ಬಂಪರ್ ಬೆಳೆಯತ್ತ ರಾಗಿ ರೈತನ ಮೊಗದಲ್ಲಿ ಮಂದಹಾಸ
ಚನ್ನಪಟ್ಟಣ: ಈ ಬಾರಿ ಕಾಲಕಾಲಕ್ಕೆ ಸರಿಯಾಗಿ ಬಿದ್ದ ಮಳೆಯಿಂದಾಗಿ ಜಿಲ್ಲಾದ್ಯಂತ ಬಿತ್ತಿರುವ ರಾಗಿ ಚನ್ನಾಗಿ ಬೆಳೆದಿದ್ದು ರೈತರ ಮೊಗದಲ್ಲಿ ಸಂತಸ ಎದ್ದು ಕಾಣುತ್ತಿದೆ.
ಕೆಲ ರೈತರು ನೇರವಾಗಿ ರಾಗಿ ಬಿತ್ತಿದ್ದು ಕೆಲವರು ಪೈರು ಬೆಳೆದು ನಾಟಿ ಮಾಡಿದ್ದರು, ಎರಡು ಬೆಳೆಯೂ ಚನ್ನಾಗಿ ಬಂದಿದ್ದು ಕೆಲವೇ ದಿನಗಳಲ್ಲಿ ಕಟಾವಿಗೆ ಬರಲಿದೆ.
ಕಳೆದ ಸಾಲುಗಳಲ್ಲಿ ಸರಿಯಾದ ಸಮಯಕ್ಕೆ ಮಳೆ ಬಾರದೆ ಮೊಳಕೆಯಲ್ಲೇ ಒಣಗಿದರೇ ಕೆಲ ವರ್ಷಗಳು ತೆನೆಗಟ್ಟುವ ಸಮಯದಲ್ಲಿ ಮಳೆ ಬಾರದೆ ಒಣಗಿ ಹೋಗಿದ್ದವು. ಈ ಸಾಲಿನಲ್ಲಿ ಇನ್ನುಮುಂದೆ ಶೇಕಡಾ ೯೦ ರಷ್ಟು ಬೆಳೆಯೂ ಮಳೆ ಬಾರದಿದ್ದರೂ ಬೆಳೆ ಕೈಗೆ ಬರುತ್ತದೆ ಎಂಬುದು ಸದಾ ಕಷ್ಟದಲ್ಲೇ ಇರುವ ರೈತನ ಮೊಗದಲ್ಲಿ ಮಂದಹಾಸ ಮೂಡಲು ಕಾರಣವಾಗಿದೆ.
ಈ ಬಾರಿ ರಾಗಿ ಬೆಳೆಗೆ ಮಳೆ ಕೊಂಚ ಹೆಚ್ಚಾದ್ದರಿಂದ ಪೈರು ಬಿಳುಚಿಕೊಂಡಂತಾಗಿದ್ದು ಆ ಸಮಯದಲ್ಲಿ ರಸಗೊಬ್ಬರದ ಅವಶ್ಯಕತೆ ಇತ್ತು, ಆದರೆ ಕೃಷಿ ಇಲಾಖೆ ಸರಿಯಾದ ಸಮಯಕ್ಕೆ ಎಲ್ಲಾ ರೈತರಿಗೂ ಯೂರಿಯಾ ನೀಡದ ಕಾರಣ ರೈತರು ಸಂಕಷ್ಟಕ್ಕೀಡಾಗಿದ್ದರು. ತದನಂತರ ಎಚ್ಚೆತ್ತ ಇಲಾಖೆಯ ಅಧಿಕಾರಿಗಳು ಸರಿತೂಗಿಸಿದರ ಫಲವಾಗಿ ರಸಗೊಬ್ಬರದ ಕೊರತೆ ಹೆಚ್ಚಾಗಿ ಕಾಡಲಿಲ್ಲ.
ಈ ಸಾಲಿನಲ್ಲಿ ಹೆಚ್ಚು ರಾಗಿ ಬೆಳೆ ಬಂದಿರುವ ಕಾರಣ ಹತ್ತಾರು ರೈತ ಕುಟುಂಬಗಳು ಸೇರಿ ಕಣ ಮಾಡಿ ಒಕ್ಕಣೆ ಮಾಡಿದರೆ ಉತ್ತಮ, ರಸ್ತೆಯಲ್ಲಿ ಒಕ್ಕಣೆ ಮಾಡಿದರೆ ರಾಗಿಯ ಗುಣಮಟ್ಟ ಹಾಳಾಗುವುದಲ್ಲದೆ ಸವಾರರಿಗೂ ತೊಂದರೆಯಾಗುತ್ತದೆ, ಹೀಗಾಗಿ ರೈತರು ವಿನಾಕಾರಣ ರಸ್ತೆಯಲ್ಲಿ ಒಕ್ಕಣೆ ಮಾಡದೆ ಕಣ ಸಿದ್ದಪಡಿಸಿ ಒಕ್ಕಣೆ ಮಾಡಬೇಕೆಂದು ಪತ್ರಿಕೆಯು ಆಶಿಸುತ್ತದೆ.
*ತಾಲ್ಲೂಕಿನಲ್ಲಿ ೮,೪೦೦ ಹೆಕ್ಟೇರ್ ನಲ್ಲಿ ರಾಗಿ ಬೆಳೆ ಬೆಳೆದಿದ್ದು ಬಹುತೇಕ ಕಾಳು ಕಟ್ಟಿವೆ. ಒಂದೂವರೆ ತಿಂಗಳಲ್ಲಿ ಸಂಪೂರ್ಣ ಕಟಾವು ಮುಗಿಯಲಿದ್ದು ರೈತರು ಹರ್ಷದಲ್ಲಿದ್ದಾರೆ.*
*ಅಪರ್ಣಾ ಸಹಾಯಕ ನಿರ್ದೇಶಕಿ ಕೃಷಿ ಇಲಾಖೆ.*
*ಈ ಸಾಲಿನಲ್ಲಿ ರಾಗಿ ಬೆಳೆ ಚನ್ನಾಗಿ ಬಂದಿದ್ದು ಕೇಂದ್ರ ಸರ್ಕಾರವು ೩,೧೫೦ ರೂಪಾಯಿ ಬೆಂಬಲ ಬೆಲೆ ಘೋಷಿಸಿದ್ದು ರಾಜ್ಯ ಸರ್ಕಾರವು ಘೋಷಿಸುವ ಸಾಧ್ಯತೆ ಇದೆ.*
*ಬೊಮ್ಮೇಶ್ ತಾಂತ್ರಿಕ ಅಧಿಕಾರಿ ಕೃಷಿ ಇಲಾಖೆ.*
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು