ನಿನ್ನೆ ಬಣಬಣ, ಇಂದು ಮಟಮಟ. ಪೇಟೆಗೆ ಮುಗಿಬಿದ್ದ ಜನರು. ಕರೋನಾ !?!
ಚನ್ನಪಟ್ಟಣ: ಕೊರೊನಾ ವೈರಾಣು ತಡೆಗಟ್ಟಲು ನಿನ್ನೆ ದಿನ ಜನತಾ ಕರ್ಫ್ಯೂ ಗೆ ಪ್ರಧಾನಮಂತ್ರಿಗಳು ಮನವಿ ಮಾಡಿದಾಗ ಸಾರ್ವಜನಿಕರೆಲ್ಲರೂ ತಮಗೆ ತಾವೇ ಕರ್ಫ್ಯೂ ವಿಧಿಸಿಕೊಂಡು ಮನೆಯಲ್ಲೇ ಠಿಕಾಣಿ ಹೂಡಿದ್ದರಿಂದ ಹೆದ್ದಾರಿ ಹಾಗೂ ಸಂಪೂರ್ಣ ನಗರ ಸ್ತಬ್ದಗೊಂಡಿದ್ದು ಬಣಗುಡುತ್ತಿತ್ತು.
ಕರ್ಫ್ಯೂ ವಿನ ಹಿಂದಿನ ದಿನ ಅಂದರೆ ಶನಿವಾರ ಸಂಜೆಯೂ ಸಹ ಪೇಟೆಯಲ್ಲಿ ಜನರು ಅಗತ್ಯ ಸಾಮಾನುಗಳಿಗಾಗಿ ಎಡತಾಕಿ ಖರೀದಿಸಿದ್ದರಾದರೂ ಇಂದು ಬೆಳಿಗ್ಗೆಯಿಂದ ರಾತ್ರಿಯವರೆಗೂ ನಗರದ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಯುಗಾದಿ ಹಬ್ಬದ ಸಾಮಾನುಗಳನ್ನು ಖರೀದಿಸಿದರು.
ಕೊರೊನಾ ವೈರಸ್ ತಡೆಯುವ ಸಲುವಾಗಿ ಹೆಚ್ಚು ಮಂದಿ ಗುಂಪುಗೂಡಬಾರದು ಎಂಬ ಸದುದ್ದೇಶದಿಂದ ಜನತಾ ಕರ್ಫ್ಯೂ ಗೆ ಕರೆ ನೀಡಿದ್ದರಿಂದ ನಗರ ಸ್ತಬ್ದಗೊಂಡು ವೈರಸ್ ಗೆ ಸಡ್ಡು ಹೊಡೆದ ಮಾರನೆಯ ದಿನವಾದ ಇಂದು ದಿನನಿತ್ಯಕ್ಕಿಂತ ಕನಿಷ್ಠ ಹತ್ತು ಪಟ್ಟು ಮಂದಿ ನಗರದಲ್ಲಿ ಜಮಾಯಿಸಿದ್ದು, ಒಬ್ಬರ ಉಸಿರು ಒಬ್ಬರಿಗೆ ತಾಕುವಷ್ಟು ಹತ್ತಿರದಲ್ಲಿ ಗುಂಪುಗೂಡಿದ್ದು ಇದರಲ್ಲಿ ಸೋಂಕು ಪೀಡಿತ ಒಬ್ಬನಿದ್ದರೂ ಸಹ ಅದೆಷ್ಟು ಮಂದಿಗೆ ಹರಡಿದೆಯೋ ಗೊತ್ತಿಲ್ಲ.
ಬಹುತೇಕ ಮಂದಿಗೆ ಕರೋನಾ ವೈರಸ್ ದಾಳಿಯಿಂದ ತೊಂದರೆ ಆಗುವುದೋ, ಇಲ್ಲವೋ ಅನ್ನುವುದಕ್ಕಿಂತ ಯುಗಾದಿ ಹಬ್ಬವೇ ಮೇಲು ಎಂಬ ಭಾವನೆಯಿಂದ ಖರೀದಿಗೆ ಮುಗಿಬಿದ್ದಿದ್ದು ಕಳೆದ ತಿಂಗಳಿಂದ ಪಾತಾಳಕ್ಕಿಳಿದಿದ್ದ ತರಕಾರಿ ಮತ್ತಿತರ ದಿನನಿತ್ಯ ವಸ್ತುಗಳು ದಿಢೀರ್ ಬೆಲೆ ಏರಿಕೆ ಕಂಡವು.
*ಒಟ್ಟಾರೆ ಇದುವರೆಗೂ ಅಧಿಕೃತವಾಗಿ ಕಂಡು ಬರದಿದ್ದ ಕರೋನಾ ಇಂದು ಕರೆಯದೇ ಬಂದಿರಲೂ ಸಾಧ್ಯವಿರಬಹುದು !?*
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು