ಮನೆಗೆ ನುಗ್ಗಿದ ಮಳೆ ನೀರು ಕುಮಾರಸ್ವಾಮಿ ಭೇಟಿ, ೫,೦೦೦ ರೂ ಪರಿಹಾರ ಘೋಷಣೆ
ಚನ್ನಪಟ್ಟಣ: ಕಳೆದ ಎರಡು ದಿನದಿಂದ ಸುರಿದ ಮಳೆಯಿಂದಾಗಿ ಜಲಾವೃತಗೊಂಡಿದ್ದ ಬೀಡಿ ಕಾರ್ಮಿಕರ ಕಾಲೋನಿ, ಎಪಿಎಂಸಿ ಆವರಣದಲ್ಲಿರುವ ವಸತಿಗಳಿಗೆ ಭೇಟಿ ನೀಡಿದ ಶಾಸಕ ಹೆಚ್ ಡಿ ಕುಮಾರಸ್ವಾಮಿ ಯವರು ಪ್ರತಿ ಕುಟುಂಬಕ್ಕೆ ವೈಯುಕ್ತಿಕ ಪರಿಹಾರವಾಗಿ ತಲಾ ೫,೦೦೦ ರೂಪಾಯಿಗಳನ್ನು ಕೊಡುವುದಾಗಿ ಭರವಸೆ ನೀಡಿದರು.
ಎಪಿಎಂಸಿ ಬಳಿ ಇರುವ ಮನೆಗಳಿಗೆ ಮೊದಲು ನಂತರ ಸಾತನೂರು ರಸ್ತೆ ಬಳಿ ಇರುವ ಬೀಡಿ ಕಾರ್ಮಿಕರ ಕಾಲೋನಿಯ ಜಲಾವೃತ ಮನೆಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದ ನಂತರ ಪರಿಹಾರ ಘೋಷಿಸಿದರು, ಈ ಸಂಬಂಧ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಿ ವರದಿ ತಯಾರಿಸಿದ ನಂತರ ಸರ್ಕಾರದಿಂದಲೂ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು ಎಂದರು.
*ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಹೆಚ್ಡಿಕೆ*
ಸಿದ್ದರಾಮಯ್ಯ ನಿಂದ ನಾನು ಕಲಿಯಬೇಕಾದ್ದು ಏನೂ ಇಲ್ಲ, ಅವರಿಗೆ ಕಾಂಗ್ರೆಸ್ ಬಿಟ್ಟು ಪರ್ಯಾಯವಿಲ್ಲ, ಸಾಮಥ್ರ್ಯ ಇದ್ದರೆ ಒಂದು ಪ್ರಾದೇಶಿಕ ಪಕ್ಷ ಕಟ್ಟಿ ಬೆಳೆಸಲಿ ಎಂದು ಸವಾಲು ಹಾಕಿದರು. ಜೆಡಿಎಸ್ ಮುಳುಗಿಸಲು ಸಾಧ್ಯವಾಗದ್ದರಿಂದ ಕಾಂಗ್ರೆಸ್ ಪಕ್ಷ ಮುಳುಗಿಸಲು ಬಂದಿದ್ದಾರೆ, ಕಾಂಗ್ರೆಸ್ ನ ಅವನತಿಗೆ ಅವರೇ ಕಾರಣ. ನನ್ನ ಸರ್ಕಾರ ಬೀಳಲು ಅವರೇ ಕಾರಣ, ಲೋಕಸಭಾ ಚುನಾವಣೆಯ ನಂತರ ಒಂದು ಸೆಕೆಂಡ್ ಸಹ ಸರ್ಕಾರ ಇರಲು ಬಿಡುವುದಿಲ್ಲ ಎಂದಿದ್ದರು ಹಾಗೆ ನಡೆದುಕೊಂಡಿದ್ದಾರೆ ಎಂದರು.
*ನೀನೆ ಸಾಕಿದ ಗಿಣಿ*
ನೀನೆ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಲ್ಲೋ ಎಂಬ ಸಿನಿಮಾ ಹಾಡನ್ನು ಉಲ್ಲೇಖಿಸಿದ ಅವರು ದೇವೇಗೌಡರು ಸಿದ್ದರಾಮಯ್ಯ ನಂತಹ ನೂರಾರು ನಾಯಕರನ್ನು ಬೆಳೆಸಿದ್ದಾರೆ, ಅನೇಕ ನಾಯಕರು ಕುಕ್ಕಿ ಹೋಗಿದ್ದಾರೆ. ಸಿದ್ದರಾಮಯ್ಯ ನು ಇವರಲ್ಲೊಬ್ಬರು ಎಂದು ಕುಟುಕಿದರು. ಅವರು
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನ್ಯಾಷನಲ್ ಕಾಲೇಜು ಪಾರ್ಕಿನಲ್ಲಿ ಆಯೋಜಿಸಿದ್ದ ಸಭೆಗೆ ಹಣ ಹಾಕಿದ್ದು, ಜನ ಕರೆ ತಂದಿದ್ದು ನಾನು ಯಾವುದೋ ಒಂದು ಬ್ಯಾನರ್ ನಲ್ಲಿ ಪೋಟೋ ಇಲ್ಲ ಎಂಬ ಕಾರಣಕ್ಕಾಗಿ ಸಭೆಗೆ ಬರಲು ಚಂಡಿಚಾಮುಂಡಿಯಾಗಿ ವರ್ತಿಸಿದ್ದರು ಎಂದು ಕಿಡಿ ಕಾರಿದರು.
*ಯಾರೂ ಕರೆದಿಲ್ಲ ನಾನೇ ಬಂದಿದ್ದೇನೆ*
ದೇವೇಗೌಡರಿಗೂ ಹೇಳಿದ್ದೋ ಎಂದು ಮಾತನಾಡಲು ಪ್ರಯತ್ನಿಸುತ್ತಿದ್ದ ಮುಸ್ಲಿಂ ಸಮುದಾಯದ ಮುಖಂಡರೊಬ್ಬರ ಮಾತನ್ನು ತುಂಡರಿಸಿದ ಅವರು ನನಗೆ ಯಾರೂ ಇಲ್ಲಿ ಕರೆದಿಲ್ಲ, ನಾನೇ ಬಂದಿದ್ದೇನೆ, ಸುಮ್ಮನೆ ಭಾಷಣ ಬಿಗಿಯಬೇಡಿ ಎಂದು ತುಸು ಕೋಪದಿಂದ ನುಡಿದರು.
ನಂತರ ಇಗ್ಗಲೂರು ಡ್ಯಾಂ ಗೆ ಭೇಟಿ ನೀಡಿದ ಅವರು ಮುಚ್ಚಿದ ಗೇಟೊಂದನ್ನು ತೆಗೆಸಿ ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಿದ ನಂತರ ಮುಚ್ಚಿ ಹೋಗಿದ್ದ ದೇವಾಲಯವನ್ನು ಕಂಡ ಭಕ್ತಾದಿಗಳು ಮತ್ತು ತೋಟಗಳ ಮಾಲೀಕರು ನಿರಾಳರಾದರು.
ಕುಮಾರಸ್ವಾಮಿ ಯವರ ಜೊತೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜಯಮುತ್ತು, ನಗರ ಘಟಕದ ಅಧ್ಯಕ್ಷ ರಾಂಪುರ ರಾಜಣ್ಣ, ಬಿಳಿಯಪ್ಪ, ಮುಸ್ಲಿಂ ಸಮುದಾಯದ ಮುಖಂಡರು ಸೇರಿದಂತೆ ಅನೇಕ ನಾಯಕರು ಮತ್ತು ಅಧಿಕಾರಿಗಳು ಜೊತೆಯಲ್ಲಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು