ಕರ್ನಾಟಕ ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧಿಸಲು ಸ್ವರಾಜ್ ಸಂಘಟನೆ ಮನವಿ
ಚನ್ನಪಟ್ಟಣ:ಮೇ/೧೬/೨೦/ಶನಿವಾರ. ಬಡ ಜನರು, ಕೂಲಿಕಾರ್ಮಿಕರು ನೆಮ್ಮದಿಯಿಂದ ಬದುಕಬೇಕಾದರೆ, ಹೆಂಡತಿ ಮಕ್ಕಳ ಮೇಲೆ ಕುಡಿದು ಬಂದವರು ದೌರ್ಜನ್ಯ ನಡೆಸದೇ ಇರಬೇಕಾದರೆ, ರಾಜ್ಯ ಸರ್ಕಾರವು ಮದ್ಯ ನಿಷೇಧ ಮಾಡಬೇಕು. ಸರ್ಕಾರವು ಮದ್ಯವನ್ನು ಆದಾಯದ ಮೂಲವಾಗಿ ನೋಡದೆ ಬಡ ಮತ್ತು ಕೂಲಿಕಾರ್ಮಿಕರ ಹಿತ ಕಾಪಾಡಲು ಮುಂದಾಗಬೇಕು ಎಂದು ಸ್ವರಾಜ್ ಸಂಘಟನೆಯ ಮುಖ್ಯಸ್ಥೆ ಸುಕನ್ಯಾ ಅಭಿಪ್ರಾಯಪಟ್ಟರು.
ಸುಕನ್ಯಾ ಮತ್ತು ತಂಡದವರು ಇಂದು ತಾಲ್ಲೂಕು ಕಛೇರಿಯಲ್ಲಿ ತಹಶಿಲ್ದಾರ್ ಸುದರ್ಶನ್ ರವರಿಗೆ ಮನವಿ ಪತ್ರ ನೀಡಿ ಮಾತನಾಡಿದರು.
ಕೊರೊನಾ (ಕೋವಿಡ್-೧೯) ಸಂದರ್ಭದಲ್ಲಿ ಮಾಡಲಾದ ಎರಡನೇ ಹಂತದ ಲಾಕ್ಡೌನ್ ಸಮಯದಲ್ಲಿ ಎಲ್ಲಾ ಮದ್ಯದ ಅಂಗಡಿಗಳನ್ನು ಸರ್ಕಾರವೇ ಮುಚ್ಚಿಸಿತ್ತು. ಆಗ ಬಹುತೇಕ ಎಲ್ಲಾ ಕುಟುಂಬಗಳಲ್ಲೂ ಶಾಂತಿ ನೆಲೆಸಿತ್ತು. ದಿನಗುಡುಕರು ಸಹ ಆರೋಗ್ಯವಾಗಿದ್ದರು. ಆ ಸಮಯದಲ್ಲಿ ಸಂಸಾರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಲಿಲ್ಲ.
ಸರ್ಕಾರವು ಮದ್ಯವನ್ನು ಆದಾಯದ ಮೂಲವಾಗಿ ಗುರುತಿಸದೆ, ಬಡ ಕುಟುಂಬಗಳನ್ನು ಒಳ್ಳೆಯ ಮಾರ್ಗದಲ್ಲಿ ಕೊಂಡೊಯ್ಯಲು, ಅವರ ಕುಟುಂಬದ ಮಕ್ಕಳನ್ನು ಸತ್ಪ್ರಜೆಗಳನ್ನು ಮಾಡಬೇಕಾದರೆ ಸರ್ಕಾರವು ರಾಜ್ಯಾದ್ಯಂತ ಮದ್ಯ ನಿಷೇಧ ಮಾಡಬೇಕು.
ಇಲ್ಲವಾದರೆ ಸ್ವರಾಜ್ ಸಂಘಟನೆಯ ಮೂಲಕ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಸ್ವರಾಜ್ ಸಂಘಟನೆಯ ಪದಾಧಿಕಾರಿಗಳಾದ ಉಮಾ, ಸುಮತಿ, ಚಂದ್ರಮ್ಮ, ವಿಜಯಕುಮಾರ್ ಮತ್ತಿತರರು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು