ನಗರ ವ್ಯಾಪ್ತಿಯ ಸಾತನೂರು ರಸ್ತೆ ಗುಂಡಿಗಳ ಆಗರ ಹೆಸರಿಗಷ್ಟೇ ದ್ವಿಪಥ ರಸ್ತೆ !
ಚನ್ನಪಟ್ಟಣ: ರಾಜ್ಯ ಹೆದ್ದಾರಿ ಸಾತನೂರು ರಸ್ತೆಯಲ್ಲಿ ಕಿರಿದಾದ ರಸ್ತೆಗಳು, ಕಿರಿದಾದ ಸೇತುವೆಗಳು ಹಾಗೂ ಕುಸಿದ ಸೇತುವೆಗಳದ್ದೇ ದರ್ಬಾರು ಎಂಬುದು ಸರ್ವೇಸಾಮಾನ್ಯವಾಗಿದೆ, ಇನ್ನೂ ನಗರ ವ್ಯಾಪ್ತಿ ಅಂದರೆ ಸಾತನೂರು ವೃತ್ತ ದಿಂದ ಮಹದೇಶ್ವರ ದೇವಾಲಯದ ತನಕ ಜೋಡಿ ರಸ್ತೆ ಮಾಡಿದರೂ ಸಹ ಏಕ ವಾಹನ ಸಂಚರಿಸುವಷ್ಟೇ ರಸ್ತೆ ಇದೆ. ರಸ್ತೆ ಅಗಲೀಕರಣ ಎಂದರೆ ಪಾದಚಾರಿ ರಸ್ತೆ (ಫುಟ್ ಪಾತ್) ತೆರವುಗೊಳಿಸಿ ಅಗಲೀಕರಣ ಮಾಡಿದ್ದು ಈಗ ಪಾದಚಾರಿ ರಸ್ತೆಯಾಗಲಿ, ವಾಹನಗಳ ನಿಲುಗಡೆಗೆ ಜಾಗವಿಲ್ಲದೆ ಅಗಲೀಕರಣ ಮಾಡಿದ ರಸ್ತೆಯೇ ಒತ್ತುವರಿಯಾಗಿದೆ.
ಟಿಎಪಿಸಿಎಂಎಸ್ ವಾಣಿಜ್ಯ ಸಂಕೀರ್ಣದ ಮುಂದೆ ಇರುವ ಮುಸ್ಲಿಂ ಸಮುದಾಯದ ಸ್ಮಶಾನ ಇರುವ ಜಾಗದಲ್ಲಿ ಒಂದಿಂಚು ಅಗಲೀಕರಣಗೊಳಿಸದ ಕಾರಣ ರಸ್ತೆ ಇಕ್ಕಟ್ಟಾಗಿದ್ದು ಅಪಘಾತಗಳ ತಾಣವಾಗಿ ಪರಿವರ್ತನೆಗೊಂಡಿದೆ. ರಸ್ತೆ ಕಾಮಗಾರಿಯ ನಂತರ ಅನೇಕ ಇಲಾಖೆಗಳು ರಸ್ತೆ ಅಗೆದು ಕೆಲಸ ನಿರ್ವಹಿಸುತ್ತಿರುವುದರ ಜೊತೆಗೆ ಅಲ್ಲಲ್ಲಿ ರಸ್ತೆಗಳು ಗುಂಡಿ ಬಿದ್ದಿದ್ದು ದ್ವಿಚಕ್ರ ವಾಹನಗಳ ಸವಾರರು ಜೀವ ಕೈಲಿಡಿದು ಓಡಾಡುವ ಪರಿಸ್ಥಿತಿ ಎದುರಾಗಿದೆ.
ರಸ್ತೆಯ ಮಧ್ಯಭಾಗದಲ್ಲಿ ಅಡಿಗಳಷ್ಟು ಆಳವಾದ ಗುಂಡಿಗಳು ಬಿದ್ದಿರುವುದು ಒಂದೆಡೆಯಾದರೆ ರಸ್ತೆಯ ತಳಭಾಗದಲ್ಲಿ ಇರುವ ಚರಂಡಿಗಳ ಮೇಲ್ಬಾಗ ಕುಸಿದು ಕಬ್ಬಿಣದ ಸಲಾಖೆಗಳು ಇಣುಕಿದರೂ ಸಹ ಯಾವ ಅಧಿಕಾರಿಯು ಎಚ್ಚೆತ್ತುಕೊಳ್ಳದೆ ಜನರ ಜೀವದ ಜೊತೆ ಚಲ್ಲಾಟವಾಡುತ್ತಿದ್ದಾರೆ.
*ಈಗ ಆರು ತಿಂಗಳ ಹಿಂದೆ ನಮ್ಮ ಇಲಾಖೆಗೆ ಹಸ್ತಾಂತರಗೊಂಡಿದೆ. ವಿವರಗಳನ್ನು ಪರಿಶೀಲಿಸಿ ಗುಂಡಿಗಳನ್ನು ಮುಚ್ಚಲು ಶೀಘ್ರವಾಗಿ ಕ್ರಮಕೈಗೊಳ್ಳುತ್ತೇವೆ.*
*ರಾಜು ಎಇಇ ಜಿಪಂ ವಿಶೇಷ ಉಪವಿಭಾಗ.*
*ರಸ್ತೆ ಕಾಮಗಾರಿ ಮುಗಿದು ಎರಡು ವರ್ಷಗಳಾಗಿವೆ. ಈ ನಡುವೆ ಬಿ ಎಸ್ ಎನ್ ಎಲ್, ನೀರಾವರಿ ಹಾಗೂ ಕೆಪಿಟಿಸಿಎಲ್ ನವರು ರಸ್ತೆ ಬಗೆದಿದ್ದು ಗುಂಡಿಗಳಾಗಿವೆ. ಗುಂಡಿಗಳನ್ನು ಶೀಘ್ರವಾಗಿ ಮುಚ್ಚಿಸುತ್ತೇವೆ.*
*ಪ್ರಕಾಶ್ ಇಂಜಿನಿಯರ್.*
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು