ಮಕ್ಕಳ ಸ್ವಾಸ್ಥ್ಯ ಕಾಪಾಡುವುದು ನಮ್ಮೆಲ್ಲರ ಹೊಣೆ ತಹಶಿಲ್ದಾರ್ ಸುದರ್ಶನ್
ಚನ್ನಪಟ್ಟಣ: ಇಂದಿನ ಮಕ್ಕಳ ಆರೋಗ್ಯ ಕಾಪಾಡುವುದು ಆರೋಗ್ಯ ಇಲಾಖೆಗೆ ಒಂದು ಸವಾಲಾಗಿದೆ, ಅನೈರ್ಮಲ್ಯ ತೊಲಗಿಸುವ ಮೂಲಕ ಪೋಷಕರು ಹಾಗೂ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡುವ ಮೂಲಕ ಆರೋಗ್ಯ ಇಲಾಖೆಯವರು ಕೆಲಸ ಮಾಡಿದರೆ ಶಿಶುಗಳ ಆರೋಗ್ಯ ಕಾಪಾಡುವ ಮೂಲಕ ಸದೃಢ ಯುವ ಪಡೆಯನ್ನು ಕಟ್ಟಬಹುದು ಎಂದು ತಾಲ್ಲೂಕು ದಂಡಾಧಿಕಾರಿ ಸುದರ್ಶನ್ ಅಭಿಪ್ರಾಯಪಟ್ಟರು.
ಅವರು ಇಂದು ತಾಲ್ಲೂಕು ಕಛೇರಿಯ ನ್ಯಾಯಾಲಯ ಸಭಾಂಗಣದಲ್ಲಿ ತಾಲ್ಲೂಕು ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ *ಜಂತು ಹುಳು ನಿವಾರಣೆ* ಕಾರ್ಯಕ್ರಮದಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
ಆರೋಗ್ಯ ಇಲಾಖೆಯ ಜೊತೆಗೆ ಸಂಬಂಧಿಸಿದ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೈ ಜೋಡಿಸಿ ಇದೇ ತಿಂಗಳ ೨೫ ಹಾಗೂ ೩೦ ನೇ ತಾರೀಖಿನಂದು ಎಲ್ಲಾ ಶಾಲಾ ಮಕ್ಕಳಿಗೂ ಜಂತು ಹುಳು ನಿವಾರಣೆ ಮಾತ್ರೆ ನುಂಗಿಸುವುದರ ಮೂಲಕ ಅವರ ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ ಕೆ ಪಿ ರಾಜು ರವರು ಮಾತನಾಡಿ ತಾಲೂಕಿನಾದ್ಯಂತ *೪೦,೪೭೦* ಮಕ್ಕಳಿದ್ದು *ಒಂದರಿಂದ ಎರಡು ವರ್ಷದೊಳಗಿನ ೪,೩೬೦, ಎರಡು ವರ್ಷದಿಂದ ಆರು ವರ್ಷದೊಳಗಿನ ೮,೫೦೦ ಹಾಗೂ ಆರು ವರ್ಷದಿಂದ ಹತ್ತೊಂಬತ್ತನೆಯ ವರ್ಷದೊಳಗಿನ ೧೪,೫೦೫ ಮಕ್ಕಳು ಮತ್ತು ಮಿಕ್ಕ ಮಕ್ಕಳು ವಿದ್ಯಾರ್ಥಿ ನಿಲಯದಲ್ಲಿದ್ದು* ಆ ಎಲ್ಲಾ ಮಕ್ಕಳಿಗೂ ತಪ್ಪದೇ ಸೆಪ್ಟೆಂಬರ್ ೨೫ ನೇ ತಾರೀಖಿನಂದು ಅಂದು ಬಾರದಿದ್ದ ಮಕ್ಕಳಿಗೆ ಸೆಪ್ಟೆಂಬರ್ ೩೦ ನೇ ತಾರೀಖಿನಂದು ಮಾತ್ರೆಗಳನ್ನು ನೀಡಬೇಕು ಎಂದರು.
*ಬಯಲು ಬಹಿರ್ದೆಸೆಗೆ ಹೋಗುವವರಲ್ಲೇ ಹೆಚ್ಚು ಕೊಕ್ಕೆ ಹುಳುಗಳು ಹೊಟ್ಟೆ ಸೇರುತ್ತವೆ, ಭೂಮಿಯಲ್ಲಿ ಹುಳುಗಳು ಇಟ್ಟಿರುವ ಮೊಟ್ಟೆಗಳು ಮನುಷ್ಯನ ಬಿರುಕು ಬಿಟ್ಟ ಪಾದದ ಮೂಲಕ ಸೇರ್ಪಡೆಯಾಗಿ ರಕ್ತ ನಾಳ ಸೇರಿ ನಂತರ ಜಠರ ಸೇರಿ ದೊಡ್ಡ ಗಾತ್ರದಲ್ಲಿ ಬೆಳೆದು ತಿನ್ನುವ ಪೌಷ್ಟಿಕ ಆಹಾರವನ್ನು ತಿನ್ನುವ ಮೂಲಕ ಮಕ್ಕಳಲ್ಲಿ ಅಪೌಷ್ಟಿಕತೆ ಕೊರತೆ ಉಂಟಾಗುತ್ತದೆ ಹಾಗಾಗಿ ಬಯಲು ಬಹಿರ್ದೆಸೆ ಹಲವು ಅನಾರೋಗ್ಯಕ್ಕೆ ಎಡೆ ಮಾಡಿಕೊಡುತ್ತದೆ*
ಒಂದು ವರ್ಷದಿಂದ ಎರಡು ವರ್ಷದೊಳಗಿನ ಮಕ್ಕಳಿಗೆ ೨೦೦ ಮಿಲಿ ಗ್ರಾಂ, ಹಾಗೂ ಎರಡರಿಂದ ಹತ್ತೊಂಭತ್ತು ವರ್ಷದೊಳಗಿನ ಎಲ್ಲರಿಗೂ ೪೦೦ ಮಿಲಿ ಗ್ರಾಂ ಮಾತ್ರೆ ನೀಡಬೇಕು, ಯಾವುದಾದರೂ ತೀವ್ರ ತರದ ಖಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಮಾತ್ರೆ ನೀಡಬಾರದು, ಈ ಮಾತ್ರೆ ನುಂಗುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಬೀರುವುದಿಲ್ಲ, ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ ಪೋಷಕರು, ಶಾಲಾ ಶಿಕ್ಷಕರು ತಿಳುವಳಿಕೆ ನೀಡಬೇಕು ಎಂದರು.
ಆರೋಗ್ಯ ಇಲಾಖೆಯ ಜೊತೆ ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯವರು ಮತ್ತು ಇನ್ನಿತರ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಇದೇ ವೇಳೆ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಮತ್ತು ಕೋಟ್ಪಾ ೨೦೦೩ ಕಾಯ್ದೆ ಪರಿಣಾಮಕಾರಿ ಅನುಷ್ಠಾನ ಕುರಿತು ಚರ್ಚೆ ನಡೆಯಿತು.
ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಇಲಾಖೆಯ ಕಾಂತರಾಜು, ಸಮಾಜ ಕಲ್ಯಾಣ ಇಲಾಖೆಯ ಕಿರಣಕುಮಾರ್, ಆರೋಗ್ಯ ಇಲಾಖೆಯ ದಕ್ಷಿಣಾಮೂರ್ತಿ, ಎನ್ ಡಿ ಡಿ ಯ ಸುಷ್ಮಾ, ಶಿಕ್ಷಣ ಇಲಾಖೆಯ ನರಸಿಂಹಯ್ಯ, ಹಿಂದುಳಿದ ವರ್ಗ ಇಲಾಖೆಯ ಕುಮಾರ್, ನಗರಸಭೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಇಲಾಖೆ ಸೇರಿದಂತೆ ಅನೇಕ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು