ಕೃಷಿ ಭೂಮಿ ಕಿತ್ತುಕೊಂಡು ರೈತರನ್ನೂ ನಿರ್ಗತಿಕರಾಗಿ ಮಾಡಲೊರಟಿರುವ ಸರ್ಕಾರ ತಕ್ಕ ಬೆಲೆ ತೆರಬೇಕಾಗುತ್ತದೆ ಸಿ ಪುಟ್ಟಸ್ವಾಮಿ
ಚನ್ನಪಟ್ಟಣ: ರಾಜ್ಯ ಸರ್ಕಾರವು ಕೃಷಿ ಭೂಮಿಗೆ ಸಂಬಂಧಿಸಿದ ಸೆಕ್ಷನ್ ೭೯ ಎ ಮತ್ತು ಬಿ ಯನ್ನು ರದ್ದು ಪಡಿಸಿ ಅನ್ನದಾತನ ಬೆನ್ನಿಗೆ ಬರೆ ಎಳೆದು ಬಲಾಢ್ಯರು ಭೂಮಿಯನ್ನು ಕಬಳಿಸಲು ಅನುಕೂಲವಾಗುವಂತೆ ಕಾನೂನು ರೂಪಿಸುತ್ತಿರುವುದು ಅತ್ಯಂತ ಹೇಯ ಕೃತ್ಯವಾಗಿದ್ದು ತಕ್ಷಣ ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಯ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ, ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ದೇವರಾಜ ಅರಸು ರವರು ದೇಶಕ್ಕೆ ಅನ್ನ ನೀಡುವ ಈ ಕೃಷಿ ಭೂಮಿಯು ರೈತನ ಬಳಿಯೇ ಇರಬೇಕು, ಇದು ಬಂಡವಾಳ ಶಾಹಿಗಳ ವಶವಾಗಬಾರದು ಎಂಬ ಸದುದ್ದೇಶದಿಂದ ೨ ಲಕ್ಷ ರೂಪಾಯಿ ಗಿಂತ ಹೆಚ್ಚಿನ ಆದಾಯ ಇರುವವರು ಕೃಷಿ ಭೂಮಿ ಖರೀದಿ ಮಾಡಬಾರದೆಂದು ಕಾನೂನು ರೂಪಿಸಿದ್ದರು.
ಅರಸು ರವರ ಮಾರ್ಗದರ್ಶನದಲ್ಲಿಯೇ ನಡೆಯುತ್ತೇನೆ ಎಂದು ಅಧಿಕಾರ ಸವಿದ ಸಿದ್ದರಾಮಯ್ಯ ವಿರೋಧಗಳ ನಡುವೆಯೂ ೨೫ ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಆದಾಯ ಇರುವವರು ಕೃಷಿ ಭೂಮಿ ಕೊಳ್ಳಬಾರದು ಎಂದು ತಿದ್ದುಪಡಿ ಮಾಡಿ ಕೆಲ ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿಕೊಟ್ಟರು.
ಇವರೆಲ್ಲರನ್ನು ಹಿಂದಿಕ್ಕುವ ಭರದಲ್ಲಿ ಈಗಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಕೃಷಿ ಭೂಮಿ ಖರೀದಿಗೆ ಸಂಬಂಧಿಸಿದ ೭೯ಎ ಮತ್ತು ಬಿ ಸೆಕ್ಷನ್ ನ್ನೇ ರದ್ದು ಮಾಡಲು ದಾಪುಗಾಲಿಟ್ಟಿರುವುದು ದುರದೃಷ್ಟಕರ.
ಇದಕ್ಕೆ ಕೈ ಜೋಡಿಸುತ್ತಿರುವ ಕಂದಾಯ ಮಂತ್ರಿ ಆರ್ ಅಶೋಕ್ ಮತ್ತು ಅಧಿಕಾರಿಗಳು ಏನು ಸಾಧಿಸಲೊರಟಿದ್ದಾರೆ. ಇದರಿಂದ ಮುಂದಿನ ಕೃಷಿ ಸ್ವಾವಲಂಬನೆಗೆ ಸಾರುವ ಸಂದೇಶವಾದರೂ ಏನು ?
ಒಂದು ಎಕರೆ ಕೃಷಿ ಭೂಮಿಗೆ ನೀರು ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸಿದರೆ ನೂರಾರು ಮಂದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ದೊರಕುತ್ತದೆ. ಬಹಳ ಮುಖ್ಯವಾಗಿ ಇಂದಿನ ಪರಿಸರಕ್ಕೆ ಬೇಕಾದ ಎಲ್ಲಾ ಉತ್ಪನ್ನಗಳು ದೊರೆಯಲಿವೆ.
ಅದೇ ಒಂದು ಎಕರೆ ಭೂಮಿಯಲ್ಲಿ ಕೈಗಾರಿಕೆ ಬಂದರೇ ಹತ್ತು ಮಂದಿಗೆ ಕೆಲಸ ಸಿಗಬಹುದು ! ಇಂದಿನ ರೊಬೋಟ್ ಯುಗದಲ್ಲಿ ಅದೂ ಸಹ ಅಸಾಧ್ಯವಾದರೆ ಅಚ್ಚರಿ ಪಡಬೇಕಿಲ್ಲ. ರೈತರು ಕೇವಲ ಅನ್ನವನ್ನಷ್ಟೇ ಬೆಳೆದುಕೊಡುತ್ತಿಲ್ಲ ! ತಮ್ಮ ಶಕ್ತಿ ಮೀರಿ ಪ್ರಾಣವಾಯು (ಆಮ್ಲಜನಕ) ವನ್ನು ಪ್ರತಿಕ್ಷಣವೂ ತಮ್ಮ ಪರಿಶ್ರಮದಿಂದ ಪರಿಸರಕ್ಕೆ ತುಂಬುತ್ತಿರುವುದು ಗೌಣವಾಗಿಯೇ ಉಳಿದಿದೆ.
ಕೃಷಿ ಭೂಮಿಯನ್ನು ಹೊಂದಿರುವ ಬಂಡವಾಳ ಶಕ್ತಿಶಾಹಿಗಳು ವ್ಯವಸ್ಥೆಯ ಲಾಭ ಪಡೆಯಲು ಸ್ವತ: ಉಳುಮೆ ಮಾಡದ ಮಾಲೀಕತ್ವ ಹೊಂದಿರುತ್ತಾರೆ. ಉಳುಮೆ ಮಾಡದೇ ಬೀಳು ಬಿಟ್ಟಿರುವ ಬಂಡವಾಳ ಶಾಹಿಗಳ ಭೂಮಿಯನ್ನು ವಶಕ್ಕೆ ಪಡೆದು ಉಳುವ ರೈತರಿಗೆ ಕೊಡುವ ಅಥವಾ ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿ ಕಾರ್ಯಗಳಿಗೆ ಉಪಯೋಗಿಸಿಕೊಳ್ಳಬಹುದು.
೧,೦೦೦ ಎಕರೆ ಕೃಷಿ ಭೂಮಿಯಲ್ಲಿ ಕೈಗಾರಿಕೆ ತೆರೆದರೆ ೧೦,೦೦೦ ಮಂದಿಗೆ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬ ಸುಳ್ಳನ್ನು ಮೊದಲು ಬಿಡಿ, ರೈತರ ಹಸಿರು ಶಾಲನ್ನು ಮೈಮೇಲೆ ಒದ್ದುಕೊಂಡು, ರೈತರಿಗಾಗಿಯೇ ಬಜೆಟ್ ಎಂದು ಘೋಷಿಸುವುದನ್ನು ಬಿಟ್ಟು ಒಬ್ಬ ರೈತನಿಗೆ ದೊರಕಬೇಕಾದ ಮೂಲಭೂತ ಸೌಕರ್ಯ ಅಂದರೆ, ನೀರು, ವಿದ್ಯುತ್ ಮತ್ತು ಮಾರುಕಟ್ಟೆಯನ್ನು ಸೃಷ್ಟಿಸಿಕೊಟ್ಟರೆ ಇಡೀ ಪ್ರಪಂಚಕ್ಕೆ ರೈತ ಮಾದರಿಯಾಗಬಲ್ಲ.
ನಾನು ರೈತಪರ, ನಾವು ರೈತರು, ನಾವು ಮಣ್ಣಿನ ಮಕ್ಕಳು ಎಂದು ಬಿಂಬಿಸಿಕೊಳ್ಳುತ್ತಿದ್ದ ಹೆಚ್ ಡಿ ದೇವೇಗೌಡರು ಸಹ ಭೂಮಿತಿ ಕಾಯ್ದೆಯನ್ನೇ ರದ್ದು ಮಾಡಿದ್ದು ನಂತರ ಅವರ ಸರ್ಕಾರ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯಸಂಗತಿ.
ವಿರೋಧ ಪಕ್ಷಗಳು ಎಚ್ಚೆತ್ತುಕೊಂಡು ಅಧಿವೇಶನದಲ್ಲಿ ಮಂಡಿಸುವ ಮುನ್ನವೇ ಈ ಕಾನೂನನ್ನು ಜಾರಿಗೆ ತರದಂತೆ ವಿರೋಧಿಸಬೇಕು. ಇಲ್ಲವಾದರೆ ರೈತರು ಮತ್ತು ವಿದ್ಯಾರ್ಥಿಗಳ ಸಮೂಹ ಬೀದಿಗಿಳಿಯಬೇಕಾಗುತ್ತದೆ ಎಚ್ಚರ.
ಉಚ್ಚ ನ್ಯಾಯಾಲಯಗಳ ಆದಿಯಾಗಿ ೭೯ಎ ಮತ್ತು ಬಿ ಕಾಯಿದೆಯ ಮಹತ್ವವನ್ನು ಎತ್ತಿ ಹಿಡಿದಿರುವ ಸಂಗತಿಗಳು ಜೀವಂತವಾಗಿವೆ.
ಈ ಪ್ರಸ್ತಾವನೆಯನ್ನು ಸಾರ್ವಜನಿಕರ ಚರ್ಚೆಗೆ ಅನುವು ಮಾಡಿಕೊಡಬೇಕಾದ್ದು ನಾಗರೀಕ ಸರ್ಕಾರದ ಕರ್ತವ್ಯ.
ಸಿ ಪುಟ್ಟಸ್ವಾಮಿ. ಚನ್ನಪಟ್ಟಣ.
ಕ ರಾ ರೈ ಸಂಘ ಮತ್ತು ಹಸಿರು ಸೇನೆ ನಿ ಪೂ ಪ್ರಧಾನ ಕಾರ್ಯದರ್ಶಿ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು