ವಿಸ್ತರಿತ ಆಸ್ಪತ್ರೆಯಾಗಿ ಕಂದಾಯ ಭವನ ಮುಂದುವರಿಕೆ: ಡಿಸಿಎಂ ಅಶ್ವಥ್ ನಾರಾಯಣ
ರಾಮನಗರ:ಜು/೧೬/೨೦/ಗುರುವಾರ. ಕೋವಿಡ್-೧೯ ರೆಫೆರೆಲ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿರುವ ಕಂದಾಯ ಭವನವನ್ನು ಮುಂದಿನ ದಿನಗಳಲ್ಲಿ ವಿಸ್ತರಿತ ಆಸ್ಪತ್ರೆಯಾಗಿ ಮುಂದುವರೆಸುವಂತೆ ಉಪಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ಜಿಲ್ಲಾಡಳಿತಕ್ಕೆ ಇಂದು ಸೂಚಿಸಿದರು.
ಅವರು ರಾಮನಗರ ಜಿಲ್ಲೆಯ ಕೋವಿಡ್ ಪರಿಸ್ಥಿತಿ ಕುರಿತಂತೆ ಗುರುವಾರ (ಜುಲೈ ೧೬) ಬೆಂಗಳೂರಿನಿಂದ ಜಿಲ್ಲಾಡಳಿತದೊಂದಿಗೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಿ, ಈಗಿರುವ ಕೋವಿಡ್-೧೯ ಆಸ್ಪತ್ರೆಯನ್ನು ೩೦೦ ಹಾಸಿಗೆಗಳ ಸುಸಜ್ಜಿತ ವಿಸ್ತರಿತ ಆಸ್ಪತ್ರೆಯಾಗಿ ಮಾರ್ಪಡಿಸಲು ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ವಿಸ್ತರಿತ ಆಸ್ಪತ್ರೆಯಲ್ಲಿ ತುರ್ತು ನಿರ್ವಹಣಾ ಕೇಂದ್ರ, ಅಪಘಾತ ಚಿಕಿತ್ಸೆ ವಿಭಾಗ, ಟ್ರಾಮಾ, ಕ್ಯಾನ್ಸರ್ ಸೇರಿದಂತೆ ಪ್ರಮುಖ ರೋಗಗಳಿಗೆ ಚಿಕಿತ್ಸೆ ನೀಡಲು ಸಜ್ಜುಗೊಳಿಸುವಂತೆ ಉಪಮುಖ್ಯಮಂತ್ರಿಗಳು ಸಲಹೆ ನೀಡಿದರು.
*ಹುದ್ದೆ ಭರ್ತಿ:* ಪ್ರಸಕ್ತ ರಾಮನಗರ ಜಿಲ್ಲೆಯಲ್ಲಿ ಅವಶ್ಯಕತೆ ಇರುವ ೧೮ ವೈದ್ಯರು, ೩೦ ಶುಶ್ರೂಕಿಯರು, ೨೬ ಡಿ ಗ್ರೂಪ್ ಮತ್ತು ೧೪ ಪ್ರಯೋಗಾಲಯ ಪರೀಕ್ಷಕರನ್ನು ಭರ್ತಿ ಮಾಡಿಕೊಳ್ಳಲು ಉಪಮುಖ್ಯಮಂತ್ರಿಗಳು ಅನುಮೋದನೆ ನೀಡಿದರು.
*ಕ್ಷಿಪ್ರ ಪರೀಕ್ಷೆ:* ಜಿಲ್ಲೆಯಲ್ಲಿ ಕೋವಿಡ್-೧೯ ಅನ್ನು ನಿಯಂತ್ರಿಸಲು ಅನುವಾಗುವಂತೆ ಸ್ಯಾಂಪಲ್ ಪರೀಕ್ಷೆಯ ಸಂಖ್ಯೆಯನ್ನು ಹೆಚ್ಚಿಸುವಂತೆ ಸೂಚಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿ ದಿನವೂ ೨೦೦ ಕ್ಕೂ ಹೆಚ್ಚು ಟ್ರೂನೆಟ್ ಮತ್ತು ಆ್ಯಂಟಿಜೆನ್ ಪರೀಕ್ಷೆಗಳನ್ನು ಕಡ್ಡಾಯವಾಗಿ ನಡೆಸುವಂತೆ ತಿಳಿಸಿದರು.
*ಆರ್ಟಿ-ಪಿಸಿಆರ್ ಪರೀಕ್ಷೆ:* ಉದ್ಘಾಟಿಸಬೇಕಾಗಿರುವ ಹೊಸ ಜಿಲ್ಲಾ ಆಸ್ಪತ್ರೆಯ ಕಟ್ಟಡದಲ್ಲಿ ಆರ್ಟಿ-ಪಿಸಿಆರ್ ಪರೀಕ್ಷೆ ಕೇಂದ್ರವನ್ನು ಅಗತ್ಯ ಸಿಬ್ಬಂದಿಯೊಂದಿಗೆ ಜುಲೈ ತಿಂಗಳ ಅಂತ್ಯಕ್ಕೆ ಆರಂಭಿಸಬೇಕು. ಇದಕ್ಕೆ ಬೇಕಾಗಿರುವ ನೆರವನ್ನು ಕೊಪ್ಪಳದಲ್ಲಿರುವ ಕೇಂದ್ರದೊಂದಿಗೆ ಪಡೆದುಕೊಳ್ಳುವಂತೆ ತಿಳಿಸಿದರು. ಹಾಗೆಯೇ, ಆಸ್ಪತ್ರೆಯಲ್ಲಿರುವ ಈ ಕೇಂದ್ರದ ನಿರ್ವಹಣೆಯನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯವರು ನೀಡಲಿದ್ದಾರೆ ಎಂದು ಉಪಮುಖ್ಯಮಂತ್ರಿಗಳು ತಿಳಿಸಿದರು.
ವಿಡಿಯೋ ಕಾನ್ಫರೆನ್ಸ್ನಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ ಉಲ್ಲಾ ಷರೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಎ ಶೆಟ್ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ಮತ್ತು ಇನ್ನಿತರ ಅಧಿಕಾರಿಗಳು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು