Tel: 7676775624 | Mail: info@yellowandred.in

Language: EN KAN

    Follow us :


ಅದ್ದೂರಿಯಾಗಿ ಆಚರಣೆಗೊಂಡ ತ್ಯಾಗಬಲಿದಾನದ ಬಕ್ರೀದ್

Posted date: 12 Aug, 2019

Powered by:     Yellow and Red

ಅದ್ದೂರಿಯಾಗಿ ಆಚರಣೆಗೊಂಡ ತ್ಯಾಗಬಲಿದಾನದ ಬಕ್ರೀದ್

ಚನ್ನಪಟ್ಟಣ: ಮುಸಲ್ಮಾನರ ಕೆಲವೇ ಹಬ್ಬಗಳಲ್ಲಿ ಬಕ್ರೀದ್ ಒಂದು ಪ್ರಮುಖ ಹಬ್ಬ. ತ್ಯಾಗ ಬಲಿದಾನದ ಸಂಕೇತವಾಾದ ಈ ಹಬ್ಬವನ್ನುವ ಭಾರತವೂ ಸೇರಿದಂತೆ ವಿಶ್ವದ್ಯಾಂತ ಮುಸ್ಲಿಮರು ಈ ಹಬ್ಬವನ್ನು   ಶ್ರದ್ಧೆ ಭಕ್ತತಿಯಿಂದ  ಆಚರಿಸಿದರು.


ತಾಲ್ಲೂಕಿನಾದ್ಯಂತ ಇರುವ ಮಸ್ಜಿದ್ ಗಳು ಸೇರಿದಂತೆ ನಗರದ ಬೆಂಗಳೂರು ಮೈಸೂರು ಹೆದ್ದಾರಿಯ ನ್ಯಾಯಾಲಯ ಸಂಕೀರ್ಣದ ದರ್ಗಾ ಪ್ರದೇಶದಲ್ಲಿ ಜಮಾಯಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಬಕ್ರೀದ್ ಹಬ್ಬವನ್ನು ಆಚರಿಸಿದರು.


*ಬಕ್ರೀದ್ ಹಬ್ಬದ ಹಿನ್ನೆಲೆ*


ಪ್ರವಾದಿಗಳಲ್ಲೊಬ್ಬರಾದ ಪ್ರವಾದಿ ಇಬ್ರಾಹಿಮ್  ರವರ ಮಗನಾದ ಇಸ್ಮಾಯಿಲ್‌ ರನ್ನು ಸೃಷ್ಟಿಕರ್ತ ಅಲ್ಲಾಹನಿಗೆ ಬಲಿ ಕೊಡಲು ಮುಂದಾದ ದಿನವನ್ನು ಈದ್-ಉಲ್-ಅದಾ ಅರ್ಥಾತ್ ಬಕ್ರೀದ್ ಎನ್ನಲಾಗುತ್ತದೆ. ಈ ಹಬ್ಬದ ಹಿನ್ನೆೆಲೆ.ಮಹತ್ವ ಹೀಗಿದೆ.


ರಮಝಾನ್ ಮತ್ತು ಬಕ್ರೀದ್ ವಿಶ್ವದ್ಯಾಂತ ಮುಸ್ಲಿಮರು ಆಚರಿಸುವ ಎರಡು ಅತಿದೊಡ್ಡ ಹಬ್ಬಗಳು. ರಮಝಾನ್ಸಂದರ್ಭದಲ್ಲಿ ಮುಸ್ಲಿಮರು ಇಡಿ ಒಂದು ಮಾಸ ಉಪವಾಸಾಚರಣೆ ಆಚರಿಸಿ ಕೊನೆ ದಿನ ಈದ್-ಉಲ್-ಫಿತರ್ ಹಬ್ಬದ ಮೂಲಕ ಭಾವೈಕ್ಯ ಮರೆಯುತ್ತಾರೆ.


ಆದರೆ, ಬಕ್ರೀದ್ ಸಂದರ್ಭದಲ್ಲಿ ಶಕ್ತ ಮುಸ್ಲಿಮರು, ಇಸ್ಲಾಂ ಧರ್ಮದ ಐದು ಪ್ರಮುಖ ಕರ್ತವ್ಯಗಳಲ್ಲೊಂದಾದ ಪವಿತ್ರ ಹಜ್ಜ್ ಯಾತ್ರೆಗೆ ತೆರಳುತ್ತಾರೆ. ಪ್ರವಾದಿ ಮಹಮ್ಮದರ ಕರ್ಮಭೂಮಿಯಾಗಿದ್ದ ಸೌದಿ ಅರೆಬಿಯಾದ ಮೆಕ್ಕಾಮತ್ತು ಮದೀನ ಪಟ್ಟಣಗಳಲ್ಲಿರುವ ಪವಿತ್ರ ಯಾತ್ರಾ ಸ್ಥಳಗಳ ದರ್ಶನ ಪಡೆದು ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ ಬರುತ್ತಾರೆ. ಈ ಪೈಕಿ ಪವಿತ್ರ ಯಾತ್ರಾ ಸ್ಥಳವಾದ ಕಾಬಾದ ದರ್ಶನ ಹಾಗೂ ಕೆಟ್ಟಗುಣಗಳ ಸಂಕೇತವಾದ ಸೈತಾನನಿಗೆ ಸಾಂಕೇತಿಕವಾಗಿ ಕಲ್ಲು ಹೊಡೆಯುವ ಸಂಪ್ರದಾಯ ಅತ್ಯಂತ ಪ್ರಮುಖವಾದದ್ದು.


ವಿಶ್ವದ ಮೂಲೆಮೂಲೆಗಳಿಂದ ಬಂದು ಹಜ್ಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಬಕ್ರೀದ್ ಹಬ್ಬದ ದಿನದಂದು ತಮ್ಮ ಯಾತ್ರೆಯನ್ನು ಪೂರೈಸಿ ತಮ್ಮ ತಮ್ಮ ತಾಯಿನಾಡಿಗೆ ಮರಳುತ್ತಾರೆ. ಒಟ್ಟಾರೆ, ಹಜ್ಜ್ ಯಾತ್ರೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ನಡೆಯುವ ಕ್ರಿಯೆ. ಇದೇ ವೇಳೆ ಬಕ್ರೀದ್ ಹಬ್ಬವನ್ನು ವಿಶ್ವದ್ಯಂತ ಮುಸ್ಲಿಮರು ಭಕ್ತಿ-ಶ್ರದ್ಧೆಯಿಂದ ಆಚರಿಸುತ್ತಾರೆ. ಇದಕ್ಕೊಂದು ಹಿನ್ನೆಲೆಯಿದೆ. ಧರ್ಮ ಪ್ರವಾದಿಗಳಾದ ಹಜರತ್ ಇಬ್ರಾಹಿ೦ಖಲೀಲುಲ್ಲಾಹ್‌ರವರ ಸತ್ವಪರೀಕ್ಷೆ ಮಾಡಲು ಅಲ್ಲಾಹ್‌ನು ಒಮ್ಮೆ ಅವರಿಗೆ "ನಿನ್ನ ಅತಿ ಪ್ರೀತ್ಯಾದರಗಳಿಗೆ ಪಾತ್ರವಾದ ಜೀವ ಒ೦ದನ್ನು ಬಲಿ ಕೊಡಬಲ್ಲೆಯೋ?" ಎಂದು ಕೇಳಿದನು. ಪಿತೃವಾತ್ಸಲ್ಯದ ಪ್ರತೀಕವೆನಿಸಿದ ತಮ್ಮ ಏಕೈಕ ಪುತ್ರನಾದ ಇಸ್ಮಾಯಿಲ್ ಬಲಿದಾನ ಮಾಡಬೇಕೆ೦ಬುದು ಭಗವ೦ತನ ಇಚ್ಛೆ ಎಂದು ಅವರಿಗೆ ಮನವರಿಕೆಯಾಯಿತು. ಮಗನನ್ನು ಬಲಿ ಕೊಡಲು ಸಿದ್ಧರಾದರು.


ಆದರೆ ಅನೇಕ ಸಲ ಪ್ರಯತ್ನ ಪಟ್ಟರೂ ಮಗನ ಕತ್ತಿನ ಮೇಲಿಟ್ಟ ಕತ್ತಿ ಹರಿಯಲಿಲ್ಲ. ಇದನ್ನು ಕ೦ಡ ಮಗ ಇಸ್ಮಾಯಿಲ್, ತನ್ನ ತ೦ದೆಗೆ ಹೀಗೆ ಹೇಳಿದರು: "ಅಪ್ಪಾ, ನಿನ್ನನ್ನು ಪುತ್ರವಾತ್ಸಲ್ಯ ಕಾಡಿಸುತ್ತಿದೆ. ಆದ್ದರಿ೦ದ ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊ೦ಡು ಕತ್ತಿ ಹರಿಸು". ಇದನ್ನು ಕೇಳಿದ ತ೦ದೆ ಇಬ್ರಾಹಿಮ್ ಖಲೀಲುಲ್ಲಾಹ್‌ರವರು ತಮ್ಮ ಕಣ್ಣುಗಳಿಗೆ ಪಟ್ಟಿಯನ್ನು ಕಟ್ಟಿ "ಬಿಸ್ಮಿಲ್ಲಾ" ಎಂದು ಹೇಳಿ ಒಮ್ಮೆಲೇ ಮಗನ ಮೇಲೆ ಕತ್ತಿಯನ್ನು ಜೋರಾಗಿ ಹರಿಸಿದರು. ಕತ್ತಿ ಎಷ್ಟೇ ಹರಿಸಿದರು ದೈವಿ ಕಾರಣದಿಂದ ಕತ್ತಿ ಇಸ್ಮಾಯಿಲರ ಕತ್ತನ್ನು ಕುಯ್ಯುವುದಿಲ್ಲ.


ಆ ವೇಳೆ, ಪ್ರತ್ಯಕ್ಷರಾದ ದೇವದೂತ ಜಿಬ್ರಾಯಿಲ್, ಇಸ್ಮಾಯಿಲ್‌ರನ್ನು ಒತ್ತಟ್ಟಿ ಅವರ ಬದಲು ಒಂದು ಕುರಿಯನ್ನು ಬಲಿಕೊಡುವಂತೆ ಆಜ್ಞೆಪಿಸುತ್ತಾರೆ. ಈ ಕಾರಣ ಬಲಿ ಕೊಡಲ್ಪಟ್ಟ ಜೀವ ಒಂದು ಕುರಿ ಆಗುತ್ತದೆ. ಜತೆಗೆ ಪ್ರವಾದಿ ಇಬ್ರಾಹಿಮರು ಸೃಷ್ಟಿಕರ್ತನಾದ ಅಲ್ಲಾನಲ್ಲಿಟ್ಟಿರುವ ಸತ್ಯನಿಷ್ಠೆಯ ಸತ್ವಪರೀಕ್ಷೆಯೂ ನಡೆದಿರುತ್ತದೆ. ಹೀಗೆ , ದೇವನಲ್ಲಿ ತಮಗಿರುವ ಸತ್ಯನಿಷ್ಠೆಯ ಸಂಕೇತವಾಗಿ ವಿಶ್ವದ್ಯಂತ ಮುಸ್ಲಿಮರಿಂದ ಬಕ್ರೀದ್ ಹಬ್ಬ ಆಚರಿಸಲ್ಪಡುತ್ತಾ ಬಂದಿದೆ. ಅಲ್ಲದೇ, ಹಬ್ಬದ ದಿನದಂದು ಶಕ್ತ ಮುಸ್ಲಿಮರು ಕುರಿಯನ್ನು ತ್ಯಾಗ-ಬಲಿದಾನದ ಪ್ರತೀಕವಾಗಿ ಬಲಿ ಕೊಡುವುದು ಹಾಗೂ ಅದರ ಪಾಲನ್ನು ಬಂದುಭಾಂದವರು ಹಾಗೂ ನೆರೆಹೊರೆಯವರಿಗೆ ಸಮಾನವಾಗಿ ಹಂಚುವ ಸಂಪ್ರದಾಯ ಬೆಳೆದು ಬಂದಿದೆ. ಒಟ್ಟಿನಲ್ಲಿ ಜೀವಜ೦ತುವಿನ ಬಲಿದಾನದ ಮೂಲಕ ಈ ಹಬ್ಬ ಆಚರಿಸಲ್ಪಡುತ್ತದೆ.


ಬಲಿಯಾದ ಜೀವಜ೦ತು ಮುಂದೆ ಸಂಬಂಧಿಸಿದವರಿಗೆ ಪರೋಕ್ಷವಾಗಿ ಸಹಕಾರಿಯಾಗುತ್ತದೆ. ಪ್ರಪ೦ಚವು ಕೊನೆಗೊಳ್ಳುವಾಗ ಒಂದು ದೊಡ್ಡ ಪ್ರಳಯವಾಗುತ್ತದೆ. ಇದನ್ನು "ಖಯಾಮತ್" ಎನ್ನುವರು. ಆಗ ಮಾನವನ ಒಳ್ಳೆಯ ಹಾಗೂ ಕೆಟ್ಟ ನಡತೆಗಳ ತುಲಾಭಾರವಾಗುತ್ತದೆ. ಒಂದು ವೇಳೆ ಕೆಟ್ಟ ನಡತೆಗಳ ತಕ್ಕಡಿಯ ಭಾಗ ಭಾರವಾಗಿ ಕೆಳಗಿಳಿದರೆ, ಬಲಿ ಕೊಡಲ್ಪಟ್ಟ ಜ೦ತು ಕೂಡಲೇ ಬ೦ದು ಅತ್ತ ಕಡೆಯ ಭಾಗದಲ್ಲಿ ತನ್ನ ಭಾರವನ್ನು ಬಿಟ್ಟು ನೆರವು ನೀಡುತ್ತದೆ ಎ೦ಬ ನ೦ಬಿಕೆ ಇದೆ. ಆದುದರಿ೦ದಲೇ ಬಕ್ರೀದ್ ಹಬ್ಬದಲ್ಲಿ ಮುಸ್ಲಿಮರು ಕುರಿ, ಒ೦ಟೆಗಳನ್ನು ಹೆಚ್ಚು ಹೆಚ್ಚಾಗಿ ಬಲಿ ಕೊಡುತ್ತಾರೆ. ಇದನ್ನು "ಖುರ್ಬಾನಿ" ಎಂದು ಕರೆಯುತ್ತಾರೆ.


ಈ ರೀತಿ ಬಲಿ ಕೊಟ್ಟ ಪ್ರಾಣಿಯ ಮಾ೦ಸವನ್ನು ಮೂರು ಭಾಗಗಳಾಗಿ ವಿ೦ಗಡಿಸಿ ಒಂದು ಭಾಗವನ್ನು ನೆ೦ಟರಿಗೆ ಕೊಡುತ್ತಾರೆ. ಎರಡನೆಯ ಭಾಗವನ್ನು ಬಡವರಿಗೆ ಹ೦ಚುತ್ತಾರೆ. ಉಳಿದ ಮೂರನೆಯ ಭಾಗವನ್ನು ಮನೆಯವರಿಗಾಗಿ ಉಳಿಸಿಕೊಳ್ಳುತ್ತಾರೆ. ಇಬ್ರಾಹಿಮ್‌ರವರ ಆ ದೈವಾಜ್ಞೆ ಪಾಲನೆಯ ನೆನಪನ್ನು ಬಲಿದಾನದ ಮೂಲಕ ಆಚರಿಸುತ್ತಾರೆ ಎನ್ನಬಹುದು.


ಈ ಹಬ್ಬದ ದಿವಸ ಮುಸ್ಲಿಮರು ರ೦ಜಾನ್ ಹಬ್ಬದ ಹಾಗೆಯೇ "[[ಈದ್‌ಗಾಹ್]]"ಗೆ ಹೋಗಿ ಪ್ರಾರ್ಥನೆ ಇತ್ಯಾದಿಗಳನ್ನು ಸಲ್ಲಿಸುತ್ತಾರೆ. ಒಟ್ಟಿನಲ್ಲಿ ಮುಸ್ಲಿಮರಲ್ಲಿ ಹಬ್ಬಗಳ ಆಚರಣೆಯಲ್ಲಿ ಒಂದು ಬಗೆಯ ವೈಶಿಷ್ಟ್ಯವಿದೆ. ಅವು ಆ ಜನರಲ್ಲಿ ಒಂದು ಬಗೆಯ ಚೈತನ್ಯವನ್ನೂ, ಸೋದರ ಭಾವನೆಯನ್ನೂ ಉ೦ಟು ಮಾಡುತ್ತದೆ. ಈದ್‌ಗಾಹ್‌ಗಳಲ್ಲಿ ಇಮಾಮರ ಹಿ೦ದೆ ಸಾಲುಸಾಲಾಗಿ ನಿ೦ತು "ಅಲ್ಲಾಹು ಅಕ್ಬರ್", "ಅಲ್ಲಾಹು ಅಕ್ಬರ್" ಎಂದು ಘೋಷಣೆ ಮಾಡುತ್ತಾ ಸ೦ವ್ಯೂಹಕವಾಗಿ ಎಲ್ಲರೂ ತಲೆ ಬಾಗುವ, ದೇವರಿಗೆ ಶರಣು ಹೋಗುವ ಆ ಅಭೂತಪೂರ್ವ ದೃಶ್ಯ ರೋಮಾ೦ಚನಕಾರಿಯಾಗಿಯೂ, ನಯನ ಮನೋಹರವಾಗಿಯೂ ಇರುತ್ತದೆ. ನಮಾಜ್ನಂತರ ಒಬ್ಬರನೊಬ್ಬರು ಆಲಿ೦ಗನ ಮಾಡಿಕೊಳ್ಳುವುದು, ಕೈ ಕುಲುಕುವುದು, "ಈದ್ ಮುಬಾರಕ್" ಅ೦ದರೆ "ಈ ಹಬ್ಬ ನಿಮಗೆ ಶುಭವನ್ನು೦ಟು ಮಾಡಲಿ" ಎನ್ನುವುದು ಗಮನಾರ್ಹ.


ಈ ಸ೦ದರ್ಭದಲ್ಲಿ ಬಡವ - ಬಲ್ಲಿದ, ಶತೃ - ಮಿತ್ರ, ಪರಿಚಿತ - ಅಪರಿಚಿತ ಎ೦ಬ ಭಾವನೆ ಎಲ್ಲರ ಮನಸಿನಲ್ಲೂ ಉ೦ಟಾಗುವುದು. ಬಕ್ರೀದ್ ಹಬ್ಬಗಳಲ್ಲಿ ನಮಾಜ್ನಿ೦ದ ಮನೆಗಳಿಗೆ ಮರಳಿದಾಗ ಅವರ ಸಹೋದರಿಯರು ಸುಣ್ಣಮಿಶ್ರಿತ ಅರಿಶಿನದ ನೀರಿನ ಪಾತ್ರೆಗಳನ್ನು ಕೈಯಲ್ಲಿ ಹಿಡಿದು ಬಾಗಿಲ ಬಳಿಯೇ ಕಾದು ನಿ೦ತಿರುತ್ತಾರೆ. ತು೦ಬಾ ಉತ್ಸಾಹದಿ೦ದಿರುವ ಇವರಿಗೆ ತಮ್ಮ ಅಣ್ಣ ತಮ್ಮ೦ದಿರಿಗಾದ ದೃಷ್ಟಿಯನ್ನು ಹೋಗಲಾಡಿಸಲು ಏನು ಗುಲ್ಲು ಅವರದು!!!!


ದೃಷ್ಟಿ ತೆಗೆಯುವ ನೆಪದಲ್ಲಿ ಅವರು ಹಬ್ಬದ "ಈದೀ" ಅ೦ದರೆ ಇನಾ೦ ವಸೂಲು ಮಾಡದೇ ಬಿಡುವುದಿಲ್ಲ. ಪ್ರಾರ್ಥನೆಯಿ೦ದ ಹಿ೦ದಿರುಗಿದ ನಂತರ ಕಿರಿಯರು ಸಾಮಾನ್ಯವಾಗಿ ತಮ್ಮ ತ೦ದೆ, ತಾಯಿ, ಅಣ್ಣ, ಅಕ್ಕ೦ದಿರು ಮೊದಲಾದ ಹಿರಿಯರ ಬಳಿ ಹೋಗಿ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸುವುದು ಮುಸ್ಲಿಮರಲ್ಲಿ ಒಂದು ಸ೦ಪ್ರದಾಯ. ಆಗ ಹಿರಿಯರು ಅವರನ್ನು ಯಥೇಚ್ಛವಾಗಿ ಹರಸುತ್ತಾರೆ.


ಈ ಹಬ್ಬಗಳಲ್ಲಿ ಎಲ್ಲರಿಗೂ ಎಲ್ಲಾ ಮನೆಗಳಲ್ಲೂ ಆಮ೦ತ್ರಣ. ಸ್ವಲ್ಪವಾದರೂ ತಿನ್ನಲೇಬೇಕು. ಉಕ್ಕಿ ಬರುವ ಆನ೦ದವನ್ನು ಎಲ್ಲರೂ ಹ೦ಚಿಕೊಳ್ಳಬೇಕು.


ಹಬ್ಬದ ದಿನ ಆನ೦ದ ಪಡೆಯದವನು ಅಭಾಗ್ಯನೆ೦ದು ಹೇಳಿಕೊಳ್ಳುವುದು ಮುಸ್ಲಿಮರ ಒಂದು ವಾಡಿಕೆ.




ಬಹುತೇಕ ಎಲ್ಲಾ ಮುಸ್ಲಿಂ ರು ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸದರೆ, ವಯಸ್ಸಾದ ಹಿರಿಯರು ಮತ್ತು ಖಾಯಿಲೆಯುಳ್ಳವರು ಸ್ಥಳೀಯ ಮಸ್ಜಿದ್ ಗಳಲ್ಲಿ ನಿಗದಿತ ಸಮಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.




ಗೋ ರಾ ಶ್ರೀನಿವಾಸ...

ಮೊ:9845856139.


(ಕೆಲವು ಆಯ್ದ ಮಾಹಿತಿಯನ್ನು ಜಾಲತಾಣದಿಂದ ಆಯ್ದುಕೊಳ್ಳಲಾಗಿದೆ)

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑