ಅನಾವೃಷ್ಠಿಯಿಂದ ಪಾರಾದ ರಾಗಿ ಬೆಳೆ ಅತಿವೃಷ್ಟಿಗೆ ಬಲಿಯಾಗುವತ್ತ
ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಈ ಬಾರಿ ರಾಗಿ ಬೆಳೆಯು ಹುಲುಸಾಗಿ ಬೆಳೆದಿದ್ದು ರೈತನ ಮೊಗದಲ್ಲಿ ಮಂದಹಾಸ ಮಿನುಗುತ್ತಿತ್ತು.
ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಇನ್ನೇನು ಕುಯಿಲಿಗೆ ಬಂದ ಹುಲುಸಾದ ರಾಗಿ ಫಸಲು ಆಗಾಗ್ಗೆ ಸುರಿದ ಮಳೆಯಿಂದ ಬಾಗಿ ನೆಲಕಚ್ಚಿದ್ದು ರೈತನ ಆಶಾಗೋಪುರ ಕಳಚಿ ಬಿದ್ದಿದೆ.
ಕಳೆದ ಹಲವಾರು ವರ್ಷಗಳಿಗೆ ಹೋಲಿಸಿದರೆ ಈ ಸಾಲಿನ ರಾಗಿ ಮತ್ತು ಸಿರಿಧಾನ್ಯ ದ ಜೊತೆಗೆ ರಾಗಿಯ ಮಧ್ಯೆ ಬಿತ್ತಿರುವ ಸಾಲುಗಳು ಸಹ ನಳನಳಿಸುತ್ತಿವೆಯಾದರೂ ತೆನೆಗಟ್ಟಿದ ಫಸಲ
ನೆಲಕ್ಕೊರಗಿರುವುದರಿಂದ ಅಲ್ಲಿಯೇ ಪೈರು ಬರುವ ಸಾಧ್ಯತೆ ಹೆಚ್ಚಿದೆ. ಇನ್ನೂ ಕೆಲವು ಕಾಚಕ್ಕಿ (ಹೊಡೆಗಟ್ಟುವಿಕೆ) ಹಂತದಲ್ಲಿದ್ದರೆ ಕೆಲವು ಹಣ್ಣುಗಾಚಕ್ಕಿಯಾಗಿವೆ. ಭೂಮಿಗೆ ಬಿದ್ದ ತೆನೆಗಳಲ್ಲಿ ಕೆಲವು ಕೊಳೆಯಲಾರಂಭಿಸಿದ್ದು ಹಣ್ಣುಗಾಚಕ್ಕಿ ಮೊಳಕೆಯೊಡೆಯುತ್ತಿವೆ.
ಜುಲೈ ನ ಕೊನೆಯ ವಾರ ಹಾಗೂ ಆಗಸ್ಟ್ ನ ಮೊದಲ ವಾರಗಳಲ್ಲಿ ಸುರಿದ ಮಳೆಗೆ ರೈತರು ನಾಟಿ ಮಾಡಿದ್ದರು. ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಬೀಳದೆ ಕೊಂಚ ಒಣಗಿದರೂ ನಂತರ ಸುರಿದ ಮಳೆಗೆ ಚೇತರಿಸಿಕೊಂಡಿತ್ತು. ಮುಂದುವರೆದ ಮಳೆಯಿಂದಾಗಿ ಮನೆಗೆ ಬರಬೇಕಾದ ರಾಗಿ ಹೊಲದಲ್ಲೇ ಮಣ್ಣಾಗುವ ಸ್ಥಿತಿ ಇದೆ.
ಜನಜಾನುವಾರುಗಳಿಗೆ ಸಮೃದ್ಧ ಮೇವು ಸಿಗುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತಿದ್ದ ರೈತನಿಗೆ ಮುಂದೆ ಬರುವ ಜಡಿ ಹಿಡಿಯುವ ಸ್ವಾತಿ ಮಳೆ ಹಾಗೂ ವಿಶಾಖ ಮಳೆಯ ಭಯ ಮತ್ತಷ್ಟು ಕಾಡುತ್ತಿದೆ. ಅನಾವೃಷ್ಟಿಯಿಂದ ಪಾರಾದ ರೈತ ಅತಿವೃಷ್ಟಿಗೆ ಸಿಲುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು