Tel: 7676775624 | Mail: info@yellowandred.in

Language: EN KAN

    Follow us :


ಕನ್ನಡವನ್ನು ಬಳಸಿ ಬೆಳೆಸಿದರೆ ಶಾಶ್ವತವಾಗಿ ಉಳಿಯಲಿದೆ ಕೆ ಸುಚೇಂದ್ರಪ್ರಸಾದ್

Posted date: 02 Nov, 2019

Powered by:     Yellow and Red

ಕನ್ನಡವನ್ನು ಬಳಸಿ ಬೆಳೆಸಿದರೆ ಶಾಶ್ವತವಾಗಿ ಉಳಿಯಲಿದೆ ಕೆ ಸುಚೇಂದ್ರಪ್ರಸಾದ್

ಚನ್ನಪಟ್ಟಣ: ಕನ್ನಡ ಭಾಷೆಯನ್ನು ಬಳಸಿದಷ್ಟಾದರೂ ಬೆಳೆಸಬೇಕಾಗಿದೆ. ಕನ್ನಡ ನಾಡಿಗೆ ಚನ್ನಪಟ್ಟಣ ತಾಲ್ಲೂಕಿನ ಹಲವಾರು ಹಿರಿಯರು ಕೊಟ್ಟ ಕೊಡುಗೆ ಅಪಾರವಾದುದು. ನಾಡಿಗೆ ನನ್ನ ಮತ್ತು ನನ್ನ ತವರಿನ ಕೊಡುಗೆ ಏನು ಎಂಬುದನ್ನು ಅರಿತುಕೊಳ್ಳುವುದು ನಮ್ಮೆಲ್ಲರ ಅತ್ಯವಶ್ಯ. ನಿಮ್ಮ ತಾಲ್ಲೂಕಿನ ಹಿರಿಮೆಗಳನ್ನು ನೀವು ತಿಳಿಯಬೇಕಾದರೆ ವಿಜಯ್ ರಾಂಪುರ ಸಂಪಾದಿಸಿರುವ ತಾಲ್ಲೂಕಿನ ಪುರಾಣ ಮತ್ತು ಇತಿಹಾಸ ಪುರುಷ ಮತ್ತು ಗ್ರಾಮಗಳ ಇತಿಹಾಸವನ್ನು ಓದಿ ತಿಳಿದುಕೊಳ್ಳಬೇಕು ಎಂದು ಖ್ಯಾತ ರಂಗಭೂಮಿ ಹಾಗೂ ಚಿತ್ರ ನಟ ಕೆ ಸುಚೇಂದ್ರಪ್ರಸಾದ್ ತಿಳಿಸಿದರು.

ಅವರು ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕನ್ನಡ ಹಬ್ಬ ೨೦೧೯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.


ಕನ್ನಡ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೆ ಹುಟ್ಟಿನಿಂದ ಸಾವಿನವರೆಗೂ ಕನ್ನಡವೇ ಉಸಿರಾಗಿರಬೇಕು, ಕನ್ನಡ ಪರಮವಾದ್ಯ, ಕನ್ನಡದ ಇತಿಹಾಸ ಕೇವಲ ಎರಡು ಸಾವಿರ ವರ್ಷಗಳಷ್ಟೇ ಅಲ್ಲ, ಕ್ರಿಸ್ತಪೂರ್ವ ದಿಂದಲೂ ಕನ್ನಡ ಭಾಷೆ ಇದೆ, ಇದಕ್ಕೆ ದಾಖಲೆಗಳು ಇವೆ. ಕ್ರಿಸ್ತಪೂರ್ವ ದಲ್ಲಿ ಕುಮುದೇಂದ್ರ ಮುನಿ ಎಂಬುವರು ಸಿರಿ ಭೂ ವಲಯ ಎಂಬ ಮುನ್ನೂರಕ್ಕೂ‌ ಹೆಚ್ಚು ಅಧ್ಯಾಯಗಳಿರುವ ಕೃತಿ ರಚಿಸಿದ್ದಾರೆ. ಕನ್ನಡ ಬೌದ್ಧಿಕವಾಗಿ ಸಂಪದ್ಭರಿತವಾಗಿದ್ದು ನಾವುಗಳೇ ಬಳಸಿ ಬೆಳೆಸಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ಸುಚೇಂದ್ರಪ್ರಸಾದ್ ರವರು ತಮ್ಮ ಭಾಷಣದಲ್ಲಿ ಆಂಗ್ಲ ಹಾಗೂ ಯಾವುದೇ ಅನ್ಯ ಭಾಷೆ ಬಳಸದೇ ಸಂಪೂರ್ಣ ಕನ್ನಡದಲ್ಲಿಯೇ ಮಾತನಾಡಿದ್ದಲ್ಲದೆ ಬೋಧಕರು ಮತ್ತು ವಿದ್ಯಾರ್ಥಿಗಳ‌ ಮನವಿ ಮೇರೆಗೆ ಗೀತೆಯೊಂದನ್ನು ಹಾಡಿ ರಂಜಿಸಿದರು. 


ಸಾಂಸ್ಕೃತಿಕ ಘಟಕದ ಸಂಚಾಲಕರಾದ ಡಾ ಅಣ್ಣಯ್ಯ ತೈಲೂರು ರವರು ಪ್ರಾಸ್ತಾವಿಕ ನುಡಿಗಳನ್ನಾಡಿ ಕನ್ನಡ ಎಂಬುದು ಕೇವಲ ಭಾಷೆ ಯಷ್ಟೇ ಅಲ್ಲ ಅದು ಬಂಗಾರದ ಭಾಷೆ, ಕೇವಲ ನವೆಂಬರ್ ತಿಂಗಳಿಗಷ್ಟೇ ಸೀಮಿತವಾಗದೇ ಜೀವನದ ಕೊನೆಯವರೆಗೆ ಭಾಷಾ ಪ್ರೀತಿ ಇರಬೇಕೆಂದು ತಿಳಿಸಿದರು.


ಪ್ರಾಂಶುಪಾಲ ವೆಂಕಟೇಶ ರವರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಶಾಸ್ತ್ರ ಪ್ರಾಧ್ಯಾಪಕ ಜಯರಾಮಯ್ಯ ನವರು ಅತಿಥಿ ಗಳನ್ನು ಸ್ವಾಗತಿಸಿದರು. ಪತ್ರಿಕೋದ್ಯಮ ಪ್ರಾಧ್ಯಾಪಕಿ ಅಶ್ವಿನಿ ರವರು ನಿರೂಪಿಸಿದರು. ಕನ್ನಡ ಪ್ರಾಧ್ಯಾಪಕ ಪದ್ಮನಾಭ ರವರು ವಂದನಾರ್ಪಣೆ ಮಾಡಿದರು.


ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಕಾಲೇಜಿನ ಬೋಧಕರು ಮತ್ತು ವಿದ್ಯಾರ್ಥಿಗಳು ಕಾಲೇಜಿನ ಆವರಣದಿಂದ ಹೆದ್ದಾರಿ ಮಾರ್ಗವಾಗಿ ಮೆರವಣಿಗೆ ಹೊರಟು ಹೊಸ ನ್ಯಾಯಾಲಯ, ಮಹಾತ್ಮ ಗಾಂಧಿ ರಸ್ತೆ, ಅಂಚೆ ಕಛೇರಿ ರಸ್ತೆ, ಹಾಗೂ ಬಸ್ ನಿಲ್ದಾಣದ ಮೂಲಕ ಕಾಲೇಜನ್ನು ತಲುಪಿದರು. ಈ ಸಂದರ್ಭದಲ್ಲಿ ಶೃಂಗರಿಸಿದ ಎತ್ತಿನ ಗಾಡಿಗಳಲ್ಲಿ ತಾಯಿ ಭುವನೇಶ್ವರಿ ಹಾಗೂ ನಾಡಿನ ಖ್ಯಾತ ನಾಮರಾದ ಒನಕೆ ಓಬವ್ವ, ಸಂಗೊಳ್ಳಿ ರಾಯಣ್ಣ, ಎಚ್ಚಮನಾಯಕ, ಹಾಗೂ ಎಂಟು ಜನ ಜ್ಞಾನ ಪೀಠ ವಿಜೇತರ ವೇಷಭೂಷಣ ಧರಿಸಿದ ವಿದ್ಯಾರ್ಥಿಗಳು ಹಾಗೂ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.


ವೇದಿಕೆ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪೂಜಾಕುಣಿತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಡಾ ಮಧುಸೂದನ್ ಜೋಷಿ ಸೇರಿದಂತೆ ಪ್ರಾಧ್ಯಾಪಕರು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑