ದೊಡ್ಡನಹಳ್ಳಿ ಸರ್ಕಾರಿ ಶಾಲಾ ಜಾಗ ಒತ್ತುವರಿ ತೆರವುಗೊಳಿಸಿಕೊಡಲು ತಹಶಿಲ್ದಾರ್ ರವರಿಗೆ ಮನವಿ
ಚನ್ನಪಟ್ಟಣ: ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವ ಪೋಷಕರು, ಮಕ್ಕಳಿಲ್ಲದೆ ಬಾಗಿಲು ಮುಚ್ಚುತ್ತಿರುವ ಸರ್ಕಾರಿ ಶಾಲೆಗಳು ಅನೇಕ, ಇವುಗಳ ನಡುವೆ ಶಾಲೆ ಇರುವ ಜಾಗವನ್ನು ಒತ್ತುವರಿ ಮಾಡಿಕೊಂಡು ದರ್ಪ ಮೆರೆಯುವ ಹಾಗೂ ಅವರಿಗೆ ಸಾಥ್ ನೀಡುವ ಕೆಲ ಅಧಿಕಾರಿ ವರ್ಗ ! ಇಂಥದ್ದೇ ಒಂದು ಭೂ ಕಬಳಿಕೆ ತಾಲ್ಲೂಕಿನ ದೊಡ್ಡನಹಳ್ಳಿಯಲ್ಲಿ ನಡೆದಿದೆ ಎಂದು ರೈತ ಮುಖಂಡ ಪಾರ್ಥಸಾರಥಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಉಮೇಶ್ ಮತ್ತು ಮುಖ್ಯೋಪಾಧ್ಯಾಯ ಗಜಾನನ ರವರು ದೂರಿದ್ದಾರೆ.
ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಒಟ್ಟು ಜಾಗ ಸರ್ವೇ ನಂಬರ್ ೫೭ ರ ಪ್ರಕಾರ ೨೯ ಗುಂಟೆ ಸರ್ಕಾರಿ ತೋಪು ಖರಾಬು ಎಂದು ಗೇಣಿ ಮತ್ತು ಪಹಣಿ ಪತ್ರದಲ್ಲಿ ಇಂದಿಗೂ ಬರುತ್ತಿದೆಯಾದರೂ ಇರುವುದು ಕೇವಲ ೭ ರಿಂದ ೮ ಗುಂಟೆ ಮಾತ್ರ.
ಈ ಹಿಂದೆ ಚನ್ನಪಟ್ಟಣ ದ ಭೂ ಮಾಪನ ಇಲಾಖೆಗೆ ಅರ್ಜಿ ಸಲ್ಲಿಸಿದ ನಂತರ ಅಧಿಕಾರಿಗಳು ಬಂದು ಅಳತೆ ಮಾಡಿದರಾದರು ರಸ್ತೆಗೆ ಒತ್ತುವರಿಯಾಗಿದೆ ಎಂದು ತಿಳಿಸಿದರು. ವಾಸ್ತವವಾಗಿ ರಸ್ತೆಯು ಮೊದಲೇ ಇದ್ದು ಬಲಾಢ್ಯರ ಒತ್ತಡಕ್ಕೆ ಮಣಿದು ಸುಳ್ಳು ಹೇಳಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.
ಈಗಾಗಲೇ ತಾಲ್ಲೂಕು ದಂಡಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರ ಸಹಿ ಸಮೇತ ಲಿಖಿತ ದೂರು ಸಲ್ಲಿಸಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ.
ನೂತನ ತಹಶಿಲ್ದಾರ್ ರವರು ಖುದ್ದು ಭೇಟಿ ನೀಡಿ ಅಳತೆ ಮಾಡಿಸಿ ಒತ್ತುವರಿ ತೆರವು ಮಾಡಿ ಸರ್ಕಾರಿ ಶಾಲಾ ಮಕ್ಕಳಿಗೆ ನ್ಯಾಯ ಒದಗಿಸಬೇಕೆಂದು ಪತ್ರಿಕೆಯ ಮೂಲಕ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು