ಕೆಲಸದ ಬಗ್ಗೆ ಹೆಚ್ಚು ಒತ್ತು ನೀಡಲು ಕ್ರೀಡೆ ಸಹಕಾರಿ ನ್ಯಾಯಮೂರ್ತಿ ನಟರಾಜ್
ಚನ್ನಪಟ್ಟಣ: ಬೆಳಿಗ್ಗೆ ಯಿಂದ ಸಂಜೆಯವರೆಗೆ ಒಂದೇ ಕಡೆ ಕುಳಿತು ಕೆಲಸ ಮಾಡುವ ಸರ್ಕಾರಿ ನೌಕರರು ಕ್ರಿಯಾಶೀಲರಾಗಲು ಕ್ರೀಡೆ ಸಹಕಾರಿಯಾಗಿದ್ದು ಕನಿಷ್ಠ ಮೂರು ತಿಂಗಳಿಗೊಮ್ಮೆಯಾದರೂ ಈ ರೀತಿಯ ದೊಡ್ಡ ಮಟ್ಟದ ಕ್ರೀಡೆಗಳು ನಡೆಯಬೇಕು ಎಂದು ಸಿವಿಲ್ ನ್ಯಾಯಾಧೀಶ ಎಸ್ ನಟರಾಜ್ ರವರು ಅಭಿಪ್ರಾಯ ಪಟ್ಟರು.
ಅವರು ಇಂದು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲ್ಲೂಕು ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ವಿದ್ಯಾಭ್ಯಾಸದ ಕಾಲದಲ್ಲಿ ಆಟವಾಡುತ್ತಿದ್ದ ನಮ್ಮನ್ನು ಪೋಷಕರು ಹುಡುಕಿ ಮನೆಗೆ ಕರೆ ತರುತ್ತಿದ್ದರು. ಆದರೆ ಇಂದಿನ ಮಕ್ಕಳನ್ನು ಆಟವಾಡಲು ಮನೆಯಿಂದ ಹೊರಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ, ಅದಕ್ಕೆ ಹಲವಾರು ವೈಯುಕ್ತಿಕ ಮತ್ತು ಸಾಮಾಜಿಕ ಕಾರಣಗಳಿದ್ದರೂ ಸಹ ಮಕ್ಕಳ ಮೊಬೈಲ್ ವ್ಯಾಮೋಹವು ಅದಕ್ಕೆ ಅಡ್ಡಿಯಾಗಿದೆ ಎಂದು ವಿಷಾದಿಸಿದರು. ಯೋಗ ದಿಂದ ಮನಸ್ಥಿತಿ ವಿಕಸನಗೊಂಡರೆ ವ್ಯಾಯಾಮದಿಂದ ದೇಹ ಉರುಪುಗೊಳ್ಳುತ್ತದೆ, ಯೋಗ ನಮ್ಮ ದೇಶದ ಕೊಡುಗೆಯಾದರೂ ನಾವು ಇನ್ನೂ ಸಂಪೂರ್ಣವಾಗಿ ಅಳವಡಿಸಿಕೊಂಡಿಲ್ಲ, ಆದರೆ ವಿದೇಶಿಯರು ಯೋಗಾಭ್ಯಾಸ ಮಾಡದೆ ಯಾವುದೇ ಕೆಲಸ ಮಾಡುವುದಿಲ್ಲ, ನಾವು ಕುಟುಂಬ ಸಮೇತವಾಗಿ ಪ್ರತಿನಿತ್ಯ ಯೋಗ ಮತ್ತು ವ್ಯಾಯಾಮಕ್ಕೆ ಸಮಯ ಮೀಸಲಿಡಬೇಕು ಎಂದು ಕಿವಿ ಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಹರೂರು ರಾಜಣ್ಣ ಮಾತನಾಡಿ ಕ್ರೀಡೆ ಎಂಬುದು ಕೇವಲ ಗೆಲುವು ಸೋಲಿನ ಆಟವಾಗಬಾರದು, ಅದು ನಮ್ಮ ದೈಹಿಕ ಕಸರತ್ತಾಗಬೇಕು, ಆಗಲೇ ನಮ್ಮ ಆರೋಗ್ಯ ಮತ್ತು ಆಯಸ್ಸು ಹೆಚ್ಚಾಗಲು ಸಾಧ್ಯ. ಕೆಲ ಉದ್ಯೋಗ ಹೊರತು ಪಡಿಸಿದರೆ ಹಲವಾರು ದೊಡ್ಡ ಮಟ್ಟದ ನೌಕರರು ಕುಳಿತೇ ಕೆಲಸ ಮಾಡಬೇಕಾಗಿದೆ, ಅವರಿಗೆ ಹಲವಾರು ರೀತಿಯ ತೊಂದರೆಗಳು ದೇಹ ಮತ್ತು ಮನಸ್ಸನ್ನು ಕಾಡುತ್ತಿರುತ್ತವೆ. ಅಂತಹ ಉದ್ಯೋಗಿಗಳಿಗೆ ಇಂದಿನ ಕ್ರೀಡಾಕೂಟ ಉಪಯುಕ್ತವಾಗಲಿದೆ ಎಂದು ಅಭಿಪ್ರಾಯ ಪಟ್ಟರು.
ತಹಶಿಲ್ದಾರ್ ಸುದರ್ಶನ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಚಂದ್ರು, ನಗರಸಭೆಯ ಪೌರಾಯುಕ್ತ ಶಿವನಂಕಾರಿಗೌಡ ರವರು ಕ್ರೀಡಾ ಪಟುಗಳಿಗೆ ಶುಭಕೋರಿದರು.
ವೇದಿಕೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ ಕೆ ಪಿ ರಾಜು, ಅಕ್ಷರ ದಾಸೋಹ ಅಧಿಕಾರಿ ಸಿದ್ದರಾಜು, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರಾಮದಾಸ್, ಕ್ಷೇತ್ರ ಸಮನ್ವಯಾಧಿಕಾರಿ ಕುಸುಮಲತಾ, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ ಮತ್ತು ಪದಾಧಿಕಾರಿಗಳು, ಶಿಕ್ಷಕ ವೃಂದ ಹಾಗೂ ಎ ಜಿ ಸ್ವಾಮಿ ಹಾಜರಿದ್ದರು.
ಗೋ ರಾ ಶ್ರೀನಿವಾಸ..
ಮೊ:9845856139.
ಪ್ರತಿಕ್ರಿಯೆಗಳು