ಬಡ ಮಹಿಳೆ ಖಾತೆಗೆ ಮೂವತ್ತು ಕೋಟಿ ! ಅನುಮಾನ ಮೂಡಿಸಿರುವ ಜನ ‘ಧನ’
ಚನ್ನಪಟ್ಟಣ:ಫೆ/೦೩/೨೦೨೦/ಸೋಮವಾರ.
ವಹಿವಾಟು ನಡೆಸದೇ ಸ್ಥಗಿತ ಗೊಂಡಿದ್ದ ಖಾತೆಗೆ ಮೂವತ್ತು ಕೋಟಿ ಹಣ | ಕೂಲಿಕಾರ್ಮಿಕರಿಗೆ ಆತಂಕ ತಂದಿಟ್ಟ ಅಚಾನಕ್ ಹಣ, ಶಾಕ್ ಗೆ ಒಳಗಾದ ಖಾತೆದಾರಿಣಿ.*
ಇತ್ತೀಚಿಗೆ ಕೇಂದ್ರ ಸರ್ಕಾರ ಕೆಲ ಬ್ಯಾಂಕ್ ಖಾತೆಗಳ ಮೂಲಕ ಅಕ್ರಮ ಹಣ ವಹಿವಾಟು ನಡೆದಿದೆ ಎಂಬ ಹೇಳಿಕೆ ನಿಡಿದ ಬೆನ್ನಲ್ಲೇ, ನಗರದ ಎಸ್ಬಿಎಂ ಬ್ಯಾಂಕ್ನ *ಜನಧನ ಖಾತೆ* ಯೊಂದಕ್ಕೆ ಬೇನಾಮಿಯಾಗಿ ಮೂವತ್ತು ಕೋಟಿ ಹಣ ಬಂದಿರುವುದು ಸಾಕಷ್ಟು ಅನುಮಾನ ಮೂಡಿಸಿದೆ.
ಹೂವಿನ ಹಾರದ ಚಂಡು ಕಟ್ಟುವ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬಡ ಕುಟುಂಬದ ಗೃಹಿಣಿಯ ಖಾತೆಗೆ ಅಚಾನಕ್ ಆಗಿ ಜಮೆಯಾಗಿರುವ ಕೋಟಿ ಕೋಟಿ ರೂ. ಹಣ ಕುಟುಂಬದ ನೆಮ್ಮದಿ ಕೆಡಿಸಿದ್ದು, ಈ ಹಣದ ಮೂಲದ ಬಗ್ಗೆ ಸಾಕಷ್ಟು ಕುತೂಹಲಗಳು ಮೂಡಿವೆ.
ಕೇಂದ್ರ ಸರ್ಕಾರ ಬಡವರ ಖಾತೆಗೆ ಹಣ ಹಾಕುತ್ತದೆ ಎಂಬ ದೂರದ ಆಸೆಯಿಂದ ಜನ್ಧನ್ ಯೋಜನೆಯಡಿ ಶೂನ್ಯ ಡಿಪಾಸಿಟ್ನ ಖಾತೆ ತೆರೆದಿದ್ದ ಮಹಿಳೆಗೆ ತನ್ನ ಖಾತೆಗೆ ಜಮೆಯಾದ ಹಣ ಸಂತಸ ನೀಡುವ ಬದಲು ಭಯ ಮೂಡಿಸಿದ್ದು, ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಖಾತೆಗೆದಾರರು ಈ ಪ್ರಕರಣ ಬೇಧಿಸುವಂತೆ ದುಂಬಾಲು ಬಿದಿದ್ದಾರೆ.
ನಗರದ ಬೀಡಿಕಾರ್ಮಿಕರ ಕಾಲೋನಿಯ ನಿವಾಸಿ ರೆಹಾನಾಬಾನು ಎಂಬ ಗೃಹಿಣಿ ನಗರದ ಮೂರನೇ ಅಡ್ಡರಸ್ತೆಯಲ್ಲಿರುವ ಎಸ್ಬಿಐ ಬ್ಯಾಂಕ್ನಲ್ಲಿ ೨೦೧೫ ರಲ್ಲಿ ಜನ್ಧನ್ ಯೋಜನೆಯಡಿ ಖಾತೆ ತೆರೆದಿದ್ದರು. ಆದರೆ ಈ ಖಾತೆಯಲ್ಲಿ ಯಾವುದೇ ವಹಿವಾಟು ನಡೆಸಿರಲಿಲ್ಲ. ಆದರೆ ಏಕಾಏಕಿ ಈ ಖಾತೆಯಿಂದ ಕೋಟಿ ಕೋಟಿ ವಹಿವಾಟು ನಡೆದಿರುವುದು ಹಲವು ಅನುಮಾನಗಳು ಗರಿಗೆದರುವಂತೆ ಮಾಡಿದೆ.
3 ತಿಂಗಳಲ್ಲಿ ಬಾರಿ ವಹಿವಾಟು:’
ಎಸ್ಬಿಐ ಖಾತೆಯಲ್ಲಿ ಹಲವು ವರ್ಷಗಳಿಂದ ಯಾವುದೇ ವಹಿವಾಟು ನಡೆಯದೆ ಸ್ಥಗಿತಗೊಂಡಿದ್ದ 64163569441 ಉಳಿತಾಯ ಖಾತೆಯಲ್ಲಿ ೨೦೧೯ ರ ಸೆಪ್ಟಂಬರ್ ನಿಂದ ಡಿಸೆಂಬರ್ ವರೆಗೆ ನಿರಂತರ ವಹಿವಾಟು ನಡೆದಿದೆ. ಪ್ರತಿದಿನ ಹತ್ತಾರು ಬಾರಿ ವಹಿವಾಟು ನಡೆದಿದ್ದು, ದೇಶದ ವಿವಿಧ ಭಾಗಗಳಿಂದ ಈ ಖಾತೆಗೆ ಹಣ ಜಮೆಯಾಗಿದೆ. ಬ್ಯಾಂಕ್ ಅಧಿಕಾರಿಗಳು ಕೇವಲ 30 ಲಕ್ಷ ರೂ. ಹಣ ವಹಿವಾಟು ನಡೆದಿದೆ ಎನ್ನುತ್ತಿದ್ದರೆ, ಖಾತೆಯ ಗ್ರಾಹಕರು 29.99 ಕೋಟಿ ರೂ. ನಮ್ಮ ಖಾತೆಯಲ್ಲಿದೆ ಎಂದು ಹೇಳುತ್ತಿದ್ದಾರೆ.
ಐದುವರ್ಷಗಳಿಂದ ಸ್ಥಗಿತ ಗೊಂಡಿದ್ದ ಖಾತೆಯಲ್ಲಿ ಇದೀಗ ಏಕಾಏಕಿ ಕೋಟಿ ಕೋಟಿ ವಹಿವಾಟು ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು. ಈ ಖಾತೆಗೆ ಜಮೆಯಾಗಿರುವ ಹಣ ಯಾವುದು? ಈ ಖಾತೆಯಲ್ಲಿ ಯಾರು ಹಣದ ವಹಿವಾಟು ನಡೆಸಿದ್ದಾರೆ ಎಂಬ ಅನುಮಾನಗಳಿಗೆ ಪೊಲೀಸ್ ತನಿಖೆಯಿಂದಷ್ಟೇ ಉತ್ತರ ದೊರಕಬೇಕಿದೆ.
ಬ್ಯಾಂಕ್ ಅಧಿಕಾರಿಗಳ ಬಗ್ಗೆಯೇ ಅನುಮಾನ:
ತಮ್ಮ ಖಾತೆಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಖಾತೆದಾರರಾದ ರೆಹಾನಾಭಾನು, ೨೦೧೯ ಡಿ.೦೨ ರ ಸಂಜೆ ನಮ್ಮ ಮನೆಬಾಗಿಲಿಗೆ ಬಂದ ಎಸ್ಬಿಐ ಬ್ಯಾಂಕ್ ಸಿಬ್ಬಂದಿ ನಿಮ್ಮ ಖಾತೆಗೆ ಬಾರಿ ಮೊತ್ತದ ಹಣ ಬಂದಿದೆ. ಬ್ಯಾಂಕ್ಗೆ ಬಂದು ನಿಮ್ಮ ಆಧಾರ ಕಾಡ್೯ ಕೊಡಿ ಎಂದು ತಿಳಿಸಿದ್ದಾರೆ.
ಅದರಂತೆ ಬ್ಯಾಂಕ್ಗೆ ಹೋದಾಗ ಅರ್ಜಿಯೊಂದಕ್ಕೆ ಸಹಿಮಾಡಿಸಿಕೊಂಡು ಕಳುಹಿಸಿದ್ದಾರೆ. ನಮ್ಮ ಖಾತೆ ಹಾಗೂ ಖಾತೆಯಲ್ಲಿರುವ ಹಣದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಬಳಿಕ ೨೦೧೯ ಡಿ.೦೫ ರಂದು ಎಟಿಎಂನಲ್ಲಿ ನಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ 29,99,74,084 ರೂ. ಹಣ ಜಮೆಯಾಗಿರುವ ಮಾಹಿತಿ ತಿಳಿದು ಪೊಲಿಸ್ ಠಾಣೆಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.
*ಆನ್ಲೈನ್ ವಂಚಕರ ಶಂಕೆ*
ದೂರು ದಾರರು ಆನ್ಲೈನ್ನಲ್ಲಿ ಸೀರೆ ಖರೀದಿಮಾಡಿದ್ದಾಗ ಬೇನಾಮಿ ವ್ಯಕ್ತಿಯೊಬ್ಬರು ಕರೆಮಾಡಿ ಖಾತೆಯ ಎಲ್ಲಾ ಮಾಹಿತಿಯನ್ನು ಪಡೆದಿದ್ದರು. ಅವರೇ ನನ್ನ ಖಾತೆಯನ್ನು ದುರ್ಬಳಕೆ ಮಾಡಿಕೊಂಡು ಹಣದ ವ್ಯವಹಾರ ನಡೆಸುತ್ತಿರಬಹುದು ಎಂಬ ಸಂದೇಹ ಖಾತೆದಾರರಾದ ರೆಹನಾಬಾನು ಅವರದ್ದಾಗಿದೆ. ಈ ಬಗ್ಗೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಣೆ ನೀಡಿರುವ ಅವರು ೨೦೧೯ ಸೆ. ೦೪ ರಂದು ನನ್ನ ಮೊಬೈಲ್ ಪೋನ್ಗೆ ಕರೆಮಾಡಿ, ನಿಮ್ಮ ಖಾತೆಯ ಮಾಹಿತಿ ಕೊಡಿ ಬಹುಮಾನದ ಹಣ ಹಾಕುತ್ತೇವೆ ಎಂದು ವಿವರ ಪಡೆದಿದ್ದರು ಅವರೇ ಈ ರೀತಿ ಮಾಡಿದ್ದಾರೆ ಎಂದು ಶಂಕಿಸಿದ್ದಾರೆ.
*೩೦ ಕೋಟಿ ಅಲ್ಲ, ೩೦ ಲಕ್ಷ:*
ಜನ್ಧನ್ ಖಾತೆಯಲ್ಲಿ ೩೦ ಕೋಟಿ ರೂ.ವಹಿವಾಟು ನಡೆದಿಲ್ಲ, ಕೇವಲ ೩೦ ಲಕ್ಷ ರೂ. ನಷ್ಟು ಮಾತ್ರ ವಹಿವಾಟು ನಡೆದಿದೆ. ೦೩ ರಿಂದ ೦೫ ಸಾವಿರ ರೂ. ಒಳಗೆ ವಹಿವಾಟು ನಡೆದಿರುವ ಕಾರಣ ನಮ್ಮ ಗಮನಕ್ಕೆ ಬಂದಿಲ್ಲ. ಲಕ್ಷ ರೂ. ವಹಿವಾಟು ನಡೆಸಿದ್ದರೆ ನಮ್ಮ ಗಮನಕ್ಕೆ ಬರುತಿತ್ತು ಎಂಬುದು ಎಸ್ಬಿಎಂ ಬ್ಯಾಂಕ್ ಅಧಿಕಾರಿಗಳ ವಿವರಣೆಯಾಗಿದೆ.
ಈ ಬಗ್ಗೆ ಅಧಿಕೃತ ಹೇಳಿಕೆ ನೀಡಲು ನಿರಾಕರಿಸುವ ಇಲ್ಲಿನ ಎಸ್ಬಿಐ ಶಾಖಾ ವ್ಯವಸ್ಥಾಪಕ ಶ್ರೀನಿವಾಸ್ ಮೂರ್ತಿ, ಆಫ್ ದಿರೆಕಾರ್ಡ್ ಎಂದು ಹೇಳುವ ವಿವರದ ಪ್ರಕಾರ, ಚಂಡಿಗಢದ ಪೊಲೀಸರು ಈ ಖಾತೆಯಲ್ಲಿ ಆನ್ಲೈನ್ ವಂಚನೆಯಾಗಿರುವ ಬಗ್ಗೆ ದೂರು ದಾಖಲಾಗಿದೆ, ಮಾಹಿತಿ ನೀಡಿ ಎಂದು ತಿಳಿಸಿದರು. ಈ ಕಾರಣಕ್ಕೆ ಅವರ ಆಧಾರ್ ಕಾರ್ಡ್ ಪಡೆದಿದ್ದೇವೆ. ತೆಲಂಗಾಣ, ಪುಣೆ ಮೊದಲಾದ ಕಡೆಗಳಿಂದ ಆನ್ಲೈನ್ನಲ್ಲಿ ವಂಚಿಸಿ ಈ ಖಾತೆಗೆ ಹಣ ಜಮೆಯಾಗಿರುವ ಬಗ್ಗೆ ಬ್ಯಾಂಕ್ಗೆ ಮಾಹಿತಿ ಲಭ್ಯವಾಗಿದೆ ಎಂದು ವಿವರಿಸಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಲು ನಿರಾಕರಿಸುತ್ತಾರೆ.
*ಪ್ರಕರಣದ ಸುತ್ತಾ ಅನುಮಾನಗಳ ಹುತ್ತಾ*
*ಜನ್ಧನ್ ಖಾತೆಯಲ್ಲಿ ಕೋಟಿ ರೂ. ವಹಿವಾಟು ನಡೆದಿದೆ ಎಂಬ ಸುದ್ದಿ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಇಷ್ಟೋಂದು ಹಣ ಕೇವಲ ೦೩ ತಿಂಗಳ ಅವಧಿಯಲ್ಲಿ ವಹಿವಾಟು ನಡೆದಿರುವಾಗ ಬ್ಯಾಂಕ್ ಅಧಿಕಾರಿಗಳು ಗಮನಿಸದಿರುವುದು ಯಾಕೆ? ಈ ಖಾತೆಗೆ ಜಮೆಯಾಗಿರುವು ಹಣ ಯಾವುದು? ಯಾರು ಈ ಖಾತೆಯಲ್ಲಿ ಬೇನಾಮಿಯಾಗಿ ವಹಿವಾಟು ಮಾಡಿದ್ದಾರೆ ಎಂಬ ಪ್ರಶ್ನೆಗಳಿಗೆ ಪೊಲೀಸರ ತನಿಖೆಯಿಂದ ಉತ್ತರ ತಿಳಿಯಬೇಕಿದೆ.*
*ಬ್ಯಾಂಕ್ ಖಾತೆ ಮೂಲಕ ವಹಿವಾಟು ನಡೆದಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ದೂರು ದಾರರು ಹೇಳುತ್ತಿರುವಂತೆ ಅಷ್ಟೊಂದು ಹಣ ವಹಿವಾಟು ನಡೆದಿಲ್ಲ, ಕೆಲ ಲಕ್ಷಗಳು ಖಾತೆಯಲ್ಲಿ ವರ್ಗಾವಣೆಯಾಗಿದೆ. ಈಬಗ್ಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದು, ಸಮಗ್ರ ತನಿಖೆ ಬಳಿಕ ನಿಜಾಂಶ ತಿಳಿದು ಬರಲಿದೆ ಎಂದು ರಾಮನಗರ ಜಿಲ್ಲಾ ಎಸ್ಪಿ ಡಾ.ಅನೂಪ್.ಎ.ಶೆಟ್ಟಿ ಮಾಹಿತಿ ನೀಡಿದ್ದಾರೆ.*
ನಾವು ಕೂಲಿ ಮಾಡಿ ಜೀವನ ಮಾಡುತ್ತಿದ್ದೇವೆ. ನಮ್ಮ ಖಾತೆಯನ್ನು ಯಾರೋ ದುರ್ಬಳಕೆ ಮಾಡಿಕೊಂಡಿದ್ದಾರೆ. ನಮ್ಮ ದೂರನ್ನು ದಾಖಲಿಸಿಕೊಳ್ಳಲು ಪೊಲೀಸರು ವಿಳಂಭ ಮಾಡಿದರು. ಎಎಸ್ಪಿ ರಾಮರಾಜನ್ ಅವರ ಸೂಚನೆಯ ಬಳಿಕ ಎಫ್ಐಆರ್ ದಾಖಲಿಸಲಾಯಿತು. ಪೊಲೀಸರು ತನಿಖೆ ನಡೆಸಿ ನಮಗೆ ವಂಚನೆ ಮಾಡಿರುವ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸಬೇಕು. ನಮ್ಮ ಕುಟುಂಬ ಎದುರಿಸುತ್ತಿರುವ ಆತಂಕಕ್ಕೆ ಪರಿಹಾರ ನೀಡಬೇಕು ಎಂದು ಖಾತೆದಾರಿಣಿ ರೆಹಾನಾಬಾನು ಪತಿ ಸೈಯ್ಯದ್ ಮಲ್ಲಿಕ್ ಬುರಾನ್ ರವರ ಕೋರಿಕೆಯಾಗಿದೆ.*
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು