Tel: 7676775624 | Mail: info@yellowandred.in

Language: EN KAN

    Follow us :


ನಗರಸಭಾಧಿಕಾರಿಗಳೇ ಒಮ್ಮೆ ಸಾರ್ವಜನಿಕ ಕಕ್ಕಸು ಮನೆಯನ್ನು ನೀವು ಉಪಯೋಗಿಸಿ, ನಂತರ ಸಾರ್ವಜನಿಕರಿಗೆ ಬಿಡಿ !?

Posted date: 20 May, 2020

Powered by:     Yellow and Red

ನಗರಸಭಾಧಿಕಾರಿಗಳೇ ಒಮ್ಮೆ ಸಾರ್ವಜನಿಕ ಕಕ್ಕಸು ಮನೆಯನ್ನು ನೀವು ಉಪಯೋಗಿಸಿ, ನಂತರ ಸಾರ್ವಜನಿಕರಿಗೆ ಬಿಡಿ !?

ಚನ್ನಪಟ್ಟಣ:ಮೇ/೨೦/೨೦/ಮಂಗಳವಾರ.ನಗರಸಭೆಯ ಕಮೀಷನರ್ ಸಾಹೇಬ್ರೇ ನೀವು ಮತ್ತು ನಿಮ್ಮ ಅಧಿಕಾರಿಗಳು ಒಮ್ಮೆಯಾದರೂ, ಕೇವಲ ಒಂದೇ ಒಂದು ಬಾರಿಯದರೂ ನಿಮ್ಮದೇ ಆವರಣದಲ್ಲಿರುವ *ಸ್ವಚ್ಚತೆಯ ಪ್ರತಿರೂಪ* ಎಂದೇ ಬೋಡ್೯ ಹಾಕಿಕೊಡಿರುವ ಸುಗಮ್ ಶೌಚಾಲಯ ಮತ್ತು ಸ್ನಾನದ ಗೃಹಗಳಲ್ಲಿ ಒಮ್ಮೆ, ಕನಿಷ್ಠ ಐದು ನಿಮಿಷಗಳ ಕಾಲವಾದರು ಕಕ್ಕಸು ಮಾಡಿ ಬನ್ನಿ, ನಂತರ ಸ್ನಾನದ ಗೃಹಗಳಲ್ಲಿ ಸ್ನಾನ ಮಾಡಿ ಬನ್ನಿ. ನಿಮಗೇ ಯಾವುದೇ ರೀತಿಯ ರೋಗ ಬರಲಿಲ್ಲವಾದರೆ ! ಅದೂ ಬೇಡ ಕಕ್ಕಸಾದರೂ ಸಾವಧಾನವಾಗಿ ಬಂದರೆ ಸಾರ್ವಜನಿಕರಿಗೆ ಅದನ್ನು ಉಪಯೋಗಿಸಲು ಅನುವು ಮಾಡಿಕೊಡಿ ಸ್ವಾಮಿ.


ಅಲ್ಲಿ ಸ್ನಾನದ ಮಾತು ಹಾಗಿರಲಿ, ಕಕ್ಕಸು ಮಾಡುವವರಿಗೂ ಸಹ ಕೊರೊನಾ ಗಿಂತಲೂ ಭಯಾನಕ ರೋಗ ಬರುವುದರಲ್ಲಿ ಅನುಮಾನವೇ ಇಲ್ಲ. ಅದೇ ಆವರಣದಲ್ಲಿ ಮಜಬೂತಾಗಿ ಕುಳಿತು ಕೆಲಸ ಮುಗಿಸಿ ಎಸಿ ಕಾರಿನೊಳಗೆ ಕುಳಿತು ಗ್ಲಾಸ್ ಏರಿಸಿಕೊಂಡು ಮನೆಗೆ ಹೋಗುವ ನಿಮಗೆ ಹೇಗೆ ತಿಳಿಯುತ್ತದೆ ಆ ದುರ್ವಾಸನೆ ಮತ್ತು ಸಾರ್ವಜನಿಕ ರ ಅಸಹನೆ ?


ಹೆಂಗಸರ ಮತ್ತು ಗಂಡಸರ ಯಾವುದೇ ಕಕ್ಕಸು ರೂಂಗಳಿಗೂ ಚಿಲಕವಿಲ್ಲ, ಬಾಗಿಲುಗಳೆಲ್ಲವೂ‌ ಸಿಗರೇಟು ಮತ್ತು ಬೀಡಿ ಸೇದುವವರ, ಹಾಳು ಮನಸ್ಥಿತಿ ಉಳ್ಳವರಿಂದ ಸುಟ್ಟು ತೂತು ಬಿದ್ದಿವೆ. ಅಗಿದುಗಿದ ತಂಬಾಕಿನಿಂದ ಗಬ್ಬು ನಾರುತ್ತಿವೆ. ಆ ಕಕ್ಕಸು ಮತ್ತು ಸ್ನಾನದ ಮನೆಗಳು‌‌ ನೀರನ್ನು ಹೊರತುಪಡಿಸಿ ಕನಿಷ್ಠ ಬ್ಲೀಚಿಂಗ್ ಕಂಡು ಅದೆಷ್ಟು ವರ್ಷಗಳಾಗಿದೆ ಎಂಬುದನ್ನು ಸಹ ಅಲ್ಲಿ ಕಕ್ಕಸಿಗೆ ಹೋಗಿ ಬರುವವರಿಂದ, ತಲಾ ಐದು ರೂಪಾಯಿಗಳನ್ನು ವಸೂಲಿ ‌ಮಾಡುವವನೇ ಹೇಳಬೇಕು.


ಶೌಚಗೃಹದೊಳಗೆ ನೀರಿನ ತೊಟ್ಟಿಯೊಂದಿದ್ದು, ಬಹುಶಃ ಅದನ್ನು ೨೦೦೪ ರಲ್ಲಿ ಕಟ್ಟಿದಾಗ ಮುಚ್ಚಿರಬೇಕು ಅನಿಸುತ್ತಿದೆ. ಕಾರಣ ಇಬ್ಬರು ಅದನ್ನು ಎತ್ತಲು ಪ್ರಯತ್ನಿಸಿದರೂ ಸಹ ಸಾಧ್ಯವಾಗಲೇ ಇಲ್ಲ. ತುಕ್ಕು ಹಿಡಿದು ವೆಲ್ಡಿಂಗ್ ಮಾಡಿದಂತಾಗಿದೆ. ಇನ್ನು ವಿಕಲಚೇತನರಿಗೆಂದು ನಿರ್ಮಿಸಿರುವ ಟಾಯ್ಲೆಟ್ ರೂಂ ಯಾವಾಗಲೂ ಬೀಗ ಜಡಿದು ನಿಂತಿದೆ.


ಕೇವಲ ಅಧಿಕಾರಿಗಳೆಂಬ ಕಾರಣಕ್ಕೆ ನಿಮಗೆ ಘಮ್ಮೆನ್ನುವ ಸುವಾಸನಾಯುಕ್ತ ಟಾಯ್ಲೆಟ್ ಗಳು ಬೇಕು ! ದುಡ್ಡು ಕೊಟ್ಟು ಕಕ್ಕಸಿಗೆ ಹೋಗುವ ಸಾರ್ವಜನಿಕರು ದುಡ್ಡು ಕೊಟ್ಟು ರೋಗ ಕೊಂಡು ಬರಬೇಕಾದ ಸ್ಥಿತಿ ಅವರದ್ದಾಗಿದೆ.

ನಗರಸಭೆ ಅಂದರೆ ಅದು ಸ್ವಚ್ಚತೆಯ ಪ್ರತಿರೂಪ ಅದು ನಿಮ್ಮಲ್ಲೇ ಇಲ್ಲವಾದರೇ ಎಲ್ಲಿ ಹುಡುಕುವುದು ?


ನಗರದ ಸ್ವಚ್ಚತೆಯ ಬಗ್ಗೆ ತಹಶಿಲ್ದಾರ್ ಮತ್ತು ಆರೋಗ್ಯಾಧಿಕಾರಿಗಳ ಜವಾಬ್ದಾರಿಯೂ ಇದ್ದು, ಎಲ್ಲಿ ಸ್ವಚ್ಚತೆ ಇಲ್ಲವೋ ಅದನ್ನು ಗಮನಿಸಿ ಸಂಬಂಧಿಸಿದ ಇಲಾಖೆಗೆ ಕಿವಿ ಹಿಂಡಬೇಕಿದೆ. ಶೌಚಾಲಯಗಳನ್ನು ಉಪಯೋಗಿಸುವಾಗ ದೇಹದ ಸೂಕ್ಷ್ಮ ಅಂಗಗಳು ತೆರೆದಿದ್ದು, ಅದರ ಮೂಲಕ ಸೂಕ್ಷ್ಮಾಣುಗಳು ದೇಹಕ್ಕೆ ಸಂಚರಿಸುವ ಸಾಧ್ಯತೆ ಹೆಚ್ಚಿದ್ದು, ಇದು ಹೆಂಗಸರಲ್ಲಿ ನ ಕೆಲ ರೋಗಗಳಿಗೆ ಎಡೆ ಮಾಡಿಕೊಡುತ್ತದೆ. ಮುಂದೆ ಅವರು ಅನಾರೋಗ್ಯಕ್ಕೀಡಾಗಿ ಸಾವಿಗೀಡಾಗುವುದರಲ್ಲಿ ಅನುಮಾನವೇ ಇಲ್ಲ.


*ಸಾರ್ವಜನಿಕರ ಆರೋಗ್ಯದ ಮೇಲೆ ಚಲ್ಲಾಟವಾಡುತ್ತಿರುವ ಅಧಿಕಾರಿಗಳು ಇನ್ನೂ ಮುಂದಾದರು ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸಬೇಕಾಗಿದೆ.*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑