ಬೊಂಬೆನಾಡಿನಲ್ಲಿ ಬಮೂಲ್ ಮಹೋತ್ಸವ, ಹದಿನೈದು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ, ಜಯಮುತ್ತು
ತಾಲ್ಲೂಕಿನ ಹದಿನೈದು ಸಾವಿರಕ್ಕೂ ಹೆಚ್ಚಿರುವ ಹೈನೋದ್ಯಮಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಮೂಲ್ ವತಿಯಿಂದ ಈ ಭಾಗದ ಹೈನುಗಾರಿಕೆಯ ರೈತರನ್ನು ಉತ್ತೇಜಿಸಲು ಹಾಗೂ ಒಂದೇ ಸೂರಿನಡಿ ಬಮೂಲ್ ಉತ್ಸವದ ವಿಶೇಷತೆಗಾಗಿ ಹಲವಾರು ಮೇಳಗಳನ್ನು ಮಾರ್ಚಿ ತಿಂಗಳ ೦೫ ರ ಗುರುವಾರ ಬೆಳಿಗ್ಗೆ ೧೦:೦೦ ಗಂಟೆಗೆ ತಾಲ್ಲೂಕಿನ ದೊಡ್ಡಮಳೂರು ಗ್ರಾಮದ ಶ್ರೀ ಚೌಡೇಶ್ವರಿ ಕಲ್ಯಾಣ ಮಹಲ್ ಪಕ್ಕದಲ್ಲಿ ಆಯೋಜನೆ ಮಾಡಿರುವುದಾಗಿ ಬಮೂಲ್ ನಿರ್ದೇಶಕ ಜಯಮುತ್ತು ತಿಳಿಸಿದರು.
ಅವರು ಇಂದು ತಾಲ್ಲೂಕಿನ ದೊಡ್ಡಮಳೂರು ಗ್ರಾಮದಲ್ಲಿನ ಶ್ರೀ ರಾಮ ಮಂದಿರದಲ್ಲಿ ಬಮೂಲ್ನಿಂದ ಆಯೋಜಿಸಲಾಗಿದ್ದ, ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ನಮ್ಮ ಬೊಂಬೆನಾಡಿನ ನಗರದಲ್ಲಿ ಬಮೂಲ್ ಉತ್ಸವ ನಡೆಯುತ್ತಿದ್ದು, ಈ ಉತ್ಸವದಲ್ಲಿ ತಾಲ್ಲೂಕಿನಿಂದ ಹದಿನೈದರಿಂದ ರಿಂದ ಹದಿನೆಂಟು ಸಾವಿರ ಮಂದಿ ಹೈನುಗಾರಿಕೆಯ ರೈತರು ಭಾಗವಹಿಸುವ ನಿರೀಕ್ಷೆ ಇದ್ದು ಸ್ಥಳೀಯ ಹಾಲು ಉತ್ಪಾದಕ ಸಂಘದ ಕಾರ್ಯದರ್ಶಿ ಮತ್ತು ಸಂಘದ ಪದಾಧಿಕಾರಿಗಳ ಮೂಲಕ ಆಹ್ವಾನ ನೀಡಲಾಗುವುದು ಎಂದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಬೊಂಬೆ ತಯಾರಿಕೆಯಲ್ಲಿ ಖ್ಯಾತಿ ಪಡೆದಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಚನ್ನಪಟ್ಟಣದಲ್ಲಿ ಅದ್ದೂರಿಯಾಗಿ ಬಮೂಲ್ ಉತ್ಸವ ನಡೆಯುತ್ತಿದ್ದು, ಈ ಉತ್ಸವದಲ್ಲಿ ಹೈನುಗಾರಿಕೆಯ ರೈತರಿಗೆ ಅನುಕೂಲವಾಗಲೆಂದು *ಆರೋಗ್ಯ ಮೇಳ, ಕೃಷಿಮೇಳ, ಹಾಲು ಕರೆಯುವ ಯಂತ್ರದಿಂದ ಪ್ರಾರಂಭವಾಗಿ ಕೃಷಿಯ ಪ್ರತಿಯೊಂದು ಯಂತ್ರ ಹಾಗೂ ಸಲಕರಣೆಗಳ ಪ್ರದರ್ಶನ, ಮಿಶ್ರತಳಿ ಕರುಗಳ ಪ್ರದರ್ಶನ* ಹಾಗೂ ಹೈನುಗಾರಿಕೆ ರೈತರು ಹಾಗೂ ಎಲ್ಲಾ ರೈತಾಪಿ ವರ್ಗದವರಿಗೆ ನುರಿತ ತಜ್ಞರಿಂದ ಉಪನ್ಯಾಸವನ್ನು ಆಯೋಜಿಸಲಾಗಿದೆ ಎಂದರು.
ಜಾನುವಾರುಗಳಲ್ಲದೆ ಸಾಕಾಣಿಕೆದಾರರ ಆರೋಗ್ಯ ದೃಷ್ಟಿಯಿಂದ ಕೆಂಪೇಗೌಡ ಆಸ್ಪತ್ರೆ ಸೇರಿದಂತೆ ಬೆಂಗಳೂರಿನ ಅನೇಕ ಆಸ್ಪತ್ರೆಗಳ ತಜ್ಞ ವೈದ್ಯರುಗಳು ಆರೋಗ್ಯ ತಪಾಸಣೆಗೆ ಬರಲಿದ್ದು ಎಲ್ಲಾ ಹೈನೋದ್ಯಮಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಇದೇ ವೇಳೆ ತಿಳಿಸಿದರು.
ಸಮಾರಂಭದಲ್ಲಿ ಮೊದಲು ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಸಮಾರಂಭದ ದಿವ್ಯ ಸಾನಿಧ್ಯ ಹಾಗೂ ಆಶೀರ್ವಚನ ವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮಪೂಜ್ಯ ವೀರೇಂದ್ರ ಹೆಗ್ಗಡೆರವರು ನುಡಿಯಲಿದ್ದು, ಉಪಸ್ಥಿತಿಯನ್ನು ಮಾಜಿ ಪ್ರಧಾನಿ ದೇವೇಗೌಡರು ವಹಿಸುವರು.
ಸಮಾರಂಭದ ಉದ್ಘಾಟನೆಯನ್ನು ರಾಜ್ಯದ ಉಪಮುಖ್ಯಮಂತ್ರಿಗಳಾದ ಅಶ್ವಥ್ನಾರಾಯಣ್ ಮಾಡಲಿದ್ದು, ಅಧ್ಯಕ್ಷತೆಯನ್ನು ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಕೆಎಂಎಫ್ ನ ಅಧ್ಯಕ್ಷ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಹಲವಾರು ಮುಖಂಡರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಮೂಲ್ ಉಪ ವ್ಯವಸ್ಥಾಪಕ ಡಾ|| ಕೆಂಪರಾಜು, ಬೆಂಗಳೂರು ಬಮೂಲ್ ವ್ಯವಸ್ಥಾಪಕ ಬಿ.ಕೆ.ದೇವರಾಜು, ಚಂದ್ರಪ್ಪ, ವಿಸ್ತರಣಾಧಿಕಾರಿ ಹೊನ್ನಯ್ಯ ಪೂಜಾರ್, ಸಂಘದ ಅಧ್ಯಕ್ಷ ಪುಟ್ಟೇಗೌಡ, ದೇವರಾಜು ಹಾಗೂ ಹಲವಾರು ಮಂದಿ ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು