ಕರ್ತವ್ಯ ಲೋಪ ಕಾರ್ಯದರ್ಶಿ ಗ್ರೇಡ್-೨ ಸಿ ಮಹದೇವಯ್ಯ ಅಮಾನತು: ಸಿಇಒ ಇಕ್ರಂ ಆದೇಶ
ರಾಮನಗರ:ಮೇ/೧೬/೨೦/ಶನಿವಾರ. ಕೊರೊನಾ (ಕೋವಿಡ್-೧೯) ರೋಗವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿದ್ದು, ಇಂತಹ ತುರ್ತು ಪರಿಸ್ಥಿತಿಯಲ್ಲಿ ಕೇಂದ್ರ ಸ್ಥಾನದಲ್ಲಿ ಹಾಜರಿದ್ದು, ಅವರ ಕರ್ತವ್ಯವನ್ನು ನಿರ್ವಹಿಸುವಲ್ಲಿ ಮಹದೇವಯ್ಯ ಸಿ., ಗ್ರೇಡ್-೨, ಕಾರ್ಯದರ್ಶಿ ಹಾಗೂ ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕೋಳಗೊಂಡನಹಳ್ಳಿ ಗ್ರಾಮ ಪಂಚಾಯಿತಿ, ಕನಕಪುರ ತಾಲ್ಲೂಕು ಇವರು ವಿಫಲರಾಗಿರುತ್ತಾರೆ. ಮಾತ್ರವಲ್ಲದೆ. ಕೊಳಗೊಂಡನಹಳ್ಳಿ ಗ್ರಾಮದಲ್ಲಿ ಮೇ ೧೨ ರಂದು ನಡೆದ ಜಾತ್ರಾ ಮಹೋತ್ಸವವನ್ನು ತಡೆಯಲು ಕ್ರಮ ಕೈಗೊಳ್ಳುವುದಕ್ಕೆ ಮುಂದಾಗಿರುವುದಾಗಲೀ ಅಥವಾ ಸದರಿ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲು ವಿಫಲರಾಗಿದ್ದು, ಕರ್ತವ್ಯ ಲೋಪ ಎಸಗಿರುತ್ತಾರೆ.
ಆದ್ದರಿಂದ ಸದರಿ ನೌಕರರನ್ನು ಕರ್ತವ್ಯದಿಂದ ಅಮಾನತುಗೊಳಿಸಬೇಕೆಂದು ಶಿಫಾರಸ್ಸು ಮಾಡಿ ಸ್ಥಳ ತನಿಖಾ ಟಿಪ್ಪಣಿಯೊಂದಿಗೆ ಕನಕಪುರ ತಹಶೀಲ್ದಾರ್ ವರದಿ ಸಲ್ಲಿಸಿರುತ್ತಾರೆ.
ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು ೧೯೫೭ ರ ನಿಯಮ ೧೦ (೧) ರ ಉಪನಿಯಮದಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮಹದೇವಯ್ಯ ಸಿ., ಗ್ರೇಡ್-೨ ಕಾರ್ಯದರ್ಶಿ ಹಾಗೂ ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕೊಳಕೊಂಡನಹಳ್ಳಿ ಗ್ರಾಮ ಪಂಚಾಯಿತಿ, ಕನಕಪುರ ತಾಲ್ಲೂಕು. ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಕರ್ತವ್ಯದಿಂದ ಅಮಾನತ್ತುಗೊಳಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ ಉಲ್ಲಾ ಷರೀಫ್ ಅವರು ಆದೇಶಿಸಿರುತ್ತಾರೆ.
ಆದೇಶದಲ್ಲಿ ಸದರಿ ನೌಕರರ ಅಮಾತನತ್ತಿನ ಅವಧಿಯಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮ ೯೮ ರ ಪ್ರಕಾರ ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ. ಅಮಾನತ್ತಿನ ಅವಧಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಕನಕಪುರ ಇವರ ಅನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡತಕ್ಕದಲ್ಲ ಎಂದು ಆದೇಶದಲ್ಲಿ ತಿಳಿಸಿರುತ್ತಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು