ಜಿಲ್ಲೆಯಲ್ಲಿ ಜೀವ ವೈವಿದ್ಯತಾ ನಿರ್ವಹಣಾ ಸಮಿತಿಯನ್ನು ಚುರುಕುಗೊಳಿಸಿ: ಅನಂತ ಹೆಗಡೆ ಅಶೀಸರ
ರಾಮನಗರ:ಮೇ/೩೦/೨೦/ಶನಿವಾರ.ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ ಜೀವ ವೈವಿದ್ಯತಾ ನಿರ್ವಹಣಾ ಸಮಿತಿಯನ್ನು ಚುರುಕುಗೊಳಿಸಿ ಜಿಲ್ಲೆಯ ಜೀವ ವೈವಿದ್ಯತೆಯನ್ನು ಸಂರಕ್ಷಿಸಬೇಕು ಎಂದು ಕರ್ನಾಟಕ ಜೀವ ವೈವಿಧ್ಯತಾ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯಾದ್ಯಂತ ಮೇ ೨೨ ರಿಂದ ಜೂನ್ ೦೫ ರ ವರೆಗೆ ಜೀವ ವೈವಿಧ್ಯ ಸಂರಕ್ಷಣೆ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಅಸಂಖ್ಯ ಬಗೆಯ ಸಸ್ಯ, ಪ್ರಾಣಿ ಹಾಗೂ ಸೂಕ್ಷಾಣು ಜೀವಿಗಳು ಪರಿಸರದಲ್ಲಿದೆ. ಅವುಗಳ ಮಹತ್ವವನ್ನು ತಿಳಿಸಿ ಜಾಗೃತಿ ಅಭಿಯಾನ ನಡೆಸಬೇಕು ಎಂದರು.
ಜಿಲ್ಲೆಯಲ್ಲಿ ಜೀವ ವೈವಿದ್ಯತೆ ಹೊಂದಿರುವ ಸಣ್ಣ ಪ್ರದೇಶದಿಂದ ದೊಡ್ಡ ಪ್ರದೇಶವನ್ನು ಗುರುತಿಸಿ ವರದಿ ನೀಡಿದರೆ ಕರ್ನಾಟಕ ಜೀವ ವೈವಿಧ್ಯ ಮಂಡಳಿ ವತಿಯಿಂದ ಅದನ್ನು ಸಂರಕ್ಷಿಸಿ ಬಹಳಷ್ಟು ವರ್ಷ ಅದನ್ನು ಉಳಿಸುವ ಕೆಲಸ ಮಾಡಲಾಗುವುದು ಎಂದರು.
ನಿಷೇಧಿತ ಕೀಟನಾಶಕಗಳು ಹಾಗೂ ರಸಗೊಬ್ಬರಗಳನ್ನು ಉಪಯೋಗಿಸುವುದರಿಂದ ಜೀವ ವೈವಿಧ್ಯತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜಂಟಿ ಕೃಷಿ ನಿರ್ದೇಶಕ ರವಿ ಅವರು ಮಾತನಾಡಿ ಜಿಲ್ಲೆಯಲ್ಲಿ ಇದನ್ನು ಪರಿಶೀಲಿಸಲು ಕೃಷಿ ಇಲಾಖೆಯಿಂದ ತಂಡವಿದ್ದು, ಅವರು ಪರಿಶೀಲನೆ ನಡೆಸುತ್ತಾರೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ ಉಲ್ಲಾ ಷರೀಫ್ ಅವರು ಮಾತನಾಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿರುವ ಜೀವ ವೈವಿಧ್ಯತೆಯನ್ನು ಜನತಾ ಜೀವ ವೈವಿಧ್ಯತಾ ದಾಖಲಾತಿಯಲ್ಲಿ ದಾಖಲಿಸಬೇಕಿದ್ದು, ಈಗಾಗಲೇ ೧೧೫ ಗ್ರಾಮ ಪಂಚಾಯಿತಿಗಳಲ್ಲಿ ಮಾಡಲಾಗಿದೆ. ಜೂನ್ ಅಂತ್ಯದೊಳಗಾಗಿ ಎಲ್ಲಾ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಯ ವರದಿಯನ್ನು ಸಲ್ಲಿಸಲಾಗುವುದು ಎಂದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ದಾಕ್ಷಾಯಿಣಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಉಮೇಶ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು