ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿ, ಗ್ರಾಮಸ್ಥರಿಂದ ರಸ್ತೆತಡೆ ಪ್ರತಿಭಟನೆ.
ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ಕುಣಿಗಲ್ ಮುಖ್ಯರಸ್ತೆಯ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಕುಂತೂರುದೊಡ್ಡಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಚನ್ನಪಟ್ಟಣ ತಾಲೂಕಿನ ಕುಂತೂರುದೊಡ್ಡಿ ಗ್ರಾಮ ಸಮೀಪದಲ್ಲಿ ರಸ್ತೆ ಕಾಮಗಾರಿ ಕಳೆದ ಮೂರು ತಿಂಗಳಿನಿಂದ ಅರ್ಧಂಬರ್ಧ ಕಾಮಗಾರಿ ನಡೆಸಿದ ಗುತ್ತಿಗೆದಾರ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾನೆ. ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತಿದ್ದು ವಾಹನಗಳ ಓಡಾಟದಿಂದ ಎದ್ದ ಧೂಳು ಗ್ರಾಮಸ್ಥರನ್ನು ಕಂಗೆಡಿಸಿದೆ.
ಕಾಮಗಾರಿ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸಾಕಷ್ಟು ಬಾರಿ ಲೋಕೋಪಯೋಗಿ ಇಲಾಖೆಗೆ ದೂರು ನೀಡಿದ್ದರೂ ಅಧಿಕಾರಿಗಳು ಸ್ಪಂದಿಸಲಿಲ್ಲ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕುಂತೂರುದೊಡ್ಡಿ ನಿವಾಸಿಗಳು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.
ರಸ್ತೆಯಲ್ಲಿಯೇ ಚಾಪೆ, ಜಮಖಾನವನ್ನು ಹಾಸಿಕೊಂಡ ಗ್ರಾಮಸ್ಥರು ರಸ್ತೆ ಮಧ್ಯೆಯೇ ಧರಣಿ ನಡೆಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರಬೇಕು. ಟೆಂಡರ್ ಪಡೆದಿರುವ ಗುತ್ತಿಗೆದಾರನ ಲೈಸೆನ್ಸ್ ರದ್ದುಪಡಿಸಬೇಕು. ಅಲ್ಲದೇ ಕೂಡಲೇ ಕಾಮಗಾರಿಯನ್ನು ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನೂ ರಸ್ತೆ ಕಾಮಗಾರಿ ಅರ್ಧಂಬರ್ಧ ನಡೆಸಿರುವ ಪರಿಣಾಮ ವಾಹನಗಳ ಓಡಾಟದಿಂದ ಧೂಳು, ಮಣ್ಣು ಮನೆಗಳಿಗೆ ನುಗ್ಗುತ್ತಿದೆ. ಮನೆಯಲ್ಲಿನ ಬಟ್ಟೆಗಳೆಲ್ಲ ಧೂಳಿನಿಂದ ಆವೃತವಾಗಿದ, ಆಹಾರ, ನೀರು ಎಲ್ಲವೂ ಸಹ ಧೂಳಿನಿಂದ ಹಾಳಾಗಿ ತಿನ್ನಲು ಸಹ ಸಾಧ್ಯವಾಗುತ್ತಿಲ್ಲ. ಕೂಲಿನಾಲಿ ಮಾಡಿ ಆಹಾರದ ವಸ್ತುಗಳನ್ನು ಕೂಡಿಟ್ಟುಕೊಂಡ್ರೆ ಧೂಳಿನಿಂದ ಎಲ್ಲವೂ ಹಾಳಾಗ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ತಡೆಯ ಮಾಹಿತಿ ಪಡೆದ ಇಂಜಿನಿಯರ್ ನಂಜುಂಡಸ್ವಾಮಿ ಮತ್ತು ಗ್ರಾಮಾಂತರ ಪೋಲಿಸ್ ಠಾಣೆಯ ಪಿ ಎಸ್ ಐ ಪ್ರಕಾಶ್ ರವರು ಆಗಮಿಸಿ ಪ್ರತಿಭಟನಾ ನಿರತ ಗ್ರಾಮಸ್ಥರಿಗೆ ಭರವಸೆ ನೀಡಿದ ನಂತರ ರಸ್ತೆ ತಡೆ ತೆರವುಗೊಳಿಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು