ಸೇವೆಯ ಹೆಸರಿನಲ್ಲಿ ಜನರನ್ನು ಗುಂಪು ಸೇರಿಸುವುದು ಸಲ್ಲ ಪೋಲೀಸ್ ಅಧೀಕ್ಷಕ ಓಂಪ್ರಕಾಶ್
ಚನ್ನಪಟ್ಟಣ:ಏ/೦೫/೨೦/ಭಾನುವಾರ. ಕರೋನಾ (ಕೋವಿಡ್-೧೯) ವಿರುದ್ಧ ಜನಜಾಗೃತಿ ಮೂಡಿಸುವ ಹಾಗೂ ಸಾರ್ವಜನಿಕರಿಗೆ ಅಗತ್ಯ ಸಾಮಾಗ್ರಿಗಳನ್ನು ವಿತರಿಸುವ ವೇಳೆ ಗುಂಪು ಸೇರಿಸದೇ ಅಂತರ ಕಾಯ್ದುಕೊಳ್ಳಬೇಕು ಎಂದು ಚನ್ನಪಟ್ಟಣ ಪೋಲೀಸ್ ಅಧೀಕ್ಷಕ ಓಂಪ್ರಕಾಶ್ ಸೂಚನೆ ನೀಡಿದರು.
ಅವರು ಇಂದು ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರಾಮನಗರ ಮತ್ತು ಕಾರ್ಮಿಕ ಇಲಾಖೆ, ರಾಮನಗರ ಇವರು ಜಂಟಿಯಾಗಿ ಆಯೋಜಿಸಿದ್ದ ಕೊರೊನಾ ವೈರಸ್ ಜನಜಾಗೃತಿ ಅಭಿಯಾನ ಕ್ಕೆ ಚಾಲನೆ ನೀಡಿ ಮಾತನಾಡಿದರು.
ನೀವು ನೀಡುವ ಆಹಾರ ಅಥವಾ ಆಹಾರ ಪದಾರ್ಥಗಳು, ಕೊರೊನಾ ಗೆ ಸಂಬಂಧಿಸಿದ ಆರೋಗ್ಯಕರ ವಸ್ತುಗಳು ಮತ್ತು ಜನಜಾಗೃತಿ ಯಾವುದೇ ಇರಲಿ ಯಾವುದೇ ಕಾರಣಕ್ಕೂ ಗುಂಪು ಸೇರಿಸದೇ ಕನಿಷ್ಠ ಒಂದು ಮೀಟರ್ ಅಂತರ ಕಾಯ್ದುಕೊಳ್ಳಬೇಕು. ನೀಡುವ ದಾನಿಗಳು ಸಹ ಗುಂಪಿನಲ್ಲಿ ಬೆರೆಯಬಾರದು. ಆಗಲೇ ನೀವು ಮಾಡುವ ಸೇವೆ ಅನನ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಅಧ್ಯಕ್ಷ ಶೇಷಾದ್ರಿ ಅಯ್ಯರ್ ರವರು ಮಾತನಾಡಿ ರೆಡ್ ಕ್ರಾಸ್ ಸಂಸ್ಥೆಯು ರಾಮನಗರ ಜಿಲ್ಲೆಯಾದ್ಯಂತ ತಾಲ್ಲೂಕು ಪದಾಧಿಕಾರಿಗಳ ಸಹಯೋಗದೊಂದಿಗೆ ಸತತವಾಗಿ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ಈ ವೇಳೆ ಕರೋನಾ ಜಾಗೃತಿ ಜಾಗೃತಿ ಜೊತೆಗೆ ಮಾಸ್ಕ್ ಮತ್ತು ಸೋಪನ್ನು ವಿತರಿಸಲಾಗುತ್ತದೆ ಎಂದು ವಿವರಿಸಿದರು.
ಸಾರ್ವಜನಿಕ ಆಸ್ಪತ್ರೆಯ ಅಧೀಕ್ಷಕ ಡಾ ವಿಜಯನರಸಿಂಹ ಮಾತನಾಡಿ ರೆಡ್ ಕ್ರಾಸ್ ಸಂಸ್ಥೆ ಒಂದು ಸಂಸ್ಥೆಯಾಗಿರದೇ ಅದೊಂದು ಕುಟುಂಬವಾಗಿದೆ. ಜೀನ್ ಹೆನ್ರಿ ಡ್ಯೊನಾಂಟ್ ಎಂಬುವವರು ಸ್ಥಾಪಿಸಿದ ಈ ಸಂಸ್ಥೆಯು ಇಂದು ಸಮಾಜ ಮುಖಿಯಾಗಿ ಕೆಲಸ ನಿರ್ವಹಿಸುತ್ತಿದೆ. ಜಿಲ್ಲೆಯಾದ್ಯಂತ ಕಾರ್ಯೋನ್ಮುಖವಾಗಿರುವ ಈ ಸಂಸ್ಥೆಯ ಜೊತೆಗೆ ನಾವು ಕೈಜೋಡಿಸುತ್ತೇವೆ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ ರಾಜು ಮಾತನಾಡಿ ಹಳ್ಳಿಗಳಲ್ಲಿನ ಕೃಷಿಕರಿಗೆ, ಕೂಲಿ ಕಾರ್ಮಿಕರು ಮತ್ತು ಪೌರ ಕಾರ್ಮಿಕರಿಗೆ ಹೆಚ್ಚಿನ ಜಾಗೃತಿ ನೀಡಬೇಕಾಗಿದ್ದು ಅದನ್ನು ರೆಡ್ ಕ್ರಾಸ್ ಸಂಸ್ಥೆ ಮಾಡುತ್ತಿದ್ದು ಶ್ಲಾಘನೀಯ. ನಗರದ ಜನರಿಗೆ ಅರಿವು ಇದ್ದು ಗ್ರಾಮೀಣರಿಗೆ ಅರಿವಿನ ಅಗತ್ಯ ಬೇಕಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ಹಲವರಿಗೆ ಮಾಸ್ಕ್ ಮತ್ತು ಸೋಪನ್ನು ವಿತರಿಸಲಾಯಿತು. ನಂತರ ಮಹದೇಶ್ವರ ನಗರದಲ್ಲಿ ವಾಸವಾಗಿದ್ದ ವಲಸೆ ಕಾರ್ಮಿಕರಿಗೂ ಸಹ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಫಾರ್ಮಾಸಿಸ್ಟ್ ವೇದಮೂರ್ತಿ, ತಾಲ್ಲೂಕು ರೆಡ್ ಕ್ರಾಸ್ ಅಧ್ಯಕ್ಷ ವಿ ಸಿ ಚಂದ್ರೇಗೌಡ, ಮಾತೃಭೂಮಿ ಫೌಂಡೇಶನ್ ನ ಮಹೇಶ್, ಸಂಶೋಧನಾ ವಿದ್ಯಾರ್ಥಿ ರುದ್ರೇಶ್ವರ,
ಬಿ ಎನ್ ಕಾಡೇಗೌಡ, ಗೋವಿಂದಯ್ಯ, ತಿಪ್ರೇಗೌಡ ಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು