ಗ್ರಾಮ ಪಂಚಾಯತಿ ವಸತಿ ಫಲಾನುಭವಿಗಳಿಗೆ ಸರ್ಕಾರದಿಂದ ಹಣ ಬಿಡುಗಡೆ ಭಾಗ್ಯವಿಲ್ಲ ಆರೋಪ
ಚನ್ನಪಟ್ಟಣ: ಇಂದಿರಾಗಾಂಧಿ ಆವಾಸ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ, ಬಸವ ವಸತಿ, ವಾಜಪೇಯಿ ವಸತಿ ಯೋಜನೆ ಸೇರಿದಂತೆ ಗ್ರಾಮ ಪಂಚಾಯತಿ ವತಿಯಿಂದ ಫಲಾನುಭವಿಗಳಿಗೆ ನೀಡುವ ವಿವಿಧ ವಸತಿ ಯೋಜನೆಗಳಿಗೆ ಕಳೆದ ಎರಡು ವರ್ಷಗಳಿಂದ ಸರ್ಕಾರ ಹಣ ಮಂಜೂರು ಮಾಡದಿರುವುದರಿಂದ ತಲೆಯ ಮೇಲೆ ಸೂರು ನಿರ್ಮಿಸಿಕೊಳ್ಳುವ ಬಡವರ ಕನಸು ಕನಸಾಗಿಯೇ ಉಳಿದಿದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷರ ಸಂಘದ ತಾಲ್ಲೂಕು ಅಧ್ಯಕ್ಷ ಹಾಗೂ ಮಳೂರು ಗ್ರಾಮ ಪಂಚಾಯತಿ ಅಧ್ಯಕ್ಷರೂ ಆದ ರಮೇಶ್ ರವರು ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.
ಅವರು ಇಂದು ನಗರದ ಪ್ರವಾಸಿ ಮಂದಿರದಲ್ಲಿ ಹಲವಾರು ಗ್ರಾಮ ಪಂಚಾಯತಿ ಅಧ್ಯಕ್ಷರ ಜೊತೆ ಸೇರಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ರಾಮನಗರ ಜಿಲ್ಲಾ ಜೆಡಿಎಸ್ ನ ಯುವ ಮುಖಂಡ ಜಯಕಾಂತಚಾಲುಕ್ಯ ಮಾತನಾಡಿ ಒಬ್ಬ ಫಲಾನುಭವಿಗೆ ನಾಲ್ಕು ಹಂತದಲ್ಲಿ ಹಣ ಬಿಡುಗಡೆಯಾಗಬೇಕು. ಈ ಹಣವನ್ನು ನಂಬಿಕೊಂಡು ಎಲ್ಲರೂ ತಾವು ವಾಸಿಸುತ್ತಿದ್ದ ಗುಡಿಸಲುಗಳನ್ನು ತೆರವುಗೊಳಿಸಿ ಅಡಿಪಾಯ ಹಾಕಿಕೊಂಡಿದ್ದಾರೆ. ಕೆಲವರಿಗೆ ಒಂದು, ಎರಡು ಕಂತುಗಳ ಹಣ ಮಾತ್ರ ದೊರೆತಿದ್ದು ಅತ್ತ ಗುಡಿಸಲು ಇಲ್ಲದೆ, ಇತ್ತ ಆಶ್ರಯ ಮನೆಯೂ ಇಲ್ಲದೆ ಪರದಾಡುವಂತೆ ಮಾಡಿದ್ದಾರೆ.
ಇದರಿಂದ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಸದಸ್ಯರು ತಲೆ ಎತ್ತಿ ಓಡಾಡದಂತಾಗಿದ್ದು ಇನ್ನು ಹದಿನೈದು ದಿನಗೊಳಗಾಗಿ ಹಣ ಬಿಡುಗಡೆ ಮಾಡದಿದ್ದರೆ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಫಲಾನುಭವಿಗಳ ಜೊತೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಫಲಾನುಭವಿಗಳು ವಾಸ್ತವ ಅರಿಯದೆ ಪಂಚಾಯತಿ ಅಧ್ಯಕ್ಷ ಮತ್ತು ಸದಸ್ಯರೇ ತಡೆ ಹಿಡಿದಿದ್ದಾರೆ, ಮುಂದಿನ ಚುನಾವಣೆ ಗಾಗಿ ಈ ಗಿಮಿಕ್ ಮಾಡುತ್ತಿದ್ದಾರೆ ಎಂದು ನೇರವಾಗಿ ದೂರುತ್ತಿದ್ದು ಮುಜುಗರ ಎದುರಿಸಲಾಗುತ್ತಿಲ್ಲ.
ಬಡವರ ಕಲ್ಯಾಣಕ್ಕಾಗಿ ಸಾವಿರಾರು ಕೋಟಿ ಹಣ ಬಿಡುಗಡೆ ಎಂಬುದು ಸರ್ಕಾರದ ದೊಡ್ಡ ಸುಳ್ಳು ಹೇಳಿಕೆಯಾಗಿದೆ, ಮೊದಲು ಗ್ರಾಮ ಪಂಚಾಯತಿ ವಸತಿ ಯೋಜನೆಗಳಿಗೆ ಹಣ ಬಿಡಗಡೆ ಮಾಡಲಿ. ಇಲ್ಲವಾದರೆ ರಾಜ್ಯಾದ್ಯಂತ ಎಲ್ಲಾ ತಾಲ್ಲೂಕು ಕಛೇರಿಗಳ ಮುಂದೆ ಪ್ರತಿಭಟನೆ ನಡೆಸಲು ಕರೆ ನೀಡಲಾಗುವುದು ಎಂದರು.
ತಗಚಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷ ಜಿ ಶಿವ ಮಾತನಾಡಿ ತಾಲ್ಲೂಕಿಗೆ ಒಟ್ಟು ನಾಲ್ಕು ಕೋಟಿ ರೂಪಾಯಿಗಳ ಅನುದಾನ ಬಿಡುಗಡೆಯಾಗಬೇಕಿದ್ದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತಿ ಅಧಿಕಾರಿ, ಸಮ್ಮಿಶ್ರ ಸರ್ಕಾರದ ಮುಖ್ಯ ಮಂತ್ರಿ ಕುಮಾರಸ್ವಾಮಿ ಹಾಗೂ ಇಂದಿನ ಜಿಲ್ಲಾ ಉಸ್ತುವಾರಿ ಸಚಿವರಾದಿಯಾಗಿ ಎಲ್ಲಾ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಲಿಖಿತ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಶೀಘ್ರವಾಗಿ ಹಣ ಬಿಡುಗಡೆ ಮಾಡುವ ಮೂಲಕ ಸರ್ಕಾರ ಜವಾಬ್ದಾರಿ ಮೆರೆಯಬೇಕು ಎಂದರು.
ಬೇವೂರು ಗ್ರಾಮ ಪಂಚಾಯತಿ ಯ ಪ್ರಭಾರ ಅಧ್ಯಕ್ಷ ಗುರುಲಿಂಗಯ್ಯ ಮಾತನಾಡಿ ವಸತಿ ಯೋಜನೆಯಲ್ಲಿ ಹಣ ನೀಡಲು ಸಹ ನಗರ ಮತ್ತು ಗ್ರಾಮೀಣ ಪ್ರದೇಶ ಜನರಿಗೆ ತಾರತಮ್ಯ ಮಾಡುತ್ತಿದ್ದು ನಗರಕ್ಕೆ ಮೂರು ಲಕ್ಷ, ಗ್ರಾಮೀಣ ಪ್ರದೇಶಕ್ಕೆ ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿ ನೀಡುತ್ತಿದೆ. ಕಬ್ಬಿಣ, ಸಿಮೆಂಟ್, ಮರ, ಇಟ್ಟಿಗೆ ಎಲ್ಲರಿಗೂ ಒಂದೇ ದರ ಇರುವುದರಿಂದ ಗ್ರಾಮೀಣ ಪ್ರದೇಶಕ್ಕೂ ಮೂರು ಲಕ್ಷ ರೂಪಾಯಿ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರುಗಳಾದ ಮೈಲನಾಯಕನಹಳ್ಳಿ ಜಯಲಕ್ಷ್ಮಿ, ಬಾಣಗಳ್ಳಿ ಲಕ್ಷ್ಮಿ, ಎಂ ಬಿ ಹಳ್ಳಿ ಚಂದ್ರಶೇಖರ, ತಿಟ್ಟಮಾರನಹಳ್ಳಿ ಅಜಿತ್, ಕೋಡಂಬಳ್ಳಿ ಯ ಶ್ವೇತ ಬಾಬು, ವೈ ಟಿ ಹಳ್ಳಿಯ ಬಸವರಾಜು, ನೀಲಸಂದ್ರದ ನಿರ್ಮಲಾ ಬಸವರಾಜು, ನಾಗವಾರದ ಆರತಿ ಹಾಗೂ ಮುಖಂಡರು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು