ಕಳಪೆ ಕಾಮಗಾರಿ ವಿರೋಧಿಸಿ ಲೋಕೋಪಯೋಗಿ ಇಲಾಖೆ ವಿರುದ್ಧ ರೈತಸಂಘ ಪ್ರತಿಭಟನೆ.
ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಮತ್ತು ಇತ್ತೀಚೆಗೆ ನಡೆದಿರುವ ಶೇಕಡಾ ೯೫ ಕ್ಕೂ ಹೆಚ್ಚು ರಸ್ತೆ ಕಾಮಗಾರಿಗಳು ಕಳಪೆಯಿಂದ ಕೂಡಿದ್ದು ಕಳಪೆ ಕಾಮಗಾರಿಗಳಿಗೆ ಗುತ್ತಿಗೆದಾರರು, ಇಂಜಿನಿಯರ್ ಗಳು ಸೇರಿದಂತೆ ಹಲವಾರು ಸ್ಥಳೀಯ ರಾಜಕಾರಣಿಗಳು ಭಾಗಿಯಾಗಿ ಶ್ರೀ ಸಾಮಾನ್ಯನ ತೆರಿಗೆ ಹಣವನ್ನು ದುರುಪಯೋಗ ಪಡಿಸಿಕೊಂಡಿರುವುದಲ್ಲದೆ, ನಿರ್ಮಿಸಿರುವ ರಸ್ತೆಯಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ, ಇದರ ಹೊಣೆಯನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೇ ಹೊರಬೇಕಾಗಿದ್ದು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಂಡು ಕಳಪೆ ಕಾಮಗಾರಿ ಮಾಡಿರುವವರಿಂದಲೇ ದುರಸ್ತಿ ಮಾಡಿಸಬೇಕೆಂದು ತಾಲ್ಲೂಕು ರೈತ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ನಗರದ ಲೋಕೋಪಯೋಗಿ ಇಲಾಖೆಯ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.
ಕಣ್ವ ಭಾಗದ ರಸ್ತೆಗಳ ಬಹುತೇಕ ಕಾಮಗಾರಿಗಳು ಈಗಾಗಲೇ ನಡೆದಿದ್ದು ಸಣ್ಣ ಕಾಲುವೆಗಳು ಇರುವ, ಮೋರಿಗಳಿರುವ ಜಾಗಗಳಲ್ಲಿ ಪೈಪುಗಳನ್ನು ಸಹ ಹಾಕದೆ ಟಾರು ಹಾಕಿದ್ದು ಮೋರಿಗಳು ಕುಸಿಯುತ್ತಿವೆ, ಎಂಬ ದೂರುಗಳಿಗೆ ಇಂಜಿನಿಯರ್ ಸಾಗರ್ ಈಗ ಮಾಡಿಸುತ್ತೇವೆ ಎಂದು ನೀಡಿದ ಉತ್ತರ ಕ್ಕೆ ಕೋಪಗೊಂಡ ಪದಾಧಿಕಾರಿಗಳು ಪ್ರತಿಭಟನೆ ನಂತರ ಮಾಡುವುದಾದರೆ ನೀವುಗಳು ಬೇಕೆ, ಎರಡೆರಡು ಬಾರಿ ಕಾಮಗಾರಿ ಮಾಡುತ್ತೀರಾ ? ಗುಣಮಟ್ಟ ಪರೀಕ್ಷಿಸುವ ಇಂಜಿನಿಯರ್ ಆಗಲಿ ಸಂಬಂಧಿಸಿದ ಇಂಜಿನಿಯರ್ ಗಳಾಗಲಿ ಸ್ಥಳದಲ್ಲಿರದೇ ಕಳಪೆ ಕಾಮಗಾರಿಗಳು ನಡೆಯಲು ಇವರೇ ಉತ್ತೇಜನ ನೀಡಿದ್ದಾರೆ ಎಂದು ದೂರಿದರು.
ಪ್ರತಿಭಟನಾಕಾರರಿಗೆ ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ ಸಿ ಚಂದ್ರಶೇಖರ ಉತ್ತರಿಸಿ ನಮ್ಮೆಲ್ಲಾ ಅಧಿಕಾರಿಗಳ ಜೊತೆ ಸಮಾಲೋಚಿಸಿ ಶೀಘ್ರವಾಗಿ ಆಗಿರುವ ಲೋಪಗಳನ್ನು ತಿದ್ದಿಕೊಂಡು ಉತ್ತಮ ಕಾಮಗಾರಿಗಳನ್ನು ನಡೆಯುವಂತೆ ನೋಡಿಕೊಳ್ಳುತ್ತೇವೆಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳಲಾಯಿತು.
ಮುಖಂಡ ಎಂ ರಾಮು ಮಾತನಾಡಿ ಎಲ್ಲಾ ಅಧಿಕಾರಿಗಳು ರೈತರ ಮಕ್ಕಳೇ, ಅಧಿಕಾರಿಗಳು ಎನ್ನುವ ದರ್ಪ ಬೇಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ಹೆಚ್ಚು ಅನುದಾನ ನೀಡಿದ್ದು ಅನುದಾನ ಸದ್ಬಳಕೆಯ ಬದಲು ದುರ್ಬಳಕೆ ಆಗುತ್ತಿದೆ, ಕಳಪೆ ಕಾಮಗಾರಿ ಮಾಡುವ ಮೂಲಕ ಹಣ ದುರುಪಯೋಗವಾಗುತ್ತಿದೆ, ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಲೋಕೋಪಯೋಗಿ ಇಲಾಖೆಯ ರಾಮನಗರ ಇ ಇ ಗೋಪಾಲಕೃಷ್ಣ, ಇಂಜಿನಿಯರ್ ಗಳಾದ ನಾರಾಯಣಗೌಡ, ಪ್ರಕಾಶ್, ಸಾಗರ್ ರವರು ಹಾಜರಿದ್ದು ಪ್ರತಿಭಟನಾಕಾರರಿಗೆ ಉತ್ತರಿಸಿದರು.
ಪ್ರತಿಭಟನೆಯಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಎಂ ರಾಮು, ಜಿಲ್ಲಾ ಅಧ್ಯಕ್ಷ ಕೆ ಮಲ್ಲಯ್ಯ, ಜಿಲ್ಲಾ ಗೌರವಾಧ್ಯಕ್ಷ ತಿಮ್ಮೇಗೌಡ, ತಾಲ್ಲೂಕು ಗೌರವಾಧ್ಯಕ್ಷ ಕೃಷ್ಣಯ್ಯ, ಮಹಿಳಾ ಅಧ್ಯಕ್ಷೆ ಚಿಕ್ಕತಾಯಮ್ಮ, ರಾಮನಗರ ದ ಪಾರ್ಥ, ರಾಮೇಗೌಡ, ಹೆಚ್ ನಾಗೇಶ್, ಗುರುಲಿಂಗಯ್ಯ, ಮುಖಂಡರಾದ ಶಂಭೂಗೌಡ, ಸಿದ್ದರಾಜು ಸೇರಿದಂತೆ ಮಹಿಳಾ ಕಾರ್ಯಕರ್ತರು ಪಾಲ್ಗೊಂಡಿದ್ದರು.
*ಗೋ ರಾ ಶ್ರೀನಿವಾಸ...*
*ಮೊ:9845856139.*
ಪ್ರತಿಕ್ರಿಯೆಗಳು