Tel: 7676775624 | Mail: info@yellowandred.in

Language: EN KAN

    Follow us :


ಬನ್ನಿಮಹಾಂಕಾಳಿ ಅಮ್ಮನವರ ಕರಗ ಮಹೋತ್ಸವ ಮಂಗಳವಾರ

Posted date: 29 Jun, 2020

Powered by:     Yellow and Red

ಬನ್ನಿಮಹಾಂಕಾಳಿ ಅಮ್ಮನವರ ಕರಗ ಮಹೋತ್ಸವ ಮಂಗಳವಾರ

ರಾಮನಗರ : ನಗರದ ಮಂಡಿಪೇಟೆಯಲ್ಲಿರುವ ಬನ್ನಿಮಹಾಂಕಾಳಿ ಅಮ್ಮನವರು ನಗರದ ಶಕ್ತಿ ದೇವತೆ. ಸುಮಾರು ನಾನೂರು  ವರ್ಷಗಳಿಂದ ಇಲ್ಲಿನ ಭಕ್ತರು ಆರಾಧಿಸುತ್ತಾ ಬಂದಿದ್ದಾರೆ.

ನಾನೂರು ವರ್ಷಗಳ ಹಿಂದೆ ಮೈಸೂರು ರಾಜರ ಆಸ್ಥಾನದಲ್ಲಿದ್ದ ಭಕ್ಷಿ ಬಾಲಾಜಿ ಅವರು ಕೊಲ್ಲಾಪುರಕ್ಕೆ ಹೋಗಿದ್ದ ಸಂದರ್ಭದಲ್ಲಿ ರಾತ್ರಿಯ ವೇಳೆಯಲ್ಲಿ ಅವರಿಗೆ ಕನಸೊಂದು ಬಿದ್ದಿತ್ತು. ಅವರ ಕನಸಿನಲ್ಲಿ ದೇವಿಯು ಕಾಣಿಸಿಕೊಂಡು ತನಗೊಂದು ನೆಲೆ ಕಾಣಿಸುವಂತೆ ಭಕ್ಷಿ ಬಾಲಾಜಿ ಅವರಲ್ಲಿ ಕೋರಿದಳು.


ಇದರಿಂದ ಸಂತೋಷಗೊಂಡ ಅವರು ಎಲ್ಲಿ ಎಂದು ಕೇಳಲಾಗಿ ದೇವಿಯು ನಾನು ನಿನ್ನ ಬಂಡಿಯ ಹಿಂದೆ ಬರುತ್ತೇನೆ. ಎಲ್ಲಿ ನನ್ನ ಗೆಜ್ಜೆಯ ನಾದ ನಿಲ್ಲುತ್ತದೆಯೊ ಅಲ್ಲಿ ನನಗೆ ಗುಡಿಯನ್ನು ಕಟ್ಟಿಸು ಎಂದು ತಿಳಿಸಿದಳು.

ಕೊಲ್ಲಾಪುರದಿಂದ ಮೈಸೂರಿಗೆ ಎತ್ತಿನ ಬಂಡಿಯಲ್ಲಿ ಹಿಂದಿರುಗುವಾಗ ಎತ್ತಿನ ಬಂಡಿಯ ಹಿಂದೆ ಬರುತ್ತಿದ್ದ ಗೆಜ್ಜೆಯ ನಾದ ಅಂದಿನ ಕ್ಲೋಸ್ ಪೇಟೆ ಬಳಿಯಲ್ಲಿದ್ದ ಬನ್ನಿ ಮರದ ಕೆಳಗೆ ನಿಂತಿತು. ಈ ಸ್ಥಳದಲ್ಲಿ ತನ್ನನ್ನು ಪ್ರತಿಷ್ಠಾಪನೆ ಮಾಡುವಂತೆ ದೇವಿಯು ಭಕ್ಷಿ ಬಾಲಾಜಿಯನ್ನು ಕೋರಿದಳು.

ಆದ್ದರಿಂದ ಬನ್ನಿ ಮರದ ಕೆಳಗೆ ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ಅಂದಿನಿಂದ ದೇವಿಯನ್ನು ಬಂಡಿ ಹಿಂದೆ ಬಂದ ಕಾರಣ “ಬಂಡಿ ಮಹಾಂಕಾಳಿ” ಎಂತಲೂ ಮತ್ತು ಬನ್ನಿ ಮರದ ಕೆಳಗೆ ಸ್ಥಾಪಿತವಾಗಿದ್ದರಿಂದ “ಬನ್ನಿ ಮಹಾಂಕಾಳಿ” ಎಂತಲೂ, ಎರಡು ಹೆಸರಿನಿಂದ ಕರೆಯುತ್ತಾರೆ.


ಅಂದಿನಿಂದ ಇಂದಿನವರೆಗೂ ಅಮ್ಮನವರನ್ನು ವರ್ಷಕ್ಕೊಮ್ಮೆ ಅದ್ಧೂರಿಯಾಗಿ ಕರಗದ ಮೂಲಕ ಆರಾಧಿಸಲಾಗುತ್ತದೆ. ಪ್ರಾರಂಭದಲ್ಲಿ ಧರ್ಮಲಿಂಗು ಎನ್ನುವವರು ಬೆಟ್ಟದ ಮಲ್ಲಿಗೆ ಮತ್ತು ಬೇವಿಸೊಪ್ಪಿನ ಕಳಸ ಹೊತ್ತು ಅಗ್ನಿಕೊಂಡ ಪ್ರವೇಶ ಮಾಡುತಿದ್ದರು. ಈಗ ಆರ್.ಎನ್. ಯೋಗೇಶ್ 18ನೇ ಬಾರಿಗೆ ಕರಗವನ್ನು ಧರಿಸುತ್ತಿದ್ದಾರೆ.

ದೇವಾಲಯದಲ್ಲೇ ಕರಗದ ಆಚರಣೆ : ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಈ ಬಾರಿಯ ಬನ್ನಿಮಹಾಂಕಾಳಿ ಕರಗ ಮಹೋತ್ಸವವು ದೇವಾಲಯದಲ್ಲಿನ ಆಚರಣೆಗೆ ಮಾತ್ರ ಸೀಮಿತವಾಗಿದೆ ಎಂದು ದೇವಾಲಯದ ಅರ್ಚಕ ಎಂ.ಎಸ್. ವಿನಯ್ ಕುಮಾರ್ ತಿಳಿಸಿದರು.

ದಿನಾಂಕ 30ರ ಮಂಗಳವಾರ ಬನ್ನಿಮಹಾಂಕಾಳಿ ಅಮ್ಮನವರ ಕರಗ ಮಹೋತ್ಸವ ಸರಳವಾಗಿ ದೇವಾಲಯದ ಆವರಣದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.


ಬನ್ನಿಮಹಾಂಕಾಳಿ ದೇವಿಯು ಪ್ರತಿಷ್ಠಾಪನೆಗೊಂಡಾಗಿನಿಂದಲೂ ಇದುವರೆಗೆ ರಾಮನಗರ ಪ್ರಾಂತ್ಯದ ಭಾಗದಲ್ಲಿ  ಯಾವುದೆ ಸಾಮೂಹಿಕ ಕಾಯಿಲೆಗಳಾಗಲಿ ಅಥವಾ ರೋಗರುಜಿನಗಳಾಗಲಿ ಬರುವುದಿಲ್ಲ ಎಂಬುದು ಇಲ್ಲಿನ ನಾಗರಿಕರ ನಂಬಿಕೆಯಾಗಿದೆ ಎಂದು ಅವರು ಹೇಳಿದರು.

“ಕ್ಲೋಸ್ ಪೇಟೆ” ಸ್ಮಾರಕ : ರಾಮನಗರದ ಹಿಂದಿನ ಹೆಸರು ಕ್ಲೋಸ್‍ಪೇಟೆ. ಅರ್ಕಾವತಿ ನದಿ ದಂಡೆಯ ಮೇಲಿರುವ ರಾಮನಗರ ಪುರಾತನ ಕಾಲದಿಂದಲೂ ಅಸ್ತಿತ್ವದಲ್ಲಿತ್ತೆಂದು ಹೇಳಲಾಗಿದೆ.

ಬ್ರಿಟೀಷ್ ಸೈನ್ಯಾಧಿಕಾರಿ ಮತ್ತು ಮೈಸೂರು ರಾಜ್ಯದ ಪ್ರಥಮ ರೆಸಿಡೆಂಟ್ ಆಗಿದ್ದ ಸರ್ ಬ್ಯಾರಿ ಕ್ಲೋಸ್ ರಾಜ್ಯ ಸಂಚಾರ ಸಮಯದಲ್ಲಿ ತುಂಬಿ ಹರಿಯುತ್ತಿದ್ದ ಅರ್ಕಾವತಿ ನದಿ ಮತ್ತು ಬೆಟ್ಟಗಳಿಂದಲೇ ಆವೃತ್ತವಾಗಿ ಪ್ರಾಕೃತಿಕ ಸೌಂದರ್ಯ ಮೆರೆಯುತ್ತಿದ್ದ ಈ ಸ್ಥಳವನ್ನು ನೋಡಿ ಪುಳಕಿತನಾಗಿ ಇಲ್ಲಿದ್ದ ಗ್ರಾಮವನ್ನು ವ್ಯವಸ್ಥಿತ ಪಟ್ಟಣವಾಗಿ ಪರಿವರ್ತಿಸಲು ನಿರ್ಧರಿಸಿದ.

ಆ ನಂತರದ ದಿನಗಳಲ್ಲಿ ಸರ್ ಬ್ಯಾರಿ ಕ್ಲೊಸ್ ಇಲ್ಲಿಯೇ ಬಿಡಾರ ಹೂಡಿದ್ದನೆಂದು, ಈತನ ಸೈನ್ಯ ಈಗ ಟ್ರೂಪ್‍ಲೇನ್ ಎಂದು ಕರೆಯುವ ಸ್ಥಳದಲ್ಲಿ ಬಿಡಾರ ಹೂಡಿತ್ತೆಂದು ಹೇಳಲಾಗಿದೆ. ಅಂದಿನ ಮೈಸೂರು ಮಹಾರಾಜರು ಸರ್ ಬ್ಯಾರಿ ಕ್ಲೊಸ್‍ನ ಹೆಸರಿನಲ್ಲಿ ಈ ಸ್ಥಳವನ್ನು “ಕ್ಲೋಸ್ ಪೇಟೆ” ಎಂದು ಪುನರ್ ನಾಮಕರಣ ಮಾಡಿದರೆಂದು ಇತಿಹಾಸದಿಂದ ತಿಳಿದುಬರುತ್ತದೆ.

ಹೀಗೆ ಕಲುವಳಿ ನಾಡು, ಕೆಳ್ಗಲಿ ನಾಡು, ರಾಮಗಿರಿ ಎಂಬ ಹೆಸರುಗಳಿದ್ದ ಈ ಸ್ಥಳಕ್ಕೆ 1721 ರಲ್ಲಿ “ಕ್ಲೊಸ್ ಪೇಟೆ” ಎಂದು ನಾಮಕರಣವಾಯಿತು. ನಾಮಕರಣವಾದ ಬಗ್ಗೆ ಶಾಸನವನ್ನು ಈಗಿನ ಮಂಡಿಪೇಟೆಯ ಬನ್ನಿಮಹಾಕಾಳಿ ಅಮ್ಮನವರ ದೇಗುಲದ ಮುಂಭಾಗದಲ್ಲಿ ಪ್ರತಿಷ್ಟಾಪಿಸಲಾಗಿದೆ. ಶಾಸನವನ್ನು ಮಣ್ಣು ಮತ್ತು ಗಾರೆಯಿಂದ ನಿರ್ಮಾಣವಾಗಿರುವ ಕಂಬವೊಂದರಲ್ಲಿ ಇರಿಸಲಾಗಿದೆ.

ಕ್ಲೊಸ್ ಪೇಟೆ ಶಾಸನದ ಶಿಲಾಸ್ಮಾರಕವನ್ನು ಕರ್ನಾಟಕ ರಾಜ್ಯ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ನಿರ್ದೇಶನಾಲಯ ಸಂರಕ್ಷಿಸಲ್ಪಟ್ಟ ಪ್ರಾಚೀನ ಸ್ಥಲವಸ್ತು (ಮಾನುಮೆಂಟ್) ಎಂದು ಘೋಷಿಸಿದೆ.


-ಎಸ್. ರುದ್ರೇಶ್ವರ

ಸಾಹಿತ್ಯ ಮತ್ತು ಸಂಶೋಧನಾ ವಿದ್ಯಾರ್ಥಿ

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑