Tel: 7676775624 | Mail: info@yellowandred.in

Language: EN KAN

    Follow us :


ಜಿಲ್ಲೆಯಲ್ಲಿ ಮೂರು ಸ್ಥಳಗಳಲ್ಲಿ ರೇಷ್ಮೆ ಮಾರುಕಟ್ಟೆ ತೆರೆಯಿರಿ: ಡಾ. ಅಶ್ವಥ್ ನಾರಾಯಣ್

Posted date: 04 Apr, 2020

Powered by:     Yellow and Red

ಜಿಲ್ಲೆಯಲ್ಲಿ ಮೂರು ಸ್ಥಳಗಳಲ್ಲಿ ರೇಷ್ಮೆ ಮಾರುಕಟ್ಟೆ ತೆರೆಯಿರಿ: ಡಾ. ಅಶ್ವಥ್ ನಾರಾಯಣ್

ರಾಮನಗರ:ಏ/೦೪/೨೦/ಶನಿವಾರ. ಕೊರೊನಾ ವೈರಸ್ (ಕೋವಿಡ್-೧೯) ಹರಡದಂತೆ ತಡೆಯಲು ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಜಿಲ್ಲೆಯಲ್ಲಿ ಕೈಗೊಳ್ಳಲಾಗುತ್ತಿದೆ. ರೇಷ್ಮೆ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಸಂದಣಿ ಸೇರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ೦೩ ಸ್ಥಳಗಳಲ್ಲಿ ರೇಷ್ಮೆ ಮಾರುಕಟ್ಟೆ ತೆರೆದು ವಹಿವಾಟು ನಡೆಸುವಂತೆ ಉಪ ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಡಾ. ಅಶ್ವಥ್ ನಾರಾಯಣ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.


ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿ ರೇಷ್ಮೆ ಮಾರುಕಟ್ಟೆಗೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ವ್ಯಾಪಾರ ನಡೆಸಲು ವ್ಯಾಪಾರಸ್ಥರು ಬರುತ್ತಾರೆ. ರೇಷ್ಮೆ ಮಾರುಕಟ್ಟೆಗೆ ಬರುವ ಪ್ರತಿಯೊಬ್ಬರು ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡುವಂತೆ ತಿಳಿಸಿದರು.


ರೇಷ್ಮೆ ಮಾರುಕಟ್ಟೆಯಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಹಾಗೂ ದೇಹದ ಉಷ್ಣತೆಯನ್ನು ಪರೀಕ್ಷಿಸಲು ಅಗತ್ಯ ವೈದ್ಯಕೀಯ ಸಿಬ್ಬಂದಿಗಳ ನೇಮಕವಾಗಬೇಕು. ವೈದ್ಯಕೀಯ ಸಿಬ್ಬಂದಿಗಳು ಮಾರುಕಟ್ಟೆಯಲ್ಲಿ ಕೋವಿಡ್-೧೯ ಲಕ್ಷಣವುಳ್ಳವರು ಕಂಡುಬಂದಲ್ಲಿ ತಕ್ಷಣ ಆರೋಗ್ಯ ಇಲಾಖೆಗೆ ವರದಿ ಮಾಡಬೇಕು. ಏಪ್ರಿಲ್ ೧೪ ರಂದು ಲಾಕ್‌ಡೌನ್ ಅಂತ್ಯಗೊಂಡ ನಂತರ ಜನರು ಒಟ್ಟಾಗಿ ಸೇರುವ ಸಂದರ್ಭಗಳು ಹೆಚ್ಚಾಗುತ್ತದೆ. ಆದರೆ ೦೪ ತಿಂಗಳುಗಳ ಕಾಲ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು. ಇದಕ್ಕೆ ಅಧಿಕಾರಿಗಳು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದರು.


ರೈತರು ಬೆಳೆಯುವ ಬೆಳೆಗಳ ವಹಿವಾಟಿಗೆ ಯಾವುದೇ ನಿರ್ಬಂಧವಾಗದಂತೆ ನೋಡಿಕೊಳ್ಳಬೇಕು, ಬಿತ್ತನೆ ಬೀಜ, ಗೊಬ್ಬರ, ಸೇರಿದಂತೆ ಬೆಳೆಗಳ ಸಾಗಾಣಿಕೆಗೆ ಯಾವುದೇ ತೊಂದರೆಯಾಗಬಾರದು. ಸಾಮಾಜಿಕ ಅಂತರ ಕಾಯ್ದುಕೊಂಡು ಯೋಜಿತ ರೂಪದಲ್ಲಿ ಕೆಲಸ ನಿರ್ವಹಿಸಲು ತಿಳಿಸಿದರು.


ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಸೋಡಿಯಂ ಹೈಪೋ ಕ್ಲೋರೈಡ್ ಔಷಧಿಯನ್ನು ರಸ್ತೆಗಳಿಗೆ ಸಿಂಪಡಿಸುತ್ತಿದ್ದಾರೆ. ಇದರ ಬಗ್ಗೆ ಮಾಹಿತಿ ಪಡೆದ ಸಚಿವರು ಈ ಕೆಲಸ ಏಪ್ರಿಲ್ ೧೪ ರ ನಂತರವು ಮುಂದುವರೆಯಬೇಕು. ನಗರ ಸ್ಥಳೀಯ ಸಂಸ್ಥೆಗಳು ಇದಕ್ಕೆ ಬೇಕಿರುವ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ರಾಮನಗರ ನಗರ ಸಭೆಗೆ ಔಷಧಿ ಸಿಂಪರಣೆಗಾಗಿ ಇನ್ನೂ ಹೆಚ್ಚಿನ ವಾಹನಗಳ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.


ವೈದ್ಯಾಧಿಕಾರಿಗಳಿಂದ ರೋಗ ಹರಡದಂತೆ ತಡೆಗಟ್ಟಲು ಸಾರ್ವಜನಿಕರು ಬಳಸಬಹುದಾದ ಮಾಸ್ಕ್ ನ ಗುಣಮಟ್ಟ ತಿಳಿದುಕೊಂಡು ಜಿಲ್ಲೆಯಲ್ಲಿ ಗಾರ್ಮೆಂಟ್‌ಗಳಲ್ಲಿ ಕೆಲಸ ನಿರ್ವಹಿಸುವವರ ಸಂಖ್ಯೆ ಹೆಚ್ಚಿಗೆ ಇದ್ದು, ಅವರಿಂದ ಮರುಬಳಕೆ ಮಾಡಬಹುದಾದ ಬಟ್ಟೆಯ ಮಾಸ್ಕ್ ತಯಾರಿಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.  


ಜಿಲ್ಲೆಯಲ್ಲಿ ಕೋವಿಡ್-೧೯ ಆಸ್ಪತ್ರೆಯನ್ನು ೧೦೦ ಹಾಸಿಗೆಗೆ ಸಿದ್ದಪಡಿಸಲಾಗಿದ್ದು, ಈ ವರ್ಷಾಂತ್ಯದಲ್ಲಿ ೩೦೦ ಹಾಸಿಗೆಯುಳ್ಳ ಆಸ್ಪತ್ರೆಯನ್ನು ಅಗತ್ಯ ಸಲಕರಣೆ ಹಾಗೂ ವೈದ್ಯಕೀಯ ಸಿಬ್ಬಂದಿ ಗಳೊಂದಿಗೆ ಸಿದ್ದಪಡಿಸಲಾಗುವುದು  ಎಂದರು.


ಜಿಲ್ಲೆಯಲ್ಲಿರುವಂತಹ ವಲಸಿಗ ಕಾರ್ಮಿಕರನ್ನು ಸಮೀಕ್ಷೆ ನಡೆಸಿ ಗುರುತಿಸಲಾಗಿದ್ದು, ೫,೦೦೦ ಜನಕ್ಕೆ ಅಡುಗೆ ಸಾಮಗ್ರಿಗಳನ್ನು ತಲುಪಿಸಲಾಗಿದೆ. ೨,೦೦೦ ಜನಕ್ಕೆ ಊಟದ ವ್ಯವಸ್ಥೆಯನ್ನು ಕಾರ್ಮಿಕ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮಾಡಲಾಗುತ್ತಿದೆ ಎಂದರು.


ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಿರಂಜನ್ ಅವರು ಕೋವಿಡ್-೧೯ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮಾಡಿಕೊಂಡಿರುವ ಸಿದ್ಧತೆ, ಲಭ್ಯವಿರುವ ಔಷಧಿ ಹಾಗೂ ಸಲಕರಣೆಯ ಬಗ್ಗೆ ಮಾಹಿತಿ ನೀಡಿದರು.


ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ ಉಲ್ಲಾ ಷರೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಎ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಬಿ.ಪಿ. ವಿಜಯ್, ಉಪವಿಭಾಗಾಧಿಕಾರಿ ದಾಕ್ಷಾಯಿಣಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑