ಸಹಜ ಸ್ಥಿತಿಯತ್ತ ಕೈಗಾರಿಕೆಗಳು: ಜಗದೀಶ ಶೆಟ್ಟರ್
ರಾಮನಗರ:ಮೇ/೨೨/೨೦/ಶುಕ್ರವಾರ. ರಾಜ್ಯದಲ್ಲಿ ಲಾಕ್ಡೌನ್ ಬಳಿಕ ಸ್ಥಗಿತಗೊಂಡಿದ್ದ ಕೈಗಾರಿಕೆಗಳು ಸಹಜ ಸ್ಥಿತಿಯತ್ತ ಮರುಳುತ್ತಿದ್ದು, ಇನ್ನೊಂದೆರಡು ವಾರಗಳಲ್ಲಿ ಪೂರ್ಣಪ್ರಮಾಣದಲ್ಲಿ ಕೈಗಾರಿಕೆಗಳು ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ತಿಳಿಸಿದರು.
ಅವರು ಇಂದು ಜಿಲ್ಲೆಯ ಹಾರೋಹಳ್ಳಿ ಮತ್ತು ಬಿಡದಿ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ, ಇಲ್ಲಿನ ಕೈಗಾರಿಕೋದ್ಯಮಿಗಳ ಜೊತೆ ಚರ್ಚಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ರಾಜ್ಯದಲ್ಲಿ ಈಗ ಶೇಕಡಾ ೭೦ ರಷ್ಟು ಕೈಗಾರಿಕೆಗಳು ಪ್ರಾರಂಭಗೊಂಡಿವೆ. ಇನ್ನುಳಿದ ಶೇ. ೩೦ ರಷ್ಟು ಕೈಗಾರಿಕೆಗಳು ಶೀಘ್ರವೇ ಕಾರ್ಯಾರಂಭ ಮಾಡಲಿವೆ ಎಂದರು.
ಕೈಗಾರಿಕೆ ಸೆಳೆಯಲು ಯೋಜನೆ: ಕೊರೋನಾ ಹಿನ್ನೆಲೆಯಲ್ಲಿ ಚೀನಾದಿಂದ ಸಾವಿರಾರು ಕೈಗಾರಿಕೆಗಳು ನೆಲೆಯನ್ನು ಭಾರತಕ್ಕೆ ಬದಲಾಯಿಸಲು ಉತ್ಸುಕವಾಗಿದೆ. ರಾಜ್ಯದಲ್ಲಿ ಹೂಡಿಕೆ ಮಾಡಲು ಉತ್ಸುಕವಾಗಿರುವ ಕೈಗಾರಿಕೋದ್ಯಮಿಗಳಿಗೆ ವಿಶೇಷ ಪ್ರೋತ್ಸಾಹಕ ಯೋಜನೆಯನ್ನು ರೂಪಿಸಲು ಕ್ರಮವಹಿಸಲಾಗುತ್ತಿದೆ.
ಈಗಾಗಲೇ ವಿಶೇಷ ಟಾಸ್ಕ್ ಪೋರ್ಸ್ಅನ್ನು ರಚಿಸಲಾಗಿದ್ದು ರಾಜ್ಯದಲ್ಲಿ ಹೂಡಿಕೆಗೆ ಆಸಕ್ತಿ ತೋರುವ ಕೈಗಾರಿಕೆಗಳನ್ನು ಸೆಳೆಯುವ ಪ್ರಯತ್ನ ಇದರ ಮೂಲಕ ರೂಪಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ: ಬೆಂಗಳೂರಿನಂತೆ ಹಾರೋಹಳ್ಳಿ ಮತ್ತು ಬಿಡದಿಯಲ್ಲಿ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲಾಗುವುದು. ರಾಮನಗರ ಜಿಲ್ಲೆಯಲ್ಲಿರುವ ಹಾರೋಹಳ್ಳಿ ಮತ್ತು ಬಿಡದಿ ಕೈಗಾರಿಕಾ ಪ್ರದೇಶಗಳಲ್ಲಿ ಇನ್ನಷ್ಟು ಮೂಲಭೂತ ಸೌಕರ್ಯವನ್ನು ಕಲ್ಪಿಸುವ ಮೂಲಕ ಇವುಗಳನ್ನು ಅಭಿವೃದ್ಧಿಪಡಿಸಲಾಗುವುದು. ಈ ಹಿನ್ನೆಲೆಯಲ್ಲಿ ಇಲ್ಲಿನ ಕೈಗಾರಿಕೋದ್ಯಮಿಗಳೊಂದಿಗೆ ಇಂದು ಚರ್ಚಿಸಿರುವುದಾಗಿ ಸಚಿವರು ತಿಳಿಸಿದರು.
ಕಾರ್ಮಿಕರ ಕೊರತೆ ಇಲ್ಲ: ಲಾಕ್ಡೌನ್ ಸಡಿಲಗೊಂಡ ಬಳಿಕ ಕೈಗಾರಿಕೆಗಳಿಗೆ ಆರಂಭದಲ್ಲಿ ಕಾರ್ಮಿಕರ ಸಮಸ್ಯೆಯುಂಟಾಗಿತ್ತು. ವಾರದ ಬಳಿಕ ಕೈಗಾರಿಕೆಗಳು ಸಹಜ ಸ್ಥಿತಿಯತ್ತ ಮರಳುತ್ತಿವೆ. ಹೀಗಾಗಿ ಕಾರ್ಮಿಕರು ಸಹ ಕೆಲಸಗಳಿಗೆ ಬರುತ್ತಿದ್ದಾರೆ ಎನ್ನುವುದನ್ನು ಇದು ಸೂಚಿಸುತ್ತದೆ ಎಂದರು.
ಸಾಮಾಜಿಕ ಅಂತರ: ಕೈಗಾರಿಕೆಗಳನ್ನು ಆರಂಭಿಸುವುದರ ಜೊತೆಗೆ ಎಲ್ಲಾ ಕೈಗಾರಿಕೆಗಳು ಸ್ವಚ್ಛತೆಗೆ ಆದ್ಯತೆ ನೀಡಬೇಕು ಕೆಲಸ ನಿರ್ವಹಿಸುವ ಸ್ಥಳದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಎಲ್ಲರೂ ಕೆಲಸಮಾಡುವ ವೇಳೆ ಮಾಸ್ಕ್ ಬಳಕೆ ಮಾಡಬೇಕು ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಕಡ್ಡಾಯವಾಗಿ ಬಳಸುವಂತೆ ಮನವಿ ಮಾಡಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು