ಮತ್ತೀಕೆರೆ-ಶೆಟ್ಟಿಹಳ್ಳಿ ಬಳಿ ಕೊಕ್ಕರೆ ಸಾವು ! ಹಕ್ಕಿಜ್ವರ ಶಂಕೆ
ಚನ್ನಪಟ್ಟಣ: ತಾಲ್ಲೂಕಿನ ಮತ್ತಿಕೆರೆ ಶೆಟ್ಟಹಳ್ಳಿಯ ಬಳಿ ಕೊಕ್ಕರೆಯೊಂದು ಸತ್ತು ಬಿದ್ದಿದ್ದು, ಹಕ್ಕಿಜ್ವರದ ಶಂಕೆ ಇರಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ ಮೈಸೂರಿನ ಕುಂಬಾರಕೊಪ್ಪಲಿನ ೧೦ ಕಿ.ಮೀ ವ್ಯಾಪ್ತಿಯಲ್ಲಿ ಹಕ್ಕಿಜ್ವರ ಹಬ್ಬಿದ್ದು, ಲ್ಯಾಬ್ನ ವರದಿಯಿಂದ ಸಾಬೀತಾಗಿದ್ದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ.
ಮದ್ದೂರು ತಾಲ್ಲೂಕಿನ ಪ್ರವಾಸಿತಾಣ ಕೊಕ್ಕರೆ ಬೆಳ್ಳೂರಿನಲ್ಲೂ ಸಹ ಈ ಆತಂಕದ ಛಾಯೆ ಕಂಡಿದ್ದು, ಅಲ್ಲಿನ ಸ್ಥಳೀಯ ಅಧಿಕಾರಿ ವರ್ಗ ಸತ್ತ ಕೊಕ್ಕರೆಯನ್ನು ಬೆಂಗಳೂರಿನ ಲ್ಯಾಬ್ಗೆ ಪರೀಕ್ಷೆಗಾಗಿ ಕಳುಹಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕು ಪಶುವೈದ್ಯಾಧಿಕಾರಿ ಡಾ.ಜಯರಾಮು ಅವರು, ಸತ್ತ ಕೊಕ್ಕರೆಯನ್ನು ಪರೀಕ್ಷಿಸಿ, ಈ ಕೊಕ್ಕರೆಯು ಸ್ಥಳೀಯದಲ್ಲ, ಕೊಕ್ಕರೆ ಬೆಳ್ಳೂರಿನಿಂದ ಬಂದಿರಬಹುದು, ಜೊತೆಗೆ ಇದರ ರೆಕ್ಕೆಯೂ ಮುರಿದಿದ್ದು ಅನುಮಾನಸ್ಪದವಾಗಿದೆ. ಇದರ ಹೆಸರು, ಕಮರುಕಾಗೆ (ಬ್ಲಾಕ್ ಹೈಬೀಸ್) ಆಗಿದ್ದು, ಇದನ್ನು ಇಂದೇ ಬೆಂಗಳೂರಿನ ಲ್ಯಾಬ್ಗೆ ಕಳುಹಿಸಿ ಕೊಡಲಾಗುತ್ತಿದೆ. ಕನಿಷ್ಠ ೩-೪ ದಿನಗಳ ನಂತರ ಪರೀಕ್ಷಾ ವರದಿ ಬರಲಿದೆ, ಅದು ಬಂದ ನಂತರ ಸತ್ಯಾಂಶ ಹೊರ ಬೀಳಲಿದ್ದು, ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.
ಸ್ಥಳೀಯ ನಿವಾಸಿ ಕನ್ನಡ ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ರಾಜುರವರು ಮಾತನಾಡಿ, ನೆನ್ನೆ ಸಂಜೆ ಸಹ ಒಂದು ಕೊಕ್ಕರೆ ಸತ್ತು ಬಿದ್ದಿದ್ದು, ನಮ್ಮ ಗಮನಕ್ಕೆ ಬಂದಿತ್ತು, ಇಂದೂ ಸಹ ಕೊಕ್ಕರೆಯೊಂದು ಸತ್ತಬಿದ್ದಿದ್ದನ್ನು ಗಮನಿಸಿದ ನಾವು ಇಲಾಖೆಗೆ ಮಾಹಿತಿ ನೀಡಿದ್ದೇವೆ ಎಂದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು