಬದುಕು ಮೂರು ದಶಕಗಳ ಕಾಲ

ಬರೀ ಗೆಲುವು, ಗೆಲುವು, ಗೆಲುವೇ ಆಗಿತ್ತು.

1962 ರಲ್ಲಿ ಎಂ.ಎಲ್.ಎ. ಚುನಾವಣೆ ಬಂದಾಗ, ಮಳವಳ್ಳಿ ಕ್ಷೇತ್ರದ ಶಾಸಕರಾಗಿದ್ದ

ಹಿಟ್ಟನಹಳ್ಳಿ ಕೊಪ್ಪಲಿನ ಎಚ್.ವಿ. ವೀರೇಗೌಡರು ಬಿಟ್ಟುಕೊಟ್ಟ  ಸ್ಥಾನಕ್ಕೆ

ಮಾದೇಗೌಡರು ನಿಂತು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಆಗ

ಮಾದೇಗೌಡರಿಗೆ ಕೇವಲ 32 ವರ್ಷ. ಮಳವಳ್ಳಿ, ಕಿರುಗಾವಲು ಕ್ಷೇತ್ರದ

ಕೇಂದ್ರವಾದ ಕುಗ್ರಾಮ ಕಾಳಮುದ್ದನದೊಡ್ಡಿಯನ್ನು

ಕೇಂದ್ರವನ್ನಾಗಿಟ್ಟುಕೊಂಡು ಒಂದೊಂದ ಜನಪರ ಕೆಲಸಗಳನ್ನು

ಮಾಡತೊಡಗಿದರು. ಕೃಷಿ ಕ್ಷೇತ್ರ, ಆರ್ಥಿಕ ಕ್ಷೇತ್ರ, ಶಿಕ್ಷಣ ಕ್ಷೇತ್ರಗಳ ಬಗ್ಗೆ

ಗೌಡರು ಕೈಗೊಂಡ ಪ್ರಗತಿಪರ ಕೆಲಸಗಳು ಜನಮೆಚ್ಚುಗೆ ಗಳಿಸಿದ್ದವು.

ಇದಕ್ಕೆ ಅವರು ಮತ್ತೆ ಮತ್ತೆ ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತಿದ್ದುದ್ದೇ

ಪ್ರತ್ಯಕ್ಷ ಸಾಕ್ಷಿ. ಚುನಾವಣಾ ಸಮಯದಲ್ಲಿ ಖರ್ಚಿಗೆಂದು ಗೌಡರಿಗೆ ತಾವೇ ಕಾಸು

ಕೊಟ್ಟು ಮತವನ್ನೂ ಕೊಡುತ್ತಿದ್ದರು.

1962 ರಿಂದ 1989 ರ ವರೆಗೆ ಮಾದೇಗೌಡರು ಸತತವಾಗಿ ಆರು ಬಾರಿ ಕಿರುಗಾವಲು

ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಇದು ಯಾವುದೇ

ರಾಜಕಾರಣಿಗಳ ಬದುಕಿನಲ್ಲಿ ಮಹತ್ವದ ದಾಖಲೆಯೂ ಹೌದು. ಜನ ಅವರನ್ನು

ಸೋಲಿಲ್ಲದ ಸರದಾರ ಎಂದು ಪ್ರೀತಿಯಿಂದ ಕರೆಯುತ್ತಿದ್ದರು.


ಆರ್. ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ

ಮಾದೇಗೌಡರು ಅರಣ್ಯ ಮತ್ತು ಗಣಿ ಅಭಿವೃದ್ಧಿ ಮಂತ್ರಿಗಳಾಗಿ ಗಮನಾರ್ಹ

ಸೇವೆ ಸಲ್ಲಿಸಿದರು. 1989 ರಲ್ಲಿ ಗೌಡರ ರಾಜಕೀಯ ಕಿರುಗಾವಲು ಕ್ಷೇತ್ರದಿಂದ

ಮಂಡ್ಯ ಜಿಲ್ಲೆಗೆ ವಿಸ್ತರಿಸಿ ಸಂಸದರಾಗಿ ಆಯ್ಕೆಯಾದರು. ಮತ್ತೆ 1991 ರಲ್ಲಿ

ನಡೆದ ಮರು ಚುನಾವಣೆಯಲ್ಲೂ ಜನತೆ ಗೌಡರನ್ನು ಸಂಸದರಾಗಿ ಆಯ್ಕೆ

ಮಾಡಿದರು. ಹೀಗೆ ಮೂರು ದಶಕಗಳ ಕಾಲ ಜನ ಗೌಡರಿಗೆ ಮತ ನೀಡಿ

ಗೆಲ್ಲಿಸಿದರು. ಪ್ರತಿಯಾಗಿ ಮಾದೇಗೌಡರು ತಮ್ಮ ಕ್ಷೇತ್ರದ ಜಿಲ್ಲೆಯ

ಜನತೆಗೆ ಶಾಲೆ, ಕಾಲೇಜು, ಕಾರ್ಖಾನೆ, ಆಸ್ಪತ್ರೆ, ದೇವಸ್ಥಾನ ಹೀಗೆ ಜನರ ಇಹ

ಮತ್ತು ಪರಕ್ಕೆ ಬೇಕಾದುದನ್ನೆಲ್ಲ ಕೊಟ್ಟು ಅವರ ಋಣ ತೀರಿಸಿದ್ದಾರೆ.


*ಕೆ.ಎಂ.ದೊಡ್ಡಿಯ ಬೆಳಕು:*

1962 ರಲ್ಲಿ ಕೆ.ಎಂ. ದೊಡ್ಡಿಯಲ್ಲಿ ಕಾಲೇಜಿರಲಿ, ಒಂದು ಪ್ರೌಢಶಾಲೆಯೂ ಇರಲಿಲ್ಲ.

ಬೃಹತ್ ಕಾರ್ಖಾನೆಯ ಮಾತಿರಲಿ, ಒಂದು ಒಳ್ಳೆಯ ರಸ್ತೆಯೂ ಇರಲಿಲ್ಲ.

ಮಾದೇಗೌಡರ  ಕೃಪಾಕಟಾಕ್ಷದಿಂದ ಇಂದು ಶ್ರೀ ಚಾಮುಂಡೇಶ್ವರಿ ಸಕ್ಕರೆ

ಕಾರ್ಖಾನೆ, ಭಾರತೀ ವಿದ್ಯಾ ಸಂಸ್ಥೆ, ನಾಲ್ಕು ಬ್ಯಾಂಕ್‌ಗಳು, ವಿಶಾಲವಾದ ಜೋಡಿ ರಸ್ತೆ,

ಸುತ್ತಮುತ್ತಲಿನ ಹಳ್ಳಿಗಳಿಗೆ ಸಂಪರ್ಕ ರಸ್ತೆಗಳಾಗಿವೆ, ಹಳ್ಳಗಳಿಗೆ

ಸೇತುವೆಗಳಾಗಿವೆ. ಒಟ್ಟಿನಲ್ಲಿ ಹಳ್ಳಿಗೆ ದಿಲ್ಲಿಯ ರೂಪ ಬಂದಿದೆ.


ಸಾಹಿತ್ಯ ಸಮ್ಮೇಳನ:*

ಜಿ. ಮಾದೇಗೌಡರು 1993 ರಲ್ಲಿ ಸಂಸದರಾಗಿದ್ದರು. ಪ್ರೊ. ಜಿ.ಟಿ. ವೀರಪ್ಪ

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದಾಗ ಮಂಡ್ಯದಲ್ಲಿ  63ನೇ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಶ್ರೀ ಚದುರಂಗ

ಅವರು ಸಮ್ಮೇಳನಾಧ್ಯಕ್ಷರಾಗಿದ್ದರು. ಎಲ್ಲವು ಅಚ್ಚುಕಟ್ಟಾಗಿ ನಡೆದು,

ಮಂಡ್ಯದವರ ಮನಸ್ಸು ಸಕ್ಕರೆಯಷ್ಟು ಸಿಹಿ ಎಂದು ಶ್ಲಾಘಿಸಿದರು.


*ಕಾವೇರಿ ಪುತ್ರ*

ಕಾವೇರಿ ನದಿ ಮಂಡ್ಯ ಜಿಲ್ಲೆಯ ಉಸಿರು. ಜಿಲ್ಲೆಯ ಬಹುಭಾಗ ಹಸಿರಾಗಿರುವುದೇ

ಕಾವೇರಿ ಕೃಪೆಯಿಂದ. ಆದರೆ, ಸುಪ್ರೀಂಕೋರ್ಟ್ ನ ತೀರ್ಮಾನದಿಂದ ಕಾವೇರಿ ನೀರು

ಮಂಡ್ಯ ಜನತೆಗೆ ತಪ್ಪಿ ಹೋಗುವ ಸಾಧ್ಯತೆಯ ಸುಳಿವು ದೊರೆತೊಡನೆ

ಜಿಲ್ಲೆಯ ರೈತರು ಕಾವೇರಿದ್ದು ಹೌದು. ಕಾವೇರಿ ನೀರಿನ ಹಕ್ಕಿಗಾಗಿ ಮಂಡ್ಯ

ರೈತರು ಬೀದಿಗೆ ಬಂದರು. ತಮ್ಮ ಹೋರಾಟಕ್ಕೆ ಅವರು ನಾಯಕರಾಗಿ  ಆಯ್ಕೆ

ಮಾಡಿಕೊಂಡಿದ್ದು ಜಿ. ಮಾದೇಗೌಡರನ್ನು. ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ

ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಮಾದೇಗೌಡರ ಮೇಲೆ ಕಾವೇರಿ

ಹೋರಾಟಕ್ಕೆ ಜನಗಳನ್ನು ಸಜ್ಜುಗೊಳಿಸುವ, ಸರ್ವ ಪಕ್ಷಗಳ ನಾಯಕರನ್ನು

ಕಾವೇರಿ ಹೋರಾಟಕ್ಕೆ ಒಂದುಗೂಡಿಸುವ ಗುರುತರ ಜವಾಬ್ದಾರಿ ಗೌಡರ ಹೆಗಲ

ಮೇಲೆ ಬಿತ್ತು. ಮಂಡ್ಯ, ಮೈಸೂರು, ಚಾಮರಾಜನಗರದ ರೈತಾಪಿ ಜನಕ್ಕೆ

ಮಾದೇಗೌಡರೇ ಏಕಮಾತ್ರ ಆಶಾಕಿರಣವಾಗಿದ್ದರು. ಗೌಡರ ಮಾರ್ಗದರ್ಶನದಲ್ಲಿ

55 ದಿನಗಳ ಕಾಲ ರೈತರು ಪ್ರಚಂಡ ಅಹಿಂಸಾತ್ಮಕ ಪ್ರತಿಭಟನೆಯನ್ನು ಮಾಡಿ,

ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ತಮ್ಮ ಇಳಿವಯಸ್ಸಿನಲ್ಲೂ ಕಾವೇರಿ ಸೇನೆ ಕಟ್ಟಿ,

ಭೀಷ್ಮರಂತೆ ಅದರ ಸಾರಥ್ಯ ವಹಿಸಿ, ಪ್ರಾಮಾಣಿಕವಾಗಿ ರೈತರ ಹಿತ

ಕಾಪಾಡುತ್ತಿರುವ ಗೌಡರನ್ನೂ ಜನ ಪ್ರೀತಿಯಿಂದ ಕಾವೇರಿ ಪುತ್ರ ಎಂದು ಕರೆದರು.


*ರೈತರಿಗಾಗಿ ಜೈಲಿಗೆ ಹೋಗುವೆ:*

ಮಾದೇಗೌಡರ ನೇತೃತ್ವದಲ್ಲಿ ಜಿಲ್ಲೆಯ ರೈತರು ಸ್ವಯಂ ಸ್ಫೂರ್ತಿಯಿಂದ

ಬೀದಿಗಿಳಿದಾಗ ಕಾಂಗ್ರೆಸ್ ಪಕ್ಷ ದಿಕ್ಕೆಟ್ಟು ಹೋಯಿತು. ಒಂದು ಕಡೆ ಸುಪ್ರೀಂಕೋರ್ಟ್

ತೀರ್ಮಾನ. ಇನ್ನೊಂದು ಕಡೆ ರೈತರ ಉಗ್ರ ಹೋರಾಟ. ಈ ಮಧ್ಯೆ ಗೌಡರು

ತಮ್ಮ ಪಕ್ಷದ ಮುಖಂಡರನ್ನೇ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್ ಪಕ್ಷಕ್ಕೆ ಗೌಡರು ಬಿಸಿತುಪ್ಪವಾದರು. ಆವರು ಮಾತು ಕಹಿ

ಹಾಗಲವಾಯಿತು. ಅಂತಿಮವಾಗಿ ಮುಖ್ಯಮಂತ್ರಿಯೇ  (ಎಸ್.ಎಂ.ಕೃಷ್ಣ)

ಪಾದಯಾತ್ರೆಯಲ್ಲಿ ಮಂಡ್ಯಕ್ಕೆ ಬಂದು ತಮಿಳುನಾಡಿಗೆ ನೀರು

ಬಿಡುವುದಿಲ್ಲವೆಂದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು. ಆದರೆ, ಮರುದಿನ

ರಾತ್ರಿಯೇ ನೀರುಬಿಟ್ಟು  ರೈತದ್ರೋಹಿ ಎಂಬ ಅಪಕೀರ್ತಿಗೆ ತುತ್ತಾದರು. ಇದರಿಂದ

ಕೆಂಡಾಮಂಡಲವಾದ ಮಾದೇಗೌಡರು ರೈತಮಿತ್ರರ ಜೊತೆ ಆಮರಣಾಂತ ಉಪವಾಸ

ಕುಳಿತು. ಜಿಲ್ಲೆಯಲ್ಲಿ ಕರ್ಫ್ಯೂ ಜಾರಿಗೆ ಬಂತು. ಅನೇಕರ ಬಂಧನವಾಯಿತು.

ಮಂಡ್ಯ ರೈತರು ಇಲಿ ಮರಿಗಳಲ್ಲ, ಅವರು ಸಿಂಹದ ಮರಿಗಳು, ರೈತ ವಿರೋಧಿ

ಸರ್ಕಾರವನ್ನು ಮಟ್ಟ ಹಾಕುತ್ತಾರೆ ಎಂದು ಗೌಡರು ಮತ್ತೊಮ್ಮೆ ಗುಡುಗಿದರು.

ಗೌಡರ ಬಂಧನಕ್ಕೆ ಆಜ್ಞೆಯಾಯಿತು. ರೈತರಿಗಾಗಿ, ನೀರಿಗಾಗಿ ಜೈಲಿಗೆ ಹೋಗಲು

ಗೌಡರು ಸಿದ್ಧರಾದರು. ಗೌಡರನ್ನು ಜಾಮೀನಿನ ಮೇಲೆ ಬಿಡಿಸಲು ಮಂಡ್ಯದ

ವಕೀಲರು ಮುಂದೆ ಬಂದಾಗ ನಾನು ರೈತರ ಜೊತೆ ಜೈಲಿನಲ್ಲೇ ಇರುತ್ತೇನೆ.

ಜಾಮೀನು ಬೇಡ ಎಂದು ಅದನ್ನು ನಿರಾಕರಿಸಿದರು. ಕೋರ್ಟು, ಜೈಲುಗಳು ಗೌಡರ

ಜನಪರ ಹೋರಾಟವನ್ನು ಸ್ವಲ್ಪವೂ ಕುಗ್ಗಿಸಲಿಲ್ಲ.

ಜಿ. ಮಾದೇಗೌಡರು ಕೆ.ವಿ. ಶಂಕರಗೌಡರ ನಂತರ ಮಂಡ್ಯವನ್ನು ಆರ್ಥಿಕವಾಗಿ,

ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದವರು.

ಮಂಡ್ಯ ಜಿಲ್ಲೆಯ  ಮರೆಯಲಾಗದ ಮಹಾನುಭಾವರಲ್ಲಿ ಮಾದೇಗೌಡರು

ಎದ್ದು ಕಾಣುವ ವ್ಯಕ್ತಿತ್ವ.


*ಗೌರವ ಡಾಕ್ಟರೇಟ್:*

ಜಿ.ಮಾದೇಗೌಡರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ಆರೋಗ್ಯ

ಕ್ಷೇತ್ರಗಳಲ್ಲಿ ಸಲ್ಲಿಸಿರುವ ಗಣನೀಯ ಸಾಧನೆಗಾಗಿ ಪ್ರತಿಷ್ಠಿತ, ವಿಶ್ವಮಾನ್ಯ

ಮೈಸೂರು ವಿಶ್ವಿವಿದ್ಯಾನಿಲಯವು 2012 ರ ಜನವರಿಯಲ್ಲಿ ಗೌರವ ಡಾಕ್ಟರೇಟ್

ಪದವಿ ನೀಡಿ ಗೌರವಿಸಿದೆ.

ಇಂತಹ ಮಾದೇಗೌಡರು ಇಂದು ನಮ್ಮನ್ನೆಲ್ಲಾ ಅಗಲಿದ್ದಾರೆ. ಇವರ ಆತ್ಮಕ್ಕೆ ಇಡೀ ರಾಜ್ಯವೇ ಸಂತಾಪ ಸೂಚಿಸುತ್ತಿರುವುದು ಅವರ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in obituary »

ಹಸು ಮೈ ತೊಳೆಯಲು ಹೋಗಿ ವ್ಯಕ್ತಿ ಸಾವು

ಚನ್ನಪಟ್ಟಣ: ಸುಗ್ಗಿ ಹಬ್ಬಕ್ಕೆ ಹಸು ಮೈ ತೊಳೆಯಲು ಹೋಗಿ ಕಾಲುಜಾರಿ ಕೆರೆಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಕೋಮನಹಳ್ಳಿ

ಡಾ ರಾಜಕುಮಾರ್ ಗೆ ಪಿತೃವಿಯೋಗ
ಡಾ ರಾಜಕುಮಾರ್ ಗೆ ಪಿತೃವಿಯೋಗ

ಚನ್ನಪಟ್ಟಣ: ನಗರದ ಸಾರ್ವಜನಿಕ ಆಸ್ಪತ್ರೆಯ ಹಿರಿಯ ಹಾಗೂ ಮೂಳೆ ತಜ್ಞರಾದ ಡಾ ರಾಜಕುಮಾರ್ ರವರ ತಂದೆ ರೇಣುಕಪ್ಪ (೭೨) ನಿಧನರಾಗಿದ್ದು, ಸಾರ್ವಜನಿಕ ಆಸ್ಪತ್ರೆ

ಹಾವು ಕಚ್ಚಿ ಅರ್ಚಕಿ ಸಾವು
ಹಾವು ಕಚ್ಚಿ ಅರ್ಚಕಿ ಸಾವು

ಚನ್ನಪಟ್ಟಣ: ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೃದ್ಧೆಯೊಬ್ಬರು ಹಾವು ಕಚ್ಚಿ ಮೃತಪಟ್ಟಿರುವ ಘಟನೆ ತಾಲೂಕಿನ ನೇರಳೂರು ಗ್ರಾಮದಲ್ಲಿ ಸೋಮವಾರ ನಡೆದಿದೆ.

ಕೆಲಗೆರೆ ಗ್ರಾಮದಲ್ಲಿ ಹಾವು ಕಚ್ಚಿ ವಿದ್ಯಾರ್ಥಿನಿ ಸಾವು
ಕೆಲಗೆರೆ ಗ್ರಾಮದಲ್ಲಿ ಹಾವು ಕಚ್ಚಿ ವಿದ್ಯಾರ್ಥಿನಿ ಸಾವು

ಚನ್ನಪಟ್ಟಣ: ಮೇ 13 22. ತಾಲ್ಲೂಕಿನ ಕೆಲಗೆರೆ ಗ್ರಾಮದ ವಾಟರ್ ಮನ್ ರಮೇಶ್ ರವರ ಪುತ್ರಿಗೆ ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ

ಶಿಕ್ಷಣ ಸಹಾಯಕ ಎಲಿಯೂರು ಎಸ್ ಈರಯ್ಯ ನಿಧನ
ಶಿಕ್ಷಣ ಸಹಾಯಕ ಎಲಿಯೂರು ಎಸ್ ಈರಯ್ಯ ನಿಧನ

ಚನ್ನಪಟ್ಟಣ: ಎಸ್ ಈರಯ್ಯ ಎಲಿಯೂರು (83) ಮೈಸೂರಿನಲ್ಲಿ ನಿನ್ನೆ ರಾತ್ರಿ‌ ನಿಧನರಾದರು.

ಮೃತ ರಾಮಚಂದ್ರ ರವರಿಗೆ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ
ಮೃತ ರಾಮಚಂದ್ರ ರವರಿಗೆ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ

ಚನ್ನಪಟ್ಟಣ: ತಾಲ್ಲೂಕಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಕೆ. ರಾಮಚಂದ್ರ ರವರು ವಯೋಸಹಜ ಖಾಯಿಲೆಯಿಂದ ಮಂಗಳವಾರ ರಾತ್ರಿ ಚನ್ನಪಟ್ಟಣದ ಸ್ವಗೃಹ

ಮಾಜಿ ಶಾಸಕ ಚೌಡಯ್ಯ ಅವರ ನಿಧನಕ್ಕೆ ಡಿ.ಕೆ. ಶಿವಕುಮಾರ್ ಅವರ ಸಂತಾಪ:
ಮಾಜಿ ಶಾಸಕ ಚೌಡಯ್ಯ ಅವರ ನಿಧನಕ್ಕೆ ಡಿ.ಕೆ. ಶಿವಕುಮಾರ್ ಅವರ ಸಂತಾಪ:

ಬೆಂಗಳೂರು: ಮಂಡ್ಯದ ಮಾಜಿ ಶಾಸಕರು, ಹಿರಿಯ ಮುಖಂಡರಾದ ಚೌಡಯ್ಯ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದ

ಮಚ್ಚಿನ ವಿಚಾರದಲ್ಲಿ ಜಗಳ.ಕೊಲೆಯಲ್ಲಿ ಅಂತ್ಯ
ಮಚ್ಚಿನ ವಿಚಾರದಲ್ಲಿ ಜಗಳ.ಕೊಲೆಯಲ್ಲಿ ಅಂತ್ಯ

ಹಲಗೂರು: ಸೌದೆ ಕತ್ತರಿಸಲು ತೆಗೆದುಕೊಂಡಿದ್ದ‌ ಮಚ್ಚನ್ನು ವಾಪಸ್ ಕೊಡದ ಕಾರಣ ಇಬ್ಬರ ನಡುವೆ ಜಗಳ ನಡೆದು ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ

ಬೆಳ್ಳಂಬೆಳಗ್ಗೆ ಮಚ್ಚಿನಿಂದ ಕೊಚ್ಚಿ ಮಹಿಳೆ ಕೊಲೆ: 3 ತಾಸಿನಲ್ಲೇ ಸಿಕ್ಕಿಬಿದ್ದ ಹಿಂಬದಿ ಮನೆಯ ಆಗಂತುಕ
ಬೆಳ್ಳಂಬೆಳಗ್ಗೆ ಮಚ್ಚಿನಿಂದ ಕೊಚ್ಚಿ ಮಹಿಳೆ ಕೊಲೆ: 3 ತಾಸಿನಲ್ಲೇ ಸಿಕ್ಕಿಬಿದ್ದ ಹಿಂಬದಿ ಮನೆಯ ಆಗಂತುಕ

ಚನ್ನಪಟ್ಟಣ: ಶುಕ್ರವಾರ ಬೆಳ್ಳಂಬೆಳಗ್ಗೆ ಕೊಲೆಯ ವಿಷಯ ತಿಳಿದು ಇಡೀ ಗ್ರಾಮವೇ ಬೆಚ್ಚಿಬಿದ್ದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ತೂಬಿನಕೆರೆಯಲ್ಲಿ ಸಂಭವಿಸಿದೆ.


ಪುನೀತ್ ಅಭಿಮಾನಿ ನೇಣುಬಿಗಿದು ಸಾವು
ಪುನೀತ್ ಅಭಿಮಾನಿ ನೇಣುಬಿಗಿದು ಸಾವು

ಚನ್ನಪಟ್ಟಣ ನಗರದ ಎಲೇಕೇರಿ ಬಡಾವಣೆಯ ದಿವಂಗತ ಕೃಷ್ಣಪ್ಪ ಎಂಬುವವರ ಪುತ್ರ ವೆಂಕಟೇಶ್ ಎಂಬಾತ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಅಪ್ಪಟ ಅಭಿಮಾನಿಯಾಗಿದ್ದು ಅವರ ಸಾವಿನಿಂದ ನೊಂದು ಆತ್ಮಹತ್ಯೆ ಮಾಡಿ

Top Stories »  


Top ↑