ಮೃತ ಹನುಮಂತು ಕುಟುಂಬಕ್ಕೆ ೦೫ ಲಕ್ಷ ರೂ ಚೆಕ್ ನೀಡಿದ ಎಚ್ಡಿಕೆ
ಕನಕಪುರ:ಏ/೨೨/೨೦/ಬುಧವಾರ. ನೆನ್ನೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ರಾಮನಗರ ಜಿಲ್ಲಾ ಪಬ್ಲಿಕ್ ಟಿವಿ ವರದಿಗಾರ ಹನುಮಂತು ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಸಾಂತ್ವನ ಹೇಳಿದರು.
ಇದೇ ವೇಳೆ ಮೃತ ಪತ್ರಕರ್ತ ಹನುಮಂತು ಅವರ ಪತ್ನಿ ಶಶಿಕಲಾ ಅವರಿಗೆ ಐದು ಲಕ್ಷ ರೂಪಾಯಿಗಳ ಚೆಕ್ ವಿತರಿಸಿದರು. ರಾಮನಗರ ವಿಧಾನಸಭಾ ಕ್ಷೇತ್ರದ ಹಾರೋಹಳ್ಳಿ ಹೋಬಳಿಯ ಹನುಮಂತು ಸ್ವಗ್ರಾಮ ಪಡುವಣಗೆರೆಗೆ ಭೇಟಿ ನೀಡಿದ ಅವರು ಕುಟುಂಬದ ಸದಸ್ಯರು ಹಾಗು ಹನುಮಂತು ಪತ್ನಿಗೆ ಧೈರ್ಯ ತುಂಬಿದರು.
ಹನುಮಂತು ಕ್ರಿಯಾಶೀಲ ವ್ಯಕ್ತಿ, ಇಷ್ಟು ಸಣ್ಣ ವಯಸ್ಸಿನಲ್ಲಿ ಅವರು ಸಾವನ್ನಪ್ಪಿದ್ದು ನಮಗೆಲ್ಲರಿಗೂ ನೋವು ಉಂಟು ಮಾಡಿದೆ. ನಿಮ್ಮ ಕುಟುಂಬದ ಜೊತೆಯಲ್ಲಿ ನಾವು ಸದಾಕಾಲ ಇರುತ್ತೇವೆ. ನಿಮ್ಮ ಮಗುವಿನ ವಿದ್ಯಾಭ್ಯಾಸ ಹಾಗೂ ಅದರ ಪೂರ್ಣ ನಿರ್ವಹಣೆಯ ಹೊಣೆ ನಮ್ಮದು. ಅದಕ್ಕೆ ಪ್ರತ್ಯೇಕವಾದ ಒಂದು ವ್ಯವಸ್ಥೆಯನ್ನು ಮಾಡುವುದಾಗಿ ಅವರು ಹೇಳಿದ್ದಾರೆ.
ನನ್ನ ರೀತಿಯಲ್ಲಿಯೇ ಬೇರೆಯವರೂ ಸಹ ನಿಮ್ಮ ಕುಟುಂಬಕ್ಕೆ ಧನ ಸಹಾಯ ನೀಡಲು ಘೋಷಣೆ ಮಾಡಿದ್ದಾರೆ. ಬರುವ ಹಣವನ್ನು ಯಾರನ್ನೂ ನಂಬದೇ ಸೂಕ್ತ ರೀತಿಯಲ್ಲಿ ಅದರ ಸದ್ಬಳಕೆಯನ್ನು ಮಾಡಿಕೊಳ್ಳಲು ಸಲಹೆ ನೀಡಿದರು.
ನಾನು ಸರ್ಕಾರದ ಜೊತೆಯಲ್ಲಿಯೂ ಮಾತನಾಡಿ ಮತ್ತಷ್ಟು ಧನ ಸಹಾಯ ಒದಗಿ ಬರುವಂತೆ ಮಾಡುತ್ತೇನೆ. ನೀವು ಧೈರ್ಯಗೆಡದೆ, ಬದುಕನ್ನು ಸಾಗಿಸಿಕೊಂಡು ಹೋಗಿ ಎಂದು ಧೈರ್ಯ ತುಂಬಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು