ಪ್ರತಿ ತಿಂಗಳ ಮೊದಲವಾರ ಇ-ಸ್ವತ್ತಿಗಾಗಿ ದಾಖಲೆ ಸಂಗ್ರಹಿಸಲು ಗ್ರಾಮಪಂಚಾಯಿತಿ ಅಧಿಕಾರಿಗಳು ನಿಮ್ಮ ಮನೆಯ ಮುಂದೆ; ಇಓ ಚಂದ್ರು
ಚನ್ನಪಟ್ಟಣ:ಜು/29/20/ಗುರುವಾರ. ತಾಲ್ಲೂಕಿನಾದ್ಯಂತ ಆಗಸ್ಟ್ ತಿಂಗಳಿನಿಂದ ಡಿಸೆಂಬರ್ ತಿಂಗಳವರೆಗೆ ಪ್ರತಿ ಮೊದಲವಾರ ಇ-ಸ್ವತ್ತು ನೀಡುವುದಕ್ಕೆ ಬೇಕಾದ ದಾಖಲೆಗಳನ್ನು ಕಲೆ ಹಾಕಲು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಬಿಲ್ ಕಲೆಕ್ಟರ್ ಹಾಗೂ ಕಂಪ್ಯೂಟರ್ ಆಪರೇಟರ್ (ಗಣಕಯಂತ್ರ ನಿಯಂತ್ರಕ) ರವರು ತಮ್ಮ ಮನೆಯ ಬಳಿಯೇ ಬಂದು ತಮ್ಮ ಆಸ್ತಿಗೆ ಇ-ಸ್ವತ್ತು ನೀಡಲು ಬೇಕಾದ ದಾಖಲೆಗಳನ್ನು ಪಡೆದುಕೊಳ್ಳುತ್ತಾರೆ ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಚಂದ್ರು ಹೇಳಿದರು.
ಅವರು ಇಂದು ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಕರೆದು ಇ-ಸ್ವತ್ತು ಆಂದೋಲನದ ಕುರಿತು ಮಾಹಿತಿ ನೀಡಿದರು.
ತಾಲ್ಲೂಕಿನಲ್ಲಿ 67,521 ಆಸ್ತಿಗಳಿದ್ದು, ಇ-ಸ್ವತ್ತು ಆಗದಿರುವ ಎಲ್ಲಾ ಆಸ್ತಿಗಳಿಗೂ ದಾಖಲೆಗಳನ್ನು ಪಡೆದು ಇ-ಸ್ವತ್ತು ನೀಡಲಾಗುತ್ತದೆ. ಎಲ್ಲಾ ದಾಖಲೆಗಳು ಸರಿಯಾಗಿದ್ದರೆ 15 ದಿನದೊಳಗೆ ಇ-ಖಾತೆ ನೀಡಲಾಗುತ್ತದೆ. ಇದು ಡಿಸೆಂಬರ್ ವರೆಗೆ ಪ್ರತಿ ತಿಂಗಳ ಮೊದಲವಾರ ಆಂದೋಲನ ಮಾಡಲಾಗುತ್ತದೆ. ಡಿಸೆಂಬರ್ ನಂತರ ತಾವೇ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ದಾಖಲೆ ಸಲ್ಲಿಸಿ ಇ-ಖಾತೆ ಪಡೆದುಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದರು.
9 ಮತ್ತು 11 ಎ ನಮೂನೆಗಳನ್ನು ಪಡೆಯಲು ನೀಡಬೇಕಾದ ದಾಖಲೆಗಳು ಹೀಗಿವೆ;
ಉದಾಹರಣೆಗೆ ವಸತಿಯೋಜನೆಯಡಿ ಮಂಜೂರಾದ ಆಸ್ತಿ (ಹಕ್ಕುಪತ್ರ) ಗೆ ಅರ್ಜಿ, ಸ್ವತ್ತಿನ ಮಾಲೀಕರ ಹೆಸರು, ವಿಳಾಸ, ಆಸ್ತಿಯ ಸಂಖ್ಯೆ, ಆಸ್ತಿ ಇರುವ ಗ್ರಾಮ, ಮೊಬೈಲ್ ನಂಬರ್ ಸಹಿತ ವಿವರವುಳ್ಳ ಅರ್ಜಿ, ಮೂಲ ಹಕ್ಕುಪತ್ರ, ಆಸ್ತಿ ಮಾಲೀಕರ ಪಾಸ್ ಪೋರ್ಟ್ ಭಾವಚಿತ್ರ, ಆಸ್ತಿಯ ಭಾವಚಿತ್ರ, ಮಾಲೀಕರ ಆಧಾರ ಕಾರ್ಡ್, ಮತದಾರರ ಗುರುತಿನ ಚೀಟಿ, ಪ್ರಪತ್ರ-(ಇಸಿ) (ಅವಶ್ಯವಿದ್ದಲ್ಲಿ) ನೀಡಬೇಕು.
ಹೀಗೆ 1) ಗ್ರಾಮಠಾಣಾ ಆಸ್ತಿ, 2) ಬಿಎಂಆರ್ಡಿಎ, ಬಿಎಂಐಸಿಎಪಿಎ ಹಾಗೂ ಸ್ಥಳೀಯ ಯೋಜನಾ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆ. 3) 14-06-2013 ಪೂರ್ವದಲ್ಲಿ ಸೃಜನೆಯಾಗಿರುವ ಕಟ್ಟಡ ಪರವಾನಗಿ ಪಡೆದು ಕಟ್ಟಿರುವ ಮನೆಗಳು. 4) 16-11-1992 ರ ಹಿಂದೆ ಭೂಪರಿವರ್ತಿತವಾಗಿ ಗ್ರಾಮ ಪಂಚಾಯತಿಯಿಂದ ಅನುಮೋದನೆಗೊಂಡ ಆಸ್ತಿಗಳು.
11 ಬಿ ನಮೂನೆ ಪಡೆಯಲು; 1) 16-11-1992 ರ ನಂತರ 14-06-2013 ರ ಪೂರ್ವದಲ್ಲಿ ಗ್ರಾಮ ಪಂಚಾಯತಿಯಿಂದ ಅನುಮೋದಿತವಾದ ಆಸ್ತಿಗಳು. 2) ಗ್ರಾಮಠಾಣಾ ವ್ಯಾಪ್ತಿಯಿಂದ ಹೊರಗಿರುವ ಆಸ್ತಿಗಳು. 3) ಹೊಸದಾಗಿ ಭೂಪರಿವರ್ತನೆಯಾದ ಸಕ್ಷಮ ಪ್ರಾಧಿಕಾರದ ಅನುಮೋದನೆ ಇಲ್ಲದ ಆಸ್ತಿಗಳು, (ನೋಂದಣಿಗೆ ಅವಕಾಶವಿಲ್ಲದ 11ಬಿ), 4) ಮ್ಯುಟೇಶನ್ ಬದಲಾವಣೆ (ನಮೂನೆ-9 ಮತ್ತು 11 ಹಾಗೂ ನಮೂನೆ 11-ಬಿ) ಈ ಮೇಲಿನ ಎಲ್ಲಾ ಇ-ಸ್ವತ್ತು ಗಳಿಗೂ ಬೇರೆಬೇರೆ ರೀತಿಯ ದಾಖಲೆಗಳನ್ನು ಸಲ್ಲಿಸಿ ಇ-ಸ್ವತ್ತು ಪಡೆಯಬೇಕು ಎಂದು ಅವರು ಮಾಹಿತಿ ನೀಡಿದರು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಹರೂರು ರಾಜಣ್ಣ ಮಾತನಾಡಿ, ತಾಲ್ಲೂಕಿನಾದ್ಯಂತ 32 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ 273 ಕಟ್ಟೆ/ಕುಂಟೆ ಮತ್ತು ಗೋ ಕಟ್ಟೆಗಳು, 937 ಕೃಷಿ ಹೊಂಡಗಳು, 646 ರೈತರ ಜಮೀನಿನಲ್ಲಿ ಹಾಕಿರುವ ಬದುಗಳು, 635 ದನದ ಕೊಟ್ಟಿಗೆಗಳು, 172 ಹಳ್ಳ ಮತ್ತು ಕಾಲುವೆಗಳು, 3 ಮಳೆ ನೀರು ಕೊಯ್ಲು, ಹೊಸದಾಗಿ 4 ಕಲ್ಯಾಣಿಗಳು, 8 ಕೆರೆಗಳು ಸೇರಿ 2,663 ಜಲಮೂಲಗಳ ಕಾಮಗಾರಿಗಳನ್ನು ಮಾಡಲಾಗಿದೆ. ಇವುಗಳಲ್ಲಿ ಕೆಲವು ಶೇಕಡಾ 100 ರಷ್ಟು ಕಾಮಗಾರಿ ಪೂರ್ಣಗೊಂಡಿವೆ. ಇನ್ನೂ ಕೆಲವು ಮಳೆ ಹಾಗೂ ಇತರ ಕಾರಣಗಳಿಂದ ಶೇಕಡಾ 50 ರಿಂದ 80 ರವರೆಗೂ ಕಾಮಗಾರಿ ಆಗಿದ್ದು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಈ ನಡುವೆ ಎಲ್ಲಾ ಪಿಡಿಓ ರವರ ಅಸಮರ್ಪಕ ಕೆಲಸಗಳು, ದಾಖಲೆಗಳಿಲ್ಲದೆ ಇ-ಖಾತೆ ಮಾಡಿಕೊಟ್ಟಿರುವ ಬಗ್ಗೆ, ನರೇಗಾ ಕಾಮಗಾರಿಗಳಲ್ಲಿ, ಕೆಲಸವೇ ನಡೆಯದೆ ಹಾಗೂ ಅರ್ಧಂಬರ್ಧ ಕಳಪೆ ಕಾಮಗಾರಿಗಳಿಗೆ ಬಿಲ್ ನೀಡಿರುವ ಬಗ್ಗೆ, ಕೋಳಿ ತ್ಯಾಜ್ಯ, ಖಾಸಗಿ ಕಾರ್ಖಾನೆಗಳು, ಶಾಲೆಗಳಲ್ಲಿ ಕಂದಾಯ ವಸೂಲಿ ಮಾಡದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಪತ್ರಕರ್ತರು ಮುಂದಿಟ್ಟು ಚರ್ಚಿಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು