ದೂರು ಮತ್ತು ವರದಿಗೆ ಸ್ಪಂದಿಸಿದ ಅಧಿಕಾರಿಗಳು, ಕೊಳಚೆ ನೀರಿಗೆ ತಾತ್ಕಾಲಿಕ ರಿಲೀಫ್
ಚನ್ನಪಟ್ಟಣ: ಮಾರುತಿ ಬಡಾವಣೆಯಲ್ಲಿ ಕೊಳಚೆ ನೀರು ಹರಿಯುತಿದ್ದು ಮನೆಗಳಿಗೆ ನುಗ್ಗುತಿದ್ದರ ಬಗ್ಗೆ ಅಲ್ಲಿಯ ನಿವಾಸಿಗಳು ನಗರಸಭೆಗೆ ದೂರು ನೀಡಿದ್ದಲ್ಲದೇ ನಮ್ಮ ಪತ್ರಿಕೆಯಲ್ಲಿ ವಿವರವಾಗಿ ಸಮಸ್ಯೆಯನ್ನು ತೆರೆದಿಡಲಾಗಿತ್ತು.
ವರದಿಗೆ ಸ್ಪಂದಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕಣ್ವ ಏತ ನೀರಾವರಿ ಮತ್ತು ನಗರಸಭೆಯ ಅಧಿಕಾರಿಗಳು ಇಂದು ಒಗ್ಗೂಡಿ ಸ್ಥಳ ಪರಿಶೀಲನೆ ನಡೆಸಿ ಸದ್ಯಕ್ಕೆ ತಾತ್ಕಾಲಿಕವಾಗಿ ಕೊಳಚೆ ನೀರನ್ನು ಹೊರಬಿಡಲು ಕ್ರಮಕೈಗೊಂಡರು.
ರಾಮಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದ ನೀರು ಮತ್ತು ಕೋಟೆ ಪ್ರದೇಶದ ಕಡೆಯಿಂದ ಬರುವ ಕೊಳಚೆ ನೀರು ಒಟ್ಟಾಗಿ ಮಾರುತಿ ಬಡಾವಣೆಯ ಕಾಲುವೆಯ ಮೂಲಕ ಹೆದ್ದಾರಿಯ ಚರಂಡಿಯನ್ನು ಸೇರುತ್ತದೆ. ಆದರೆ ಹೆದ್ದಾರಿಯ ಚರಂಡಿ ಕಾಮಗಾರಿ ಪೂರ್ಣಗೊಳ್ಳದೆ ಹಾಗೂ ಹನ್ನೊಂದನೇ ಅಡ್ಡ ರಸ್ತೆಯಲ್ಲಿ ಆಳದ ಚರಂಡಿ ಹೂತು ಹೋಗಿರುವುದರಿಂದ ನೀರು ಶೇಖರಣೆಗೊಂಡು ಮನೆಗಳಿಗೆ ನುಗ್ಗುತ್ತಿರುವುದಾಗಿ ಸ್ಥಳೀಯರ ದೂರಿನ ಮೇರೆಗೆ ಇಂದು ಮೂರು ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದರು.
ಮೂರು ಇಲಾಖೆಯ ಅಧಿಕಾರಿಗಳು ಸಮಾಲೋಚಿಸಿದ ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಜಯಕುಮಾರ್ ರವರು ಹನ್ನೊಂದನೇ ತಿರುವಿನ ರಸ್ತೆಯನ್ನು ಬಗೆದು ನಿಂತ ನೀರು ಸರಾಗವಾಗಿ ಹರಿದು ಹೋಗುವಂತೆ ಜೆಸಿಬಿ ಮೂಲಕ ಕಾಲುವೆಯನ್ನು ದುರಸ್ತಿ ಮಾಡಿಸಿದರು.
ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಜಯಕುಮಾರ್ ಮತ್ತು ಸಿಬ್ಬಂದಿ, ಕಣ್ವ ಏತ ನೀರಾವರಿ ಇಂಜಿನಿಯರ್ ಗಳು ಮತ್ತು ಸಿಬ್ಬಂದಿ, ನಗರಸಭೆಯ ಆರೋಗ್ಯ ಇಲಾಖೆಯ ಅಧಿಕಾರಿ ವರಲಕ್ಷ್ಮಿ, ಮತ್ತು ಸಿಬ್ಬಂದಿ, ಮುಖಂಡರಾದ ಉಮಾಶಂಕರ್, ಗೋವಿಂದಳ್ಳಿ ನಾಗರಾಜು, ಚೇತನ್ ಕೀಕರ್, ಕೆಂಚೇಗೌಡ ಹಾಗೂ ಸ್ಥಳೀಯರು ಹಾಜರಿದ್ದರು.
*ಹೆದ್ದಾರಿಗೆ ಸಂಬಂಧಿಸಿದ ಕೆಲಸವನ್ನು ನಾವು ಸಂಪೂರ್ಣವಾಗಿ ಮಾಡಿಮುಗಿಸುತ್ತೇವೆ. ೧೯೫೬ ರಲ್ಲಿ ಆದ ಹಳೆಯ ಚರಂಡಿಯಾಗಿದ್ದು ಒಂದು ಬಾರಿಯೂ ರಿಪೇರಿಯಾಗದ ಕಾರಣ ಮುಚ್ಚಿಹೋಗಿದ್ದು ತಾತ್ಕಾಲಿಕವಾಗಿ ಪರಿಹಾರ ಒದಗಿಸುತ್ತೇವೆ.*
*ಮೋಹನಲಾಲ್. ರಾಷ್ಟ್ರೀಯ ಹೆದ್ದಾರಿ ಇಇ*
*ಕಣ್ವ ನೀರಾವರಿ ಇಲಾಖೆಗೆ ಹಣ ಬಿಡುಗಡೆ ತಾಂತ್ರಿಕವಾಗಿ ನಿಧಾನವಾಗಿದ್ದು ಹಣ ಬಿಡುಗಡೆಯಾದ ತಕ್ಷಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತೇವೆ.*
*ಸದಾಶಿವೇಗೌಡ.ಎಇಇ. ಕಣ್ವ ಏತ ನೀರಾವರಿ.*
*ಸಂಬಂಧಿಸಿದ ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಒಗ್ಗೂಡಿಸಿ ಚರ್ಚಿಸಿ ಸ್ಥಳ ಪರಿಶೀಲನೆ ಮಾಡಿದ್ದಲ್ಲದೆ ಹೆದ್ದಾರಿ ಇಲಾಖೆಯ ಅಧಿಕಾರಿಗಳು ತಕ್ಷಣ ತಾತ್ಕಾಲಿಕ ಕ್ರಮ ಕೈಗೊಂಡಿದ್ದಾರೆ. ಶಾಶ್ವತ ಪರಿಹಾರ ಕೈಗೊಳ್ಳಲು ಎಲ್ಲರೂ ಪ್ರಯತ್ನಿಸುತ್ತೇವೆ.*
*ಶಿವನಂಕಾರಿಗೌಡ. ಪೌರಾಯುಕ್ತರು ನಗರಸಭೆ.*
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು