ಮೂಢನಂಬಿಕೆ ಬಿಟ್ಟು ಜಾನುವಾರುಗಳಿಗೆ ಲಸಿಕೆ ಹಾಕಿಸಿ ಹರೂರು ರಾಜಣ್ಣ
ಚನ್ನಪಟ್ಟಣ: ಜಾನುವಾರುಗಳಿಗೆ ತಗಲುವ ಸಾಂಕ್ರಾಮಿಕ ರೋಗಗಳಲ್ಲಿ ಕಾಲುಬಾಯಿ ಜ್ವರವೂ ಒಂದಾಗಿದ್ದು ಮೂಢನಂಬಿಕೆ ಬಿಟ್ಟು ಲಸಿಕೆ ಹಾಕಿಸುವ ಮೂಲಕ ಆರೋಗ್ಯ ಕಾಪಾಡಬೇಕು ಎಂದು ತಾಲ್ಲೂಕು ಪಂಚಾಯತಿ ಅಧ್ಯಕ್ಷ ಹರೂರು ರಾಜಣ್ಣ ತಿಳಿಸಿದರು.
ಅವರು ತಾಲ್ಲೂಕಿನ ಬೇವೂರು ಗ್ರಾಮದಲ್ಲಿ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ಹಾಗೂ ಬೆಂಗಳೂರು ಹಾಲು ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ೧೬ ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು ಒಗ್ಗೂಡಿ ಜಾನುವಾರುಗಳಿಗೆ ತಗಲುವ ಸಾಂಕ್ರಾಮಿಕ ರೋಗಗಳನ್ನು ನಿರ್ಮೂಲನೆ ಮಾಡಲು ಅನೇಕ ಯೋಜನೆಗಳನ್ನು ರೂಪಿಸಿವೆ, ಇದುವರೆಗೂ ೧೫ ಸುತ್ತು ಲಸಿಕೆ ಹಾಕಲಾಗಿದ್ದು ಯಾವುದೇ ರೀತಿಯ ತೊಂದರೆಯಾಗಿಲ್ಲ, ೧೬ ನೇ ಸುತ್ತಿನಲ್ಲಿ ಹಾಕಲಾಗುತ್ತಿರುವ ಲಸಿಕೆಯನ್ನು ಯಾವುದೇ ರೀತಿಯ ತಪ್ಪು ಮಾಹಿತಿಗಳಿಗೆ ಕಿವಿಗೊಡದೆ ಹಾಕಿಸಬೇಕೆಂದು ಹೈನೋದ್ಯಮ ರೈತರಿಗೆ ಮನವಿ ಮಾಡಿದರು.
ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ ಜಯರಾಮ್ ಮಾತನಾಡಿ ತಾಲ್ಲೂಕಿನಲ್ಲಿ ಇದುವರೆಗೂ ಯಾವುದೇ ಜಾನುವಾರಗಳಲ್ಲಿ ರೋಗೋದ್ರೇಕ ಕಂಡುಬಂದಿಲ್ಲ, ಲಸಿಕೆ ಹಾಕಿಸುವುದರಿಂದ ಯಾವುದೇ ಅಡ್ಡಪರಿಣಾಮಗಳು ಆಗುವುದಿಲ್ಲ, ಶೇಕಡಾ ನೂರರಷ್ಟು ಲಸಿಕೆ ಹಾಕಿಸಿದರೆ ಮಾತ್ರ ಜಾನುವಾರುಗಳ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸಾಧ್ಯ ಹಾಗೂ ದೇಶದಲ್ಲಿ ಹೈನೋದ್ಯಮ ಬೆಳೆಯಲು ಸಹಕಾರಿಯಾಗುತ್ತದೆ. ಇದಕ್ಕೆ ರೈತರ ಸಹಕಾರ ಅತ್ಯವಶ್ಯಕ ಎಂದು ಅಭಿಪ್ರಾಯ ಪಟ್ಟರು.
ಪ್ರತಿನಿತ್ಯವೂ ಆರು ಜನರ ಆರು ತಂಡಗಳು ಇಪ್ಪತ್ತು ಗ್ರಾಮಗಳಿಗೆ ತೆರಳಿ ಮನೆಯ ಬಳಿಯೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಾಕಿಕೊಂಡಿದ್ದು ತಾವು ಸಾಕಿರುವ ಹಸು, ಎಮ್ಮೆ ಮತ್ತು ಹಂದಿಗಳಿಗೆ ತಪ್ಪದೇ ಲಸಿಕೆ ಹಾಕಿಸಬೇಕೆಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮುಖಂಡ ತಿಮ್ಮಪ್ಪ ರಾಜು, ಬೆಂಗಳೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ ಪ್ರಕಾಶ್, ಚಂದ್ರಪ್ಪ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ ರಾಜಶೇಖರ ರೆಡ್ಡಿ, ಡಾ ಆಲಿಜಾನ್ ಸಾಹೇಬ್, ಬೇವೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಎನ್ ಭಾಗ್ಯಮ್ಮ, ಕಾರ್ಯದರ್ಶಿ ಬಿ ಕೆ ರಾಮಯ್ಯ ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು