Tel: 7676775624 | Mail: info@yellowandred.in

Language: EN KAN

    Follow us :


ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ಡಾ. ಚನ್ನಣ್ಣ ವಾಲೀಕಾರ ಹಾಗೂ ಡಾ.ಕೆ.ಬಿ. ಸಿದ್ದಯ್ಯ ಅವರ ಶ್ರದ್ಧಾಂಜಲಿ ಸಭೆ

Posted date: 02 Dec, 2019

Powered by:     Yellow and Red

ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ಡಾ. ಚನ್ನಣ್ಣ ವಾಲೀಕಾರ ಹಾಗೂ ಡಾ.ಕೆ.ಬಿ. ಸಿದ್ದಯ್ಯ ಅವರ ಶ್ರದ್ಧಾಂಜಲಿ ಸಭೆ

ರಾಮನಗರ : ವಾಲೀಕಾರ ಅವರು ಶ್ರಮಿಕ ವರ್ಗದ ಜನರಿಗಾಗಿ ಸರ್ವತ್ವವನ್ನು ತೊರೆದ ಸಾಹಿತಿ. ಮೂಲೆಗುಂಪಾದ ಜನರ ನೋವುಗಳಿಗೆ ಪ್ರತಿಸ್ಪಂದಿಸುವ ಗುಣ ಹೊಂದಿರುವ ಅವರ ಬದುಕು ಇತರರಿಗೆ ಮಾದರಿಯಾಗಿದೆ ಎಂದು ಹಿರಿಯ ಪತ್ರಕರ್ತ ಅಬ್ಬೂರು ರಾಜಶೇಖರ ತಿಳಿಸಿದರು.


ನಗರದ ಸ್ಪೂರ್ತಿ ಭವನದಲ್ಲಿ ಜಿಲ್ಲಾ ಲೇಖಕರ ವೇದಿಕೆ ಶನಿವಾರ ಆಯೋಜಿಸಿದ್ದ ಡಾ. ಚನ್ನಣ್ಣ ವಾಲೀಕಾರ ಹಾಗೂ ಡಾ.ಕೆ.ಬಿ. ಸಿದ್ದಯ್ಯ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಚನ್ನಣ್ಣ ವಾಲೀಕಾರರು ನೆಲದ ಚಿಂತನೆಯ ನೆಲೆಯಲ್ಲಿ ದಲಿತ ಬಂಡಾಯದ ಆದಿಮದ ಜೀವಕಾರುಣ್ಯಗಳ ಕರುಳಿನ ಕಥೆಗಳನ್ನು, ಸಂಸ್ಕೃತಿಯ ಚಿಂತನೆಗಳನ್ನು ಕಥೆ, ಕಾವ್ಯ, ಕಾದಂಬರಿ, ಮಹಾಕಾವ್ಯದ ಮೂಲಕ ಇಡೀ ಸಾಹಿತ್ಯವನ್ನು ಎಚ್ಚರಗೊಳಿಸಿದ ಮಹಾಕಾವ್ಯದ ಕವಿ ಎಂದರು.


ಸಾಮ್ರಾಜ್ಯಶಾಹಿ ಧೋರಣೆ ದಿಕ್ಕರಿಸಿ ಜಾತ್ಯತೀತ ಜಾಯಮಾನದಲ್ಲಿ ಸಮಾನತೆಗಾಗಿ ಜೀವಪರವಾದ ಕಾಳಜಿಯೊಂದಿಗೆ ಬದುಕಿನ ಹೋರಾಟ ಮಾಡಿದ ದೈತ್ಯ ಧೂಮಕೇತು ಚನ್ನಣ್ಣ ವಾಲೀಕಾರ. ಸರ್ವೋದ್ಧಾರದ ಶ್ರದ್ಧೆಯೊಳಗೆ ಬೌದ್ಧಿಕತೆಯನ್ನು ಕ್ರಿಯೆ ಪ್ರಕ್ರಿಯೆಯಲ್ಲಿ ಸಂಘರ್ಷದ ಮುಖಾಂತರ ಚರ್ಚೆಗೆ ಒಳಪಡಿಸಿ ಗೆದ್ದವರು ಎಂದು ತಿಳಿಸಿದರು.


ದಲಿತರು, ಮಹಿಳೆಯರು ಹಾಗೂ ಶೋಷಿತರ ಧ್ವನಿಯಾಗಿ ಸಾಹಿತ್ಯ ರಚನೆ ಮಾಡಿದ ಚನ್ನಣ್ಣ ಮಾಲೀಕರ ಅವರು ಕನ್ನಡ ಸಾಹಿತ್ಯಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ವಾಲೀಕರ ಅವರು ಯುವಕರಲ್ಲಿ ಜಾಗೃತಿ ಮೂಡಿಸಿದರು. ಜನರ ಆರ್ಥಿಕತೆ, ಸಮಾನತೆ, ಜಾತೀಯತೆ ಕುರಿತು ಸಾಹಿತ್ಯದಲ್ಲಿ ಬೆಳಕು ಚೆಲ್ಲಿದ್ದಾರೆ ಎಂದು ತಿಳಿಸಿದರು.


ಡಾ.ಕೆ.ಬಿ.ಸಿದ್ದಯ್ಯ ಮಾನವ ಹೃದಯದ ಸಮಾಜ ಚಿಂತಕರಾಗಿದ್ದರು. ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ಪ್ರಾಮಾಣಿಕ ಹೋರಾಟಗಾರರು. ದಲಿತ ಸಂಘರ್ಷ ಸಮಿತಿ ಹುಟ್ಟು ಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸಿದ್ದಯ್ಯ ಹಾಗೂ ಚನ್ನಣ್ಣ ವಾಲೀಕಾರ ಅವರುಗಳ ನಿಧನ ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.


ಸಾಹಿತಿ ಪ್ರೊ.ಎಂ. ಶಿವನಂಜಯ್ಯ ಮಾತನಾಡಿ ಸಾಹಿತಿ ಚನ್ನಣ್ಣ ವಾಲೀಕಾರ ಬಂಡಾಯ ಸಂಘಟನೆ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಕ್ರಮ ಕಂಡರೆ ತಕ್ಷಣ ಪ್ರತಿಭಟಿಸುವ ಪ್ರವೃತ್ತಿ ಅವರದಾಗಿತ್ತು. ಜನಪರ ಚಳವಳಿಗಳಲ್ಲಿ ಪಾಲ್ಗೊಂಡು ಬಡತನ, ಜಾತಿ ನಿರ್ಮೂಲನೆ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಯುವ ಸಾಹಿತಿಗಳಿಗೆ ಅವರು ಆದರ್ಶಪ್ರಾಯವಾಗಿದ್ದಾರೆ ಎಂದರು.


ನಾಗರಿಕ ವೇದಿಕೆಯ ಅಧ್ಯಕ್ಷ ತ್ಯಾಗರಾಜು ಮಾತನಾಡಿ ದಲಿತರು ಹಾಗೂ ಶೋಷಿತರ ದನಿಯಾಗಿ ಸಾಹಿತ್ಯ ರಚನೆ ಮಾಡಿದ ಚನ್ನಣ್ಣ ಮಾಲೀಕರ ಅವರು ಕನ್ನಡ ಸಾಹಿತ್ಯಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಶಿಕ್ಷಕರಾಗಿ ವೃತ್ತಿ ಬದುಕು ಆರಂಭಿಸಿದ ಚನ್ನಣ್ಣ ವಾಲೀಕಾರ ಬಂಡಾಯ ಸಾಹಿತ್ಯದ ಮೂಲಕ ಮನೆ ಮಾತಾಗಿದ್ದರು. ಸಾಹಿತಿಯಾಗಿ, ಕವಿಯಾಗಿ, ನಾಟಕಕಾರರಾಗಿ, ಶಿಕ್ಷಕರಾಗಿ, ಉಪನ್ಯಾಸಕರಾಗಿ ದಲಿತರ ನೋವಿಗೆ ಸಾಹಿತ್ಯದ ಮೂಲಕ ಸ್ಪಂದಿಸಿದರು ಎಂದರು.


ಸ್ನೇಹ ಕೂಟ ಸಂಸ್ಥೆಯ ಅಧ್ಯಕ್ಷ ಎಚ್.ಪಿ. ನಂಜೇಗೌಡ ಮಾತನಾಡಿ ಯುವ ಬರಹಗಾರರು ಚನ್ನಣ್ಣ ವಾಲೀಕಾರ ಹಾಗೂ ಕೆ.ಬಿ. ಸಿದ್ದಯ್ಯರವರ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಬರಹಗಾರಾಗಿ ರೂಪುಗೊಳ್ಳಬಹುದು. ನಾಡಿನ ಜನರ ಸಮಸ್ಯೆ ಗುರುತಿಸಿ ಆ ಸಮಸ್ಯೆಗಳ ಆಧಾರದಲ್ಲಿ ಸಾಹಿತ್ಯ ರಚನೆ ಮಾಡಿದರು ಎಂದು ತಿಳಿಸಿದರು.


ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿಂ.ಲಿಂ. ನಾಗರಾಜ್ ಮಾತನಾಡಿ ವಾಲೀಕಾರ ಅವರು ದಲಿತರ ಹಾಗೂ ಶೋಷಿತರ ಪರವಾದ ಕಲ್ಯಾಣ ನಾಡಿನ ಪ್ರಮುಖ ಸಾಹಿತಿಯಾಗಿ ಎಲ್ಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಮಹಾಕಾವ್ಯ, ಕವನ ಸಂಕಲನ, ಕಥಾ ಸಂಕಲನ, ರಂಗಭೂಮಿ, ಜನಪದ, ಪ್ರಬಂಧ, ನಾಟಕ, ನಟನೆ, ನಿರ್ದೇಶನ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ದುಡಿದ ವಾಲೀಕಾರರು ಬಹುಮುಖಿ ಪ್ರತಿಭೆ ಎಂದರು.


ಮಹಿಳಾ ಹೋರಾಟಗಾರ್ತಿ ಅನಸೂಯಮ್ಮ ಮಾತನಾಡಿ ಕವಿ ಕೆ.ಬಿ.ಸಿದ್ದಯ್ಯ ಅವರು ಕೇವಲ ಕಾವ್ಯ, ಸಾಹಿತ್ಯ ಕ್ಷೇತ್ರಕ್ಕೆ ಸೀಮಿತವಾಗಿರದೇ ಸಾಮಾಜಿಕ ಹೋರಾಟಗಳಲ್ಲೂ ಮುಂಚೂಣಿಯಲ್ಲಿದ್ದರು. ಯಾವುದೇ ವಿಚಾರದಲ್ಲಿ ನಿಷ್ಠುರ, ನಿರ್ದಾಕ್ಷಿಣ್ಯವಾಗಿ ಮಾತನಾಡುತ್ತಿದ್ದರು. ಸಂಘಟನೆ ಹೇಗೆ ಮಾಡಬೇಕು ಎಂಬುವುದನ್ನು ಹೇಳಿ ಕೊಟ್ಟಿದ್ದಾರೆ. ಪ್ರತಿನಿತ್ಯ ಚಳವಳಿ ಕುರಿತು ಮಾತನಾಡುತ್ತಿದ್ದರು. ಅವರ ಸಾಹಿತ್ಯ, ಕವನ ಹಾಗೂ ಬರಹಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡಿ ಶೋಷಿತ ಸಮುದಾಯವನ್ನು ಎಚ್ಚರಿಸುವ ಕೆಲಸ ಮಾಡಿದೆ ಎಂದರು.


ಹಿರಿಯ ಮುಖಂಡ ಶಿವಕುಮಾರಸ್ವಾಮಿ, ಬುಡಕಟ್ಟು ಸಮುದಾಯಗಳ ಹೋರಾಟಗಾರರಾದ ಕೃಷ್ಣಮೂರ್ತಿ, ರಾಜು, ಮಂಜು, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಟಿ. ದಿನೇಶ್, ಉಪನ್ಯಾಸಕರಾದ ಅಕ್ಕೂರು ಬಸವರಾಜು, ಸಿ. ರಮೇಶ್ ಹೊಸದೊಡ್ಡಿ, ಜಿಲ್ಲಾ ಲೇಖಕರ ವೇದಿಕೆಯ ಕಾರ್ಯದರ್ಶಿ ಎಸ್. ರುದ್ರೇಶ್ವರ, ಯಲ್ಲೊ ಅಂಡ್‌ ರೆಡ್ ಫೌಂಡೇಷನ್ ಅಧ್ಯಕ್ಷ ಅಮಿತ್ ರಾಜ್ ಶಿವ, ಯುರೊ ಕಿಡ್ಸ್ ಶಾಲೆಯ ವಿಶ್ವರಾಜ ಅರಸ್, ಗಾಯಕ ಕೆಂಗಲ್ ವಿನಯ್ ಕುಮಾರ್, ಆರ್.ಕೆ. ಸತೀಶ್, ವಕೀಲ ವಿನೋದ್ ಕುಮಾರ್, ಕೆ. ಲೋಕೇಶ್, ಕವಿ ಶಿವರಂಗಪ್ಪ ಇತರರು ಪಾಲ್ಗೊಂಡಿದ್ದರು.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑