Tel: 7676775624 | Mail: info@yellowandred.in

Language: EN KAN

    Follow us :


ಕೊರೊನಾ (ಕೋವಿಡ್-೧೯) ದಿಂದಾಗಿ ನಷ್ಟ ಅನುಭವಿಸಿದವರಿಗೆ ೧,೬೧೦ ಕೋಟಿ ರೂ ಪರಿಹಾರ ಘೋಷಿಸಿದ ಸರ್ಕಾರ

Posted date: 06 May, 2020

Powered by:     Yellow and Red

ಕೊರೊನಾ (ಕೋವಿಡ್-೧೯) ದಿಂದಾಗಿ ನಷ್ಟ ಅನುಭವಿಸಿದವರಿಗೆ ೧,೬೧೦ ಕೋಟಿ ರೂ ಪರಿಹಾರ ಘೋಷಿಸಿದ ಸರ್ಕಾರ

ಕಳೆದ ಒಂದೂವರೆ ತಿಂಗಳಿನಿಂದ ಲಾಕ್ ಡೌನ್ ನ ಪರಿಣಾಮವಾಗಿ ವಿವಿಧ ನಿರ್ಬಂಧಗಳನ್ನು ಹೇರಿರುವುದರಿಂದ ಎಲ್ಲಾ ವರ್ಗದ ಜನರು ಆರ್ಥಿಕವಾಗಿ ಸಂಕಷ್ಟವನ್ನು ಅನುಭವಿಸುತ್ತಾರೆ.


ಲಾಕ್ ಡೌನ್  ನಿಂದಾಗಿ ಎಲ್ಲಾ ದೇವಾಲಯಗಳು ಮುಚ್ಚಿರುವುದರಿಂದ ಹಬ್ಬ  ಮದುವೆ, ಸಭೆ-ಸಮಾರಂಭಗಳು ಹಾಗೂ ಮತ್ತಿತರ ಯಾವುದೇ ಕಾರ್ಯಕ್ರಮಗಳು ನಡೆಯದಿರುವುದರಿಂದ ಹೂವುಗಳ ಬೇಡಿಕೆ ಇಲ್ಲದೇ ಹೂವು ಬೆಳೆಗಾರರು ತಾವು ಬೆಳೆದಿರುವ ಎಲ್ಲ ಹೂವುಗಳನ್ನು ತಮ್ಮ ಹೊಲದಲ್ಲೇ ನಾಶ ಮಾಡುವ ಪರಿಸ್ಥಿತಿ ಉದ್ಭವಿಸಿದೆ. ಒಟ್ಟಾರೆ ೧೧,೬೮೭ ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆದಿರುವ ಹೂವುಗಳು ಮಾರಾಟವಾಗದೆ ರೈತರಿಗೆ ನಷ್ಟವಾಗಿದೆ. ಇದರಿಂದ ಎಲ್ಲ ರೀತಿಯ ಹೂವುಗಳನ್ನು ಬೆಳೆದಿರುವ ರೈತರಿಗೆ ನೆರವಾಗಲು ಸರ್ಕಾರವು ಹೆಕ್ಟೇರ್ ಗೆ ಗರಿಷ್ಠ ೨೫,೦೦೦/- ರೂ.ಗಳಂತೆ ಪರಿಹಾರವನ್ನು ಘೋಷಿಸುತ್ತದೆ.


ಈ ವರ್ಷ ರಾಜ್ಯದಲ್ಲಿ ತರಕಾರಿ ಮತ್ತು ಹಣ್ಣುಗಳ ಇಳುವರಿಯೂ ಉತ್ತಮವಾಗಿರುತ್ತದೆ. ಆದರೆ ಕೋವಿಡ್-೧೯ ರಿಂದ ಆಗಿರುವ ರಾಷ್ಟ್ರಾದ್ಯಂತ ಲಾಕ್ ಡೌನ್ ನಿಂದಾಗಿ ರೈತರು ತಮ್ಮ ಬೆಳೆಗಳಿಗೆ ಸೂಕ್ತ ದರಗಳನ್ನು ಪಡೆಯಲು ಸಾಧ್ಯವಾಗಿರುವುದಿಲ್ಲ. ನಷ್ಟಕ್ಕೆ ಒಳಗಾಗಿರುವ ತರಕಾರಿ ಹಾಗೂ ಹಣ್ಣು ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವ ಬಗ್ಗೆ ಪ್ಯಾಕೇಜ್ ಅನ್ನು ಘೋಷಣೆ ಮಾಡಲಾಗುವುದು. 


ಕೋವಿಡ್-೧೯ ರಿಂದಾಗಿ ರೈತರಷ್ಟೇ ಅಲ್ಲದೆ ಅಲ್ಲದೆ ಪಟ್ಟಣದ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಗಸರು ಹಾಗೂ ಕ್ಷೌರಿಕರ ವೃತ್ತಿಯಲ್ಲಿ ತೊಡಗಿರುವವರು ಒಂದೂವರೆ ತಿಂಗಳಿಗೆ ಮೇಲ್ಪಟ್ಟು ತಮ್ಮ ಕಸುಬನ್ನು ನಡೆಸಲಾಗಿದೇ ತಮ್ಮ ದೈನಂದಿನ ಆದಾಯವನ್ನು ಕಳೆದುಕೊಂಡಿರುತ್ತಾರೆ. ಇವರಿಗೆ ನೆರವಾಗಲು ನಮ್ಮ ರಾಜ್ಯದಲ್ಲಿರುವ ಅಂದಾಜು ೬೦,೦೦೦ ಅಗಸರ ವೃತ್ತಿಯಲ್ಲಿ ಇರುವ ಹಾಗೂ ೨,೩೦,೦೦೦ ಕ್ಷೌರಿಕ ವೃತ್ತಿಯಲ್ಲಿ ಇರುವವರಿಗೆ ೫,೦೦೦/- ರೂ.ಗಳನ್ನು ಒಂದು ಬಾರಿ ಪರಿಹಾರವಾಗಿ ನೀಡಲಾಗುವುದು.


ಹಾಗೆಯೇ ಆಟೋರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರು ತಮ್ಮ ದೈನಂದಿನ ಉದ್ಯೋಗವನ್ನು ನಡೆಸಲಾಗಿದೇ ತಮ್ಮ ಆದಾಯವನ್ನು ಕಳೆದುಕೊಂಡಿರುತ್ತಾರೆ. ನಮ್ಮ ರಾಜ್ಯದಲ್ಲಿ ಇರುವ ಇಂತಹ ೭,೭೫,೦೦೦ ಚಾಲಕರಿಗೆ ಒಂದು ಬಾರಿ ಪರಿಹಾರವಾಗಿ ೫,೦೦೦ ರೂಗಳನ್ನು ನೀಡಲಾಗುತ್ತದೆ.


ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳನ್ನು ನಡೆಸುವ ಉದ್ದಿಮೆದಾರರು ತಮ್ಮ ಉದ್ದಿಮೆಗಳನ್ನು ತೆರೆಯಲಾಗದೆ ಹಾಗೂ ತಮ್ಮ ಉತ್ಪನ್ನಗಳನ್ನು ಸಾಗಿಸಿ ಮಾರಾಟ ಮಾಡಲಾಗದೆ, ನಷ್ಟವನ್ನು ಅನುಭವಿಸಿದ್ದಾರೆ. ಹಾಗೆಯೇ ಮುಂದಿನ ದಿನಗಳಲ್ಲಿ ವಹಿವಾಟು ಚೇತರಿಕೆಯಾಗಲು ಕೆಲವು ತಿಂಗಳ ಸಮಯ ಬೇಕಾಗಿರುವುದರಿಂದ ಇವರಿಗೆ ಸರಕಾರ ನೆರವು ನೀಡುವುದು ಅನಿವಾರ್ಯವಾಗಿದೆ. ಆದ್ದರಿಂದ   ಅತಿಸಣ್ಣ, ಸಣ್ಣ ಹಾಗೂ ಉದ್ಯಮ ಉದ್ದಿಮೆಗಳ ವಿದ್ಯುತ್ ಬಿಲ್ಲಿನ ಫಿಕ್ಸ್ಡ್ ಚಾಜ್೯ನ್ನು ಎರಡು ತಿಂಗಳ ಅವಧಿಗೆ ಪೂರ್ತಿಯಾಗಿ ಮನ್ನಾ ಮಾಡಲಾಗುವುದು.


ಹಾಗೆಯೇ ಬೃಹತ್ ಕೈಗಾರಿಕೆಗಳಿಗೆ ಅವರು ವಿದ್ಯುತ್ ಇಲ್ಲಿನ ಫಿಕ್ಸ್ಡ್ ಚಾರ್ಜ್ ನ ಪಾವತಿಯನ್ನು ಎರಡು ತಿಂಗಳ ಅವಧಿಗೆ ಯಾವುದೇ ಬಡ್ಡಿ ಅಥವಾ ದಂಡ ಇಲ್ಲದೇ ಬಡ್ಡಿ ರಹಿತವಾಗಿ ಮುಂದೂಡಲಾಗುವುದು. 


ಎಲ್ಲ ಪ್ರವರ್ಗದ ಗ್ರಾಹಕರುಗಳಿಗೆ ವಿದ್ಯ್ ಚ್ಚಕ್ತಿ  ಮೊತ್ತವನ್ನು ಪಾವತಿಸಲು ಈ ಕೆಳಕಂಡ ಸವಲತ್ತು / ಪರಿಹಾರಗಳನ್ನು ಒದಗಿಸುವುದು.

ನಿಗದಿತ ಸಮಯದೊಳಗೆ ವಿದ್ಯುತ್ ಬಿಲ್ಲಿನ ಮೊತ್ತವನ್ನು ಪಾವತಿಸುವ ಗ್ರಾಹಕರಿಗೆ ಪ್ರೋತ್ಸಾಹ ರಿಯಾಯಿತಿಯನ್ನು ನೀಡುವುದು.

ವಿಳಂಬ ಪಾವತಿಗಾಗಿ ವಿದ್ಯುತ್ ಬಿಲ್ಲಿನ ಮೊತ್ತದ ಮೇಲೆ ವಿಧಿಸುವ ಬಡ್ಡಿಯನ್ನು ಕಡಿಮೆಗೊಳಿಸಲಾಗುವುದು.

ವಿದ್ಯುತ್ ಬಿಲ್ಲಿನ ಮೊತ್ತವನ್ನು ಪಾವತಿಸುವ ಗ್ರಾಹಕರಿಗೆ ಪ್ರೋತ್ಸಾಹಧನ ನೀಡಲಾಗುವುದು.

ಕಂದಾಯ ಬಾಕಿ ಮೊತ್ತವನ್ನು ಕಂತುಗಳಲ್ಲಿ/ಭಾಗವಾಗಿ ಪಾವತಿಸಲು ಅವಕಾಶ ಕಲ್ಪಿಸಲಾಗುವುದು.

ಕಂದಾಯ ಬಾಕಿ ಮೊತ್ತವನ್ನು ಪಾವತಿಸದಿರುವ ಗ್ರಾಹಕರಿಗೆ ೪೯.೦೬.೨೦೨೦ ರವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸದೇ ಇರುವುದು. 


ಈಗಾಗಲೇ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದು ನೇಕಾರರಿಗೆ ಈ ಲಾಕ್ ಡೌನ್ ನಿಂದಾಗಿ ಮತ್ತಷ್ಟು ನಷ್ಟ ಉಂಟಾಗಿದೆ. ನಮ್ಮ ಸರ್ಕಾರವು ಈಗಾಗಲೇ ನೇಕಾರರಿಗೆ ನೆರವಾಗಲು ೧೦೯ ಕೋಟಿ ರೂ.ಗಳ ವೆಚ್ಚದಲ್ಲಿ “ನೇಕಾರರ ಸಾಲ ಮನ್ನಾ ಯೋಜನೆ”ಯನ್ನು ಘೋಷಿಸಿದೆ. ಈ ಯೋಜನೆಗೆ ಈಗಾಗಲೇ ಹಿಂದಿನ ವರ್ಷ ೨೯ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಉಳಿದಿರುವ ೮೦ ಕೋಟಿ ರೂ.ಗಳನ್ನು ಕೂಡಲೇ ಬಿಡುಗಡೆ ಮಾಡಿ ನೇಕಾರರಿಗೆ ಹೊಸ ಸಾಲಗಳು ದೊರಕಿಸಿಕೊಡಲು ನೆರವಾಗುತ್ತೇವೆ. ಮುಂದುವರೆದು ಜನವರಿ ೦೧/೨೦೧೯ ರಿಂದ ಮಾರ್ಚ್ ೩೧, ೨೦೧೯ ರ ಅವಧಿಯೊಳಗೆ ಒಂದು ಲಕ್ಷ ರೂ. ಒಳಗಿನ ತಮ್ಮ ಸಾಲವನ್ನು ಮರುಪಾವತಿಸಿರುವ ನೇಕಾರರಿಗೂ ಸಹ ಅವರು ಪಾವತಿಸಿರುವ ಮೊತ್ತವನ್ನು ಮರುಪಾವತಿ ಮಾಡುವ ಮೂಲಕ ಯೋಜನೆಯ ಸೌಲಭ್ಯವನ್ನು ಒದಗಿಸಲಾಗುವುದು.


ಇದಲ್ಲದೆ “ನೇಕಾರರ ಸಮ್ಮಾನ್ ಯೋಜನೆ” ಎಂಬ ಹೊಸ ಯೋಜನೆಯನ್ನು ಘೋಷಿಸಲು ಇಚ್ಛಿಸುತ್ತೇನೆ. ಈ ಯೋಜನೆಯಡಿಯಲ್ಲಿ ನಮ್ಮ ರಾಜ್ಯದಲ್ಲಿರುವ ಅಂದಾಜು ೫೪,೦೦೦ ಕೈಮಗ್ಗ ನೇಕಾರರಿಗೆ ಪ್ರತಿ ವರ್ಷ ೨,೦೦೦/- ರೂ.ಗಳಂತೆ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು. 


ರಾಜ್ಯದಲ್ಲಿರುವ ೧೫.೮೦ ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರ ಪೈಕಿ ಈಗಾಗಲೇ ೧೧.೮೦ ಲಕ್ಷ ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ೨,೦೦೦ ರೂ.ಗಳನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗಿರುತ್ತದೆ.


ಇನ್ನುಳಿದ ನಾಲ್ಕು ಲಕ್ಷ ಕಟ್ಟಡ ಕಾರ್ಮಿಕರಿಗೆ ಅವರವರ ಬ್ಯಾಂಕ್ ಖಾತೆಯ ವಿವರಗಳು ದೊರೆತ ನಂತರ ೨,೦೦೦ ರೂ.ಗಳನ್ನು ವರ್ಗಾಯಿಸಲು ಕ್ರಮ ಕ್ರಮವಹಿಸಲಾಗುವುದು. ಮುಂದುವರೆದು ಈ ಎಲ್ಲ ಕಟ್ಟಡ ಕಾರ್ಮಿಕರಿಗೆ ಈಗಾಗಲೇ ನೀಡಿರುವ ೨,೦೦೦ ರೂ.ಗಳ ಜೊತೆಗೆ ಹೆಚ್ಚುವರಿಯಾಗಿ ೩,೦೦೦ ರೂ.ಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಈ ಹಣವನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು.


ಮೇಲ್ಕಂಡ ಎಲ್ಲ ಪರಿಹಾರ ಸೌಲಭ್ಯಗಳನ್ನು ಅಂದಾಜು ರೂ. ೧,೬೧೦ ಕೋಟಿಗಳ ವೆಚ್ಚದಲ್ಲಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑