Tel: 7676775624 | Mail: info@yellowandred.in

Language: EN KAN

    Follow us :


ಶೆಟ್ಟಿಹಳ್ಳಿ ಕೆರೆ ಒತ್ತುವರಿ ತೆರವಿಗೆ ತಡೆಯಾಜ್ಞೆ ತಂದ ನಿವಾಸಿಗಳು

Posted date: 19 Mar, 2020

Powered by:     Yellow and Red

ಶೆಟ್ಟಿಹಳ್ಳಿ ಕೆರೆ ಒತ್ತುವರಿ ತೆರವಿಗೆ ತಡೆಯಾಜ್ಞೆ ತಂದ ನಿವಾಸಿಗಳು

ಚನ್ನಪಟ್ಟಣ: ಶೆಟ್ಟಿಹಳ್ಳಿ ಕೆರೆ ಒತ್ತುವರಿ ತೆರವಿಗೆ ತೆರಳಿದ ತಹಶಿಲ್ದಾರ್ ರವರಿಗೆ ಸ್ಥಳೀಯ ಒತ್ತುವರಿದಾರರು ಹೈಕೋರ್ಟಿನಂದ ತಡೆಯಾಜ್ಞೆ ತರುವ ಮೂಲಕ ಶಾಕ್ ನೀಡಿದರು. ನಗರದ ಮಧ್ಯ ಭಾಗದಲ್ಲಿ ರುವ ಪುರಾತನ ಶೆಟ್ಟಿಹಳ್ಳಿ ಕೆರೆ ಒತ್ತುವರಿಯಾಗಿದ್ದು, ಇತ್ತೀಚಿಗೆ ತಹಶೀಲ್ದಾರ್ ಸುದರ್ಶನ್ ನೇತೃತ್ವದಲ್ಲಿ ಸಂಪೂರ್ಣ ಸರ್ವೇ ಮಾಡಿಸಿ, ಒತ್ತುವರಿದಾರರನ್ನು ಗುರುತಿಸಲಾಗಿತ್ತು.


ಈ ಸಂಬಂಧ ಹಿಂದೂ ಜಾಗರಣಾ ವೇದಿಕೆಯ ಪದಾಧಿಕಾರಿಗಳೂ ಸಹ ಎಸಿಬಿ ಮತ್ತು ಲೋಕಾಯುಕ್ತಕ್ಕೂ ದೂರು ನೀಡಿದ್ದು, ಅಧಿಕಾರಿಗಳು ತಹಶೀಲ್ದಾರ್ ನೇತೃತ್ವದಲ್ಲಿ ಸಭೆ ನಡೆಸಿ, ಶೀಘ್ರ ಸರ್ವೇ ಕಾರ್ಯಮುಗಿಸಿ ಒತ್ತುವರಿ ತೆರವುಗೊಳಿಸುವಂತೆ ಸೂಚಿಸಿದ್ದರು.

ಒತ್ತುವರಿ ಬಗ್ಗೆ ಗಮನ ಹರಿಸಿದ ತಹಶೀಲ್ದಾರರು, ಸರ್ವೇಯ ನಂತರ ಎಲ್ಲಾ ಒತ್ತುವರಿದಾರರಿಗೂ ನೊಟೀಸ್ ಜಾರಿಗೊಳಿಸಿದ್ದಲ್ಲದೆ, ಪ್ರತಿ ಮನೆಯ ಗೋಡೆಗೂ ಮೂರು ದಿನಗಳ ಹಿಂದೆ ನೊಟೀಸ್ ಅನ್ನು ಅಂಟಿಸಿದ್ದರು.


ಅದರಂತೆ ಇಂದು ಒತ್ತು ವರಿಯನ್ನು ತೆರವುಗೊಳಿಸಲು ಇನ್ನಿತರೆ ಅಧಿಕಾರಿಗಳೊಂದಿಗೆ ತೆರಳಿದ ತಹಶೀಲ್ದಾರ್ ಅವರಿಗೆ, ಒತ್ತುವರಿದಾರರೆಲ್ಲರೂ ಹೈಕೋರ್ಟ್ ನಿಂದ ತಂದಿದ್ದ ತಡೆಯಾಜ್ಞೆ ಪ್ರತಿಗಳನ್ನು ನೀಡಿ, ತೆರವು ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ. *ಈ ಮೊದಲು ಚನ್ನಾಂಬಿಕ ಕಾಲೇಜಿನ ಆಡಳಿತ ಮಂಡಳಿಯವರು ಮಾತ್ರ ತಡೆಯಾಜ್ಞೆ ತಂದಿದ್ದರು. ಇಂದು ನಗರ ಜೆಡಿಎಸ್ ಅಧ್ಯಕ್ಷ ರಾಂಪುರ ರಾಜಣ್ಣ ಸಹ ತಡೆಯಾಜ್ಞೆ ತಂದಿರುವುದಲ್ಲದೆ ಇಂದಿರಾ ಕಾಟೇಜ್ ನ ಎಲ್ಲಾ ಒತ್ತುವರಿದಾರರಿಗೂ ಅವರೇ ತಡೆಯಾಜ್ಞೆ ಕೊಡಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.*


*ತಡೆಯಾಜ್ಞೆ ಪ್ರತಿಯನ್ನು ಪಡೆದುಕೊಂಡ ತಹಶೀ ಲ್ದಾರ್ ಅವರು ಕೆ ಎಲ್ ಆರ್ ೧೦೪ ರ ಪ್ರಕಾರ ಕೆರೆ ಒತ್ತುವರಿ ತೆರವುಗೊಳಿಸಲು ನನಗೆ ಅಧಿಕಾರವಿದ್ದು ಹೈಕೋರ್ಟಿಗೆ  ಅಪೀಲು ಹೋಗುವುದಾಗಿ ತಿಳಿಸಿದ್ದಾರೆ.*


*ನಾನು ಮನೆಯನ್ನು ಬೇರೆಯವರ ಬಳಿ ಖರೀದಿಸಿದ್ದು, ನನ್ನ ಬಳಿ ಎಲ್ಲಾ ದಾಖಲೆಗಳು ಇವೆ. ತಹಶೀಲ್ದಾರ್ ಅವರು ಕೆರೆಯ ಒತ್ತುವರಿ ತೆರವುಗೊಳಿಸುವ ನೆಪದಲ್ಲಿ ಹಾಲಿ ವಾಸವಿರುವ ಮನೆಗಳಿಗೂ ನೊಟೀಸ್ ನೀಡಿದ್ದು ಸರಿಯಾದ ಕ್ರಮವಲ್ಲ. ೬೭/೧ ಸೆಕ್ಷನ್ ಪ್ರಕಾರ ತಹಶೀಲ್ದಾರ್ ವ್ಯಾಪ್ತಿಗೆ ಒತ್ತುವರಿ ತೆರವು ಬರುವುದಿಲ್ಲ.*

*-ರಾಂಪುರ ರಾಜಣ್ಣ, ತಾ.ಜೆಡಿಎಸ್ ಅಧ್ಯಕ್ಷ.*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑