ರೈತರ ಏಳ್ಗೇಗಾಗಿ ಕೃಷಿ ಅಭಿಯಾನ ಕೆವಿಕೆ ಯ ಪ್ರೀತು
ಚನ್ನಪಟ್ಟಣ: ರೈತ ಬೆಳೆಯುವ ಎಲ್ಲಾ ಬೆಳೆಗೂ ಕೃಷಿ ಇಲಾಖೆಯ ಸಹಾಯ ಮತ್ತು ಮಾಹಿತಿ ಪಡೆದು ವ್ಯವಸಾಯ ಮಾಡಿದರೆ ರೈತನ ಬದುಕು ಉಜ್ವಲವಾಗುತ್ತದೆ, ರೈತರಿಗಾಗಿ ಹಲವಾರು ಸಂಶೋಧನೆಗಳು ನಡೆದು ಹೊಸ ಮಾದರಿ ತಳಿಯ ಬೀಜೋತ್ಪನ್ನಗಳಿದ್ದು ಯಾವ ಸಮಯದಲ್ಲಿ ಎಷ್ಟು ? ಹೇಗೆ ಬಿತ್ತನೆ ಮಾಡಬೇಕೆಂದು ತಿಳಿದು ಕೃಷಿ ಮಾಡಿದರೆ ಎಲ್ಲಾ ಉದ್ಯೋಗಿಗಳಂತೆ ರೈತರು ಮುಂಚೂಣಿಗೆ ಬರಬಹುದು ಎಂದು ಮಾಗಡಿ ಕೆವಿಕೆ ಯ ಸಹಾಯಕ ಪ್ರಾಧ್ಯಾಪಕಿ ಪ್ರೀತು ರವರು ತಿಳಿಸಿದರು.
ಅವರು ದೊಡ್ಡ ಮಳೂರು ಗ್ರಾಮದ ಸಾಯಿ ಮಂದಿರದಲ್ಲಿ ಇಂದು ಇಲಾಖೆಯ ವತಿಯಿಂದ ಆಯೋಜಿಸಿದ ಕೃಷಿ ಅಭಿಯಾನ ೨೦೧೯ ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರಿಗೆ ಮಾಹಿತಿ ನೀಡಿದರು.
ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಮಾತನಾಡಿ ರೇಷ್ಮೆ ಕೃಷಿಗೆ ಸಂಬಂಧಿಸಿದಂತೆ ಇಲಾಖೆಯಲ್ಲಿ ಉನ್ನತ ಮಾಹಿತಿ ಇದ್ದು ರೇಷ್ಮೆ ಕೃಷಿಕರು ಪಡೆದುಕೊಳ್ಳಬೇಕು, ಸೋಲಾರ್ ದೀಪ ಸೇರಿದಂತೆ ಅನೇಕ ಸಲಕರಣೆಗಳಿದ್ದು ಸೂಕ್ತ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿ ಪಡೆದುಕೊಳ್ಳಿ ಎಂದರು.
ಮೀನುಗಾರಿಕೆ ಇಲಾಖೆಯ ಯೋಗಾನಂದ ಮಾತನಾಡಿ ಮೀನುಗಾರರಿಗೆ ದೋಣಿ, ಬಲೆ, ಹೊಂಡ ಇತ್ಯಾದಿಗಳಿಗೆ ಸಹಾಯಧನ ದೊರೆಯಲಿದ್ದು ಮೀನುಗಾರಿಕೆ ನಡೆಸುವವರು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಕೃಷಿ ಸಮಾಜದ ಅಧ್ಯಕ್ಷ ಬಸವೇಗೌಡ ಮಾತನಾಡಿ ಕೃಷಿ ಇಲಾಖೆಯಲ್ಲಿ ಹಲವು ಸವಲತ್ತುಗಳಿದ್ದು ರೈತರು ನೇರವಾಗಿ ಬಂದು ಉಪಯೋಗಿಸಿಕೊಳ್ಳಬೇಕು. ಈ ರೀತಿಯ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಂಡರೆ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.
ರೈತರಿಗೆ ಅನುಕೂಲವಾಗುವಂತೆ ಅನೇಕ ಕಂಪೆನಿಗಳು ಮತ್ತು ಏಜೆನ್ಸಿಗಳು ರೈತೋಪಯೋಗಿ ಬೀಜಗಳು ಮತ್ತು ಸಲಕರಣೆಗಳ ಅಂಗಡಿಗಳನ್ನು ತೆರೆದು ಮಾಹಿತಿ ನೀಡಿದರು.
*ಪರ್ಯಾಯ ಬೆಳೆ ಪದ್ದತಿ, ಬರ ಪರಿಸ್ಥಿತಿಗನುಗುಣವಾಗಿ ಬೇಸಾಯ, ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ, ಮಳೆಯಾಶ್ರಿತ ರೈತರ ಅಭಿವೃದ್ಧಿಗೆ ಕೃಷಿ ಭಾಗ್ಯ, ಆಹಾರ ಮತ್ತು ಪೌಷ್ಟಿಕಾಂಶದ ಸುಭದ್ರತೆಗಾಗಿ ಸಿರಿಧಾನ್ಯಗಳು, ರೈತ ಸಿರಿ ಯೋಜನೆ, ರಾಗಿಯಲ್ಲಿ ಯಾಂತ್ರಿಕೃತ ಬೇಸಾಯ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ರೈತಮಿತ್ರ, ತಾಲ್ಲೂಕು, ಜಿಲ್ಲಾ ಪಂಚಾಯತಿ ಮತ್ತು ರಾಜ್ಯ ವಲಯಗಳ ಯೋಜನೆ, ಕೇಂದ್ರ ಪುರಸ್ಕೃತ ಯೋಜನೆ ಹಾಗೂ Fruits ಮತ್ತು K-Kisan ತಂತ್ರಾಂಶಗಳ ಬಗ್ಗೆ ಅಧಿಕಾರಿಗಳು ಮತ್ತು ರೈತರು ಸಂವಾದ ನಡೆಸಿದರು*
ಕಾರ್ಯಕ್ರಮದಲ್ಲಿ ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕಿ ಅಪರ್ಣಾ, ಅರಣ್ಯ ಇಲಾಖೆಯ ಶ್ರೀಧರ್ ಮಳೂರು, ಮಾಕಳಿ ಚಕ್ಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷರುಗಳು, ತಾಲ್ಲೂಕು ಪಂಚಾಯತಿ ಸದಸ್ಯ ಪ್ರಭು, ಎಪಿಎಂಸಿ ನಿರ್ದೇಶಕ ಎಂ ಡಿ ಕುಮಾರ್, ಜಂಟಿ ಕೃಷಿ ನಿರ್ದೇಶಕ ರವಿ, ಕೆವಿಕೆ ಯ ಸಹಾಯಕ ಪ್ರಾಧ್ಯಾಪಕಿ ಪ್ರೀತು ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು