ನಗರಸಭೆ ವ್ಯಾಪ್ತಿಯಲ್ಲಿ ಕೆ ಆರ್ ಐ ಡಿ ಎಲ್ ನಿಂದ ಅರ್ಧಂಬರ್ಧ ಕೆಲಸ, ಸೊಂಟ ಮುರಿದುಕೊಂಡ ಅಂಧ ವೃದ್ಧ.
ಚನ್ನಪಟ್ಟಣ: ನಗರದ ಮಹಾತ್ಮ ಗಾಂಧಿ ರಸ್ತೆಯ ಐದು ದೀಪಗಳ (ಡೂಂಲೈಟ್ ಸರ್ಕಲ್) ವೃತ್ತ ದ ಚರಂಡಿ ಮತ್ತು ರಸ್ತೆಯ ಕಾಮಗಾರಿಯನ್ನು ಪ್ರಾರಂಭಿಸಿದ ಕೆ ಆರ್ ಐ ಡಿ ಎಲ್ ಸಂಸ್ಥೆಯು ಎರಡು ತಿಂಗಳು ಕಳೆದರೂ ಸಹ ಕೆಲವೇ ಮೀಟರ್ ಚರಂಡಿ ಮತ್ತು ರಸ್ತೆಯ ಕಾಮಗಾರಿಯನ್ನು ಮುಗಿಸದಿರುವುದರಿಂದ ಪ್ರಯಾಣಿಕರು ಮತ್ತು ಶಾಲಾ ಮಕ್ಕಳಿಗೆ ಅನಾನುಕೂಲ ಉಂಟಾಗಿರುವುದಲ್ಲದೆ ಅಂಧ ವೃದ್ಧರೊಬ್ಬರು ಚರಂಡಿಗೆ ಬಿದ್ದು ಸೊಂಟ ಮತ್ತು ತೊಡೆಯ ಮಧ್ಯ ಭಾಗದ ಮೂಳೆ ಮುರಿದುಕೊಂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕಾಮಗಾರಿಯ ಗುತ್ತಿಗೆಯನ್ನು ಬೆಂಗಳೂರಿನ ಜೆಡಿಎಸ್ ಪಕ್ಷದ ಪ್ರಭಾವಿ ನಾಯಕರ ಮಗ ಪಡೆದುಕೊಂಡಿದ್ದು ಚುನಾವಣೆಯ ಒತ್ತಡದಿಂದ ಕೆಲಸ ತಡವಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆಯಾದರೂ ಸಂಬಂಧಿಸಿದ ಅಧಿಕಾರಿ ಲಕ್ಷ್ಮಿಶ್ರೀ ಯವರ ಮೊಬೈಲ್ ನಂಬರ್ ೯೯******೬೩ ಗೆ ಆರು ಬಾರಿ ಕರೆ ಮಾಡಿ ಸಂದೇಶ ಕಳುಹಿಸಿದರೂ ಕರೆ ಸ್ವೀಕರಿಸದೇ, ಸಂದೇಶಗಳಿಗೂ ಉತ್ತರಿಸದಿರುವುದರಿಂದ ಈ ಕಾಮಗಾರಿಯಲ್ಲಿ ಇವರ ಪಾಲೇ ಹೆಚ್ಚಿರಬಹುದೇನೋ ಎಂದು ಮನದಟ್ಟಾಗುತ್ತದೆ ?
*ಶಾಲಾ ಸಿಬ್ಬಂದಿ ಮತ್ತು ನಾಗರೀಕರಿಂದ ದೂರು.*
ಪೆಟ್ಟಾ ಶಾಲೆಯ ಮಕ್ಕಳು ಓಡಾಡಲಾದರು ಚರಂಡಿಗೆ ಸ್ಲ್ಯಾಬ್ ಅಳವಡಿಸದೆ ಸಣ್ಣ ಸಣ್ಣ ಮಕ್ಕಳು ಅಷ್ಟು ದೊಡ್ಡ ಚರಂಡಿ ದಾಟಲಾಗದೆ ಮುಗ್ಗರಿಸಿ ಬಿದ್ದಿರುವುದಾಗಿ ಶಾಲೆಯ ಮುಖ್ಯೋಪಾಧ್ಯಾಯಿನಿ ಹಾಗೂ ಸಿಬ್ಬಂದಿಗಳು ಹಾಗೂ ಸ್ಥಳೀಯ ನಾಗರೀಕರಾದ ನವೀನ್ ಮತ್ತು ಸಂಗಡಿಗರು ಇಂದು ನಗರಸಭೆಯ ಪೌರಾಯುಕ್ತರಿಗೆ ದೂರು ನೀಡಿದ್ದಾರೆ.
*ಮಾಹಿತಿಯನ್ನೇ ನೀಡಿಲ್ಲ ಪೌರಾಯುಕ್ತ.*
ಕೆ ಆರ್ ಐ ಡಿ ಎಲ್ ನವರು ನಗರಸಭಾ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕಾದರೆ ನಮ್ಮ ಗಮನಕ್ಕೆ ತಂದು ಅನುಮತಿ ಪಡೆಯಬೇಕು, ಇದುವರೆಗೂ ಅವರು ನಮ್ಮ ಗಮನಕ್ಕೆ ತಂದಿಲ್ಲ. ಕರೆಗೂ ಸ್ಪಂದಿಸುತ್ತಿಲ್ಲ, ಈ ದೂರುಗಳನ್ನಾಧರಿಸಿ ಇಲಾಖೆಯ ಮುಖ್ಯಸ್ಥರಿಗೆ ಇಂದೆ ಪತ್ರ ಬರೆಯುತ್ತೇನೆ ಎಂದು ಪೌರಾಯುಕ್ತ ಶಿವನಂಕಾರಿಗೌಡ ತಿಳಿಸಿದರು.
ನಾನು ಮೊದಲೇ ಕುರುಡನಾಗಿದ್ದು ಈಗ ಸೊಂಟ ಮತ್ತು ತೊಡೆಯ ಮಧ್ಯ ಭಾಗದ ಗೋಲಾಕಾರದ (Hip Joint) ಮೂಳೆ ಮುರಿದಿದ್ದು ಮುಂದಿನ ಜೀವನ ದುಸ್ತರವಾಗಿದೆ. ಇದಕ್ಕೆ ಗುತ್ತಿಗೆದಾರ ಮತ್ತು ಅಧಿಕಾರಿಗಳೇ ನೇರ ಹೊಣೆಯಾಗಿದ್ದು ನನಗೆ ಪರಿಹಾರ ನೀಡಬೇಕೆಂದು ಒಳರೋಗಿ ವಿ ಕೃಷ್ಣ ರವರು ಪತ್ರಿಕೆಯ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ನಮ್ಮ ತಾಲ್ಲೂಕು ಪಂಚಾಯತಿಗೆ ಸಂಬಂಧಿಸಿದಂತೆ ಕೆ ಆರ್ ಐ ಡಿ ಎಲ್ ಸಂಸ್ಥೆಯ ಮೂರು ಕಾಮಗಾರಿಗಳು ಬಾಕಿ ಇದ್ದು ಇಂಜಿನಿಯರ್ ಲಕ್ಷ್ಮಿಶ್ರೀ ಯವರಿಗೆ ಎಷ್ಟು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ, ಇದನ್ನು ಅವರ ಮೇಲಾಧಿಕಾರಿಗಳ ಗಮನಕ್ಕೂ ತಂದಿದ್ದೇನೆ.
*ಚಂದ್ರು, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ.*
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು