Tel: 7676775624 | Mail: info@yellowandred.in

Language: EN KAN

    Follow us :


ಸೃಜನಾತ್ಮಕ ಮಹಾ ಕಾವ್ಯಗಳ ಮೂಲಕವೇ ಕನಕದಾಸರು ಇಂದಿಗೂ ಜೀವಂತ. ಭೂಹಳ್ಳಿ ಪುಟ್ಟಸ್ವಾಮಿ

Posted date: 15 Nov, 2019

Powered by:     Yellow and Red

ಸೃಜನಾತ್ಮಕ ಮಹಾ ಕಾವ್ಯಗಳ ಮೂಲಕವೇ ಕನಕದಾಸರು ಇಂದಿಗೂ ಜೀವಂತ. ಭೂಹಳ್ಳಿ ಪುಟ್ಟಸ್ವಾಮಿ

ಚನ್ನಪಟ್ಟಣ: ಪುರಾತನ ಕಾಲದಿಂದ ಇಂದಿನವರೆಗೂ ಕುವೆಂಪು ರವರ ಆದಿಯಾಗಿ ಎಲ್ಲಾ ಕವಿಗಳು ಒಂದು ಅಥವಾ ಎರಡು ಮಹಾ ಕಾವ್ಯಗಳನ್ನಷ್ಟೇ ರಚಿಸಿದ್ದಾರೆ. ಕನಕದಾಸರು ಅವರ ಜೀವಿತಾವಧಿಯಲ್ಲಿ ಹಲವು ಕಾವ್ಯಗಳನ್ನು ಇಂದಿಗೂ ಪ್ರಸ್ತುತವೆನಿಸುವ ಕೀರ್ತನೆಗಳನ್ನು ರಚಿಸಿದ್ದರಿಂದಲೇ ಐದು ನೂರು ವರ್ಷಗಳು ಕಳೆದರೂ ಜನಮಾನಸದಲ್ಲಿ ಅಜರಾಮರವಾಗಿ ಉಳಿಯಲು ಕಾರಣ ಎಂದು ಸಾಹಿತಿ ಭೂಹಳ್ಳಿ ಪುಟ್ಟಸ್ವಾಮಿ ಹೇಳಿದರು.

ಅವರು ಇಂದು ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ನಗರಸಭೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದಾಸ ಶ್ರೇಷ್ಠ ಕನಕದಾಸರ ೫೩೨ ನೇ ಜಯಂತಿಯಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದರು.


ಎಲ್ಲಾ ಮಹನೀಯರ ಜಯಂತಿಗಳ ಆಶಯವೂ ಮನಸ್ಸು ಮನಸ್ಸುಗಳ ನಡುವೆ, ಹೃದಯ ಹೃದಯದ ನಡುವೆ, ಕುಲ, ಕೇರಿ, ನಾಡು ನುಡಿ, ದೇಶದೇಶಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಆಚರಣೆ ಮಾಡುತ್ತಿದ್ದರೂ ಸಹ ಇಪ್ಪತ್ತೊಂದನೇ ಶತಮಾನದಲ್ಲಿಯೂ ಜಾತಿ ವ್ಯವಸ್ಥೆ ತಾಂಡವಾಡುತ್ತಿರುವುದು ವಿಷಾದನೀಯ ಎಂದರು.


ಪ್ರತಿಯೊಂದು ಜಾತಿಯೂ ಉಪಜಾತಿಗಳಿಂದಲೇ ಹೊಡೆದುಹೋಗಿವೆ. ಸಮಾಜದ ಹಿತ ದೃಷ್ಟಿಯಿಂದ ಬದಲಾವಣೆ ಮಾಡಿಕೊಳ್ಳದೆ ಸ್ವಹಿತಕ್ಕೋಷ್ಕರ ಬದಲಾವಣೆ ಮಾಡಿಕೊಳ್ಳುತ್ತಿರುವುದು ನಮಗೆ ಮಾರಕವಾಗಿದೆ. ನಾವುಗಳು ಸಮಾಜವನ್ನು ಒಟ್ಟುಗೂಡಿಸಲು ಶ್ರಮಿಸಬೇಕೆ ವಿನಹ ಜಾತಿಗಳಿಂದ ಹೊಡೆದಾಡಿಕೊಳ್ಳಲು ಅಲ್ಲ.


ಚಂದ್ರವರ್ಮಮೌರ್ಯ, ರೇವಣಸಿದ್ದ, ಸಾಹುಮಹರಾಜ್ ಸೇರಿದಂತೆ ಅನೇಕರು ಕುರುಬ ಸಮುದಾಯದವರು ರಾಜಮಹಾರಾಜರಾಗಿ, ಸಾಧುಸಂತರಾಗಿ ಹೋಗಿದ್ದರೂ ಸಹ ಸಮುದಾಯ ಹಿಂದುಳಿಯಲು ಸಮುದಾಯ ದ ನಾಯಕರೇ ಕಾರಣ ಎಂದು ಅಭಿಪ್ರಾಯ ಪಟ್ಟರು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಹಶಿಲ್ದಾರ್ ಸುದರ್ಶನ್ ರವರು ಹದಿನೈದನೇ ಶತಮಾನದ ಕನಕದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತ, ಅವರ ಜೀವನದ ಆದರ್ಶಗಳನ್ನು ನಾವು ರೂಢಿಸಿಕೊಳ್ಳಬೇಕು ಎಂದರು. ಅವರ ಕೀರ್ತನೆಗಳನ್ನು ಭಜಿಸುವ ಮೂಲಕ ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆನೀಡಿದರು.


ರಾಮನಗರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿಂಲಿಂ ನಾಗರಾಜು ರವರು ಮಾತನಾಡಿ ಜಗತ್ತಿನಲ್ಲಿ ಜಾತಿ ವ್ಯವಸ್ಥೆ ತೊಲಗಬೇಕು, ಬಸವಣ್ಣನವರು ಸಹ ಆಗಲೇ ಇದನ್ನು ಸಾಧಿಸಿ ತೋರಿಸಿದ್ದಾರೆ. ಅಂಬೇಡ್ಕರ್ ಆದಿಯಾಗಿ ಅನೇಕ ಮಹನೀಯರು ಸಹ ಜಾತಿ ಪದ್ದತಿ ವಿರುದ್ಧ ದನಿ ಎತ್ತಿದ್ದಾರೆ. ೨೧ ನೇ ಶತಮಾನದಲ್ಲಿ ಇರುವ ನಾವು ಎಚ್ಚೆತ್ತುಕೊಂಡಿಲ್ಲದಿರುವುದು ವಿಷಾದ. ಮಹನೀಯರ ಜಯಂತಿ ಗೆ ಅದೇ ಜನಾಂಗದವರು ಪಾಲ್ಗೊಳ್ಳೊತ್ತಿರುವುದು ಇದಕ್ಕೆ ಸಾಕ್ಷಿ ಎಂದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಹರೂರು ರಾಜಣ್ಣನವರು ದಾಸರ ಶ್ರೇಷ್ಠ ಕನಕದಾಸ ರೊಬ್ಬರೇ ಶೂದ್ರ ವ್ಯಕ್ತಿ, ಮಿಕ್ಕ ದಾಸರು ಮೇಲ್ಮಟ್ಟದ ಜಾತಿಯವರು.

ಕನಕದಾಸ ರು ಕೀರ್ತನೆಗಳಿಂದಲೇ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ. ಉಡುಪಿಯಲ್ಲಿ ಪ್ರವೇಶ ನಿರಾಕರಿಸಿದ ನಂತರ ಹಾಡಿದ ಕೀರ್ತನೆಯಿಂದಲೇ ಕೃಷ್ಣ ಹಿಂದಿರುಗಿ ದರ್ಶನ ನೀಡಿದ್ದು. ಕಾಗಿನೆಲೆಯಲ್ಲಿ ಕನಕ ಅಧ್ಯಯನ ಪೀಠ ಮಾಡಿರುವುದು ಒಳ್ಳೆಯ ಬೆಳವಣಿಗೆ.

ಅವರ ಕೀರ್ತನೆಗಳನ್ನು ನಿಜ ಜೀವನದಲ್ಲಿ ನಾವು ಅಳವಡಿಸಿಕೊಳ್ಳಬೇಕು ಎಂದರು.


ಮೊದಲಿಗೆ ತಾಲ್ಲೂಕು ಕಛೇರಿಯಿಂದ ಅಲಂಕೃತ ವಾಹನದಲ್ಲಿ ಕನಕದಾಸರ ಭಾವಚಿತ್ರವನ್ನು ಕಲಾಮೇಳಗಳ ಮೂಲಕ ಮೆರವಣಿಗೆ ಮಾಡಲಾಯಿತು. ವೇದಿಕೆ ಕಾರ್ಯಕ್ರಮವನ್ನು ಚೌಪು ಸ್ವಾಮಿ ನಡೆಸಿಕೊಟ್ಟರು. ನಿವೇದಿತಾ ಶಾಲೆಯ ಮಕ್ಕಳು ನಾಡಗೀತೆ ಹಾಡಿದರೆ ಶಿವಬೀರಯ್ಯ ಸ್ವಾಗತಿಸಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸಿದ್ದರಾಜು ವಂದಿಸಿದರು.


 ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಚಂದ್ರು, ಪೌರಾಯುಕ್ತ ಶಿವಾಂಕರಿಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜು ಶಿರಸ್ತರೆದಾರ ಮಹದೇವಯ್ಯ, ವೃತ್ತ ನಿರೀಕ್ಷಕ ಗೋವಿಂದರಾಜು, ರೈತಮುಖಂಡ ಸಿ ಪುಟ್ಟಸ್ವಾಮಿ, ಸಮುದಾಯದ ಮುಖಂಡ ನಾಗಣ್ಣ, ಮಂಜುನಾಥ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑