ನಾಡೋಜ, ಸಮನ್ವಯ, ನಿತ್ಯೋತ್ಸವ ಬಿರುದಾಂಕಿತ ಕವಿ ನಿಸಾರ್ ಅಹಮದ್ ನಿಧನ
ಬೆಂಗಳೂರು:ಮೇ/೦೩/೨೦/ಭಾನುವಾರ. ಸಮನ್ವಯ ಕವಿ, ನಿತ್ಯೋತ್ಸವ ಕವಿ ಎಂಬ ಬಿರುದನ್ನು ಹೊಂದಿದ್ದ, ಶಿವಮೊಗ್ಗದಲ್ಲಿ ನಡೆದ ೭೩ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ನಾಡೋಜ ಕೊಕ್ಕರೆ ಹೊಸಳ್ಳಿ ಶೇಖ್ ಹೈದರ್ ನಿಸಾರ್ ಅಹಮದ್ (೮೪) ವಯೋಸಹಜ ಕಾಯಿಲೆಗಳಿಂದ ಬಳಲಿ ಇಂದು ಇಹಲೋಕ ತ್ಯಜಿಸಿದರು.
ದೇವನಹಳ್ಳಿ ಯಲ್ಲಿ ೧೯೩೬ ರ ಫೆಬ್ರವರಿ ೦೫ ರಂದು ಜನಿಸಿದ ಅವರು, ೧೯೫೯ ರಲ್ಲಿ ಭೂವಿಜ್ಞಾನದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಅಧ್ಯಾಪಕ ರಾಗಿ ನಂತರ ಪ್ರಾಧ್ಯಾಪಕರಾಗಿ ೧೯೯೪ ರವರೆಗೆ ಸೇವೆ ಸಲ್ಲಿಸಿದ್ದರು. ೧೯೮೧ ರಲ್ಲಿ ಇವರ ಕನ್ನಡ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಶಿವಮೊಗ್ಗದಲ್ಲಿ ನಡೆದ ೭೩ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು, ೨೦೦೩ ರಲ್ಲಿ ನಾಡಿನ ಅತ್ಯುನ್ನತ ಗೌರವವದ ನಾಡೋಜ ಪ್ರಶಸ್ತಿ ಯನ್ನು ಪ್ರದಾನ ಮಾಡಲಾಯಿತು.
ನಿತ್ಯೋತ್ಸವ ತಾಯಿ ನಿನಗೆ ನಿತ್ಯೋತ್ಸವ ಎಂಬ ಸುಮಧುರ ಭಾವಗೀತೆಯು ಧ್ವನಿ ಸಾಂದ್ರಿಕೆಯಾಗಿ ಹೊರಹೊಮ್ಮಿದ್ದು ಕೇಳುಗರ ಮನಮುಟ್ಟುವಂತೆ ಮಾಡಿತು. ಕುರಿಗಳು ಸಾರ್ ಕುರಿಗಳು ಗೀತೆಯಂತು ಎಂತಹವರ ಬಾಯಲ್ಲೂ ಗುನುಗುತ್ತಿತ್ತು. ಕೊನೆಗೆ ಇದೇ ಹೆಸರಲ್ಲಿ ಒಂದು ಹಾಸ್ಯ ಚಲನಚಿತ್ರವು ತಯಾರಾಯಿತು.
ಹಲವಾರು ಕಥಾಸಂಕಲನಗಳು, ಕವನ ಸಂಕಲನಗಳನ್ನು ರಚಿಸಿದ್ದು ಪ್ರಾಥಮಿಕ ಶಾಲೆಯ ಮಕ್ಕಳಿಂದ ದ್ವಿತೀಯ ಪಿಯುಸಿ ಮಕ್ಕಳ ಪಠ್ಯ ದಲ್ಲಿ ಪದ್ಯಗಳಾಗಿ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಹಾಸುಹೊಕ್ಕಾಗಿವೆ.
ನಾನೆಂಬ ಪರಕೀಯ, ನಿತ್ಯೋತ್ಸವ, ಅರವತ್ತೈದರ ಐಸಿರಿ, ಸ್ವಯಂ ಸೇವೆಯ ಗಿಳಿಗಳು, ಅನಾಮಿಕ ಆಂಗ್ಲರು, ಬರಿರಂತರ, ನವೋಲ್ಲಾಸ, ಆಕಾಶಕ್ಕೆ ಸರಹದ್ದುಗಳಿಲ್ಲ, ಮನಸ್ಸು ಗಾಂಧಿ ಬಜಾರು, ನೆನೆದವರ ಮನದಲ್ಲಿ, ಸುಮುಹೂರ್ತಂ, ಸಂಜೆ ಐದರ ಮಳೆ ಇವೇ ಮೊದಲಾದ ಕಥಾ ಮತ್ತು ಕವನ ಸಂಕಲನಗಳನ್ನು ಹೊರ ತಂದಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ ಟಿ ರವಿ, ಸಚಿವರು, ಖ್ಯಾತ ಕವಿಗಳು ಸೇರಿದಂತೆ ನಾಡಿನ ಅನೇಕ ವಿದ್ವಾಂಸರು, ವಿದ್ಯಾರ್ಥಿಗಳು ನುಡಿನಮನ ಅರ್ಪಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು