ಕೊರೊನಾ; ಎಚ್ಚರಿಕೆಯ ನಡೆ ಇಡುತ್ತಿರುವ ನಗರಸಭೆ. ರಸ್ತೆ ಬದಿಯ ಹೋಟೆಲ್ ಗಳು ಬಂದ್
ಚನ್ನಪಟ್ಟಣ: ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ನಗರಸಭೆಯು ಎಚ್ಚೆತ್ತುಕೊಂಡಿದ್ದು ಬೀದಿ ಬದಿಯ ಹೋಟೆಲ್ ಗಳು, ತಳ್ಳುವ ಗಾಡಿಗಳಲ್ಲಿ ಮಾರುವ ಊಟದ ಹೋಟೆಲ್ ಗಳನ್ನು ಮುಚ್ಚಿಸುತ್ತಿದ್ದಾರೆ.
ಬೆಳಿಗ್ಗೆ ಮತ್ತು ಸಂಜೆ ನಗರದ ಹೈವೇ ರಸ್ತೆಗಳಲ್ಲದೇ, ಹಲವಾರು ಬೀದಿಗಳಲ್ಲಿ ನಾಯಿಕೊಡೆಗಳಂತೆ ಪುಟ್ ಪಾತ್ ಆವರಿಸಿಕೊಂಡಿರುವ ಹೋಟೆಲ್ ಗಳನ್ನು ಕೊರೊನಾ ವೈರಸ್ ಸಂಬಂಧ ಮುಚ್ಚಿಸುತ್ತಿರುವುದು ಶ್ಲಾಘನೀಯ ವಾದರೂ ಸಾರ್ವಜನಿಕರು ಓಡಾಡಲು ಸೀಮಿತವಾದ ರಸ್ತೆಯನ್ನು ಶಾಶ್ವತವಾಗಿ ತೆರವುಗೊಳಿಸಬೇಕಾಗಿದೆ.
ಪೌರಾಯುಕ್ತ ಶಿವನಂಕಾರಿಗೌಡರು ಈಗಾಗಲೇ ಕೋಳಿ ಮಾಂಸ, ಮೇಕೆ ಮತ್ತು ಕುರಿ ಮಾಂಸ, ಪಶು ಮಾಂಸದ ಅಂಗಡಿಗಳ ಮಾಲೀಕರನ್ನು ಕರೆದು ಶುಚಿತ್ವದ ಬಗ್ಗೆ ಸಭೆ ನಡೆಸಿ ಎಚ್ಚರಿಕೆ ನೀಡಿದ್ದರಾದರೂ ಯಾವ ಮಾಂಸದಂಗಡಿಗಳೂ ಸಹ ಬಾಗಿಲು ಮುಚ್ಚುವುದಿರಲಿ, ಶುಚಿತ್ವಕ್ಕೆ ಕೊಂಚವೂ ಆದ್ಯತೆ ಕೊಡದಿರಿವುದು ಬೇಜಾವಾಬ್ದಾರಿಯ ಕೆಲಸವಾಗಿದೆ.
ಎಲ್ಲಾ ರೀತಿಯ ಮಾಂಸದಂಗಡಿಗಳ ಮಾಲೀಕರನ್ನು ಕರೆದು ಶುಚಿತ್ವಕ್ಕೆ ಮಹತ್ವ ನೀಡುವಂತೆ ಆದೇಶಿಸಲಾಗಿದ್ದು, ಪುಟ್ ಪಾತ್ ನಲ್ಲಿರುವ ಹೋಟೆಲ್ ಗಳನ್ನು ಈಗಾಗಲೇ ಮುಚ್ಚಿಸಲಾಗಿದ್ದು, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ಶಿವನಂಕಾರಿಗೌಡ ರು ಪತ್ರಿಕೆಗೆ ತಿಳಿಸಿದರು.
ಗಬ್ಬು ನಾರುತ್ತಿರುವ ಚರಂಡಿಗಳು, ಕಸದ ತೊಟ್ಟಿಗಳು, ಬೀದಿಬದಿಗಳು ಸೇರಿದಂತೆ ಅನೇಕ ಕಡೆ ಫಾಗಿಂಗ್ ಮಾಡುವುದರ ಜೊತೆಗೆ ಆಟೋ ಮೂಲಕ ಅರಿವು ಮೂಡಿಸುತ್ತಿರುವುದಾಗಿ ನಗರಸಭೆಯ ಆರೋಗ್ಯ ನಿರೀಕ್ಷಕಿ ವರಲಕ್ಷ್ಮಿ ತಿಳಿಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು