ರೈಲು ಢಿಕ್ಕಿ ಚಿರತೆ ಸಾವು
ಚನ್ನಪಟ್ಟಣ: ತಾಲೂಕಿನ ಹೆದ್ದಾರಿ ಬಳಿಯ ಮಂಚಶೆಟ್ಟಿಹಳ್ಳಿದೊಡ್ಡಿ (ನಾದ ಗ್ರಾಮ) ಗ್ರಾಮದ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಸುಮಾರು ಮೂರರಿಂದ. ಮೂರುವರೆ ವರ್ಷದ ಗಂಡು ಚಿರತೆಯೊಂದು ಚಲಿಸುವ ರೈಲಿಗೆ ಸಿಲುಕಿ ಸಾವನ್ನಪ್ಪಿದೆ.
ಮಂಚಶೆಟ್ಟಿಹಳ್ಳಿದೊಡ್ಡಿ ಸಮೀಪವೇ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶ ಇದ್ದು ಕರಡಿ, ಚಿರತೆ, ಕಾಡು ಹಂದಿ ಸೇರಿದಂತೆ ಹಲವಾರು ವನ್ಯಜೀವಿಗಳು ಅರಣ್ಯದಲ್ಲಿವೆ. ರಾಷ್ಟ್ರೀಯ ಹೆದ್ದಾರಿ ಮತ್ತು ಪ್ರತಿನಿತ್ಯ ಸರಿಸುಮಾರು ೫೪ ರೈಲುಗಳು ಓಡಾಡುವ ರೈಲ್ವೆ ಹಳಿ ಇರುವುದರಿಂದ ಹಗಲು ವೇಳೆ ಓಡಾಡದೆ ರಾತ್ರಿ ವೇಳೆ ಆಹಾರ ಅರಸುತ್ತಾ ಹೋಗುವುದನ್ನು ಪ್ರಾಣಿಗಳು ರೂಢಿಸಿಕೊಂಡಿವೆ.
ಸೋಮವಾರ ರಾತ್ರಿ ವೇಳೆಯಲ್ಲಿ ಆಹಾರ ಅರಸುತ್ತ ಗ್ರಾಮದ ಬಳಿ ಬಂದ ಚಿರತೆ ಪಕ್ಕದಲ್ಲೆ ಹಾದುಹೋಗಿದ್ದ ರೈಲು ಹಳಿ ದಾಟಿ ಹೋಗುವಾಗ ಆಕಸ್ಮಿಕವಾಗಿ ಚಲಿಸುವ ರೈಲು ಗಾಡಿಗೆ ಸಿಲುಕಿದೆ. ರೈಲಿನ ರಭಸಕ್ಕೆ ಸಿಕ್ಕ ಚಿರತೆ ಸ್ಥಳದಲ್ಲಿಯೇ ಸಾವನ್ನಪ್ಪಿದೆ.
ಮಂಗಳವಾರ ಮದ್ಯಾಹ್ನ ಸ್ಥಳೀಯರು ಚಿರತೆ ರೈಲ್ವೆ ಹಳಿ ಸಮೀಪ ಸತ್ತುಬಿದ್ದಿರುವುದನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಎಸಿಎಫ್ ಎಂ.ರಾಮಕೃಷ್ಣಪ್ಪ ಮತ್ತು ಅಧಿಕಾರಿಗಳು ಮಹಜರು ನಡೆಸಿ ಸ್ಥಳ ಪರಿಶೀಲನೆ ನಡೆಸಿದರು. ನಂತರ ಚಿರತೆಯ ಶವವನ್ನು ಚಿಕ್ಕಮಣ್ಣುಗುಡ್ಡೆ ಅರಣ್ಯ ಕಚೇರಿಯ ಜಾಗಕ್ಕೆ ಕೊಂಡೊಯ್ದು ಪಶು ಇಲಾಖೆ ವೈದ್ಯಾಧಿಕಾರಿ ಅಂಕೂಗೌಡ ಅವರಿಂದ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಚಿರತೆ ಶವವನ್ನು ಸುಡಲಾಯಿತು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ. ರಾಮಕೃಷ್ಣಪ್ಪ, ವಲು ಅರಣ್ಯಾಧಿಕಾರಿ ಮಹಮ್ಮದ್ ಮುನ್ಸೂರ್, ಉಪ ವಲಯ ಅರಣ್ಯಾಧಿಕಾರಿ ಗಳಾದ ಶ್ರೀಧರ್ , ಚಂದ್ರನಾಯಕ್ ಮತ್ತು ಸಿಬ್ಬಂದಿಗಳು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು