ಸಂಕ್ರಾಂತಿಯಂದು ಅಯ್ಯನಗುಡಿ (ಕೆಂಗಲ್) ಜಾತ್ರೆ, ಸಮಿತಿಯಿಂದ ಸಕಲ ಸಿದ್ದತೆ
ಚನ್ನಪಟ್ಟಣ: ಇದೇ ತಿಂಗಳ ಸಂಕ್ರಾಂತಿ ಹಬ್ಬದ ಸಡಗರ ದೊಂದಿಗೆ ನಡೆಯಲಿರುವ ಈ ಬಾರಿಯ ಅಯ್ಯನಗುಡಿ (ಕೆಂಗಲ್) ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಬರುವ ಭಕ್ತಾದಿಗಳಿಗೆ ಅನುಕೂಲ ಮಾಡಿಕೊಡುವ ಸದುದ್ದೇಶದಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ದೇವಾಲಯದ ಪ್ರಧಾನ ಅರ್ಚಕ ರವೀಂದ್ರ ಕುಮಾರ್ ರವರು ತಿಳಿಸಿದರು. ಶನಿವಾರ ಅವರು ದೇವಾಲಯದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಜಾತ್ರೆಯಲ್ಲಿ ಸಂಪೂರ್ಣವಾಗಿ ನೀರು ಮತ್ತು ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದ್ದು ಜಾತ್ರೆಗೆ ಬರುವ ಜನ ಜಾನುವಾರುಗಳಿಗೆ ವಿಶೇಷವಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಅಲ್ಲಲ್ಲಿ ಮಾಡಲಾಗುವುದು. ಎಲ್ಲಾ ಕಡೆಯೂ ನೀರು ಸರಬರಾಜು ಮಾಡಲು ಸೂಕ್ತ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
*ಜನ ಜಾನುವಾರುಗಳಿಗೆ ಅನುಕೂಲತೆ*
ಜಾತ್ರಾ ಮಹೋತ್ಸವದಲ್ಲಿ ಜನ ಮತ್ತು ಜಾನುವಾರುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪಶುವೈದ್ಯ ಶಾಲೆಯನ್ನು ತಾತ್ಕಾಲಿಕವಾಗಿ ತೆರೆಯಲಾಗಿದ್ದು, ಪೊಲೀಸ್ ಹೊರ ಠಾಣೆಯನ್ನು ಜಾತ್ರೆ ಮುಗಿಯುವವರೆಗೆ ತೆರೆಯಲಾಗುವುದು. ಅಗ್ನಿಶಾಮಕದಳದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ದೇವಾಲಯದ ವತಿಯಿಂದ ಕೆಎಸ್ಆರ್ಟಿಸಿ ಸಂಸ್ಥೆಗೆ ಪತ್ರ ಬರೆದಿದ್ದು ರಾಮನಗರ ಮತ್ತು ಚನ್ನಪಟ್ಟಣ ಬಸ್ ನಿಲ್ದಾಣದಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕೋರಲಾಗಿದೆ ಎಂದು ಅವರು ತಿಳಿಸಿದರು.
*ಅನ್ನದಾಸೋಹ*
ಈಗಾಗಲೇ ಪ್ರತಿ ಶನಿವಾರ ದೇವಾಲಯದ ವತಿಯಿಂದ ಅನ್ನದಾಸೋಹ ನಡೆಸಲಾಗುತ್ತಿದ್ದು, ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವದ ವೇಳೆ ಐವತ್ತು ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು ಎಲ್ಲಾ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಗುವುದು ಎಂದು ಅವರು ತಿಳಿಸಿದರು.
*ಏಳು ದಿನ ನಡೆಯುವ ಜಾತ್ರೆಯ ವಿಶೇಷ ಪೂಜೆಗಳು*
ಏಳುದಿನಗಳು ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಅವರು ಜನವರಿ ೧೫ ರಂದು ನಿತ್ಯಪೂಜೆ ಶಾತುಮೊರೈ, ರಾಷ್ಟ್ರಾಶೀರ್ವಾದ ದಿಂದ ಆರಂಭಗೊಳ್ಳುವ ಜಾತ್ರಾಮಹೋತ್ಸವವು ಜನವರಿ ೧೬ ರಂದು ಸುದರ್ಶನ ಹೋಮ, ಪ್ರಾಕಾರೋತ್ಸವ, ಗರುಡೋತ್ಸವ. ಜನವರಿ ೧೭ ರಂದು ಶ್ರೀ ಆಂಜನೇಯ ಸಹಸ್ರನಾಮ ಹೋಮ, ಗಜೇಂದ್ರಮೋಕ್ಷ, ಜನವರಿ ೧೮ ರಂದು ನವಗ್ರಹ ಹೋಮ, ಲಕ್ಷ್ಮಿವೆಂಕಟೇಶ್ವರ ಕಲ್ಯಾಣೋತ್ಸವ, ನವಂಬರ್ ೧೯ ರಂದು ಕೆಂಗಲ್ ರಥೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದ್ದು ಜನವರಿ ೨೦ ರಂದು ವಸಂತೋತ್ಸವ ನಡೆಯಲಿದೆ. ಜನವರಿ ೨೧ ರಂದು ಕುಂಭಾಭಿಷೇಕ ದೊಂದಿಗೆ ಜಾತ್ರಾ ಮಹೋತ್ಸವ ಮುಕ್ತಾಯವಾಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದೇವಾಲಯದ ಕಾರ್ಯನಿರ್ವಹಣ ಅಧಿಕಾರಿ ಮಹೇಶ್, ಅರ್ಚಕ ಶರತ್ ಮಾರ್, ದೇವಾಲಯ ಸಮಿತಿ ಸದಸ್ಯರು ಮತ್ತು ಮಾಜಿ ಪಾರುಪತ್ತೇದಾರ ಲಕ್ಷ್ಮಿನರಸಿಂಹನ್ ಇನ್ನು ಮುಂತಾದವರು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು