Tel: 7676775624 | Mail: info@yellowandred.in

Language: EN KAN

    Follow us :


ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಸಚಿವ ಸುರೇಶ್ ಕುಮಾರ್

Posted date: 01 Jul, 2020

Powered by:     Yellow and Red

ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಸಚಿವ ಸುರೇಶ್ ಕುಮಾರ್

ರಾಮನಗರ:ಜು/೦೧/೨೦/ಬುಧವಾರ. ರಾಮನಗರ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು  ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಧೈರ್ಯ ತುಂಬುವ ಕೆಲಸವನ್ನು ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ , ಸಕಾಲ ಸಚಿವರಾದ ಎಸ್. ಸುರೇಶ್ ಕುಮಾರ್ ಅವರು ಮಾಡಿದರು.


ಆರಂಭಕ್ಕೆ ಹಾರೋಹಳ್ಳಿ, ಕನಕಪುರ ನಂತರ ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು ಹಾಗೂ ಚನ್ನಪಟ್ಟಣ ನಗರದ ಸೆಂಟ್ ಜೋಸೆಫ್ ಹೈಸ್ಕೂಲಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ನೋಡಿ ಅಲ್ಲಿನ ಮಕ್ಕಳೊಂದಿಗೆ ಮಾತನಾಡಿ, ನಿಮ್ಮ ಧೈರ್ಯ ಮೆಚ್ಚುವಂತಹದ್ದೇ, ನಾನು ಗಮನಿಸಿದ ಎಲ್ಲಾ ಜಿಲ್ಲೆಗಳಿಗಿಂತ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ಗಳು ಗೈರು ಹಾಜರಾಗದೆ ಪರೀಕ್ಷೆ ಬರೆಯುತ್ತಿದ್ದೀರಿ ನಿಮಗೆ ಅಭಿನಂದನೆಗಳು ಎಂದು ಧೈರ್ಯ ತುಂಬಿ ಅವರಿಗೆಶುಭ ಹಾರೈಸಿದರು. ಇದೇ ವೇಳೆ ಪೋಷಕರು ಸಹ ಊಹಾಪೋಹಗಳಗೆ ಕಿವಿಗೊಟ್ಟು ಮಕ್ಕಳ ಭವಿಷ್ಯ ಹಾಳು ಮಾಡದೆ ಮಕ್ಕಳಿಗೆ ಧೈರ್ಯ ಹೇಳಬೇಕು ಎಂದು ಕಿವಿಮಾತು ಹೇಳಿದರು.



ಸಂದರ್ಭದಲ್ಲಿ ಅವರು ಮಾಧ್ಯಮದವರ ಜೊತೆ ಯಲ್ಲಿ ಮಾತನಾಡಿ, ಪರೀಕ್ಷೆ ವಿಚಾರದಲ್ಲಿ ಊಹಾಪೋಹಗಳು ಮಾಮೂಲಿಯಾಗಿವೆ, ಈಗ ಮೌಲ್ಯಮಾಪನದ ವಿಚಾರದಲ್ಲಿ ಹಬ್ಬಿರುವ ಊಹಾಪೋಹ ಸುಳ್ಳು.  ವಿದ್ಯಾರ್ಥಿಗಳ ಪ್ರತಿಭೆಗೆ ಯಾವುದೇ ಸಾಟಿ ಇಲ್ಲ.

ಪರೀಕ್ಷೆ ನಡೆಸುವ ಬಗ್ಗೆ ವಿರೋಧ ಪಕ್ಷದ ನಾಯಕರ ವಿರೋಧದ ಬಗ್ಗೆ ಪ್ರಶ್ನಿಸಿದಾಗ, ನಾನು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಹಾಗೂ ಎಚ್ ಡಿ ಕುಮಾರಸ್ವಾಮಿಯವರನ್ನು ನೇರವಾಗಿ ಭೇಟಿ ಮಾಡಿ ವಿವರಿಸಿದ್ದೆ. ಅದರಲ್ಲಿ ಕುಮಾರಸ್ವಾಮಿಯವರು ಮಾತ್ರ ಪರೀಕ್ಷೆ ಮಾಡುವು ದಕ್ಕೆ ಸೂಕ್ತ ವಾತಾವರಣ ಇಲ್ಲ ಎಂದಿದ್ದರು, ಆದರೆ ಅವರಿಗೆ ವಿವರಿಸಿದ ನಂತರ ಅವರೆಲ್ಲರೂ ಪರೀಕ್ಷೆಯ ಪರವಾದರು ಎಂದರು.


ಆನ್ ಲೈನ್ ಶಿಕ್ಷಣದ ಬಗ್ಗೆ ಪ್ರತಿಕ್ರಿಯಿಸಿ, ಈಗಾಗಲೇ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ, ನಾವು ತಾತ್ಕಾಲಿಕವಾಗಿ ಮಾರ್ಗಸೂಚಿ ಸಿದ್ಧಪಡಿಸಿದ್ದೇವೆ, ಜೊತೆಗೆ ತಜ್ಞರ ತಂಡವೂ ರಚನೆಯಾಗಿದೆ, ಈ ವಿಚಾರದಲ್ಲಿ ಶೀಘ್ರದಲ್ಲೇ ಸೂಕ್ತ ನಿರ್ಧಾರ ಪ್ರಕಟವಾಗುತ್ತದೆ ಎಂದರು.

ಈಗ ಪರೀಕ್ಷೆಗೆ ಹಾಜರಾ ಗದ ಕೋವಿಡ್ ಸೋಂಕಿತ ವಿದ್ಯಾರ್ಥಿಗಳಿಗೆ, ಆಗಸ್ಟ್ ನಲ್ಲಿ ಪರೀಕ್ಷೆ ನಡೆಯಲಿದೆ, ಅವರನ್ನೂ ಸಹ ಫ್ರೆಷರ್ಸ್ ಎಂದು ಪರಿಗಣಿಸಲಾಗುತ್ತದೆ ಎಂದರು.


*ಖಾಸಗಿ ಶಾಲೆಯ ಶಿಕ್ಷಕರಿಗೆ ಸಂಬಳದ ಕೊರತೆ ವಿಚಾರವಾಗಿ ಹೇಳಿ,  ಈ ಬಗ್ಗೆ ಹಲವು ವಿಚಾರಗಳು ಕೇಳಿಬಂದಿವೆ, ಎಸ್‌ಎಸ್ಎಲ್‌ಸಿ ಪರೀಕ್ಷೆಯ ನಂತರ ಸೂಕ್ತ ನಿರ್ಧಾರ ಮಾಡಲಾಗುತ್ತದೆ. ಯಾವ ಖಾಸಗಿ ಶಿಕ್ಷಣ ಸಂಸ್ಥೆಯೂ ಶಾಲಾ ಶುಲ್ಕವನ್ನು ಹೆಚ್ಚಿಸಬಾರದು, ಮತ್ತು ಶಿಕ್ಷಕರನ್ನ ಕೆಲಸದಿಂದ ತೆಗೆಯಬಾರದು ಎಂದು ಸೂಚಿಸಿದರು.*


ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಪ್ರಶ್ನೆ ಇಲ್ಲ, ಆದರೆ ಕೆಲ ಕಠಿಣ ಕ್ರಮಗಳನ್ನ ಕೈ ಗೊಳ್ಳಲಾಗುವುದು. ರಾಜ್ಯದ ಜನರಿಗೆ ಕೊರೊನಾ ವಿಚಾರದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಮಾದರಿಯಾಗಿದ್ದಾರೆ ಎಂದು ಹೇಳಿದರು. ಚನ್ನಪಟ್ಟಣದಲ್ಲಿ ಬಿ.ಇ.ಓ ನಾಗರಾಜ್, ಇ.ಓ ಚಂದ್ರು ಇದ್ದರು.


*ಸಚಿವರಿಂದ ಎಸ್ ಕರಿಯಪ್ಪನವರ ಸಮಾಧಿಗೆ ನಮನ*

ಮೊದಲಿಗೆ ಅವರು ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ, ಪರೀಕ್ಷೆಯಲ್ಲಿ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ನಂತರ ಅವರು ಕನಕಪುರದ ಆರ್ ಹೆಚ್‌ಎಸ್ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ ಇವುಗ ಳಿಗೆ ಭೇಟಿ ನೀಡಿ ಅಲ್ಲಿಯ ವಿದ್ಯಾರ್ಥಿಗಳನ್ನು ಮಾತ ನಾಡಿಸಿದರು. ಕೊರೊನಾಕ್ಕೆ ಭಯ ಬೀಳುವ ಅವಶ್ಯಕತೆ ಇಲ್ಲ, ಎಲ್ಲಾ ರೀತಿಯ ಮುನ್ನೆಚ್ಚರಿಕೆಯನ್ನೂ ವಹಿಸಲಾಗಿದೆ, ನಿರಾಳವಾಗಿ ಪರೀಕ್ಷೆ ಬರೆಯಿರಿ ಎಂದರು.


ನಂತರ ಅವರು ಆರ್‌ಇಎಸ್ ಕಾಲೇಜಿನ ಆವರಣದಲ್ಲಿರುವ ಶಿಕ್ಷಣ ಪ್ರೇಮಿ ಎಸ್ ಕರಿಯಪ್ಪ ನವರ ಸಮಾಧಿ ಬಳಿ ಬಂದು, ಪುಷ್ಪ ಗುಚ್ಛವಿರಿಸಿ, ನಮಸ್ಕರಿಸಿದರು. ಸಂದರ್ಭದಲ್ಲಿ ಆರ್‌ಇಎಸ್‌ನ ಉಪಾಧ್ಯಕ್ಷರಾದ ಎಂ.ಎಲ್ ಶಿವಕುಮಾರ್ ಅವರು ಅವರನ್ನು ಸೇರಿಕೊಂಡರು.

ಸಚಿವರು ಶಾಲೆಗಳಿಗೆ ಭೇಟಿ ಕೊಡುವಾಗ ಅವರ ಜೊತೆಯಲ್ಲಿ ಸಿಇಓ ಇಕ್ರಂ ಉಲ್ಲಾ ಷರೀಫ್, ಡಿಡಿಪಿಐ ಅವರ ಪ್ರತಿನಿಧಿ ಶಿವಕುಮಾರ್, ಕನಕಪುರ ಬಿಇಓ ಜಯಲಕ್ಷ್ಮ ಸೇರಿದಂತೆ ಹಲವು ಅಧಿಕಾರಿಗಳು ಅವರಿಗೆ ಸಾಥ್ ನೀಡಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑