Tel: 7676775624 | Mail: info@yellowandred.in

Language: EN KAN

    Follow us :


ಸ್ನೇಹ ಸಂಬಂಧ ಕಳೆದುಕೊಳ್ಳುವ ತೊಳಲಾಟದಲ್ಲಿ ಖಾಸಗಿ ಸಾಲಗಾರರು

Posted date: 03 Sep, 2019

Powered by:     Yellow and Red

ಸ್ನೇಹ ಸಂಬಂಧ ಕಳೆದುಕೊಳ್ಳುವ ತೊಳಲಾಟದಲ್ಲಿ ಖಾಸಗಿ ಸಾಲಗಾರರು

ಚನ್ನಪಟ್ಟಣ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗುವ ಅಂಚಿನಲ್ಲಿ ನೊಂದವರ ಬಾಳಿಗೆ ಬೆಳಕು ನೀಡುವ ಐತಿಹಾಸಿಕ ಹಾಗೂ ಮಾನವೀಯ ಕಾಯ್ದೆ ಅಂದರೆ ಕರ್ನಾಟಕ ಋಣ ಪರಿಹಾರ ಕಾಯ್ದೆ ಜಾರಿಗೆ ತಂದು ಮುಂದಿನ ಚುನಾವಣೆಯಲ್ಲಿ ಬಡವರ ಮತ‌ಗಳ ಖಾತೆಯನ್ನು ಕುಮಾರಸ್ವಾಮಿ ಭದ್ರ ಮಾಡಿಕೊಂಡು ಬೀಗಿದರೆ ಸದ್ಯದ ಪರಿಸ್ಥಿತಿಯಲ್ಲಿ ದುಡ್ಡಿಲ್ಲದ, ತಡವಾಗಿಯಾದರೂ ಕೊಟ್ಟವರ ಋಣ ತೀರಿಸಲು ತಯಾರಿರುವ ಪ್ರಾಮಾಣಿಕ ಸಾಲಗಾರರು ಈ ಮೂರು ತಿಂಗಳೊಳಗೆ ಏನು ಮಾಡಬೇಕೆಂದು ತೋಚದೆ ಕಂಗಾಲಾಗಿರುವುದು ಸತ್ಯ*


ಕರ್ನಾಟಕ ಋಣ ಪರಿಹಾರ ಕಾಯ್ದೆಯನ್ನು ದಿ: ದೇವರಾಜ ಅರಸು ಹೆಸರಿನಲ್ಲಿ ತಮ್ಮ ಅಧಿಕಾರದ ಅವಧಿಯಲ್ಲಿ ಅನೇಕ ಬಾರಿ ಹೇಳಿಕೊಂಡು ಬಂದಿದ್ದು, ಇದೇ ವೇಳೆ ರೈತರ ಸಾಲಮನ್ನಾ ಮಾಡಿದ್ದರೂ ಸಹ ಋಣ ಪರಿಹಾರ ಕಾಯ್ದೆ ಮಾತ್ರ ಉಳಿಸಿಕೊಂಡು ಬಂದಿದ್ದರು, ಈ ಬಾರಿ ಅಧಿಕಾರ ಉಳಿಸಿಕೊಳ್ಳಲಾಗದು ಮತ್ತು ಯಾವಾಗ ಬೇಕಾದರೂ ಚುನಾವಣೆ ಬರಬಹುದು ಎಂದು ಮನಗಂಡ ಕುಮಾರಸ್ವಾಮಿ ಯವರು ರಾಷ್ಟ್ರಪತಿಗಳ ಅಂಕಿತದೊಂದಿಗೆ ಋಣ ಪರಿಹಾರ ಕಾಯ್ದೆ ಜಾರಿಗೆ ತಂದಿರುವುದು ಸ್ಪಷ್ಟವಾಗಿದೆ.


ಶೇಕಡಾ ೯೦ ಕ್ಕೂ ಹೆಚ್ಚು ಮಂದಿಗೆ ವರದಾನವಾದರೇ ಶೇಕಡಾ ೧೦ ಕ್ಕೂ ಕಡಿಮೆ ಮಂದಿಗೆ ನುಂಗಲಾರದ ತುತ್ತಾಗಿರುವುದು ವೇದ್ಯವಾಗುತ್ತಿದೆ.

ನಗರದಲ್ಲಿ ವ್ಯಾಪಾರ ಮಾಡುವ ಬಹುತೇಕ ಕಿರಾಣಿ, ಬೀದಿಬದಿ ಮತ್ತು ಇನ್ನಿತರೇ ಅಂಗಡಿಗಳವರು ದಿನ, ವಾರ ಮತ್ತು ತಿಂಗಳ ಕಂತು ಗಳಿಗೆ ಹಣ ಪಡೆದಿರುವವರೇ ಆಗಿದ್ದಾರೆ, ಇವರುಗಳು ಇಂದು ಕಟ್ಟುವುದಿಲ್ಲ ಎನ್ನುವುದಾದರೆ ಮುಂದಿನ ದಿನಗಳಲ್ಲಿ ಯಾರೂ ಹಣ ಕೊಡುವುದಿಲ್ಲ, ಅಂದ ಹಾಗೆ ಬೀದಿಬದಿ ವ್ಯಾಪಾರಿಗಳಿಗೆ ಜಾರಿಗೆ ಬಂದಿರುವ *ಬಡವರ ಬಂಧು ಮತ್ತು ಮುದ್ರಾ ಯೋಜನೆ* ಎಲ್ಲರಿಗೂ ದೊರೆತಿರದ ಕಾರಣ ಅವರು ಲೇವಾದೇವಿ ಗಾರರ ಅಡಿಯಾಳಾಗಲೇ ಬೇಕಿದೆ.


*ನಿಧಾನವಾಗಿಯಾದರೂ ತೀರಿಸುವ ಆಶಯದವರಿಗೆ ಸಂಕಟ*


ಈ ಕಾಯ್ದೆಯ ಉಪಯೋಗವನ್ನು ಕೇವಲ ಮೂರು ತಿಂಗಳೊಳಗೆ ಉಪಯೋಗಿಸಿಕೊಳ್ಳಬೇಕು, ಅಂದರೆ ತಮ್ಮ ವ್ಯಾಪ್ತಿಗೆ ಬರುವ *ಉಪವಿಭಾಗಾಧಿಕಾರಿ* ಕಛೇರಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ದೂರು ನೀಡಬೇಕು, ಅಧಿಕಾರಿಗಳು ತಾವು ಅಡಮಾನ ಇಟ್ಟಿರುವ ದಾಖಲೆಗಳನ್ನು ಲೇವಾದೇವಿ ಗಾರರಿಂದ ಹಿಂತಿರುಗಿಸಿ ಕೊಡುವುದರ ಜೊತೆಗೆ ಇನ್ನೆಂದೂ ಹಣ ವಾಪಸ್ಸು ಕೊಡದಂತೆ ಕಾನೂನು ಪ್ರಕಾರ ಬರೆಸಿಕೊಡಲಿದ್ದಾರೆ.


ತಮ್ಮ ಆತ್ಮೀಯ ಸ್ನೇಹಿತರು ಮತ್ತು ಹತ್ತಿರದ ಸಂಬಂಧಿಗಳಿಂದಲೇ ಸಾಲ ಪಡೆದಿರುವ ಅನೇಕ ಮಂದಿ ದೂರು ಕೊಡುವುದೋ ಅಥವಾ ಸುಮ್ಮನಿರುವುದೋ ತಿಳಿಯದೇ ಕಂಗಾಲಾಗಿರುವುದು ಸತ್ಯ ಸಂಗತಿ.

ಸಾಲಗಾರರು ಬಡ್ಡಿ ಸಮೇತ ಈಗಲೇ ಕೊಡಬೇಕೆಂದು ಹಠ ಹಿಡಿದಿರುವುದರಿಂದ ಹಾಗೂ ಸದ್ಯದಲ್ಲೇ ಅವರಿಗೆ ಹಣ ಕೊಡಲು ಸಾಧ್ಯವಾಗದಿರುವುದರಿಂದ ದೂರುಕೊಡುವುದೋ ಬೇಡವೋ ಎಂಬ ಜಿಜ್ಞಾಸೆ ಯಲ್ಲಿ ತೊಡಗಿದ್ದಾರೆ.


*ಈರ್ವರೂ ಧರ್ಮ ಸಂಕಷ್ಟ ದಲ್ಲಿ*


ಹಣ ಕೊಟ್ಟಿರುವವರು ದೂರು ನೀಡಿದರೇ ಹಣ ಕಳೆದುಕೊಳ್ಳಬೇಕಲ್ಲ ಎಂದು ಪರಿತಪಿಸುತ್ತಿದ್ದರೆ, ಹಣ ಪಡೆದವರು ಸಕಾಲದಲ್ಲಿ ಹಣ ಕೊಡಲಾಗದಿರುವುದರಿಂದ ಸ್ನೇಹ ಸಂಬಂಧ ಗಳು ಹಳಸುವುದರ ಜೊತೆಗೆ ಮುಂದಿನ ಕಷ್ಟಕಾಲದಲ್ಲಿ ಯಾರೂ ಆಗುವುದಿಲ್ಲ ಎಂಬುದರ ಮನವರಿಕೆಯಿಂದ ಈ ಮೂರು ತಿಂಗಳೊಳಗೆ ದೂರು ನೀಡುವುದೋ ಬೇಡವೋ ಎಂದು ಮರುಗುತ್ತಿರುವುದು ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ.


*ಸರ್ಕಾರ ಏನು ಮಾಡಬಹುದಿತ್ತು*


ಹೆಚ್ಚು ಮೌಲ್ಯದ ಅಡಮಾನ, ಹೆಚ್ಚು ಬಡ್ಡಿ ಪಡೆದು ಕಡಿಮೆ ಸಾಲ ಕೊಟ್ಟಿರುವ ವ್ಯವಹಾರಗಾರರಿಗೆ ಈ ಕಾನೂನು ಜಾರಿ ಮಾಡಿ, ನ್ಯಾಯ ಸಮ್ಮತ ವ್ಯವಹಾರದವರಿಗೆ ಬಡ್ಡಿ ರಹಿತ (ಎಷ್ಟು ವರ್ಷ ಬಡ್ಡಿ ಕಟ್ಟಿದ್ದಾರೆ ಎಂಬುದನ್ನು ಆಧರಿಸಿ) ಅವರು ನಡೆಸಿರುವ ಒಟ್ಟು ವಹಿವಾಟಿನ ಲೆಕ್ಕ ಪಡೆದು ತೆರಿಗೆ ಮುರಿದುಕೊಂಡು ಮಿಕ್ಕ ಹಣವನ್ನು ಹಂತ ಹಂತವಾಗಿ ಸರ್ಕಾರವೇ ತೀರಿಸುವುದು ಅಥವಾ ಈ ಮೇಲಿನ ವಿಚಾರಣೆಯ ನಂತರ ಸಾಲಗಾರರೇ ಹಂತಹಂತವಾಗಿ ತೀರಿಸುವಂತಹ ಕಾನೂನು ಜಾರಿಗೊಳಿಸಿದರೆ ಈರ್ವರಿಗೂ ಸಮಾಧಾನ ಇರುತಿತ್ತು.


*ಬಗೆಹರಿಯದ ಗೊಂದಲ, ಬೇಗ ಬಗೆಹರಿಸಲಿ*


ಸಾಲ ಕೊಟ್ಟವರು ಮತ್ತು ಪಡೆದಿರುವವರು ಇಬ್ಬರೂ ಕಾಯ್ದೆ ಬಗ್ಗೆ ಗೊಂದಲ ಹೊಂದಿರುವುದರ ಜೊತೆಗೆ ನೂತನ ಮುಖ್ಯಮಂತ್ರಿ ಯಡಿಯೂರಪ್ಪ ನವರು ಏನು ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾಯುತಿದ್ದಾರೆ, ಕಾನೂನು ಬದ್ದವಾಗಿ ಸಾಲ ಕೊಟ್ಟಿರುವ ಲೇವಾದೇವಿಗಾರರು ಕೋಟ್೯ ಮೊರೆ ಹೋಗುವುದಾಗಿ ಹೇಳಿಕೆ ನೀಡಿದ್ದಾರೆ, ಸಂಬಂಧಿಸಿದ ಅಧಿಕಾರಿಗಳು ಈ ಕಾಯ್ದೆ ಯ ಬಗ್ಗೆ ಸರಳವಾಗಿ ಉತ್ತರಿಸಿ ಗೊಂದಲ ಪರಿಹರಿಸುವುದರ ಜೊತೆಗೆ ಈರ್ವರಿಗೂ ನ್ಯಾಯ ಒದಗಿಸಿಕೊಡಬೇಕಾಗಿದೆ.


(ಈ ಹಿಂದೆ ಬಹುತೇಕ ಸಾಲಗಾರರೆಲ್ಲರೂ ಅಂದು ನಮ್ಮ ಕಷ್ಟಕ್ಕೆ ಕೊಟ್ಟಿದ್ದಾರೆ, ನಾವು ವಾಪಸ್ಸು ಮಾಡುತ್ತೇವೆ ಯಾವ ಕಾನೂನು ನಮಗೆ ಬೇಡ ಎಂದೇಳುತ್ತುದ್ದವರೆಲ್ಲರೂ ಋಣಮುಕ್ತ ಅರ್ಜಿ ಪಡೆಯಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದು.....!!!!!?????.)




ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑